Homeನ್ಯಾಯ ಪಥಬರೆದು ಹಾಡುವ ಬಾಲ್ಯದ ಗೆಳೆಯನಿಗೊಂದು ಬಹುಪರಾಕ್

ಬರೆದು ಹಾಡುವ ಬಾಲ್ಯದ ಗೆಳೆಯನಿಗೊಂದು ಬಹುಪರಾಕ್

- Advertisement -
- Advertisement -

ಹೌದು, ಬಾಲ್ಯದ ಗೆಳೆತನಕ್ಕಿರುವ ಬಾಂಧವ್ಯವೇ ಅಂತಹದ್ದು. ಚಳವಳಿಗಳ ಸಂಗಾತಿಯಾಗಿ, ಮಕ್ಕಳ ಮೆಚ್ಚಿನ ಶಿಕ್ಷಕರಾಗಿ ಅರಿವಿನ ಹಾಡುಗಾರನಾಗಿ ಇಂದು ಜನಪರ ಜನಪ್ರಿಯ ಗಾಯಕರೆಂದು ಮನ್ನಣೆ ಪಡೆದಿರುವ ರಮೇಶ ಗಬ್ಬೂರ್ ಜೊತೆಗಿನ ನನ್ನ ಸ್ನೇಹ ಮೂವತ್ತು ವರ್ಷಗಳದ್ದು. ನನ್ನ ಸಹಪಾಠಿಯಾಗಿ, ಚಳವಳಿಯ ಹಾಡಿನ ಸಹಕಲಾವಿದರಾಗಿದ್ದವರು. ರಾಯಚೂರಿನ ಅಂಬೇಡ್ಕರ ಹಾಸ್ಟೆಲ್ ನಮ್ಮಿಬ್ಬರ ಗೆಳೆತನದ ಕೇಂದ್ರ. ಅಂಬೇಡ್ಕರ್ ಹಾಸ್ಟೆಲಿನಲ್ಲಿ ಲಿವಿಂಗ್ ರೂಮ್ ನಮ್ಮಿಬ್ಬರನ್ನು ಒಂದು ಮಾಡಿದ ಸ್ಥಳ. ಹಾಸ್ಟೆಲ್‌ನಲ್ಲಿ ರಾತ್ರಿ 10 ಗಂಟೆಯವರೆಗೆ ಓದು ಬರಹ ಹಾಡು ಚರ್ಚೆ ಹರಟೆ ಎಲ್ಲವೂ ಇರುತ್ತಿತ್ತು. ತಡರಾತ್ರಿವರೆಗೂ ಹರಟೆ ಹೊಡೆದರೂ, ಬೆಳಗಿನ ೪ ಗಂಟೆಗೆ ನಿದ್ದೆಯಿಂದೆದ್ದು ಅಭ್ಯಾಸ ಮಾಡುತ್ತಿದ್ದೆವು. ಬೆಳಗಿನ ಉಪಾಹಾರ ಸಿದ್ಧವಾಗದಿದ್ದರೂ ಕಾಲ್ನಡಿಗೆಯಲ್ಲಿಯೇ ಸುಮಾರು ಎರಡು ಕಿಲೋಮೀಟರ್ ನಡೆದು ಕಾಲೇಜು ವಿದ್ಯಾಭ್ಯಾಸ ಮುಂದುವರಿಸಬೇಕಿತ್ತು. ನನ್ನದು ಟ್ಯಾಗೋರ್ ಕಾಲೇಜ್, ರಮೇಶನದು ಹಮದರ್ದ ಜೂನಿಯರ್ ಕಾಲೇಜ್. ಕಾಲೇಜು ಮುಗಿಸಿಕೊಂಡು ಮತ್ತೆ ಎರಡು ಕಿ.ಮೀ ನಡೆದು ಹಸಿದ ಹೊಟ್ಟೆಯಲ್ಲಿ ಮಧ್ಯಾಹ್ನದ ಊಟಕ್ಕೆ ಹಾಜರಾಗಬೇಕಿತ್ತು.

ಅಂದಿನ ಕಾಲಘಟ್ಟದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರಾದ ಭೀಮಣ್ಣ ಹಿರೇನಗನೂರು, ಹನುಮದಾಸಣ್ಣ, ದಾನಪ್ಪ ಮಸ್ಕಿ, ಆನಂದ ಭಂಡಾರಿ, ಮೇಲಪ್ಪ, ಆರ್.ಮಾನಸಯ್ಯ ಮತ್ತು ಡೇವಿಡ್ ನಿರಂತರವಾಗಿ ಬಂದು ಹೋಗುತ್ತಿದ್ದರಾದರೂ ಫಕೀರಯ್ಯ ಕುರ್ಡಿ, ಎನ್.ಬಿ.ಒಡೆಯರಾಜ ಅಣ್ಣನವರ ಸಂಯೋಜಕತ್ವದಲ್ಲಿ ದಲಿತ ಕಲಾಮಂಡಳಿ ನಾಯಕರೊಂದಿಗೆ ಕೋರಸ್ ಕೊಡುವ ಕಾರ್ಯದ ಜೊತೆಜೊತೆಗೆ ಜನಪರ ಸಾಂಸ್ಕೃತಿಕ ಸಮುದ್ರದಲ್ಲಿ ಇಬ್ಬರು ಈಜು ಕಲಿತವರು. ಈ ಕಾರಣಕ್ಕಾಗಿಯೇ ದಲಿತ ಕಲಾ ಮಂಡಳಿ ಎಂಬ ಸಾಂಸ್ಕೃತಿಕ ರಾಯಭಾರಿ ನಮ್ಮಂತಹ ಹತ್ತಾರು ಜನರಿಗೆ ಆರಂಭಿಕ ಅಧ್ಯಯನ ಕೇಂದ್ರವೂ ಹೌದು, ಅನುಭವ ಮಂಟಪವೂ ಆಗಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯನವರಿಂದ ಅಂಬೇಡ್ಕರ್ ಓದು ಸರಣಿಯ 500 ನೇ ಸಂಚಿಕೆಯ ಓದು: ವಿಶಿಷ್ಟ ಪ್ರಯತ್ನಕ್ಕೆ ಶ್ಲಾಘನೆ

ವಿಶೇಷತೆಯೆಂದರೆ ನಮ್ಮಿಬ್ಬರ ಮನೆತನಗಳು ತಾತ ಮುತ್ತಾತನ ಕಾಲದಿಂದಲೂ ಹಾಡುಗಾರಿಕೆಯ ವೃತ್ತಿಯನ್ನೇ ಅವಲಂಬಿಸಿರುವುದರಿಂದ ಸಹಜವಾಗಿಯೇ ನಮ್ಮಿಬ್ಬರಲ್ಲಿ ಹಾಡುಗಾರಿಕೆಯ ಪ್ರವೃತ್ತಿ ರಕ್ತಗತವಾಗಿಯೇ ಬಂದು ಅದು ನಮ್ಮ ಪ್ರಾಣವಾಯುವಾಗಿತ್ತು. ಪಿಯುಸಿ ಮತ್ತು ಪದವಿ ಮುಗಿಯುವವರೆಗೂ ಅಂಬೇಡ್ಕರ್ ಹಾಸ್ಟೆಲಿನ ವಿದ್ಯಾರ್ಥಿಗಳಾಗಿದ್ದೆವು. ಶಿಕ್ಷಣದ ಜೊತೆಗೆ ಚಳವಳಿಗಳ ಜೊತೆಯಾಗಿದ್ದ ರಮೇಶ. ಆಗ ಎಲ್ಲಾ ಸೀನಿಯರ್ ಕಲಾವಿದರ ಜೊತೆ ಕೋರಸ್ ಕೊಡುತ್ತಾ ಪಾರ್ಟ್ ಟೈಮ್ ಜಾಬ್ ಮಾಡುತ್ತಾ ಪಾರ್ಟ್ ಟೈಮ್ ಕಲಾವಿದನಾಗಿ ಎಲ್ಲರ ಜೊತೆ ಗುರುತಿಸಿಕೊಂಡಿದ್ದ.

