Homeಮುಖಪುಟಬಲಪಂಥೀಯ ಧೋರಣೆಯ ಫೇಸ್‌ಬುಕ್ ಸೆನ್ಸಾರ್‌ಶಿಪ್‌ಗೆ ಮತ್ತೊಂದು ಹೆಸರು ‘ತಾಂತ್ರಿಕ ದೋಷ’

ಬಲಪಂಥೀಯ ಧೋರಣೆಯ ಫೇಸ್‌ಬುಕ್ ಸೆನ್ಸಾರ್‌ಶಿಪ್‌ಗೆ ಮತ್ತೊಂದು ಹೆಸರು ‘ತಾಂತ್ರಿಕ ದೋಷ’

ಯಾವುದೇ ವಾದಕ್ಕೆ ಒಂದು ಪ್ರತಿವಾದವಿರುತ್ತದೆ. ಯಾವ ಕಡೆ ಹೆಚ್ಚು ಜನರಿರುತ್ತಾರೋ ಅದನ್ನು ಬೆಂಬಲಿಸಿದರೆ ತಮ್ಮ ವ್ಯಾಪಾರ ಹೆಚ್ಚು ಸುಲಲಿತವಾಗಿ ನಡೆಯುತ್ತದೆ ಎಂಬುದು ಅದರ ನಿಲುವು.

- Advertisement -
- Advertisement -

ನಾನು ಗೌರಿ ಡಾಟ್ ಕಾಂ’ನ ಯುಆರ್‌ಎಲ್‌ಗಳನ್ನು ಹಂಚಿಕೊಳ್ಳದಂತೆ ಫೇಸ್‌ಬುಕ್ ನಿರ್ಬಂಧಿಸಿ ಆಮೇಲೆ ಕ್ಷಮೆಕೋರಿದ್ದು ನಮಗೆಲ್ಲಾ ತಿಳಿದಿರುವ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಬೆಂಬಲಿಸುವ ವಿಶ್ವದ ಹಲವೆಡೆ ಇರುವ ಅನೇಕರು ಫೇಸ್‌ಬುಕ್‌ನ ಈ ವರ್ತನೆಯನ್ನು ಖಂಡಿಸುತ್ತಿದ್ದಾಗಲೇ ಇದಕ್ಕೆ ‘ತಾಂತ್ರಿಕ ಕಾರಣ’ಗಳನ್ನು ಹುಡುಕುವುದರಲ್ಲಿ ಕೆಲವರು ನಿರತರಾಗಿದ್ದರು.

ಅಂದ ಹಾಗೆ ಇವರಾರೂ ಫೇಸ್‌ಬುಕ್‌ನ ನೌಕರರಲ್ಲ, ಝಕರ್‌ಬರ್ಗ್ ಅಭಿಮಾನಿ ಸಂಘದ ಸದಸ್ಯರಲ್ಲ. ನರೇಂದ್ರಮೋದಿ ಅಭಿಮಾನಿಗಳನ್ನೂ ಇಲ್ಲಿ ಪರಿಗಣಿಸಲಾಗಿಲ್ಲ. ಇವರಿಗಿದ್ದದ್ದು ಒಂದೇ ಒಂದು ಉದ್ದೇಶ. ‘ನಾನು ಗೌರಿ’ಯ ವೆಬ್‌ಸೈಟನ್ನು ಫೇಸ್‌ಬುಕ್ ಬ್ಲಾಕ್ ಮಾಡಿರುವುದರ ಹಿಂದೆ ಯಾವುದೇ ರಾಜಕಾರಣವಲ್ಲ ಎಂದು ತಮಗೆ ತಾವೇ ವಿವರಿಸಿಕೊಂಡು, ತಮ್ಮ ಗೆಳೆಯರಿಗೂ ವಿವರಿಸುವುದು!

