ಬ್ರಿಟಿಷ್ ವಸಾಹತುಶಾಹಿಯ ನೇಣಿಗೆ ನಗು ನಗುತ್ತಲೇ ಕೊರಳೊಡ್ಡಿ ಸ್ವಾತಂತ್ರ್ಯ ಕ್ರಾಂತಿಯ ಕಿಡಿಯನ್ನು ಲಕ್ಷಾಂತರ ಎದೆಗಳಲ್ಲಿ ಹೊತ್ತಿಸಿದ ಆತ ಬದುಕಿದ್ದು ಇಪ್ಪತ್ಮೂರೇ ವರ್ಷ. ಆತ ಹುಟ್ಟಿದ ದಿನ (ಸೆ.28) ಮತ್ತೊಮ್ಮೆ ಸಮೀಪಿಸಿದೆ. ಈ ಹೊತ್ತಿನಲ್ಲಿ ಆತನ ವಿಚಾರಗಳ ನೆನೆಯಬೇಕಿದೆ.
ಪಂಜಾಬಿ, ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತವಿದ್ದ ಭಗತ್ ಬರೆಹಗಳನ್ನು ಅಂದಿನ ಹಲವು ಸಮಕಾಲೀನ ಪತ್ರಿಕೆಗಳು ಪ್ರಕಟಿಸುತ್ತಿದ್ದವು. ಪಿಸ್ತೂಲಿನಿಂದ ಕಾಡತೂಸು ಸಿಡಿಸಿ ಬಾಂಬುಗಳ ಎಸೆದವನಾದರೂ ಭಗತನ ಬಕ್ಕಣದಲ್ಲಿ ಪುಸ್ತಕವೊಂದು ಇಲ್ಲದಿದ್ದ ಕ್ಷಣವೇ ಇರುತ್ತಿರಲಿಲ್ಲವಂತೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ನಿಸ್ವಾರ್ಥ ಸಮರ್ಪಣಾ ಭಾವ, ವಿನಮ್ರತೆ, ಸ್ವವಿಮರ್ಶೆ, ಸೂಕ್ಷ್ಮತೆಗೆ ಬದ್ಧನಾಗಿದ್ದ ಈ ತರುಣನನ್ನು ಪ್ರತಿಗಾಮಿ ಶಕ್ತಿಗಳು ತಮ್ಮ ತೆಕ್ಕೆಗೆ ಸೆಳೆದುಕೊಂಡು ಯಥಾಸ್ಥಿತಿವಾದದ ರಂಗು ಮೆತ್ತಿ ನಿಲ್ಲಿಸುವ ಹುಸಿಪ್ರಚಾರದ ಪ್ರಯತ್ನಗಳನ್ನು ಎಡೆಬಿಡದೆ ನಡೆಸಿವೆ.
ಇದನ್ನೂ ಓದಿ: ಭಾರತದ ಸ್ವಾತಂತ್ರ್ಯ ಸಂಗ್ರಾಮ: ಹಿಂದೂ ಮುಸ್ಲಿಂ ಐಕ್ಯತೆಯ ಅಪೂರ್ವ ಕಥನ
‘ಸಾಂಪ್ರದಾಯಿಕ ದಂಗೆಗಳು ಮತ್ತು ಅವುಗಳ ಇಲಾಜು’ ಎಂಬುದಾಗಿ ‘ಕೀರ್ತಿ’ (ರೈತರು ಮತ್ತು ಕೂಲಿಕಾರರ ಪಂಜಾಬೀ ಮಾಸಪತ್ರಿಕೆ) ಮತ್ತು ‘ಉತ್ತರಾರ್ಧ’ ಎಂಬ ನಿಯತಕಾಲಿಕಗಳಿಗೆ 1927ರಲ್ಲಿ ಭಗತ್ ಬರೆದ ಲೇಖನ ಇಂದಿನ ಭಾರತದ ಸ್ಥಿತಿಗತಿಗೂ ಹಿಡಿದ ಕನ್ನಡಿ. ಕೋಮುವಾದದ ಬಾಬತ್ತಿನಲ್ಲಿ ತೊಂಬತ್ತು ವರ್ಷಗಳಿಂದ ನಾವು ಮುಂದೆ ಬಂದೇ ಇಲ್ಲ. ನಮ್ಮನ್ನು ಮತ್ತಷ್ಟು ಹಿಂದ ಹಿಂದಕ್ಕೆ ಕೊಂಡೊಯ್ಯುವ ಹುನ್ನಾರಗಳಿಗೆ ಯಶಸ್ಸು ದೊರೆಯತೊಡಗಿದೆ. ಕೋಮುವಾದಿ ನಂಜಿನ ಬಗ್ಗಡವನ್ನು ಬಡಿದೆಬ್ಬಿಸುತ್ತಿರುವ ವಿಷಮತೆ-ಅಸಹನೆಗಳ ಸಮಕಾಲೀನ ಸಂದರ್ಭಕ್ಕೆ ಅಚ್ಚರಿಯೆನಿಸುವಷ್ಟು ಪ್ರಸ್ತುತ ಭಗತ್ ವಿಚಾರಗಳು. ‘…ಇಂಡಿಯಾದ ಇಂದಿನ ಪರಿಸ್ಥಿತಿ ಅತೀವವಾಗಿ ಉಲ್ಬಣಿಸಿದೆ. ಒಂದು ಧರ್ಮದ ಅನುಯಾಯಿಗಳು ಹಠಾತ್ತನೆ ಇತರೆ ಧರ್ಮಗಳ ವಿರುದ್ಧ ಕಡು ಹಗೆತನದ ಕತ್ತಿ ಹಿರಿದಿದ್ದಾರೆ. ಹಿಂದು ಸಿಖ್ಖರೆಂಬ ಏಕೈಕ ಕಾರಣಕ್ಕೆ ಮುಸ್ಲಿಮರು ಹಿಂದು ಮತ್ತು ಸಿಖ್ಖರನ್ನೂ, ಮುಸಲ್ಮಾನರೆಂಬ ಕಾರಣಕ್ಕಾಗಿ ಮುಸಲ್ಮಾನರನ್ನೂ ಕ್ರೂರವಾಗಿ ಕೊಲ್ಲಲಾಗುತ್ತಿದೆ… ರಾಜಕೀಯ ನಾಯಕರು ನಿರ್ಲಜ್ಜರಾಗಿ ವರ್ತಿಸುತ್ತಿದ್ದಾರೆ. ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಶಪಥ ತೊಟ್ಟಿರುವ ಮತ್ತು ಸಮಾನ ರಾಷ್ಟ್ರೀಯತೆ ಕುರಿತು ಕೊನೆಯಿಲ್ಲದಷ್ಟು ಭಾಷಣಬಾಜಿ ಮಾಡುವ ತಲೆಯಾಳುಗಳು ಒಂದೋ ಲಜ್ಜೆಯಿಂದ ತಲೆತಗ್ಗಿಸಿ ಬಾಯಿ ಹೊಲಿದುಕೊಂಡಿದ್ದಾರೆ ಇಲ್ಲವೇ ಧಮಾರ್ಂಧತೆಯ ದುಷ್ಟ ಗಾಳಿಯ ದಿಕ್ಕಿನತ್ತ ಓಲಾಡುತ್ತಿದ್ದಾರೆ…. ತುಟಿ ಬಿಚ್ಚದೆ ಬೇಲಿಯ ಮೇಲೆ ಮುಖ ಮುಚ್ಚಿ ಕುಳಿತಿರುವ ಇಂತಹವರ ಸಂಖ್ಯೆ ಸಣ್ಣದೇನೂ ಅಲ್ಲ.’

