Homeನ್ಯಾಯ ಪಥಬರೆದು ಹಾಡುವ ಬಾಲ್ಯದ ಗೆಳೆಯನಿಗೊಂದು ಬಹುಪರಾಕ್

ಬರೆದು ಹಾಡುವ ಬಾಲ್ಯದ ಗೆಳೆಯನಿಗೊಂದು ಬಹುಪರಾಕ್

- Advertisement -
- Advertisement -

ಹೌದು, ಬಾಲ್ಯದ ಗೆಳೆತನಕ್ಕಿರುವ ಬಾಂಧವ್ಯವೇ ಅಂತಹದ್ದು. ಚಳವಳಿಗಳ ಸಂಗಾತಿಯಾಗಿ, ಮಕ್ಕಳ ಮೆಚ್ಚಿನ ಶಿಕ್ಷಕರಾಗಿ ಅರಿವಿನ ಹಾಡುಗಾರನಾಗಿ ಇಂದು ಜನಪರ ಜನಪ್ರಿಯ ಗಾಯಕರೆಂದು ಮನ್ನಣೆ ಪಡೆದಿರುವ ರಮೇಶ ಗಬ್ಬೂರ್ ಜೊತೆಗಿನ ನನ್ನ ಸ್ನೇಹ ಮೂವತ್ತು ವರ್ಷಗಳದ್ದು. ನನ್ನ ಸಹಪಾಠಿಯಾಗಿ, ಚಳವಳಿಯ ಹಾಡಿನ ಸಹಕಲಾವಿದರಾಗಿದ್ದವರು. ರಾಯಚೂರಿನ ಅಂಬೇಡ್ಕರ ಹಾಸ್ಟೆಲ್ ನಮ್ಮಿಬ್ಬರ ಗೆಳೆತನದ ಕೇಂದ್ರ. ಅಂಬೇಡ್ಕರ್ ಹಾಸ್ಟೆಲಿನಲ್ಲಿ ಲಿವಿಂಗ್ ರೂಮ್ ನಮ್ಮಿಬ್ಬರನ್ನು ಒಂದು ಮಾಡಿದ ಸ್ಥಳ. ಹಾಸ್ಟೆಲ್‌ನಲ್ಲಿ ರಾತ್ರಿ 10 ಗಂಟೆಯವರೆಗೆ ಓದು ಬರಹ ಹಾಡು ಚರ್ಚೆ ಹರಟೆ ಎಲ್ಲವೂ ಇರುತ್ತಿತ್ತು. ತಡರಾತ್ರಿವರೆಗೂ ಹರಟೆ ಹೊಡೆದರೂ, ಬೆಳಗಿನ ೪ ಗಂಟೆಗೆ ನಿದ್ದೆಯಿಂದೆದ್ದು ಅಭ್ಯಾಸ ಮಾಡುತ್ತಿದ್ದೆವು. ಬೆಳಗಿನ ಉಪಾಹಾರ ಸಿದ್ಧವಾಗದಿದ್ದರೂ ಕಾಲ್ನಡಿಗೆಯಲ್ಲಿಯೇ ಸುಮಾರು ಎರಡು ಕಿಲೋಮೀಟರ್ ನಡೆದು ಕಾಲೇಜು ವಿದ್ಯಾಭ್ಯಾಸ ಮುಂದುವರಿಸಬೇಕಿತ್ತು. ನನ್ನದು ಟ್ಯಾಗೋರ್ ಕಾಲೇಜ್, ರಮೇಶನದು ಹಮದರ್ದ ಜೂನಿಯರ್ ಕಾಲೇಜ್. ಕಾಲೇಜು ಮುಗಿಸಿಕೊಂಡು ಮತ್ತೆ ಎರಡು ಕಿ.ಮೀ ನಡೆದು ಹಸಿದ ಹೊಟ್ಟೆಯಲ್ಲಿ ಮಧ್ಯಾಹ್ನದ ಊಟಕ್ಕೆ ಹಾಜರಾಗಬೇಕಿತ್ತು.