ಇವರೆಲ್ಲರ ರಾಜಕೀಯ ಒಲವುಗಳನ್ನು ಬದಿಗಿಟ್ಟೇ ಅವರ ವಾದಗಳನ್ನು ನೋಡೋಣ. ಇವರು ಹೇಳುವಂತೆ ಫೇಸ್‌ಬುಕ್ ಯುಆರ್‌ಎಲ್ ಬ್ಲಾಕ್ ಮಾಡುವುದರ ಹಿಂದೆ ಯಾವುದೇ ರಾಜಕಾರಣವಿಲ್ಲ ಎಂಬುದನ್ನು ಒಪ್ಪಬಹುದೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಫೇಸ್‌ಬುಕ್‌ನ ಒಂದು ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಅದರ ಬಳಕೆದಾರನಿಗೆ ಎಷ್ಟು ಅವಕಾಶವಿದೆ ಎಂಬುನ್ನು ನೋಡಬೇಕು.

ಫೇಸ್‌ಬುಕ್ ಒಂದು ಯುಆರ್‌ಎಲ್‌ಅನ್ನು ನಿರ್ಬಂಧಿಸಿದರೆ ಅದನ್ನು ಪ್ರಶ್ನಿಸುವುದಕ್ಕೆ ಒಂದೇ ಒಂದು ಮಾರ್ಗವಿದೆ. ನಾವು ಫೇಸ್‌ಬುಕ್‌ನ ಡಿಬಗ್ಗರ್ ಸೇವೆಗೆ ಹೋಗಿ ನಮ್ಮ ಯುಆರ್‌ಎಲ್‌ಅನ್ನು ಅಲ್ಲಿ ನಮೂದಿಸಿ ಪರೀಕ್ಷಿಸಬೇಕು. ಅದರ “ಕಮ್ಯುನಿಟಿ ಸ್ಟ್ಯಾಂಡರ್ಡ್ ಉಲ್ಲಂಘನೆ” ಆಗಿದ್ದರೆ ಆ ಮಾಹಿತಿ ಅಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಅದು ತಪ್ಪಾಗಿದ್ದರೆ ಮುಂದೇನು ಮಾಡಬೇಕು ಎಂಬ ಮಾಹಿತಿ ಕಾಣಿಸಿಕೊಳ್ಳುತ್ತದೆ.

ವಿಷಯ ಇಲ್ಲಿಗೇ ಕೊನೆಗೊಂಡಿದ್ದರೆ ಎಲ್ಲವೂ ಸರಿಯಾಗಿದೆ ಎಂದು ಹೇಳಬಹುದಿತ್ತು.
ಆದರೆ ಅದು ಹಾಗಿಲ್ಲ. ಯಾವುದೇ ಕಮ್ಯುನಿಟಿ ಸ್ಟ್ಯಾಂಡರ್ಡ್ ಉಲ್ಲಂಘಿಸದ ವೆಬ್‌ಸೈಟುಗಳನ್ನೂ ಫೇಸ್‌ಬುಕ್ ಬ್ಲಾಕ್ ಮಾಡುತ್ತದೆ. ಡಿಬಗ್ಗರ್ ಕೂಡಾ ಕೇವಲ ಬ್ಲಾಕ್ ಆಗಿರುವ ಯುಆರ್‌ಎಲ್ ಇದೆ ಎಂದಷ್ಟೇ ಹೇಳುತ್ತದೆ. ಮುಂದೇನು ಮಾಡಬೇಕು ಎಂಬುದಕ್ಕೆ ಯಾವ ಸೂಚನೆಯನ್ನೂ ಇದು ಕೊಡುವುದಿಲ್ಲ.