ಸಂಚಾರಿ ಗಾಯಕನಾಗಿದ್ದ ನಾನು ಸಂಘಟನೆಯಲ್ಲಿ ಕಾರ್ಯಕರ್ತನಾಗಿ ಬೇರೆಬೇರೆ ಕಡೆಗೆ ಅಲೆದಾಡುತ್ತಿದ್ದೆ. ನಂತರ ಸಂಘಟನೆಯಲ್ಲಿ ಪೂರ್ಣಾವಧಿ ಕಾರ್ಯ ಕೈಗೊಂಡಾಗ ಪಿಯುಸಿ ಎಜುಕೇಶನ್ ನಂತರದ ಇಂಟರ್ನಶಿಪ್ ಕೋರ್ಸ್ ಮುಗಿದು ಪದವಿ ಓದುತ್ತಿದ್ದೆ. ಸಂಘಟನೆಯ ಜವಾಬ್ದಾರಿಯಿಂದಾಗಿ ನಾನು ಶಿಕ್ಷಕ ವೃತ್ತಿಗೆ ಹೋಗಲಾಗಲಿಲ್ಲ. ಗೆಳೆಯ ರಮೇಶ ತರಬೇತಿ ಮುಗಿಸಿ ಆತ ಸ್ನಾತಕೋತ್ತರ ಅಧ್ಯಯನಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಹೋದ ನಾನು ಶಿಕ್ಷಕ ಹುದ್ದೆಯಿಂದ ನನ್ನನ್ನೇ ನಾನು ವಂಚಿಸಿಕೊಂಡು ಇಂದಿಗೂ ಅಲೆಮಾರಿಯಾಗಿ ಹಾಡುಗಾರಿಕೆ

ಮಾಡುತ್ತಾ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ನಾಡು ಸುತ್ತುತ್ತಿರುವೆ. ಇನ್ನೂ ನನ್ನ ಅಲೆಮಾರಿತನ ಪೂರ್ಣಗೊಂಡಿಲ್ಲ. ಹೊಟ್ಟೆಗೆ ಅನ್ನವಿಲ್ಲದ ಕಷ್ಟದ ದಿನಗಳ ಕಾಲವದು. ಸ್ನಾತಕೋತ್ತರ ಪದವಿಯನ್ನು ಬಿಟ್ಟು ಸರಕಾರಿ ಶಾಲೆಯ ಶಿಕ್ಷಕನಾಗಿ ಸೇವೆಯೊಂದಿಗೆ ವಿದ್ಯಾರ್ಥಿ ಯುವಜನರ ಶೋಷಿತರ ಜೊತೆ ಬೆರೆತು ಹಾಡು ಕಟ್ಟಿ ಹಾಡುತ್ತಾ ಅರೆಕಾಲಿಕ ಹಾಡುಗಾರಿಕೆಯನ್ನು ಮುಂದುವರಿಸಿ ನನ್ನಷ್ಟೇ ಸಮಯವನ್ನು ಸಮುದಾಯದ ಜಾಗೃತಿಗೆ ಮೀಸಲಿಡುವ ಮೂಲಕ ಹಾಡುತ್ತಾ ಬರೆಯುತ್ತಾ ನನ್ನ ಸಮಾನಾಂತರ ಸ್ಪರ್ಧೆಯಲ್ಲಿ ಕ್ರಿಯಾಶೀಲ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ..