ಅಂದಿನ ಕಾಲಘಟ್ಟದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕರಾದ ಭೀಮಣ್ಣ ಹಿರೇನಗನೂರು, ಹನುಮದಾಸಣ್ಣ, ದಾನಪ್ಪ ಮಸ್ಕಿ, ಆನಂದ ಭಂಡಾರಿ, ಮೇಲಪ್ಪ, ಆರ್.ಮಾನಸಯ್ಯ ಮತ್ತು ಡೇವಿಡ್ ನಿರಂತರವಾಗಿ ಬಂದು ಹೋಗುತ್ತಿದ್ದರಾದರೂ ಫಕೀರಯ್ಯ ಕುರ್ಡಿ, ಎನ್.ಬಿ.ಒಡೆಯರಾಜ ಅಣ್ಣನವರ ಸಂಯೋಜಕತ್ವದಲ್ಲಿ ದಲಿತ ಕಲಾಮಂಡಳಿ ನಾಯಕರೊಂದಿಗೆ ಕೋರಸ್ ಕೊಡುವ ಕಾರ್ಯದ ಜೊತೆಜೊತೆಗೆ ಜನಪರ ಸಾಂಸ್ಕೃತಿಕ ಸಮುದ್ರದಲ್ಲಿ ಇಬ್ಬರು ಈಜು ಕಲಿತವರು. ಈ ಕಾರಣಕ್ಕಾಗಿಯೇ ದಲಿತ ಕಲಾ ಮಂಡಳಿ ಎಂಬ ಸಾಂಸ್ಕೃತಿಕ ರಾಯಭಾರಿ ನಮ್ಮಂತಹ ಹತ್ತಾರು ಜನರಿಗೆ ಆರಂಭಿಕ ಅಧ್ಯಯನ ಕೇಂದ್ರವೂ ಹೌದು, ಅನುಭವ ಮಂಟಪವೂ ಆಗಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯನವರಿಂದ ಅಂಬೇಡ್ಕರ್ ಓದು ಸರಣಿಯ 500 ನೇ ಸಂಚಿಕೆಯ ಓದು: ವಿಶಿಷ್ಟ ಪ್ರಯತ್ನಕ್ಕೆ ಶ್ಲಾಘನೆ

ವಿಶೇಷತೆಯೆಂದರೆ ನಮ್ಮಿಬ್ಬರ ಮನೆತನಗಳು ತಾತ ಮುತ್ತಾತನ ಕಾಲದಿಂದಲೂ ಹಾಡುಗಾರಿಕೆಯ ವೃತ್ತಿಯನ್ನೇ ಅವಲಂಬಿಸಿರುವುದರಿಂದ ಸಹಜವಾಗಿಯೇ ನಮ್ಮಿಬ್ಬರಲ್ಲಿ ಹಾಡುಗಾರಿಕೆಯ ಪ್ರವೃತ್ತಿ ರಕ್ತಗತವಾಗಿಯೇ ಬಂದು ಅದು ನಮ್ಮ ಪ್ರಾಣವಾಯುವಾಗಿತ್ತು. ಪಿಯುಸಿ ಮತ್ತು ಪದವಿ ಮುಗಿಯುವವರೆಗೂ ಅಂಬೇಡ್ಕರ್ ಹಾಸ್ಟೆಲಿನ ವಿದ್ಯಾರ್ಥಿಗಳಾಗಿದ್ದೆವು. ಶಿಕ್ಷಣದ ಜೊತೆಗೆ ಚಳವಳಿಗಳ ಜೊತೆಯಾಗಿದ್ದ ರಮೇಶ. ಆಗ ಎಲ್ಲಾ ಸೀನಿಯರ್ ಕಲಾವಿದರ ಜೊತೆ ಕೋರಸ್ ಕೊಡುತ್ತಾ ಪಾರ್ಟ್ ಟೈಮ್ ಜಾಬ್ ಮಾಡುತ್ತಾ ಪಾರ್ಟ್ ಟೈಮ್ ಕಲಾವಿದನಾಗಿ ಎಲ್ಲರ ಜೊತೆ ಗುರುತಿಸಿಕೊಂಡಿದ್ದ.

ಸಂಚಾರಿ ಗಾಯಕನಾಗಿದ್ದ ನಾನು ಸಂಘಟನೆಯಲ್ಲಿ ಕಾರ್ಯಕರ್ತನಾಗಿ ಬೇರೆಬೇರೆ ಕಡೆಗೆ ಅಲೆದಾಡುತ್ತಿದ್ದೆ. ನಂತರ ಸಂಘಟನೆಯಲ್ಲಿ ಪೂರ್ಣಾವಧಿ ಕಾರ್ಯ ಕೈಗೊಂಡಾಗ ಪಿಯುಸಿ ಎಜುಕೇಶನ್ ನಂತರದ ಇಂಟರ್ನಶಿಪ್ ಕೋರ್ಸ್ ಮುಗಿದು ಪದವಿ ಓದುತ್ತಿದ್ದೆ. ಸಂಘಟನೆಯ ಜವಾಬ್ದಾರಿಯಿಂದಾಗಿ ನಾನು ಶಿಕ್ಷಕ ವೃತ್ತಿಗೆ ಹೋಗಲಾಗಲಿಲ್ಲ. ಗೆಳೆಯ ರಮೇಶ ತರಬೇತಿ ಮುಗಿಸಿ ಆತ ಸ್ನಾತಕೋತ್ತರ ಅಧ್ಯಯನಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಹೋದ ನಾನು ಶಿಕ್ಷಕ ಹುದ್ದೆಯಿಂದ ನನ್ನನ್ನೇ ನಾನು ವಂಚಿಸಿಕೊಂಡು ಇಂದಿಗೂ ಅಲೆಮಾರಿಯಾಗಿ ಹಾಡುಗಾರಿಕೆ

ಮಾಡುತ್ತಾ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ನಾಡು ಸುತ್ತುತ್ತಿರುವೆ. ಇನ್ನೂ ನನ್ನ ಅಲೆಮಾರಿತನ ಪೂರ್ಣಗೊಂಡಿಲ್ಲ. ಹೊಟ್ಟೆಗೆ ಅನ್ನವಿಲ್ಲದ ಕಷ್ಟದ ದಿನಗಳ ಕಾಲವದು. ಸ್ನಾತಕೋತ್ತರ ಪದವಿಯನ್ನು ಬಿಟ್ಟು ಸರಕಾರಿ ಶಾಲೆಯ ಶಿಕ್ಷಕನಾಗಿ ಸೇವೆಯೊಂದಿಗೆ ವಿದ್ಯಾರ್ಥಿ ಯುವಜನರ ಶೋಷಿತರ ಜೊತೆ ಬೆರೆತು ಹಾಡು ಕಟ್ಟಿ ಹಾಡುತ್ತಾ ಅರೆಕಾಲಿಕ ಹಾಡುಗಾರಿಕೆಯನ್ನು ಮುಂದುವರಿಸಿ ನನ್ನಷ್ಟೇ ಸಮಯವನ್ನು ಸಮುದಾಯದ ಜಾಗೃತಿಗೆ ಮೀಸಲಿಡುವ ಮೂಲಕ ಹಾಡುತ್ತಾ ಬರೆಯುತ್ತಾ ನನ್ನ ಸಮಾನಾಂತರ ಸ್ಪರ್ಧೆಯಲ್ಲಿ ಕ್ರಿಯಾಶೀಲ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ..