ಇಂಥ ಸಂದರ್ಭಗಳಲ್ಲಿ ಬಳಕೆದಾರ ಏನು ಮಾಡಬೇಕು? ಇದಕ್ಕೆ ಸರಳ ಉತ್ತರಗಳಿಲ್ಲ. ಫೇಸ್‌ಬುಕ್ ಸಪೋರ್ಟ್ ಸೆಂಟರನ್ನು ಹೇಗಾದರೂ ಮಾಡಿ ಸಂಪರ್ಕಿಸಬೇಕು ಅಷ್ಟೇ. ಫೇಸ್‌ಬುಕ್ ಜೊತೆಗೆ ಡೆವಲಪರ್, ಜಾಹೀರಾತು ಖಾತೆ, ಕಾರ್ಪೊರೇಟ್ ಪಾರ್ಟ್‌ನರ್‌ಶಿಪ್‌ನಂಥ ಸಂಬಂಧವಿದ್ದರೆ ಸಂಪರ್ಕಿಸುವ ದಾರಿಗಳಿರುತ್ತವೆ. ಇಲ್ಲವಾದರೆ ಹೆಲ್ಪ್ ಸೆಂಟರ್‌ನಲ್ಲಿ ದೂರು ಕೊಡುವ ಅರ್ಜಿ ತುಂಬಿಸಿ ಪ್ರತಿಕ್ರಿಯೆಗೆ ಕಾಯಬೇಕಷ್ಟೆ.

ವಿಶ್ವವ್ಯಾಪಿಯಾಗಿ ತನ್ನ ಜಾಲವನ್ನು ಹರಡಿಕೊಂಡಿರುವ, ಬೇರೆ ಬೇರೆ
ಬಗೆಯ ಕಾನೂನುಗಳನ್ನು ಪಾಲಿಸಬೇಕಾಗಿರುವ ಬಹುರಾಷ್ಟ್ರಿಯ ಸಂಸ್ಥೆಯೊಂದು ತನ್ನನ್ನು ಸಂಪರ್ಕಿಸುವ ವಿಧಾನವನ್ನು ಇಷ್ಟೊಂದು ಕ್ಲಿಷ್ಟಗೊಳಿಸಿರುವುದರ ಉದ್ದೇಶವೇನು? ಈ ಪ್ರಶ್ನೆಗೆ ಬೆಂಬಲಿಗರು ನೀಡುವ ಉತ್ತರ: ‘ವಿಶ್ವವ್ಯಾಪಿಯಾಗಿ ಭಾರಿ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಸಂಸ್ಥೆ ಪ್ರತಿಯೊಬ್ಬನ ಪ್ರಶ್ನೆಗೆ ವೈಯಕ್ತಿಕವಾಗಿ ಉತ್ತರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ಬಗೆಯ ವ್ಯವಸ್ಥೆ ಮಾಡಿಕೊಂಡಿದೆ’. ತರ್ಕಕ್ಕಾಗಿ ಇದನ್ನು ಒಪ್ಪಿಕೊಳ್ಳೋಣ. ಫೇಸ್‌ಬುಕ್‌ನ ವ್ಯಾಪಾರ ಮಾದರಿಯೇ ಅದರ ಬಳಕೆದಾರರು ಮತ್ತು ಅವರು ಹಂಚಿಕೊಳ್ಳುವ ಮಾಹಿತಿ. ಅದಿಲ್ಲದೇ ಇದ್ದರೆ ಫೇಸ್‌ಬುಕ್‌ನ ಅಸ್ತಿತ್ವವೇ ಇರುವುದಿಲ್ಲ. ಅಂಥದ್ದರಲ್ಲಿ ಒಬ್ಬೊಬ್ಬ ಗ್ರಾಹಕನ ಸಮಸ್ಯೆಯನ್ನು ಅದು ಗಂಭೀರವಾಗಿ ಪರಿಗಣಿಸಬೇಕಲ್ಲವೇ? ಈ ಪ್ರಶ್ನೆಗೆ ಬರುವ ಹೊತ್ತಿಗೆ ಸಮರ್ಥಕರು ಸುಸ್ತಾಗಿರುತ್ತಾರೆ. ‘ನಿಮ್ಮನ್ನು ಫೇಸ್‌ಬುಕ್ ಬಳಸಲು ಹೇಳಿದವರು ಯಾರು?’ ಎಂಬಂಥ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ.