ಇವರ ಸಾಹಿತ್ಯದ ಕೃತಿಯಾಗಿ ಈಗಾಗಲೇ ಏಳು ಕೃತಿಗಳು ಪ್ರಕಟವಾಗಿದ್ದು ಎಂಟನೇ ಕೃತಿಯಾಗಿ ಜನಮನದಂತೆ ಹಾಡುವೆ ಎಂಬ ಸಂಕಲನವನ್ನು ಹೊರತರುತ್ತಿದ್ದಾರೆ. ಹೋರಾಟದ ಸಂಕಲನವಾಗಿ ಮೊದಲು ಒಲಿದಂತೆ ಹಾಡುವೆ ಎಂದು ಹೇಳಿದರೆ ಈಗ ಜನಮನದಂತೆ ಹಾಡುವೆ ಎಂದು ಹೇಳುತ್ತಾ ಜನರಲ್ಲಿ ಜಾಗೃತಿಗಾಗಿ ಹಾಡುಗಳನ್ನು ಬರೆಯುತ್ತಾ ಹಾಡುತ್ತಾ ಕಂಜರಿ ನುಡಿಸುತ್ತಾ ನಾಡಿನ ತುಂಬ ಸಂಚರಿಸುತ್ತಿದ್ದಾರೆ. ಶೋಷಿತರ ಧ್ವನಿಯಾಗಿ ಹೋರಾಟದ ಹಾಡುಗಳನ್ನು ಹಾಡುತ್ತಾ ಅರಿವನ್ನು ಬಿತ್ತುತ್ತ ಸಾಂಸ್ಕೃತಿಕ ಪರಂಪರೆಯ ಮುಂದುವರೆದ ಭಾಗವಾಗಿದ್ದಾರೆ ಎಂಬುದು ನನಗೆ ಹೆಮ್ಮೆ ಮತ್ತು ಗೌರವ. ಹಾಡುವುದು ಸುಲಭ, ರಾಗ ಹಾಕುವುದು ಕಷ್ಟ. ಅದಕ್ಕಿಂತಲೂ ಮುಂಚಿತವಾಗಿ ಹಾಡು ಬರೆಯುವುದು ಕಷ್ಟ. ವರ್ತಮಾನದ ಸಂಗತಿಗಳನ್ನು ಕುರಿತು ಹಾಡು ಬರೆಯುವುದು ಅತ್ಯಂತ ಪ್ರಯಾಸದ ಕೆಲಸ. ಈ ಸಂಕಟ ಬರೆಯುವ ಸಂಗಾತಿಗಳಿಗೆ ಮಾತ್ರ ಅರ್ಥವಾಗುವ ವಿಚಾರ. ಹಾಡು ಬರೆಯುವ, ಅದಕ್ಕೆ ತಾವೇ ರಾಗ ಸಂಯೋಜಿಸುವ, ತಾವೇ ಹಲಗೆ ನುಡಿಸುತ್ತ ಹಾಡುವ, ತಂಡ ಕಟ್ಟಿಕೊಂಡು ತಿರುಗುವ ಅತ್ಯಂತ ವಿರಳರಲ್ಲಿ ವಿರಳವಾಗಿ ಕರ್ನಾಟಕದಲ್ಲಿ ರಮೇಶ್ ಇರುವುದು ನಮಗೆ ತುಂಬಾ ಸಂತೋಷದ ಸಂಗತಿ.. ಬರೆದರಷ್ಟೇ ಸಾಲದು, ಬರೆದುದನ್ನು ಪ್ರೆಸೆಂಟೇಶನ್ ಮೂಲಕ ಚಳವಳಿಯ ಸಂಗತಿಗಳಿಗೆ ಹೋರಾಟದ ಹಾಡುಗಳಾಗಿ ತಲುಪಿಸುವುದು ಮತ್ತು ಹೋರಾಟಕ್ಕೆ ಆಕ್ಸಿಜನ್‌ನಂತೆ ಕೆಲಸ ಮಾಡುವ ಸಾಂಸ್ಕೃತಿಕ ತಂಡವಾಗುವುದು ಬಹಳ ಮುಖ್ಯ. ಅಂತಹ ಸಮರ್ಥವಾದ ಕೆಲಸವನ್ನು ಮಾಡುತ್ತಾ ಅದರ ಭಾಗವಾಗಿರುವ ಚಳವಳಿಗಾರರ ಜೊತೆ ಗುರುತಿಸಿಕೊಂಡು ಸೇವೆಯನ್ನು ಮಾಡುತ್ತಿರುವುದು ನನಗೆ ಇಷ್ಟವಾಗುತ್ತದೆ..