ಇವರ ಸಾಹಿತ್ಯದ ಕೃತಿಯಾಗಿ ಈಗಾಗಲೇ ಏಳು ಕೃತಿಗಳು ಪ್ರಕಟವಾಗಿದ್ದು ಎಂಟನೇ ಕೃತಿಯಾಗಿ ಜನಮನದಂತೆ ಹಾಡುವೆ ಎಂಬ ಸಂಕಲನವನ್ನು ಹೊರತರುತ್ತಿದ್ದಾರೆ. ಹೋರಾಟದ ಸಂಕಲನವಾಗಿ ಮೊದಲು ಒಲಿದಂತೆ ಹಾಡುವೆ ಎಂದು ಹೇಳಿದರೆ ಈಗ ಜನಮನದಂತೆ ಹಾಡುವೆ ಎಂದು ಹೇಳುತ್ತಾ ಜನರಲ್ಲಿ ಜಾಗೃತಿಗಾಗಿ ಹಾಡುಗಳನ್ನು ಬರೆಯುತ್ತಾ ಹಾಡುತ್ತಾ ಕಂಜರಿ ನುಡಿಸುತ್ತಾ ನಾಡಿನ ತುಂಬ ಸಂಚರಿಸುತ್ತಿದ್ದಾರೆ. ಶೋಷಿತರ ಧ್ವನಿಯಾಗಿ ಹೋರಾಟದ ಹಾಡುಗಳನ್ನು ಹಾಡುತ್ತಾ ಅರಿವನ್ನು ಬಿತ್ತುತ್ತ ಸಾಂಸ್ಕೃತಿಕ ಪರಂಪರೆಯ ಮುಂದುವರೆದ ಭಾಗವಾಗಿದ್ದಾರೆ ಎಂಬುದು ನನಗೆ ಹೆಮ್ಮೆ ಮತ್ತು ಗೌರವ. ಹಾಡುವುದು ಸುಲಭ, ರಾಗ ಹಾಕುವುದು ಕಷ್ಟ. ಅದಕ್ಕಿಂತಲೂ ಮುಂಚಿತವಾಗಿ ಹಾಡು ಬರೆಯುವುದು ಕಷ್ಟ. ವರ್ತಮಾನದ ಸಂಗತಿಗಳನ್ನು ಕುರಿತು ಹಾಡು ಬರೆಯುವುದು ಅತ್ಯಂತ ಪ್ರಯಾಸದ ಕೆಲಸ. ಈ ಸಂಕಟ ಬರೆಯುವ ಸಂಗಾತಿಗಳಿಗೆ ಮಾತ್ರ ಅರ್ಥವಾಗುವ ವಿಚಾರ. ಹಾಡು ಬರೆಯುವ, ಅದಕ್ಕೆ ತಾವೇ ರಾಗ ಸಂಯೋಜಿಸುವ, ತಾವೇ ಹಲಗೆ ನುಡಿಸುತ್ತ ಹಾಡುವ, ತಂಡ ಕಟ್ಟಿಕೊಂಡು ತಿರುಗುವ ಅತ್ಯಂತ ವಿರಳರಲ್ಲಿ ವಿರಳವಾಗಿ ಕರ್ನಾಟಕದಲ್ಲಿ ರಮೇಶ್ ಇರುವುದು ನಮಗೆ ತುಂಬಾ ಸಂತೋಷದ ಸಂಗತಿ.. ಬರೆದರಷ್ಟೇ ಸಾಲದು, ಬರೆದುದನ್ನು ಪ್ರೆಸೆಂಟೇಶನ್ ಮೂಲಕ ಚಳವಳಿಯ ಸಂಗತಿಗಳಿಗೆ ಹೋರಾಟದ ಹಾಡುಗಳಾಗಿ ತಲುಪಿಸುವುದು ಮತ್ತು ಹೋರಾಟಕ್ಕೆ ಆಕ್ಸಿಜನ್‌ನಂತೆ ಕೆಲಸ ಮಾಡುವ ಸಾಂಸ್ಕೃತಿಕ ತಂಡವಾಗುವುದು ಬಹಳ ಮುಖ್ಯ. ಅಂತಹ ಸಮರ್ಥವಾದ ಕೆಲಸವನ್ನು ಮಾಡುತ್ತಾ ಅದರ ಭಾಗವಾಗಿರುವ ಚಳವಳಿಗಾರರ ಜೊತೆ ಗುರುತಿಸಿಕೊಂಡು ಸೇವೆಯನ್ನು ಮಾಡುತ್ತಿರುವುದು ನನಗೆ ಇಷ್ಟವಾಗುತ್ತದೆ..

ವೃತ್ತಿಯಲ್ಲಿ ಗ್ರಂಥಪಾಲಕರಾಗಿ ಪ್ರವೃತ್ತಿಯಲ್ಲಿ ಹಾಡುಗಾರನಾಗಿ ಸಾಹಿತಿಯಾಗಿ ವಾದ್ಯಗಾರರಾಗಿ ಜೊತೆಗೆ ಒಂದು ಶರಣ ಕಲಾ ಬಳಗ ಎಂಬ ಕಲಾತಂಡವನ್ನು ಕಟ್ಟಿ ಮುನ್ನಡೆಸುವ ಮೂಲಕ ಕರ್ನಾಟಕದ ಹಾಡು ಪರಂಪರೆಗೆ ನೀಡಿರುವ ವಿಶಿಷ್ಟವಾದ ಕೊಡುಗೆ ರಮೇಶ ಅವರದ್ದಾಗಿದೆ. ಹಾಡು ಒಂದು ಜವಾಬ್ದಾರಿ ಎಂದುಕೊಂಡ ರಮೇಶ ವರ್ತಮಾನದ ಹಲವಾರು ಶೋಷಣೆಯ ಸಂಗತಿಗಳಿಗೆ ಮುಖಾಮುಖಿಯಾಗಿ ಬರೆಯುತ್ತಿದ್ದಾರೆ. ತಮ್ಮ ಹಾಡುಗಳ ಮೂಲಕ ಜನರಿಗೆ ಸೂಕ್ತ ತಿಳಿವಳಿಕೆ ನೀಡುತ್ತಾರೆ. ಹಾಡು ಬರೆದು ಪತ್ರಿಕೆಯಲ್ಲಿ ಪ್ರಕಟವಾದರೆ, ಅದು ಸಂಕಲನದಲ್ಲಿ ಮುದ್ರಿತವಾದರೆ ಅಷ್ಟೇ ಸಾಲದು ಅದನ್ನು ಹಾಡಿದಾಗ ಮಾತ್ರ ಪರಿಪೂರ್ಣವಾಗಲು ಸಾಧ್ಯ ಎಂಬ ಕಾಳಜಿಯನ್ನು ಇಟ್ಟುಕೊಂಡು ಮತ್ತು ಅದನ್ನು ತನ್ನ ಜವಾಬ್ದಾರಿ ಎಂದು ಹೆಗಲ ಮೇಲೆ ಹೊತ್ತುಕೊಂಡು ಪ್ರೀತಿಯಿಂದ ಬರೆದು ಹಾಡುತ್ತಿರುವ ಗೆಳೆಯ ರಮೇಶನಿಗೆ ಈ ಕಲೆ ಒಲಿದು ಬಂದಿರುವುದರಿಂದ ನಾನೊಬ್ಬ ಕಲಾವಿದನಾಗಿ ಬಹುಪರಾಕ್ ಹೇಳಲೇಬೇಕಾಗಿದೆ.