ದುರದೃಷ್ಟವೆಂದರೆ ಇದನ್ನು ನಮ್ಮೆಲ್ಲರಿಗಿಂತ ಚೆನ್ನಾಗಿ ಫೇಸ್‌ಬುಕ್ ಅರಿತಿದೆ. ಯಾವುದೇ ವಾದಕ್ಕೆ ಒಂದು ಪ್ರತಿವಾದವಿರುತ್ತದೆ. ಯಾವ ಕಡೆ ಹೆಚ್ಚು ಜನರಿರುತ್ತಾರೋ ಅದನ್ನು ಬೆಂಬಲಿಸಿದರೆ ತಮ್ಮ ವ್ಯಾಪಾರ ಹೆಚ್ಚು ಸುಲಲಿತವಾಗಿ ನಡೆಯುತ್ತದೆ ಎಂಬುದು ಅದರ ನಿಲುವು. ವೈಯಕ್ತಿಕ ಮಾಹಿತಿಯ ಹಂಚಿಕೆಗೆ ಸಂಬಂಧಿಸಿದಂತೆ ಪ್ರಬಲವಾದ ಕಾನೂನುಗಳಿರುವ ಯೂರೋಪಿನ ದೇಶಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆಯೂ ಫೇಸ್‌ಬುಕ್‌ನದ್ದು ಒಂದು ಬಗೆಯ ಸರ್ವಾಧಿಕಾರವೇ ಸರಿ. ಭಾರತದಲ್ಲಂತೂ ಫೇಸ್‌ಬುಕ್ ಮತ್ತು ಬಲಪಂಥೀಯ ಶಕ್ತಿಗಳು ಒಂದನ್ನೊಂದು ಬೆಂಬಲಿಸುತ್ತಲೇ ಪರಸ್ಪರ ಬೆಳೆದಿವೆ.

‘ನಾನು ಗೌರಿ’ ಬಲಪಂಥೀಯ ಶಕ್ತಿಗಳಿಗೆ ಇರಿಸುಮುರುಸುಂಟು ಮಾಡುವ ಸುದ್ದಿಗಳನ್ನು ಪ್ರಕಟಿಸುವ ಕರ್ನಾಟಕ ಬೆರೆಳಣಿಕೆಯ ಮುಖ್ಯವಾಹಿನಿ ಜಾಲತಾಣಗಳಲ್ಲಿ ಒಂದು. ಅದರ ಯುಆರ್‌ಎಲ್ ಅನ್ನು ಫೇಸ್‌ಬುಕ್ ಬ್ಲಾಕ್ ಮಾಡುವ ಮುಂಚೆಯೂ ಬಿಜೆಪಿ ಶಾಸಕರೊಬ್ಬರಿಗೆ ಸಂಬಂಧಿಸಿದ ಸುದ್ದಿಯನ್ನು ಅದು ಪ್ರಕಟಿಸಿತ್ತು. ಆಮೇಲೆ ತೆರವುಗೊಳಿಸುವ ಹೊತ್ತಿಗೆ ಇದೊಂದು ‘ತಾಂತ್ರಿಕ ಸಮಸ್ಯೆ’ ಆಗಿತ್ತು.

‘ವಾರ್ತಾಭಾರತಿ’ಯ ಯುಆರ್‌ಎಲ್ ಮತ್ತು ಅದರ ಫೇಸ್‌ಬುಕ್ ಪುಟ ಇದೇ ಬಗೆಯ ತೊಂದರೆಯನ್ನು ಎದುರಿಸಿತ್ತು. ರಾಷ್ಟ್ರಿಯ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಬ್ಲಾಕ್ ತೆರವಾಯಿತು. ಆಗಲೂ ಬ್ಲಾಕ್‌ಗೆ ಕಾರಣವಾದದ್ದು ತಾಂತ್ರಿಕ ಸಮಸ್ಯೆ. ವಾರ್ತಾಭಾರತಿ ಕೂಡಾ ಬಲಪಂಥೀಯ ವಿರೋಧಿ ನಿಲುವಿನ ಪತ್ರಿಕೆಯೇ ಆಗಿದೆ. ‘ಇಂಜಿಪೆಣ್ಣು’ ಹೆಸರಿನಲ್ಲಿ ಸಕ್ರಿಯರಾಗಿರುವ ಮಾನವ ಹಕ್ಕು ಕಾರ್ಯಕರ್ತೆಯ ಫೇಸ್‌ಬುಕ್ ಪುಟ/ಅಕೌಂಟ್, ‘ಕ್ಯಾರವಾನ್’ ಮಾಸಿಕದ ಜಾಹೀರಾತು ಹೀಗೆ ‘ತಾಂತ್ರಿಕ ಕಾರಣ’ಗಳಿಗೆ ಬ್ಲಾಕ್ ಆಗುವ ಎಲ್ಲಾ ಪ್ರಕರಣಗಳಲ್ಲಿಯೂ ಆಡಳಿತಾರೂಢರಿಗೆ ವಿರುದ್ಧವಾಗಿರುವ ವರದಿ ಇರುವುದು ಕೇವಲ ಕಾಕತಾಳೀಯ ಎಂದು ಹೇಳಲು ಸಾಧ್ಯವೇ?