ವೃತ್ತಿಯಲ್ಲಿ ಗ್ರಂಥಪಾಲಕರಾಗಿ ಪ್ರವೃತ್ತಿಯಲ್ಲಿ ಹಾಡುಗಾರನಾಗಿ ಸಾಹಿತಿಯಾಗಿ ವಾದ್ಯಗಾರರಾಗಿ ಜೊತೆಗೆ ಒಂದು ಶರಣ ಕಲಾ ಬಳಗ ಎಂಬ ಕಲಾತಂಡವನ್ನು ಕಟ್ಟಿ ಮುನ್ನಡೆಸುವ ಮೂಲಕ ಕರ್ನಾಟಕದ ಹಾಡು ಪರಂಪರೆಗೆ ನೀಡಿರುವ ವಿಶಿಷ್ಟವಾದ ಕೊಡುಗೆ ರಮೇಶ ಅವರದ್ದಾಗಿದೆ. ಹಾಡು ಒಂದು ಜವಾಬ್ದಾರಿ ಎಂದುಕೊಂಡ ರಮೇಶ ವರ್ತಮಾನದ ಹಲವಾರು ಶೋಷಣೆಯ ಸಂಗತಿಗಳಿಗೆ ಮುಖಾಮುಖಿಯಾಗಿ ಬರೆಯುತ್ತಿದ್ದಾರೆ. ತಮ್ಮ ಹಾಡುಗಳ ಮೂಲಕ ಜನರಿಗೆ ಸೂಕ್ತ ತಿಳಿವಳಿಕೆ ನೀಡುತ್ತಾರೆ. ಹಾಡು ಬರೆದು ಪತ್ರಿಕೆಯಲ್ಲಿ ಪ್ರಕಟವಾದರೆ, ಅದು ಸಂಕಲನದಲ್ಲಿ ಮುದ್ರಿತವಾದರೆ ಅಷ್ಟೇ ಸಾಲದು ಅದನ್ನು ಹಾಡಿದಾಗ ಮಾತ್ರ ಪರಿಪೂರ್ಣವಾಗಲು ಸಾಧ್ಯ ಎಂಬ ಕಾಳಜಿಯನ್ನು ಇಟ್ಟುಕೊಂಡು ಮತ್ತು ಅದನ್ನು ತನ್ನ ಜವಾಬ್ದಾರಿ ಎಂದು ಹೆಗಲ ಮೇಲೆ ಹೊತ್ತುಕೊಂಡು ಪ್ರೀತಿಯಿಂದ ಬರೆದು ಹಾಡುತ್ತಿರುವ ಗೆಳೆಯ ರಮೇಶನಿಗೆ ಈ ಕಲೆ ಒಲಿದು ಬಂದಿರುವುದರಿಂದ ನಾನೊಬ್ಬ ಕಲಾವಿದನಾಗಿ ಬಹುಪರಾಕ್ ಹೇಳಲೇಬೇಕಾಗಿದೆ.

ಇದನ್ನೂ ಓದಿ:ಬೆಲೆ ಏರಿಕೆ ವಿರುದ್ಧ ಶಿವ-ಪಾರ್ವತಿ ವೇಷದಲ್ಲಿ ಬೀದಿನಾಟಕ: ವ್ಯಕ್ತಿಯ ಬಂಧನ

ಕ್ರಿಯಾಶೀಲ ವ್ಯಕ್ತಿತ್ವವನ್ನು ಇಟ್ಟುಕೊಂಡು ಬಹುತ್ವದ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಜ್ಞಾನವನ್ನು ಸಂಪಾದಿಸಿಕೊಂಡು ಭಾರತದ ಬಹುಜನರ ಧ್ವನಿಯಾಗಿ ಇರುವ ರಮೇಶ ಅವರಿಗೆ ಸಾಥ್ ನೀಡಿರುವುದು ಅವರ ಸಂಗಾತಿ ಮೀನಾಕ್ಷಿ ಮತ್ತು ಮಕ್ಕಳು ಕೂಡ. ಹಾಡು ಇವರ ಹಿರಿಯರಿಂದ ಬಂದ ಬಳುವಳಿ. ಇವರದು ಹಾಡಿನ ಕುಟುಂಬ. ಮಕ್ಕಳಾದ ಚೈತ್ರಾ, ಚೇತನಾ ಮತ್ತು ಚಂದನಾ ಅಷ್ಟೇ ಅಲ್ಲ ಇನ್ನು ಹಲವಾರು ವಿದ್ಯಾರ್ಥಿಗಳು ಅವರ ಗರಡಿಯಲ್ಲಿ ಪಳಗಿ ಹಾಡುತ್ತಿದ್ದಾರೆ. ಶರಣ ಕಲಾ ಬಳಗದ ರಂಜನಿ ಆರತಿ, ಚಿದಾನಂದ ಜಂಬೆ ಬರಗೂರು, ಶರಣಬಸವ ನಾಗಲಾಪುರ, ರಾಘವೇಂದ್ರ ಚವ್ಹಾಣ್, ವೀರೇಶ್ ಹಗೆದಾಳ್, ಗುರುಬಸವ ಮತ್ತು ಮರಿಸ್ವಾಮಿ ಬರಗೂರು, ವಿಜಯಲಕ್ಷ್ಮಿ ಹಂಚಿನಾಳ, ಜ್ಯೋತಿ, ಸೌಮ್ಯ, ಭೈರವಿ ಬಡಿಗೇರ್, ಮೋದಿನ್ ಸಾಬ್ ಇನ್ನು ಹಲವಾರು ವಿದ್ಯಾರ್ಥಿಗಳು ಹಾಡು ಪರಂಪರೆಯ ಅವರ ಈ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅಂತೆಯೇ ನಾರಿನಾಳ್‌ರವರ ಇಡೀ ಕುಟುಂಬದ ಹಾಡುಗಾರರು ಅವರ ಜೊತೆ ಆಗಾಗ ಧ್ವನಿಗೂಡಿಸುತ್ತಿರುವುದು ಸಂತಸದ ಸಂಗತಿ. ಹಲವಾರು ಸಂಘಟನೆಗಳಲ್ಲಿ ಅವರ ಹೋರಾಟದ ಹಾಡುಗಳು ಜನರ ನೋವಿನ ಧ್ವನಿಯಾಗಿ ಬಳಕೆಯಾಗುತ್ತಿವೆ.