ಇದನ್ನೂ ಓದಿ:ಬೆಲೆ ಏರಿಕೆ ವಿರುದ್ಧ ಶಿವ-ಪಾರ್ವತಿ ವೇಷದಲ್ಲಿ ಬೀದಿನಾಟಕ: ವ್ಯಕ್ತಿಯ ಬಂಧನ

ಕ್ರಿಯಾಶೀಲ ವ್ಯಕ್ತಿತ್ವವನ್ನು ಇಟ್ಟುಕೊಂಡು ಬಹುತ್ವದ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಜ್ಞಾನವನ್ನು ಸಂಪಾದಿಸಿಕೊಂಡು ಭಾರತದ ಬಹುಜನರ ಧ್ವನಿಯಾಗಿ ಇರುವ ರಮೇಶ ಅವರಿಗೆ ಸಾಥ್ ನೀಡಿರುವುದು ಅವರ ಸಂಗಾತಿ ಮೀನಾಕ್ಷಿ ಮತ್ತು ಮಕ್ಕಳು ಕೂಡ. ಹಾಡು ಇವರ ಹಿರಿಯರಿಂದ ಬಂದ ಬಳುವಳಿ. ಇವರದು ಹಾಡಿನ ಕುಟುಂಬ. ಮಕ್ಕಳಾದ ಚೈತ್ರಾ, ಚೇತನಾ ಮತ್ತು ಚಂದನಾ ಅಷ್ಟೇ ಅಲ್ಲ ಇನ್ನು ಹಲವಾರು ವಿದ್ಯಾರ್ಥಿಗಳು ಅವರ ಗರಡಿಯಲ್ಲಿ ಪಳಗಿ ಹಾಡುತ್ತಿದ್ದಾರೆ. ಶರಣ ಕಲಾ ಬಳಗದ ರಂಜನಿ ಆರತಿ, ಚಿದಾನಂದ ಜಂಬೆ ಬರಗೂರು, ಶರಣಬಸವ ನಾಗಲಾಪುರ, ರಾಘವೇಂದ್ರ ಚವ್ಹಾಣ್, ವೀರೇಶ್ ಹಗೆದಾಳ್, ಗುರುಬಸವ ಮತ್ತು ಮರಿಸ್ವಾಮಿ ಬರಗೂರು, ವಿಜಯಲಕ್ಷ್ಮಿ ಹಂಚಿನಾಳ, ಜ್ಯೋತಿ, ಸೌಮ್ಯ, ಭೈರವಿ ಬಡಿಗೇರ್, ಮೋದಿನ್ ಸಾಬ್ ಇನ್ನು ಹಲವಾರು ವಿದ್ಯಾರ್ಥಿಗಳು ಹಾಡು ಪರಂಪರೆಯ ಅವರ ಈ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅಂತೆಯೇ ನಾರಿನಾಳ್‌ರವರ ಇಡೀ ಕುಟುಂಬದ ಹಾಡುಗಾರರು ಅವರ ಜೊತೆ ಆಗಾಗ ಧ್ವನಿಗೂಡಿಸುತ್ತಿರುವುದು ಸಂತಸದ ಸಂಗತಿ. ಹಲವಾರು ಸಂಘಟನೆಗಳಲ್ಲಿ ಅವರ ಹೋರಾಟದ ಹಾಡುಗಳು ಜನರ ನೋವಿನ ಧ್ವನಿಯಾಗಿ ಬಳಕೆಯಾಗುತ್ತಿವೆ.

ರಮೇಶಗಬ್ಬೂರ್ ರವರು ಶ್ರಮಜೀವಿ ಸಂಸ್ಕೃತಿಯ ಸಾರ್ವಭೌಮ ಪರಂಪರೆಯನ್ನು ಕಟ್ಟುವ ಮತ್ತು ಈ ಜನಪರ ಸಾಮ್ರಾಜ್ಯದ ವಿಸ್ತರಣೆಗೆ ಬೇಕಾದ ಉತ್ತೇಜನಕಾರಿ ಬಂಡವಾಳ ಎಂದರೆ ತಪ್ಪಾಗಲಾರದು. ಏಳು ಸಂಕಲನಗಳ ನಂತರ ಈಗ ಮತ್ತೊಂದು ಹೋರಾಟದ ಸಂಕಲನವಾಗಿ ’ಜನ ಮನದಂತೆ ಹಾಡುವೆ’ ಎಂದು ಬರೆದಿದ್ದಾರೆ. ತಮ್ಮ ಕವಿತೆ, ಗಜಲ್‌ಗಳ ಮೂಲಕ ಜನರ ಮನದೊಳಗಿನ ಕಷ್ಟಗಳನ್ನು ಶೋಷಿತರ ನೋವುಗಳನ್ನು ಬೆವರಿನ ಗೌರವವನ್ನು ದುಡಿಯುವ ವರ್ಗದ ಶ್ರಮವನ್ನು ಗೌರವಿಸುತ್ತಾ ಅವುಗಳನ್ನೇ ಹಾಡುಗಳನ್ನಾಗಿ ಬದಲಾಯಿಸುತ್ತಾರೆ.. ಬಾಬಾಸಾಹೇಬರ ಕುರಿತ ಇವರ ಹಾಡುಗಳು ಯುವಪೀಳಿಗೆಗೆ ಜ್ಞಾನಭಂಡಾರವನ್ನು ಉಣಬಡಿಸುವುದು ಅಷ್ಟೇ ಅಲ್ಲ ಬರಗಾಲದಲ್ಲಿ ಬುತ್ತಿ ಬಿಚ್ಚಿಟ್ಟಿರುವ ಮೃಷ್ಟಾನ್ನ ಭೋಜನ ಎಂದರೆ ತಪ್ಪಾಗಲಾರದು. ಸಾವಿತ್ರಿಬಾಯಿ ಪುಲೆ ಅವರ ಹಾಡುಗಳು, ರಮಾಬಾಯಿಯವರ ಹಾಡುಗಳು, ಜನಾಧಿಕಾರ ಹಾಡುಗಳು, ಮತಾಧಿಕಾರದ ಹಾಡುಗಳು, ಸ್ತ್ರೀ ಶೋಷಣೆ ಹಾಡುಗಳು, ವೈಚಾರಿಕತೆಯನ್ನು ಸಾರುವ ಹಾಡುಗಳು, ಜಾತಿಯ ಅಸಮಾನತೆಯನ್ನು ಬಿಚ್ಚಿಡುವ ಹಾಡುಗಳು ಅಷ್ಟೇ ಅಲ್ಲ ಈ ನಾಡಿನಲ್ಲಿ ಹುಟ್ಟಿ ಜನರಿಗಾಗಿ ದುಡಿದು ಮಡಿದ ವರ್ತಮಾನದ ಹಲವಾರು ಮಹನೀಯರ ಹಾಡುಗಳು ಕೂಡ ಈ ಸಂಕಲನದಲ್ಲಿ ಅಷ್ಟೇ ಅರ್ಥಗರ್ಭಿತವಾಗಿ ಮೂಡಿಬಂದಿವೆ. ಈ ಸಂಕಲನದ ಬಹುತೇಕ ಹಾಡುಗಳು ಜನಮನವನ್ನು ಗೆಲ್ಲುವ ಜಾನಪದಗಳಾಗಿ ಜನರ ಮನಮನೆಗಳಿಗೆ ತಲುಪಲಿ ಎಂಬ ಆಶಾಭಾವ ನನ್ನದು.

ರಮೇಶ್ ಗಬ್ಬೂರ್

ವರ್ತಮಾನದ ಬಿಕ್ಕಟ್ಟುಗಳ ತಾಕಲಾಟಗಳ ಸಂದರ್ಭದಲ್ಲಿ ಆತನ ಜೊತೆ ಮಾತನಾಡುವಾಗ ಅವರು ಹಲವಾರು ಬಾರಿ ಸಂಕಟಗಳನ್ನು ತೋಡಿಕೊಂಡಿದ್ದಾರೆ. ದೇಶದ ಅಸಮಾನತೆ, ಶೋಷಣೆ, ಅತ್ಯಾಚಾರ, ಭ್ರಷ್ಟಾಚಾರ ಕುರಿತು ಹಾಡು ಬರೆಯಬೇಕು ಎಂದು ಅನಿಸುತ್ತದೆ, ಆದರೆ ಬರೆಯಲಾಗುತ್ತಿಲ್ಲ ನನ್ನ ಕೈಕಟ್ಟಿ ಹಾಕಲಾಗುತ್ತಿದೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಇಂತಹ ಜೀವಪರ ಹಾಡು ಬರೆಯುವ ಸಾಮರ್ಥ್ಯದ ನನ್ನ ಬಾಲ್ಯದ ಗೆಳೆಯ, ಜೀವದ ಗೆಳೆಯ ಇನ್ನು ಮುಂದೆಯೂ ಹೆಚ್ಚೆಚ್ಚು ಬರೆಯುವಂತಾಗಲಿ ಮತ್ತು ಉಳಿಯುವಂತಾಗಲಿ ಎಂದು ಮನದುಂಬಿ ಹಾರೈಸುತ್ತೇನೆ.