‘ಕ್ಯಾರವಾನ್’ ಪ್ರಕರಣಕ್ಕೆ ಇನ್ನೊಂದು ತಿಂಗಳಲ್ಲಿ ಎರಡು ವರ್ಷ ತುಂಬುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಸಾಲದ ಕುರಿತಂತೆ ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣದ ಪತ್ರದಲ್ಲಿ ಪ್ರಸ್ತಾಪಿಸಿಲ್ಲ ಎಂಬುದರ ಬಗ್ಗೆ ಕ್ಯಾರವಾನ್ ವರದಿ ಪ್ರಕಟಿಸಿತ್ತು. ಎಲ್ಲಾ ಪತ್ರಿಕೆಗಳು ಮಾಡುವಂತೆಯೇ ತನ್ನ ವಿಶೇಷ ವರದಿಯನ್ನು ಫೇಸ್‌ಬುಕ್‌ನಲ್ಲಿ ಜಾಹೀರಾತಾಗಿ ಪ್ರಕಟಿಸಲು ಪ್ರಯತ್ನಿಸಿತು. ಆದರೆ ಈ ಜಾಹೀರಾತಿಗೆ ಫೇಸ್‌ಬುಕ್ ಒಪ್ಪಿಗೆ ನೀಡಲೇ ಇಲ್ಲ. ಇದ್ಯಾಕೆ ಹೀಗೆ ಎಂಬ ಪ್ರಶ್ನೆಗೆ ಫೇಸ್‌ಬುಕ್ ಕಡೆಯಿಂದ ಯಾವುದೇ ಉತ್ತರ ದೊರೆಯಲಿಲ್ಲ. ಹನ್ನೊಂದು ದಿನಗಳ ನಂತರ ಜಾಹೀರಾತು ಪ್ರಕಟಣೆಗೆ ಒಪ್ಪಿಯನ್ನು ನೀಡಿದ ಫೇಸ್‌ಬುಕ್ ತಾಂತ್ರಿಕ ತೊಂದರೆಯಿಂದ ಹೀಗಾಯಿತು ಎಂಬ ಸ್ಪಷ್ಟನೆ ನೀಡಿತು.

ಫೇಸ್‌ಬುಕ್ ಮತ್ತು ಕ್ಯಾರವಾನ್‌ಗಳು ಜೊತೆ ಜೊತೆಯಾಗಿ ಕಾರ್ಯಕ್ರಮಗಳನ್ನು ಸಂಘಟಿಸಿವೆ. ಎರಡೂ ಸಂಸ್ಥೆಗಳ ನಡುವೆ ವ್ಯಾವಹಾರಿಕ ಸಂಬಂಧವೂ ಇತ್ತು. ಇಷ್ಟಾಗಿಯೂ ಫೇಸ್‌ಬುಕ್‌ನ ‘ಸಂಪರ್ಕ ಜಾಲದ ಬಲೆ’ಯನ್ನು ದಾಟಿ ಹೋಗಲು ಕ್ಯಾರವಾನ್‌ಗೆ ಸಾಧ್ಯವಾಗಿರಲಿಲ್ಲ. ‘ಕ್ಯಾರವಾನ್ ಡೈಲಿ’, ‘ಬೋಲ್ತಾ ಹಿಂದುಸ್ತಾನ್’, ‘ಜನ್‌ಜ್ವಾರ್’ ಹೀಗೆ ಅನೇಕ ಸಣ್ಣ ಮತ್ತು ದೊಡ್ಡ ಪತ್ರಿಕೆಗಳು ನರೇಂದ್ರ ಮೋದಿ ಮತ್ತು ಬಿಜೆಪಿ ವಿರೋಧಿ ವರದಿಗಳನ್ನು ಪ್ರಕಟಿಸಿದಾಗಲೆಲ್ಲಾ ಯುಆರ್‌ಎಲ್ ಬ್ಲಾಕ್‌ನ ಸಮಸ್ಯೆಯನ್ನು ಎದುರಿಸಿವೆ.