ರಮೇಶಗಬ್ಬೂರ್ ರವರು ಶ್ರಮಜೀವಿ ಸಂಸ್ಕೃತಿಯ ಸಾರ್ವಭೌಮ ಪರಂಪರೆಯನ್ನು ಕಟ್ಟುವ ಮತ್ತು ಈ ಜನಪರ ಸಾಮ್ರಾಜ್ಯದ ವಿಸ್ತರಣೆಗೆ ಬೇಕಾದ ಉತ್ತೇಜನಕಾರಿ ಬಂಡವಾಳ ಎಂದರೆ ತಪ್ಪಾಗಲಾರದು. ಏಳು ಸಂಕಲನಗಳ ನಂತರ ಈಗ ಮತ್ತೊಂದು ಹೋರಾಟದ ಸಂಕಲನವಾಗಿ ’ಜನ ಮನದಂತೆ ಹಾಡುವೆ’ ಎಂದು ಬರೆದಿದ್ದಾರೆ. ತಮ್ಮ ಕವಿತೆ, ಗಜಲ್‌ಗಳ ಮೂಲಕ ಜನರ ಮನದೊಳಗಿನ ಕಷ್ಟಗಳನ್ನು ಶೋಷಿತರ ನೋವುಗಳನ್ನು ಬೆವರಿನ ಗೌರವವನ್ನು ದುಡಿಯುವ ವರ್ಗದ ಶ್ರಮವನ್ನು ಗೌರವಿಸುತ್ತಾ ಅವುಗಳನ್ನೇ ಹಾಡುಗಳನ್ನಾಗಿ ಬದಲಾಯಿಸುತ್ತಾರೆ.. ಬಾಬಾಸಾಹೇಬರ ಕುರಿತ ಇವರ ಹಾಡುಗಳು ಯುವಪೀಳಿಗೆಗೆ ಜ್ಞಾನಭಂಡಾರವನ್ನು ಉಣಬಡಿಸುವುದು ಅಷ್ಟೇ ಅಲ್ಲ ಬರಗಾಲದಲ್ಲಿ ಬುತ್ತಿ ಬಿಚ್ಚಿಟ್ಟಿರುವ ಮೃಷ್ಟಾನ್ನ ಭೋಜನ ಎಂದರೆ ತಪ್ಪಾಗಲಾರದು. ಸಾವಿತ್ರಿಬಾಯಿ ಪುಲೆ ಅವರ ಹಾಡುಗಳು, ರಮಾಬಾಯಿಯವರ ಹಾಡುಗಳು, ಜನಾಧಿಕಾರ ಹಾಡುಗಳು, ಮತಾಧಿಕಾರದ ಹಾಡುಗಳು, ಸ್ತ್ರೀ ಶೋಷಣೆ ಹಾಡುಗಳು, ವೈಚಾರಿಕತೆಯನ್ನು ಸಾರುವ ಹಾಡುಗಳು, ಜಾತಿಯ ಅಸಮಾನತೆಯನ್ನು ಬಿಚ್ಚಿಡುವ ಹಾಡುಗಳು ಅಷ್ಟೇ ಅಲ್ಲ ಈ ನಾಡಿನಲ್ಲಿ ಹುಟ್ಟಿ ಜನರಿಗಾಗಿ ದುಡಿದು ಮಡಿದ ವರ್ತಮಾನದ ಹಲವಾರು ಮಹನೀಯರ ಹಾಡುಗಳು ಕೂಡ ಈ ಸಂಕಲನದಲ್ಲಿ ಅಷ್ಟೇ ಅರ್ಥಗರ್ಭಿತವಾಗಿ ಮೂಡಿಬಂದಿವೆ. ಈ ಸಂಕಲನದ ಬಹುತೇಕ ಹಾಡುಗಳು ಜನಮನವನ್ನು ಗೆಲ್ಲುವ ಜಾನಪದಗಳಾಗಿ ಜನರ ಮನಮನೆಗಳಿಗೆ ತಲುಪಲಿ ಎಂಬ ಆಶಾಭಾವ ನನ್ನದು.

ರಮೇಶ್ ಗಬ್ಬೂರ್

ವರ್ತಮಾನದ ಬಿಕ್ಕಟ್ಟುಗಳ ತಾಕಲಾಟಗಳ ಸಂದರ್ಭದಲ್ಲಿ ಆತನ ಜೊತೆ ಮಾತನಾಡುವಾಗ ಅವರು ಹಲವಾರು ಬಾರಿ ಸಂಕಟಗಳನ್ನು ತೋಡಿಕೊಂಡಿದ್ದಾರೆ. ದೇಶದ ಅಸಮಾನತೆ, ಶೋಷಣೆ, ಅತ್ಯಾಚಾರ, ಭ್ರಷ್ಟಾಚಾರ ಕುರಿತು ಹಾಡು ಬರೆಯಬೇಕು ಎಂದು ಅನಿಸುತ್ತದೆ, ಆದರೆ ಬರೆಯಲಾಗುತ್ತಿಲ್ಲ ನನ್ನ ಕೈಕಟ್ಟಿ ಹಾಕಲಾಗುತ್ತಿದೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಇಂತಹ ಜೀವಪರ ಹಾಡು ಬರೆಯುವ ಸಾಮರ್ಥ್ಯದ ನನ್ನ ಬಾಲ್ಯದ ಗೆಳೆಯ, ಜೀವದ ಗೆಳೆಯ ಇನ್ನು ಮುಂದೆಯೂ ಹೆಚ್ಚೆಚ್ಚು ಬರೆಯುವಂತಾಗಲಿ ಮತ್ತು ಉಳಿಯುವಂತಾಗಲಿ ಎಂದು ಮನದುಂಬಿ ಹಾರೈಸುತ್ತೇನೆ.