ಹಾಗೆಯೇ ಕೋಮುವಾದದ ದಳ್ಳುರಿಗೆ ಎಣ್ಣೆ ಎರೆವ ಅಂದಿನ ಪತ್ರಿಕೆಗಳ ಕುರಿತು ಭಗತ್ ಹೇಳಿದ್ದ ಮಾತುಗಳ ಗಮನಿಸಿ ‘…ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ. ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ತಲೆಬರೆಹಗಳಲ್ಲಿ ಕೂಗಿ ಕಿರುಚುತ್ತಾರೆ, ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ… ಪತ್ರಿಕೆಗಳು ತೀವ್ರತರದ ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದೀ ಜ್ವಾಲೆಯನ್ನು ಹತ್ತು ಹಲವು ಸ್ಥಳಗಳಲ್ಲಿ ಭುಗಿಲೆಬ್ಬಿಸುತ್ತಿವೆ… ತಳಮಳ ತಳ್ಳಂಕಗಳ ಈ ಸ್ಥಿತಿಯಲ್ಲಿ ಸಮಚಿತ್ತವನ್ನು, ಸಮತೂಕವನ್ನು ಪ್ರದರ್ಶಿಸಿದ ಪತ್ರಕರ್ತರು ಕೆಲವೇ ಕೆಲವರು… ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದೀ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ ಸಾಮರಸ್ಯ ಮೂಡಿಸುವುದು ಪತ್ರಿಕೆಗೆಳ ಅಸಲು ಕರ್ತವ್ಯ….. ಬದಲಾಗಿ ಅರಿವುಗೇಡಿತನ, ಸಂಕುಚಿತ ಪಂಥವಾದ – ಕೋಮುವಾದಗಳನ್ನು ಜನರ ಮನಸುಗಳಲ್ಲಿ ಬಿತ್ತಿ ಗಲಭೆಗಳನ್ನು ಎಬ್ಬಿಸುವುದೇ ಅವರ ಮುಖ್ಯ ಗುರಿ ಎನ್ನಿಸುತ್ತಿದೆ. ಈಗಿನ ಇಂಡಿಯಾದ ಪರಿಸ್ಥಿತಿಯನ್ನು ನೋಡಿದರೆ ರಕ್ತಕಣ್ಣೀರು ಕಪಾಳಕ್ಕೆ ಇಳಿವುದಲ್ಲದೆ, ಕಟ್ಟಕಡೆಗೆ ಈ ದೇಶದ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಏಳುತ್ತದೆ. ಜನ ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಬೇಕಿದ್ದರೆ, ದೀನ ದರಿದ್ರರು ಮತ್ತು ರೈತರು ಹಾಗೂ ದುಡಿಯುವ ವರ್ಗಗಳಿಗೆ ಬಂಡವಾಳಶಾಹಿಯೇ ಅವರ ಅಸಲು ಶತ್ರು ಎಂಬ ವಾಸ್ತವವನ್ನು ತಿಳಿಸಿ ಹೇಳಬೇಕಿದೆ. ಅವರ ಕೈಯಲ್ಲಿನ ದಾಳ ಆಗದಂತೆ, ಅವರ ಮೋಸ ಮರೆಗಳ ಹುನ್ನಾರಗಳಿಗೆ ಬಲಿಯಾಗದಂತೆ ಎಚ್ಚರಗೊಳಿಸಬೇಕಿದೆ. ಎಲ್ಲ ಜಾತಿ, ವರ್ಣ, ಜನಾಂಗ, ರಾಷ್ಟ್ರೀಯತೆಯ ಭೇದ ಭಾವವಿಲ್ಲದೆ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗೆ ಹೋರಾಡಬೇಕೆಂಬ ಅರಿವನ್ನು ಎಲ್ಲ ಬಡವರಲ್ಲಿ ಮೂಡಿಸಬೇಕಿದೆ’.
ಕೋಮುವಾದ, ಅಮಾನವೀಯ ಅಸ್ಪೃಶ್ಯತೆ, ಧರ್ಮ-ಜಾತಿಗಳು, ಮೇಲು-ಕೀಳುಗಳ ನೆವದಲಿ ನಡೆವ ಕ್ರೌರ್ಯ-ಶೋಷಣೆಗಳ ವಿರುದ್ಧ ಭಗತ್ ಎತ್ತಿದ ದನಿ ಇಂದಿಗೂ ಧಗ ಧಗ. ಯಾಕೆಂದರೆ ಸ್ವಾತಂತ್ರ್ಯ ಗಳಿಕೆಯ ನಂತರ ಕಟ್ಟಬೇಕಿದ್ದ ಸಮ ಸಮಾಜದಲ್ಲಿ ನೆಟ್ಟಿತ್ತು ಆತನ ಮನ. ಹೀಗಾಗಿಯೇ ಹಿಂದೆಂದಿಗಿಂತಲೂ ಪ್ರಸ್ತುತ ಈತ.