ಇಲ್ಲಿ ಉಲ್ಲೇಖಿಸುವ ಎಲ್ಲಾ ಪತ್ರಿಕೆಗಳು ಗಮನಾರ್ಹ ಪ್ರಮಾಣದ ಓದುಗರನ್ನು ಹೊಂದಿವೆಯಷ್ಟೇ ಅಲ್ಲದೇ ತಮ್ಮನ್ನು ಬ್ಲಾಕ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಒಂದು ಗದ್ದಲ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದವು ಎಂಬುದೂ ಮುಖ್ಯವಾಗುತ್ತದೆ. ಇಂಥ ಶಕ್ತಿ ಇಲ್ಲದ ಅದೆಷ್ಟೋ ಮಂದಿಯ ವಿಷಯ ಹೊರಗೆ ಬಾರದೆಯೇ ಮುಚ್ಚಿ ಹೋಗಿರುವ ಸಾಧ್ಯತೆಗಳೇ ಹೆಚ್ಚು.

ಎನ್‌ಡಿಟಿವಿ ಇಂಡಿಯಾದ ಫೇಸ್‌ಬುಕ್ ಪುಟದಲ್ಲಿ ಸಂಭವಿಸುವ ಅದ್ಭುತ ಮತ್ತೊಂದು. ರವೀಶ್‌ಕುಮಾರ್ ತಮ್ಮ ಅಭಿಮಾನಿಗಳು ಮತ್ತು ವಿರೋಧಿಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರು. ಅವರನ್ನು ಬ್ಲಾಕ್ ಮಾಡುವುದು ಸ್ವಲ್ಪ ಕಷ್ಟದ ಸಂಗತಿ.

ಆದರೆ ಅವರು ಆಡಳಿತ ಪಕ್ಷದ ಸೋಲುಗಳನ್ನು ಸಾಕ್ಷ್ಯ ಸಮೇತ ಬಯಲಿಗೆಳೆಯುವ ಕಾರ್ಯಕ್ರಮಗಳು ಫೇಸ್‌ಬುಕ್‌ನಲ್ಲಿ ಕಡಿಮೆ ಜನರನ್ನು ತಲುಪುವಂತೆ ನೋಡಿಕೊಳ್ಳುವ ಪ್ರಕ್ರಿಯೆಯೊಂದರ ಬಗ್ಗೆ ಸಿರಿಲ್ ಸ್ಯಾಮ್ ಮತ್ತು ಪರಂಜೊಯ್ ಗುಹಾ ಥಾಕೂರ್ಥಾ ಅವರ ಪುಸ್ತಕದಲ್ಲಿ ಹೇಳಲಾಗಿದೆ. ಈ ‘ಅಲ್ಗಾರಿದಂ ಮಹಾತ್ಮೆ’ ಯಾವತ್ತೂ ಸಮಸ್ಯೆಯೇ.