ಜೈಭೀಮ – ಲಾಲ್ ಸಲಾಂ


ಬಾಬಾಸಾಹೇಬರ ಮರೆತೂ ಹ್ಯಾಂಗ ಬದುಕಲಯ್ಯ

ಬಾಬಾಸಾಹೇಬರ ಮರೆತೂ ಹ್ಯಾಂಗ ಬದುಕಲಯ್ಯ
ನಾನಿಲ್ಲಿ ನಿಂತು ಹಾಡಲು ಅವರೆ ಕಾರಣರಯ್ಯ

ಜೋಳಿಗೆಯ ಹಿಡಿದ ಬಾಳಿಗೆ ನಕ್ಷತ್ರದ ಕನಸಾದರು
ಭಿಕ್ಷೆಗಾಗಿ ಹಿಡಿದ ತಟ್ಟೆಗೆ ಹೊಟ್ಟೆಗನ್ನವಾದರು
ಬದುಕು ಬಯಲಲ್ಲಿ ನಿಲ್ಲಲು ಅಲ್ಲಿ ಗುಡಿಸಲಾದರು
ಹರಿದ ಬಟ್ಟೆಯೊಳಗಿನ ಅರಿವಿಗೆ ಪಾಠಿ ಚೀಲವಾದರು
ಎಷ್ಟಂತ ಹೇಳಲಿ ಬಾಬಾ ಬಾಳ ದೀಪವಾದರು

ಬಾಬಾಸಾಹೇಬರಿಲ್ಲದಿದ್ದರೆ ನಾನಿಲ್ಲವಾಗುತ್ತಿದ್ದೆ
ಮುಟ್ಟಿಸಿಕೊಳ್ಳದವನಾ ಮುಟ್ಟುವಂತೆ ಮಾಡಿದರು
ಅಲೆಮಾರಿ ಜೋಳಿಗೆಯೊಳಗೆ ಕರುಳಿನ ಕಾಳಾದರು
ಯಂಕಪ್ಪನ ಪಿಟೀಲಿನಾ ನಾದವಾದವರು
ಎಷ್ಟಂತಾ ಹೇಳಲಿ ಬಾಬಾ ತಿನ್ನುವ ತುತ್ತಾದರು

ಯಾವ ದೇವರು ಕಾಯಲಿಲ್ಲ ಕರೆದು ಕೈ ಹಿಡಿದವರು
ಕಾಲ್ಪನಿಕ ಚಿತ್ರಗಳನ್ನು ದೇವರಲ್ಲವೆಂದವರು
ಸಮತೆ ಮಮತೆ ಕರುಣೆಯ ಬುದ್ಧ ಮಾರ್ಗವಾದವರು ಮುದ್ದಮ್ಮ ಹೊತ್ತ
ಎಷ್ಟಂತಾ ಹೇಳಲಿ ಬಾಬಾ ನಮ್ಮಯ ಕನಸಾದವರು
(ಸಂಕಲನದಿಂದ)

ಅಂಬಣ್ಣ ಅರೋಲಿಕರ್
ಸಂಪಾದಕ, ಜನಬಲಟೈಮ್ಸ್
ಕನ್ನಡ ದಿನಪತ್ರಿಕೆ.
ರಾಯಚೂರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....