ಬಾಬಾಗೌಡ ಪಾಟೀಲರು 1998ರ ಸುಮಾರಿಗೆ ಬಿಜೆಪಿ ಸೇರಿದರು, ಸಚಿವರಾದರು ಮತ್ತು ಈ ನಂತರದಲ್ಲಿ ಮತ್ತೆ ರೈತ ಹೋರಾಟಕ್ಕೆ ಬೆಂಬಲವಾಗಿ ಓಡಾಡಿದರು ಎಂಬುದನ್ನು ಬದಿಗಿಟ್ಟು, ಅವರ ಆರಂಭಿಕ ಹೋರಾಟಗಳ ಬಗ್ಗೆ ನೋಡೋಣ.
ಕರ್ನಾಟಕದಲ್ಲಿ ಚಳುವಳಿ ಕಟ್ಟುತ್ತಿರುವ ಎಲ್ಲ ಸಂಘಟನೆಗಳಿಗೂ ಇದರಲ್ಲಿ ಒಂದಿಷ್ಟು ವಿಷಯ ಇವೆ ಅನಿಸುತ್ತದೆ.
‘ಅಲ್ರೀ, ಟೊಮಾಟೋ ಸಾಸ್ಗೆ ಅವರೇ ರೇಟ್ ಫಿಕ್ಸ್ ಮಾಡ್ತಾರ. ಅದಕ್ಕ ಜನ ಮಾತಿಲ್ಲದ ರೊಕ್ಕ ಕೊಟ್ ತಗೋತಾರ. ಇನ್ಮ್ಯಾಲ ಟೊಮೆಟೊಕ್ಕೆ ನಾವಾ ರೇಟು ಫಿಕ್ಸ್ ಮಾಡೋ ಹಂಗಾಗಬೇಕು’ ಹೀಗೆ ಉತ್ತರ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಮುಂಬೈ ಕರ್ನಾಟಕದಲ್ಲಿ ಬಾಬಾಗೌಡರು ಅಂದು ಕೆಂಡದುಂಡೆಯಂತೆ ಗುಡುಗುತ್ತಿದ್ದರು. ಶಾಲಾ ಬಾಲಕರಾಗಿದ್ದಾಗ ಮತ್ತು ‘ವಕ್ಕಲ್ತನ’ ಹಿನ್ನೆಲೆಯ ನಮಗೆಲ್ಲ ಇದು ರೋಮಾಂಚನ ಸೃಷ್ಟಿಸಿದ್ದಲ್ಲದೇ, ಕ್ರಮೇಣ ಗ್ರಾಮೀಣ ಭಾರತಕ್ಕೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಿತ್ತು.
ನೀವು ಗಮನಿಸಿ ನೋಡಿ, ಈಗೆಲ್ಲಾದರೂ ರಾಕೇಶ್ ಟಿಕಾಯತ್ರು ಚುನಾವಣೆಗೆ ನಿಂತರೆ ಗೆಲ್ಲಬಹುದಾ ಎಂಬ ಪ್ರಶ್ನೆಯನ್ನು ಊಹಿಸಿಕೊಳ್ಳಿ. ಉತ್ತರ ಕನ್ನಡದ ಸಂಸತ್ ಚುನಾವಣೆಗೆ ನಿಂತಾಗ ಶಿವರಾಮ ಕಾರಂತರ ಪರ ಎಲ್ಲ ಪ್ರಗತಿಪರ ಸಂಘಟನೆಗಳ ಬೆಂಬಲವಿತ್ತು. ಆದರೆ, ಫಲಿತಾಂಶ ಬಂದಾಗ ಕಾರಂತರು ಮೂರನೇ ಸ್ಥಾನದಲ್ಲಿದ್ದರು.
ಮತ್ತೆ ಸಂಘಟನೆಗಳ ವಿಷಯಕ್ಕೆ ಬರೋಣ, ಈ ಸಲ ಆಮ್ ಆದ್ಮಿ, ಎಸ್ಡಿಪಿಐ, ಕರ್ಮಾಟಕ ರಾಷ್ಟ್ರೀಯ ಸಮಿತಿ ಮುಂತಾದ ಸಂಘಟನೆಗಳು ಇತ್ತೀಚಿನ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾರಿ ಅಲ್ಲದಿದ್ದರೂ ಗಮನಾರ್ಹ ಸಾಧನೆ ಮಾಡಿವೆ.
ಆದರೆ, ಆಗಿನ್ನೂ ಬೆಳೆಯುತ್ತಿದ್ದ ಸಂಘಟನೆಯ ಎರಡನೇ ಹಂತದ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಒಂದೇ ಸಲಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ.