ಫೇಸ್‌ಬುಕ್ ವಿಶ್ವವ್ಯಾಪಿಯಾಗಿ ಅನುಸರಿಸುತ್ತಿರುವ ವ್ಯಾಪಾರ ತಂತ್ರ ಒಂದೇ. ಜನರು ಹೆಚ್ಚು ಹೆಚ್ಚು ತನ್ನ ವೇದಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು. ಅರ್ಥಾತ್ ಅವರು ಹೆಚ್ಚು ವಿವರಗಳನ್ನು ಹಂಚಿಕೊಳ್ಳುವಂತೆ, ಹೆಚ್ಚು ಚರ್ಚಿಸುವಂತೆ ಮಾಡುವುದು. ಸದ್ಯಕ್ಕೆ ವಿಶ್ವವ್ಯಾಪಿಯಾಗಿ ಬಲಪಂಥ ಜನಪ್ರಿಯವಾಗಿದೆ. ಬಹುಸಂಖ್ಯಾತ ವಾದವನ್ನು ನೆಚ್ಚಿಕೊಂಡಿರುವ ಈ ರಾಜಕಾರಣಕ್ಕೆ ದೊಡ್ಡ ಸಂಖ್ಯೆಯ ಬೆಂಬಲಿಗರಿದ್ದಾರೆ. ಅವರ ಚಟುವಟಿಕೆಯನ್ನು ಬೆಂಬಲಿಸುವುದು ಫೇಸ್‌ಬುಕ್‌ನ ದೃಷ್ಟಿಯಲ್ಲಿ ಲಾಭದಾಯಕ. ಇದುವೇ ಫೇಸ್‌ಬುಕ್‌ನ ವ್ಯಾಪಾರ ಮಾದರಿ.

‘ನಾನು ಗೌರಿ’ಯೂ ಸೇರಿದಂತೆ ಜನರೆದುರು ವಾಸ್ತವವನ್ನು ತೆರೆದಿಡಲು ಪ್ರಯತ್ನಿಸುವ ಪ್ರತಿಯೊಂದು ಜಾಲತಾಣವೂ ಒಂದಲ್ಲಾ ಒಂದು ಸಂದರ್ಭದಲ್ಲಿ ಯುಆರ್‌ಎಲ್ ಬ್ಲಾಕ್ ಸಮಸ್ಯೆಯನ್ನು ಅನುಭವಿಸಿರುತ್ತವೆ. ಆದರೆ ಓಪಿಇಂಡಿಯಾದಂಥ ಸುಳ್ಳನ್ನೇ ಸದಾ ಹಂಚುವ ವೆಬ್‌ಸೈಟ್ ಇಲ್ಲಿಯ ತನಕ ಅಂಥ ಸಮಸ್ಯೆಯನ್ನು ಎದುರಿಸಿಲ್ಲ!.

ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕಾಗಿ ಎಂಟು ಸ್ವತಂತ್ರ ಸಂಸ್ಥೆಗಳನ್ನು ಫೇಸ್‌ಬುಕ್ ನೇಮಿಸಿಕೊಂಡಿದೆ. ಆದರೂ ಬಲಪಂಥೀಯ ಸುಳ್ಳು ಸುದ್ದಿ ತಾಣಗಳು ಯುಆರ್‌ಎಲ್ ಬ್ಲಾಕ್‌ನಂಥ ಸಮಸ್ಯೆಯನ್ನು ಎದುರಿಸುವುದಿಲ್ಲ. ಇದು ಯಾವ ಬಗೆಯ ತಾಂತ್ರಿಕ ದೋಷ? ಈ ಪ್ರಶ್ನೆಗೆ ‘ನಾನು ಗೌರಿ’ಯ ಯಆರ್‌ಎಲ್ ಬ್ಲಾಕ್ ಅನ್ನು ವಿವರಿಸಲು ಪ್ರಯತ್ನಿಸಿದ ಯಾವ ಎನ್‌ಆರ್‌ಐ ಲಿಬರಲ್ ಕೂಡಾ ಉತ್ತರಿಸುವುದಿಲ್ಲ ಎನ್ನುವುದರಲ್ಲಿ ಫೇಸ್‌ಬುಕ್‌ನ ಗೆಲುವಿದೆ.

– ಗೌತಮ ಶರ್ಮ


ಇದನ್ನೂ ಓದಿ: ನಾನುಗೌರಿ ಪೇಜ್ ನಿರ್ಭಂಧಿಸಿದ ಫೇಸ್‌ಬುಕ್: ಗೌರಿ ಮೀಡಿಯಾ ತಂಡ ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...