ಜೈಭೀಮ – ಲಾಲ್ ಸಲಾಂ


ಬಾಬಾಸಾಹೇಬರ ಮರೆತೂ ಹ್ಯಾಂಗ ಬದುಕಲಯ್ಯ

ಬಾಬಾಸಾಹೇಬರ ಮರೆತೂ ಹ್ಯಾಂಗ ಬದುಕಲಯ್ಯ
ನಾನಿಲ್ಲಿ ನಿಂತು ಹಾಡಲು ಅವರೆ ಕಾರಣರಯ್ಯ

ಜೋಳಿಗೆಯ ಹಿಡಿದ ಬಾಳಿಗೆ ನಕ್ಷತ್ರದ ಕನಸಾದರು
ಭಿಕ್ಷೆಗಾಗಿ ಹಿಡಿದ ತಟ್ಟೆಗೆ ಹೊಟ್ಟೆಗನ್ನವಾದರು
ಬದುಕು ಬಯಲಲ್ಲಿ ನಿಲ್ಲಲು ಅಲ್ಲಿ ಗುಡಿಸಲಾದರು
ಹರಿದ ಬಟ್ಟೆಯೊಳಗಿನ ಅರಿವಿಗೆ ಪಾಠಿ ಚೀಲವಾದರು
ಎಷ್ಟಂತ ಹೇಳಲಿ ಬಾಬಾ ಬಾಳ ದೀಪವಾದರು

ಬಾಬಾಸಾಹೇಬರಿಲ್ಲದಿದ್ದರೆ ನಾನಿಲ್ಲವಾಗುತ್ತಿದ್ದೆ
ಮುಟ್ಟಿಸಿಕೊಳ್ಳದವನಾ ಮುಟ್ಟುವಂತೆ ಮಾಡಿದರು
ಅಲೆಮಾರಿ ಜೋಳಿಗೆಯೊಳಗೆ ಕರುಳಿನ ಕಾಳಾದರು
ಯಂಕಪ್ಪನ ಪಿಟೀಲಿನಾ ನಾದವಾದವರು
ಎಷ್ಟಂತಾ ಹೇಳಲಿ ಬಾಬಾ ತಿನ್ನುವ ತುತ್ತಾದರು

ಯಾವ ದೇವರು ಕಾಯಲಿಲ್ಲ ಕರೆದು ಕೈ ಹಿಡಿದವರು
ಕಾಲ್ಪನಿಕ ಚಿತ್ರಗಳನ್ನು ದೇವರಲ್ಲವೆಂದವರು
ಸಮತೆ ಮಮತೆ ಕರುಣೆಯ ಬುದ್ಧ ಮಾರ್ಗವಾದವರು ಮುದ್ದಮ್ಮ ಹೊತ್ತ
ಎಷ್ಟಂತಾ ಹೇಳಲಿ ಬಾಬಾ ನಮ್ಮಯ ಕನಸಾದವರು
(ಸಂಕಲನದಿಂದ)

ಅಂಬಣ್ಣ ಅರೋಲಿಕರ್
ಸಂಪಾದಕ, ಜನಬಲಟೈಮ್ಸ್
ಕನ್ನಡ ದಿನಪತ್ರಿಕೆ.
ರಾಯಚೂರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...