ಬೆಳಗಾವಿಯ ಬೈಲಹೊಂಗಲದ ಚಿಕ್ಕ ಬಾಗೇವಾಡಿಯ ಪಾಟೀಲರು ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಅದಕ್ಕೆ ಅಂಟಿಕೊಂಡ ಧಾರವಾಡ ಗ್ರಾಮೀಣ ಕ್ಷೇತ್ರ ಎರಡರಲ್ಲೂ ಗೆಲ್ಲುತ್ತಾರೆ! ನಂತರ ಧಾರವಾಡ ಗ್ರಾಮೀಣದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿ ಗೆಲ್ಲುಲು ಸಹಕರಿಸುತ್ತಾರೆ.
ತಾತ್ವಿಕ ರೂಪು ಮತ್ತು ತಳಮಟ್ಟದ ಸಂಘಟನೆ
ಪ್ರೊಫೆಸರ್ ನಂಜುಂಡಸ್ವಾಮಿ ರಾಜ್ಯದಲ್ಲಿ ರೈತ ರೈತ ಸಂಘಟನೆ ಕಟ್ಟಿದ ಪಿತಾಮಹ ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ಇರಲೇಬಾರದು. ಆದರೆ ಸಂಘಟನೆ ಮಾಡುವ ಹೊಣೆ ಕೆಳಮಟ್ಟದ ಕಾರ್ಯಕರ್ತರ ಮೇಲಿರುತ್ತದೆ. ‘ಬೈಲಹೊಂಗಲದ ಚಿಕ್ಕ ಬಾಗೆವಾಡಿಯ ಭೂ ಮಾಲೀಕ ಕುಟುಂಬದ ಹಿನ್ನೆಲೆಯ ಬಾಬಾಗೌಡ ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಅದ್ಭುತವಾಗಿ ರೈತರನ್ನು ಸಂಘಟಿಸಿದರು’ ಎನ್ನುತ್ತಾರೆ ಪತ್ರಕರ್ತ ರುಷಿಕೇಶ್ ದೇಸಾಯಿ.
‘ತಾಲೂಕು ಕಚೇರಿಗಳಿಗೇ ಜನ ಹೋಗಲು ಹೆದರುತ್ತಿದ್ದ ಕಾಲವದು. ಬಾಬಾಗೌಡರ ಗುಡುಗು ಹೇಗಿತ್ತೆಂದರೆ ಜನ ಸೀದಾ ತಹಸೀಲ್ದಾರ್ ಎದುರು ನಿಂತು ಪ್ರಶ್ನೆ ಕೇಳಲು ಆರಂಭಿಸಿದರು. ಊರೂರಲ್ಲಿ ‘ಗ್ರಾಮದ ಜನರ ಅನುಮತಿ ಇಲ್ಲದೇ ಭ್ರಷ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡುಗಳು ಕಾಣಿಸಿಕೊಂಡವು ಎನ್ನುತ್ತಾರೆ ಬೆಳಗಾವಿ- ಧಾರವಾಡಗಳಲ್ಲಿ ಹಿಂದೆಲ್ಲ ಅನೇಕ ಚಳುವಳಿಗಳನ್ನು ನಡೆಸಿದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲರು.
“ಒಂದು ನೋಟು, ಒಂದು ರೊಟ್ಟಿ, ಒಂದು ವೋಟು” ಎಂದು ಚುನಾವಣೆ ಮಾಡಿ ಅವರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರು ಎಂಬುದು ಈಗಿನ ಚಳವಳಿಗಳಿಗೆ ಸ್ಫೂರ್ತಿ ಆಗುತ್ತದೆ ಎನ್ನುತ್ತಾರೆ ಚಳುವಳಿ ಹಿನ್ನೆಲೆಯ ಡಾ. ಪಾಟೀಲ್…
ರೈತ ಸಂಘಟನೆಯಲ್ಲಿ ಉಂಟಾದ ಭಿನ್ನಮತಗಳು, ಮುಂದೆ ಬಾಬಾಗೌಡರು ಬಿಜೆಪಿ ಸೇರಿದ ಸ್ಥಿತಿ ಈ ಬಗ್ಗೆ ಬೇಕೆಂತಲೇ ಇಲ್ಲಿ ಚರ್ಚೆ ಮಾಡಿಲ್ಲ. ಅದು ಈಗಿನ ಅಗತ್ಯವೂ ಅಲ್ಲ. ಬಾಬಾಗೌಡ ಪಾಲೀಲರಿಗೆ ಶ್ರಧ್ದಾಂಜಲಿ.
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ನಿಧನ


