ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಅಧಿಕೃತ ಪ್ರಕಟಣೆಗಳನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಪಡೆಯಲು ಕೇಂದ್ರ ಪರಿಸರ ಸಚಿವಾಲಯಕ್ಕೆ ಗುರುವಾರ ಆದೇಶ ನೀಡಿತು.
“ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ 22 ಭಾಷೆಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಿಂದಿ ಮತ್ತು ಇಂಗ್ಲಿಷ್ ಭಾಷೆ ಆಪ್ತವಾಗಿಲ್ಲದೇ ಇರಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಬೊಬ್ಡೆ ಗುರುವಾರ ಮಧ್ಯಾಹ್ನ ಕೇಂದ್ರ ಪರಿಸರ ಸಚಿವಾಲಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ವೇಳೆ ಹೇಳಿದರು.
ಕೇಂದ್ರ ಸರ್ಕಾರವು “ಅಧಿಕೃತ ಭಾಷಾ ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಯೋಚಿಸಬೇಕು” ಎಂದು ಅವರು ಪರಿಸರ ಸಚಿವಾಲಯದ ಸಲಹೆಗಾರರಿಗೆ ತಿಳಿಸಿದರು.
ಕರಡು ಕಾನೂನನ್ನು 22 ಭಾಷೆಗಳಿಗೆ ಭಾಷಾಂತರಿಸುವ ಸಾಧ್ಯತೆಯ ಬಗ್ಗೆ, “ಅನುವಾದವು ಸುಲಭವಾದ ವಿಷಯ, ಸಂಸತ್ತಿನಲ್ಲಿಯೂ ಶೀಘ್ರ ಅನುವಾದವಿದೆ” ಎಂದು ಸಿಜೆಐ ಬೊಬ್ಡೆ ಹೇಳಿದ್ದಾರೆ.
ಈ ಹಿಂದೆ ಹಫ್ಪೋಸ್ಟ್ ಇಂಡಿಯಾ ವರದಿ ಮಾಡಿದಂತೆ, ಜೂನ್ 30 ರ ತೀರ್ಪಿನಲ್ಲಿ, ಸಾರ್ವಜನಿಕ ಸಮಾಲೋಚನೆಗಾಗಿ ವಿವಾದಾತ್ಮಕ ಪ್ರಸ್ತಾವಿತ ಕಾನೂನನ್ನು ಭಾಷಾಂತರಿಸಲು ದೆಹಲಿ ಹೈಕೋರ್ಟ್ ಪರಿಸರ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.
ಈ ತೀರ್ಪಿನ ವಿರುದ್ಧ ಆಗಸ್ಟ್ ಆರಂಭದಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ, ಕೇಂದ್ರ ಪರಿಸರ ಆಡಳಿತವು ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಎಲ್ಲಾ ಅಧಿಕೃತ ಆದೇಶಗಳನ್ನು ಭಾಷಾಂತರಿಸುವ ಜವಾಬ್ದಾರಿಯ ಕಾರಣದಿಂದಾಗಿ ಕೇಂದ್ರ ಸರ್ಕಾರದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಭೀತಿಯನ್ನು ಹೆಚ್ಚಿಸಿದೆ ಎಂದು ಹೇಳಿತ್ತು.
ಜೂನ್ 30 ರ ದೆಹಲಿ ಹೈಕೋರ್ಟ್ನ ತೀರ್ಪನ್ನು ಉಲ್ಲೇಖಿಸಿ, ಮೇಲ್ಮನವಿಯಲ್ಲಿ, “ಮಾನ್ಯ ನ್ಯಾಯಾಲಯವು ಈ ಆದೇಶವನ್ನು ಭಾಗಶಃ ಮಾರ್ಪಡಿಸದಿದ್ದಲ್ಲಿ, ಪರಿಣಾಮಕಾರಿ ಆಡಳಿತದ ಅಗತ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಅಂಗೀಕರಿಸಲಾಗುತ್ತಿದ್ದ ವಿವಿಧ ನಿರ್ಣಯಗಳು, ಸಾಮಾನ್ಯ ಆದೇಶಗಳು, ನಿಯಮಗಳು, ಅಧಿಸೂಚನೆಗಳು ಇತ್ಯಾದಿಗಳ ಸ್ಥಳೀಯ ಭಾಷೆಗಳ ಅನುವಾದವನ್ನು ಕೋರಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭವಾಗುತ್ತದೆ” ಎಂದು ವಾದಿಸಿತ್ತು.
ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಪರಿಸರ ಸಚಿವಾಲಯ ಉಲ್ಲೇಖಿಸಿರುವ ಈ ವಾದಗಳು ಸುಪ್ರೀಂ ಕೋರ್ಟ್ಗೆ ಸಮರ್ಥನೀಯವಾಗಲಿಲ್ಲ. ಆದಾಗ್ಯೂ, ಸುಪ್ರೀಂ ಕೋರ್ಟ್ ಈ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಸಚಿವಾಲಯಕ್ಕೆ ಸ್ವಾತಂತ್ರ್ಯವನ್ನು ನೀಡಿದೆ ಮತ್ತು ದೆಹಲಿ ಹೈಕೋರ್ಟ್ ನಿಯಮಗಳು ಪ್ರತಿಕೂಲವಾದರೆ ಪರಿಶೀಲನಾ ಅರ್ಜಿಯನ್ನು ಸುಪ್ರೀಂಗೆ ಸಲ್ಲಿಸಿ ಎಂದು ಹೇಳಿದೆ.
ಪರಿಸರ ಕರಡು ಕಾನೂನನ್ನು ಕನ್ನಡಕ್ಕೆ ಭಾಷಾಂತರಿಸಲು ಮತ್ತು ಸಾರ್ವಜನಿಕರಿಗೆ ಅವರ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸರಿಯಾದ ಕಾಲಾವಕಾಶವನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಕೇಳಿತ್ತು ಎಂದು ಹಫ್ಪೋಸ್ಟ್ ಇಂಡಿಯೆರ್ ವರದಿ ಮಾಡಿತ್ತು.
ಪರಿಸರ ತೆರವು ಕಾನೂನಿನ ಕರಡನ್ನು ತಮಿಳು ಭಾಷೆಗೆ ಭಾಷಾಂತರಿಸಬಹುದೇ ಎಂದು ಮದ್ರಾಸ್ ಹೈಕೋರ್ಟ್ ಪರಿಸರ ಸಚಿವಾಲಯವನ್ನು ಕೇಳಿದೆ ಎಂದೂ ಹಫ್ಪೋಸ್ಟ್ ವರದಿ ಮಾಡಿತ್ತು.
ಸುಪ್ರೀಂ ತೀರ್ಪಿನ ನಂತರ ಕೇಂದ್ರ ಪರಿಸರ ಸಚಿವಾಲಯವು ಮಾಧ್ಯಮಗಳಿಗೆ ನೀಡಿದ ಅಧಿಕೃತ ಹೇಳಿಕೆಯಲ್ಲಿ, “ಕರಡು ಪರಿಸರ ಪರಿಣಾಮಗಳ ಅಧ್ಯಯನ (ಇಐಎ) ಅಧಿಸೂಚನೆ- 2020 ಅನ್ನು ಸಂವಿಧಾನದ ಎಂಟನೇ ಅನುಸೂಚಿಯಂತೆ ಪ್ರಕಟಿಸಲು ವಿಫಲವಾದ ಕಾರಣ ಸಚಿವಾಲಯದ ವಿರುದ್ಧದ ನ್ಯಾಯಾಲಯದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ತಡೆಹಿಡಿದಿದೆ.
ಪ್ರಕಟಣೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಎಂದು ನಿಯಮಗಳು ಹೇಳುತ್ತವೆ ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.
ಅಧಿಕೃತ ಪ್ರಕಟಣೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಅಗತ್ಯ ಎಂದು ಹೇಳುವ ಅಧಿಕೃತ ಭಾಷೆಗಳ ನಿಯಮಗಳನ್ನು ಕೇಂದ್ರ ತಿದ್ದುಪಡಿ ಮಾಡಬೇಕೆಂದು ಸಿಜೆಐ ಸೂಚಿಸಿದೆ.
ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ


