Homeಮುಖಪುಟಸಮಗ್ರತೆಗೆ ಮಾರಕವಾದ ಒಳಮೀಸಲಾತಿ ಅನಿವಾರ್ಯವಾದದ್ದು ದುರಂತ: ಕೆ.ಎಫ್. ಅಂಕಲಗಿ

ಸಮಗ್ರತೆಗೆ ಮಾರಕವಾದ ಒಳಮೀಸಲಾತಿ ಅನಿವಾರ್ಯವಾದದ್ದು ದುರಂತ: ಕೆ.ಎಫ್. ಅಂಕಲಗಿ

ಈ ನಿಟ್ಟಿನಲ್ಲಿ ಒಳ ಮೀಸಲಾತಿ ಡಾ. ಬಾಬಾಸಾಹೇಬರ ಕನಸಿನ ಸಮಗ್ರತೆಗೆ ಮಾರಕವಾದರೂ ಕೂಡ ಪ್ರಸ್ತುತ ಬೆಳವಣಿಗೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿದೆ ಎಂದು ಭಾರವಾದ ಹೃದಯದಿಂದ ಹೇಳಬೇಕಾಗಿದೆ.

- Advertisement -
- Advertisement -

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅವಶ್ಯ. ಅದಕ್ಕಾಗಿ ಶತಮಾನಗಳಿಂದ ಅವಕಾಶವಂಚಿತ ಜಾತಿಗಳನ್ನು ಗುರುತಿಸಿ ಅವರಿಗೆ ಮೀಸಲಾತಿ ಕೊಡುವ ಕಾರ್ಯನಿಮಿತ್ತ ಕಾಕಾ ಕಾಲೇಲಕರ ಆಯೋಗ ನೇಮಿಸಲಾಗಿತ್ತು. ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಹಿಂದಿನ ಬ್ರಿಟಿಷ್ ಸರಕಾರವೇ ಕುಲಶಾಸ್ತ್ರೀಯ ಅಧ್ಯಯನದ ವಿಸ್ತೃತ ತಳಹದಿಯ ಮೇಲೆ ಸಿದ್ಧಗೊಳಿಸಿದ್ದರಿಂದ ಆ ಎರಡು ವರ್ಗಗಳ ಪಟ್ಟಿ ಸಂವಿಧಾನಕ್ಕೆ ಸರ್ವಾನುಮತದಿಂದ ಸೇರಿಸಲ್ಪಟ್ಟಿತ್ತು. ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಕಾಕಾ ಕಾಲೇಲಕರ ವರದಿ ತಯಾರಿಸಿತಾದರೂ ಅಂದಿನ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದ ಅದು ಜಾರಿಗೆ ಬರಲೇ ಇಲ್ಲ. ನಂತರ ರಚಿತವಾದ ಮಂಡಲ್ ಆಯೋಗದ ವರದಿ ಜಾರಿಗೆ ಬರುವಲ್ಲಿ ಆದ ವಿಳಂಬ ಮತ್ತು ಅದರ ಹಿಂದಿನ ರಾಜಕೀಯ ಎಲ್ಲರಿಗೂ ಗೊತ್ತು.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡಾ ಬ್ರಿಟಿಷರು ತಯಾರಿಸಿದ ಪಟ್ಟಿಗಳನ್ನು ಯಥಾವತ್ತಾಗಿ ಒಪ್ಪಿಕೊಂಡಿದ್ದರು ಮತ್ತು ಇಂತಹುದೇ ಕಾರ್ಯ ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ನಡೆಯಲಿ ಎಂಬ ಸದಾಶಯ ಹೊಂದಿದ್ದರು. ಡಾ.ಅಂಬೇಡ್ಕರ್ ಅವರು ಜಾತಿಗಳು ಇರುವವರೆಗೆ ಮೀಸಲಾತಿ ಇರಬೇಕು ಎನ್ನುವದರೊಂದಿಗೆ, ಜಾತಿ ವ್ಯವಸ್ಥೆ ನಿರ್ಮೂಲನೆ ಆಗಬೇಕು ಎಂದು ಬಯಸಿದ್ದರು. ಜಾತಿ ವ್ಯವಸ್ಥೆ ನಿರ್ಮೂಲನೆಯ ಯಾವದೇ ಕಾರ್ಯಕ್ರಮವನ್ನು ಸ್ವತಂತ್ರ ಭಾರತ ಇತಿಹಾಸದಲ್ಲಿ ಯಾವದೇ ಸರಕಾರ ಕೈಗೊಳ್ಳಲಿಲ್ಲ. ಜಾತಿಗಳು ಅಳಿದು, ಎಲ್ಲರೂ ಒಂದಾಗುವ ಬದಲಾಗಿ ಜಾತಿಗಳ ವಿಂಗಡನೆ ಮತ್ತು ಅವುಗಳನ್ನು ದ್ವೀಪಗಳಾಗಿ ಉಳಿಸಿಕೊಳ್ಳುವ ವ್ಯವಸ್ಥೆ ಮುಂದುವರೆದು ಇಂದು ಜಾತಿಗಳ ನಡುಗಡ್ಡೆಗಳ ಪ್ರದೇಶವಾಗಿ ದೇಶ ಮಾರ್ಪಾಡಾಗಿದೆ ಎಂದು ಹೇಳಬಹುದು.

ಸಾಮಾಜಿಕ, ಶೈಕ್ಷಣಿಕ ಮಾನದಂಡದಿಂದ ಸರಾಸರಿ ಮುನ್ನಡೆ ಪಡೆದ ಜಾತಿಗಳನ್ನು ಮೀಸಲಾತಿಯಿಂದ ಕೈಬಿಡುವ ಕೆಲಸ ನಡೆಯಲೇ ಇಲ್ಲ. ಯಾರನ್ನೂ ಬಿಡುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಅಲ್ಲದೇ ಪ್ರತಿ ಸಂಘಟಿತ ಪ್ರಭಾವಿ ಜಾತಿಯೂ ಮೀಸಲಾತಿ ಒತ್ತಾಯದ ಪ್ರತಿಭಟನೆ ನಡೆಸಿ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ತಾವೂ ಮೀಸಲಾತಿ ಪಡೆಯುವಲ್ಲಿ ಯಶಸ್ವಿಯಾದವು. ಇದರಿಂದ ಸಣ್ಣ, ಅತಿ ಸಣ್ಣ ಅವಕಾಶ ವಂಚಿತ ನೂರಾರು ಜಾತಿಗಳು ಸಂಕಷ್ಟಕ್ಕೆ ಸಿಲುಕಿ ನಲುಗುವ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.

ಸದ್ಯ ಪ್ರಸ್ತುತ ಒಳಮೀಸಲಾತಿ ಧ್ವನಿ ಜೋರಾಗಿದೆ. ಅವಕಾಶ ವಂಚಿತ ಜನ ಆಳುವ ವರ್ಗವಾಗಬೇಕು ಎನ್ನುವದು ಡಾ.ಅಂಬೇಡ್ಕರ್ ಅವರ ಆಶಯವಾಗಿತ್ತು. ಅದಕ್ಕಾಗಿ ಈ ಜನವೆಲ್ಲಾ ಒಂದು ಶಕ್ತಿಯಾಗಿ ಸಂಘಟಿತರಾಗುವ ಅವಶ್ಯಕತೆ ಇತ್ತು. ಆದರೆ ಇವರಿವರೇ ಒಳಮೀಸಲಾತಿಗಾಗಿ ಕಿತ್ತಾಡುವ ಸ್ಥಿತಿ ನಿರ್ಮಾಣವಾದದ್ದು ದುರ್ದೈವ. ಓಟ್‍ಬ್ಯಾಂಕ್ ರಾಜಕೀಯವೂ ಇದಕ್ಕೆ ಒಂದು ಕಾರಣ.

photo courtesy : Dailyhunt

ಒಳ ಮೀಸಲಾತಿ ಧ್ವನಿ ಪ್ರಥಮವಾಗಿ ಪ್ರಾರಂಭವಾದದ್ದು ಆಂಧ್ರಪ್ರದೇಶದಿಂದ. ದಲಿತ ವರ್ಗವೆಲ್ಲಾ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದರಿಂದ ಅವರಲ್ಲಿಯ ಎಡಗೈ ಬಲಗೈಯವರಲ್ಲಿ ಪೈಪೋಟಿ ಹುಟ್ಟು ಹಾಕಿದರು. ಮಾದಿಗ ದಂಡೋರ ಚಳುವಳಿ ಪ್ರಾರಂಭವಾಗಿ ಅದು ದೇಶದುದ್ದಕ್ಕೂ ಹಬ್ಬತೊಡಗಿದೆ.

ಅದೇ ರೀತಿ ಸದ್ಯ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳಲ್ಲಿ ಕೂಡ ಅಂತಹದೇ ಸ್ಥಿತಿ ನಿರ್ಮಾಣವಾಗಿದೆ. ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ಮಾತ್ರ ನಾನು ಕೆಲವು ವಿವರಣೆಗಳನ್ನು ಬರೆಯುವೆ. ಯಾಕೆಂದರೆ ಇಂದು ಕರ್ನಾಟಕದಲ್ಲಿ ಬುಡಕಟ್ಟುಗಳು ತಮ್ಮ ತಮ್ಮಲ್ಲೇ ಕಚ್ಚಾಡುವ ಸ್ಥಿತಿ ದೂರವಿಲ್ಲ ಎಂದು ಕಂಡುಬರುತ್ತಿದೆ. ತಳವಾರ, ಪರಿವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಮಾಡಿ ಸಂಸತ್ತು ಅಂಗೀಕರಿಸಿದೆ. ಘನತೆವೆತ್ತ ರಾಷ್ಟ್ರಪತಿಗಳು ಸಹಿ ಮಾಡಿದ ತೀರ್ಮಾನವನ್ನು ಕರ್ನಾಟಕ ಸರಕಾರ ಜಾರಿಗೆ ತಂದಿಲ್ಲ. ಕರ್ನಾಟಕದಲ್ಲಿ ಈ ಬೆಳವಣಿಗೆಗೆ ಕಾರಣವೇನು? ಇದರ ಹಿಂದೆ ಯಾವ ಹಿತಾಸಕ್ತಿಗಳು ಇವೆ ಎಂಬುದನ್ನು ಗಮನಿಸಿದಾಗ ಇಂತಹವೇ ಕಾರಣಗಳಿಂದ ದೇಶದ ವಿವಿಧೆಡೆ ಕೆಲವು ಜಾತಿಗಳನ್ನು ದಮನಿಸುವ ಮತ್ತು ಸೌಲಭ್ಯ ವಂಚಿತರನ್ನಾಗಿ ಮಾಡುವ ಕಾರ್ಯಗಳು ಯಾವ ರೀತಿ ನಡೆಯುತ್ತಿವೆ ಎಂದು ಗೊತ್ತಾಗುತ್ತದೆ. ಅದರಿಂದ ಆಗಬಹುದಾದ ಅನಾಹುತ ಊಹಿಸಲೂ ಅಸಾಧ್ಯ. ತೀವ್ರ ಹಿಂಸೆಗೆ ಒಳಗಾದ ಜನ ತಾವಾಗಿಯೇ ಯಾರಿಗೂ ಮೀಸಲಾತಿ ಬೇಡ ಎಂದು ಹತಾಶರಾಗಿ ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಬಹುದು.

ಕರ್ನಾಟಕದಲ್ಲಿ ಒಟ್ಟು 50 ಬುಡಕಟ್ಟು ಜನಾಂಗಗಳಿವೆ (ಎಸ್.ಟಿ.). ಅವುಗಳಲ್ಲಿ ಒಂದು ಬುಡಕಟ್ಟಿನ ಸ್ಥಿತಿಗತಿ ಕುರಿತು ವಿವರಿಸಿದಲ್ಲಿ ಒಟ್ಟಾರೆ ಸ್ಥಿತಿಯ ಚಿತ್ರಣ ಸಿಗುತ್ತದೆ.

ಕೋಳಿಢೋರ, ಟೋಕ್ರೆಕೋಳಿ ಜನಾಂಗ ಪರಿಶಿಷ್ಟ ಪಂಗಡದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಗುರುತಿಸಲ್ಪಟ್ಟ ಬುಡಕಟ್ಟು. ಭಾರತ ಸರಕಾರದ ಪ್ರಾವಿನ್ಸಿಯಲ್ ಅಸೆಂಬ್ಲಿಯು ಪರಿಶಿಷ್ಟ ಜಾತಿ, ಜನಾಂಗ ಆರ್ಡರ್ 1936 ಘನತೆವೆತ್ತ ರಾಣಿ ಎಲಿಝಬೆತ್ ಇಂಗ್ಲೆಡ್ ಅವರು 1935ರಲ್ಲಿ ಅಂಕಿತ ಹಾಕಿದ ಮೇಲೆ ಮುಂಬೈ ಕರ್ನಾಟಕಕ್ಕೆ ಸೇರಿದ ರಾಜಪತ್ರದಲ್ಲಿ ಅನುಕ್ರಮ ನಂ.13ರಲ್ಲಿ ಈ ಪಂಗಡಗಳ ಸೇರ್ಪಡೆ ಇದೆ. ಅಲ್ಲಿಂದ ಮುಂಬೈ ಪ್ರಾಂತದಲ್ಲಿ, ಅದರಂತೆ ಹೈದರಾಬಾದ್ ಪ್ರಾಂತದಲ್ಲಿ ಕೋಯಾ, ಬಿನೆಕೋಯಾ, ರಾಜಕೋಯಾ ಪಂಗಡಗಳು ಇರುವುದು ನಿರ್ವಿವಾದ. ಭಾರತ ಸ್ವತಂತ್ರವಾದ ಬಳಿಕ ಈ ಪಂಗಡಗಳು ಆಯಾ ರಾಜ್ಯದ ಪರಿಶಿಷ್ಟ ಜನಾಂಗದ ಪಟ್ಟಿಯಲ್ಲಿ ಮುಂದುವರೆದವು. 1956ರಲ್ಲಿ ಭಾಷಾವಾರು ಪ್ರಾಂತ ರಚನೆಯಾದ ನಂತರ ಅಂದಿನ ಮೈಸೂರು ರಾಜ್ಯ ಇಂದಿನ ಕರ್ನಾಟಕ ರಾಜ್ಯದಲ್ಲಿ ಅನುಕ್ರಮ ನಂ.22ರಲ್ಲಿ ಇವು ಸ್ಥಾನ ಪಡೆದಿವೆ. ಈ ರೀತಿ ಈ ಪಂಗಡಗಳು ಪರಿಶಿಷ್ಟ ಪಂಗಡದಲ್ಲಿ ಇರುವದು ನಿರ್ವಿವಾದ ಸಂಗತಿ.

ಹೀಗಿರಲು 1994ರಲ್ಲಿ ಕರ್ನಾಟಕದಲ್ಲಿ ರಾಜಕೀಯ ಲಾಭಕ್ಕಾಗಿ ಸನ್ಮಾನ್ಯ ಶ್ರೀ ದೇವೇಗೌಡರು ಅಂದಿನ ಪ್ರಧಾನಿ ದಿ.ಚಂದ್ರಶೇಖರ್ ಅವರ ಸರಕಾರದಿಂದ ಸುಗ್ರೀವಾಜ್ಞೆ ಮುಖಾಂತರ ಬೇಡ, ವಾಲ್ಮೀಕಿ ಜನಾಂಗವನ್ನು ಪರಿಶಿಷ್ಟ ಪಂಗಡದ ಅ.ನ. 38ರ ನಾಯ್ಕಡಾ, ನಾಯಕ ಪಂಗಡಗಳ ಪರ್ಯಾಯ ಪದಗಳೆಂದು ಆಜ್ಞೆ ಮಾಡಿಸಿದರು. ಯಾವುದೇ ಪಂಗಡವನ್ನು ಸೇರಿಸಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಸೇರಿಸಬೇಕು. ಆದರೆ ರಾಜಕೀಯ ಉದ್ದೇಶಕ್ಕಾಗಿ ಆತುರದಲ್ಲಿ ಈ ಪಂಗಡಗಳನ್ನು ಸೇರಿಸಲಾಯಿತು. ಈ ಮೊದಲು ಈ ಪಂಗಡಗಳು ಅಪರಾಧಿ ಜನಾಂಗ (ನೋಟಿಫೈಡ್ ಟ್ರೈಬ್ಸ್). ಸ್ವಾತಂತ್ರ್ಯ ನಂತರ ವಿಮುಕ್ತ ಜನಾಂಗ (ಡಿನೋಟಿಫೈಡ್) ಪಂಗಡವೆಂದು ಗುರುತಿಸಲ್ಪಟ್ಟವುಗಳು. ಇವುಗಳ ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿತು.

ಸ್ಥಳೀಯವಾಗಿ ಅಂಬಿಗ, ಕೋಳೀ, ಕಬ್ಬಲಿಗ ಎಂದು ಕರೆಯಲ್ಪಡುವ ಕೋಳಿಢೋರ, ಟೋಕ್ರೆಕೋಳಿ ಜನಾಂಗಕ್ಕೆ ಕಿರುಕುಳ ಪ್ರಾರಂಭವಾಯಿತು. ಈ ಜನಾಂಗದ ನೌಕರರ ಮೇಲೆ ಖೊಟ್ಟಿ ಪ್ರಮಾಣ ಪತ್ರ ಪಡೆದವರು ಎಂದು ಕ್ರಿಮಿನಲ್ ಮೊಕದ್ದಮೆ ಹೂಡುವ ಪ್ರಕ್ರಿಯೆ ಪ್ರಾರಂಭವಾಯಿತು. ಪ್ರಮಾಣ ಪತ್ರ ನೀಡುವದನ್ನು ನಿಲ್ಲಿಸಲಾಯಿತು.

photo courtesy : Prajavani

ಈ ಹಿನ್ನೆಲೆಯಲ್ಲಿ ಈ ಜನರಿಗೆ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯಿಲಿ ಸರಕಾರ ಒಂದು ಸುತ್ತೋಲೆ ಹೊರಡಿಸಿ ಎಸ್.ಡಬ್ಲ್ಯು.ಎಲ್ 168 ಎಸ್.ಎ.ಡಿ 93 ದಿನಾಂಕ: 04/02/1994 ರ ಪ್ರಕಾರ ಶಾಲಾ ದಾಖಲೆಗಳನ್ನು ಪ್ರಬಲ ಸಾಕ್ಷಿ ಎಂದು ಪರಿಗಣಿಸಿ 1981 ಮತ್ತು ಅದಕ್ಕೂ ಮುಂಚೆ ದಾಖಲೆಯಲ್ಲಿದ್ದವರಿಗೆ ತಡಮಾಡದೇ 3 ದಿನಗಳಲ್ಲಿ ಪ್ರಮಾಣ ಪತ್ರ ನೀಡಬೇಕು. ದಾಖಲೆ ಇಲ್ಲದಿದ್ದಲ್ಲಿ ಸೂಕ್ತ ತನಿಖೆ ಮಾಡಿಸಿ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದರು. ಆದರೆ ವಿಮುಕ್ತ ಜನಾಂಗದಿಂದ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಬೇಡ, ವಾಲ್ಮೀಕಿ ಜನರು ಎಲ್ಲಾ ಸವಲತ್ತುಗಳನ್ನು ತಾವೇ ಪಡೆದುಕೊಳ್ಳುವ ಇರಾದೆಯಿಂದ ವಿವಿಧ ಸಂಘಟನೆಗಳ ಮುಖಾಂತರ ಕೋಳಿಢೋರ, ಟೋಕ್ರೆಕೋಳಿ ಜನಾಂಗದವರ ವಿರುದ್ಧ ಫಿರ್ಯಾದಿ ಕೊಟ್ಟು ನಾಗರಿಕ ಹಕ್ಕು ಜಾರಿ ಇಲಾಖೆಯ ಮುಖಾಂತರ ತೀವ್ರ ಕಿರುಕುಳ ಕೊಡಲಾರಂಭಿಸಿದರು. ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ಈ ಜನ ಸರಕಾರದ ಮೊರೆ ಹೋದರು. ಸರಕಾರ ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪರಿಹಾರ ಕೊಡುವ ಬದಲಾಗಿ ಆ ರೀತಿ ಪ್ರಮಾಣ ಪತ್ರ ಪಡೆದವರು ಅವರ ಪ್ರಮಾಣ ಪತ್ರಗಳನ್ನು ಸಕ್ಷಮ ಅಧಿಕಾರಿಗಳಿಗೆ ಹಿಂದಿರುಗಿಸಬೇಕು ಮತ್ತು ಅವರನ್ನು ಸಾಮಾನ್ಯ ವರ್ಗದಲ್ಲಿ ಮುಂದುವರೆಸಲಾಗುವದು ಹಾಗೂ ಅವರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡಲಾಗುವುದು ಎಂದು ಆದೇಶ ಮಾಡಿತು. ಬೀಸುವ ದೊಣ್ಣೆಯಿಂದ ತಪ್ಪಿದರೆ ಸಾಕು ಎಂದು ಬಹಳಷ್ಟು ಜನ ತಮ್ಮ ಪ್ರಮಾಣ ಪತ್ರ ಹಿಂದಿರುಗಿಸಿದರು.

ಕರ್ನಾಟಕ ರಾಜ್ಯದಲ್ಲಿ 50 ಬುಡಕಟ್ಟು ಜನಾಂಗಗಳನ್ನು ಸೇರಿಸಿ 16 ಶಾಸಕ ಸ್ಥಾನ, 2 ಸಂಸದ ಸದಸ್ಯ ಸ್ಥಾನ ಮೀಸಲಾಗಿವೆ. ಈ ಎಲ್ಲಾ ಸ್ಥಾನಗಳನ್ನು ಬೇಡ, ವಾಲ್ಮೀಕಿ ಜನಾಂಗದವರೇ ಪಡೆದಿದ್ದಾರೆ. ಬೇರೆ ಜನಾಂಗದವರು ಪ್ರಮಾಣ ಪತ್ರ ಪಡೆಯುವುದಕ್ಕೂ ಸಾಧ್ಯವಿಲ್ಲದಂತಹ ಒಂದು ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ನಾಗರಿಕ ಹಕ್ಕು ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ದಾಳವಾಗಿ ಉಪಯೋಗಿಸಿಕೊಂಡು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹೆದರಿಸಿ ಕೋಳಿಡೋರ, ಟೋಕ್ರೆಕೋಳಿ ಜನಾಂಗ ಇಲ್ಲಿ ಇಲ್ಲವೇ ಇಲ್ಲ. ಅಂಬಿಗ, ಕಬ್ಬಲಿಗ, ಕೋಳಿ ಜನಾಂಗ ಖೊಟ್ಟಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಬಿಂಬಿಸಿ ಈ ಇಡೀ ಜನಾಂಗವನ್ನು ಸಂವಿಧಾನದ ಸವಲತ್ತುಗಳಿಂದ ವಂಚಿತಗೊಳಿಸಲಾಗಿದೆ.

ಕೋಳಿ ಜನಾಂಗದ ಮೇಲೆ ಹೂಡಲಾದ ಬಹುತೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಫಿರ್ಯಾದಿದಾರರು ಯಾರು ಎಂಬುದನ್ನು ಪರಿಶೀಲಿಸಿದರೆ ಈ ಸತ್ಯ ಬಯಲಾಗುವದು.

ವಿಮುಕ್ತ ಜನಾಂಗದವರಾದ ಬೇಡ, ವಾಲ್ಮೀಕಿ ಇವರು ನಾಯ್ಕಡ ಜನಾಂಗದ ಪರ್ಯಾಯವೆಂದು ಸೇರ್ಪಡೆಯಾಗಿದ್ದಾರೆ. ಆದರೆ ಸಮಾಜ ಶಾಸ್ತ್ರಜ್ಞರಾದ ಆರ್.ವಿ.ಎಂಥವಿನ್, ಎಡ್ಗರ ಥರ್ಸನ್ ಅವರ ಪ್ರಕಾರ ನಾಯ್ಕಡ ಇದು ಕೋಳಿ ಜನಾಂಗದ ಪರ್ಯಾಯಪದವಾಗಿದೆ. ಅವಸರದಲ್ಲಿ ಮಾಡಿದ ಆಜ್ಞೆಯ ದುಷ್ಪರಿಣಾಮದಿಂದ ಒಂದು ಇಡೀ ಜನಾಂಗ ಸೌಲಭ್ಯ ವಂಚಿತರಾದ ಉದಾಹರಣೆ ಬಹುತೇಕ ಸ್ವತಂತ್ರ ಭಾರತದಲ್ಲಿ ಬೇರೆ ಇರಲಿಕ್ಕಿಲ್ಲ.

ಇಷ್ಟಾಗಿ ಸಂವಿಧಾನದ ಕೊಡುಗೆಯಾಗಿ ಬುಡಕಟ್ಟುಗಳಿಗೆ ಒಟ್ಟು ಮೀಸಲಾತಿ 7.5% ಇದ್ದು ಅದು ಕೇವಲ ತಮ್ಮ ಜನಾಂಗಕ್ಕೆ ಮಾತ್ರ ಎನ್ನುವ ರೀತಿಯಲ್ಲಿ ಗುರುಪೀಠದಿಂದ ಸರಕಾರಕ್ಕೆ ಎಚ್ಚರಿಕೆ ಕೊಡುವಂತೆ ಹೇಳಿಕೆ ಕೊಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಒಂದು ಇಡೀ ಜನಾಂಗ ಹತಾಶೆಯಿಂದ ಯಾರಿಗೂ ಮೀಸಲಾತಿ ಬೇಡ ಎಂದು ಹೇಳಬಹುದು. ದಂಗೆ ಏಳಬಹುದು, ಹಾಗೊಂದು ವೇಳೆ ಆದಲ್ಲಿ ಅದು ಮೀಸಲಾತಿ ವಿರೋಧಿ ಪುರೋಹಿತಶಾಹಿಗಳಿಗೆ ಒಂದು ಅನಾಯಾಸ ಅಸ್ತ್ರವಾಗಿ ಉಪಯೋಗವಾಗಬಹುದು. ಹತಾಶೆಯ ಹಂತವನ್ನು ಈ ಜನ ಈಗಾಗಲೇ ತಲುಪಿದ್ದಾರೆ. ಸರಕಾರಿ ಸೇವೆಯಿಂದ ನಿವೃತ್ತರಾದವರ ಮೇಲೂ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಕೆಲವು ಆತ್ಮಹತ್ಯೆಗಳಾಗಿವೆ; ಕೆಲವು ಕುಟುಂಬಗಳು ಬೀದಿ ಪಾಲಾಗಿವೆ.

ಈ ಪರಿಸ್ಥಿತಿಯಲ್ಲಿ ಇರುವ ಈ ಜನಾಂಗ ಮತ್ತು ಇಂತಹದೇ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇತರರು ಒಳಮೀಸಲಾತಿ ಕೇಳಿದರೆ ತಪ್ಪೇನಿದೆ. ಅದು ನ್ಯಾಯಯುತವಾದ ಬೇಡಿಕೆಯಲ್ಲವೇ?

ಇಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಊಹಿಸಿದ್ದರು ಎಂದೆನಿಸುತ್ತಿದೆ. ಯಾಕೆಂದರೆ ರಾಜಕೀಯ ಮೀಸಲಾತಿಯನ್ನು ಅವರು ಕೇವಲ ಎರಡು ಅವಧಿಗೆ ಕೇಳಿದ್ದರು. ಅಂದರೆ 10 ವರ್ಷಕ್ಕೆ ಮಾತ್ರ. ಉದ್ದೇಶ ಇಷ್ಟೇ – ರಾಜಕೀಯದಲ್ಲಿ ಅಧಿಕಾರದ ರುಚಿ ಉಂಡ ಈ ಜನ ಅದನ್ನು ಪಡೆಯುವವರೆಗೆ ವಿಶ್ರಮಿಸುವದಿಲ್ಲ. ಅದನ್ನು ಸಂಘಟಿತರಾಗಿ ಪಡೆದು ಆಳುವ ಜನಾಂಗವಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಮೀಸಲಾತಿ ಇಂದು ವಿಶಿಷ್ಟ ಹಿತಾಸಕ್ತಿಯ ಅಸ್ತ್ರವಾಗಿ ಕೆಲವೇ ಕುಟುಂಬಗಳ ಅನುಭವದ ಲಾಭದಾಯಕ ವ್ಯವಹಾರವಾಗಿದೆ. ಡಾ. ಬಾಬಾಸಾಹೇಬರ ಕನಸಿಗೆ ಮಾರಕವಾಗಿದೆ.

ಈ ನಿಟ್ಟಿನಲ್ಲಿ ಒಳ ಮೀಸಲಾತಿ ಡಾ. ಬಾಬಾಸಾಹೇಬರ ಕನಸಿನ ಸಮಗ್ರತೆಗೆ ಮಾರಕವಾದರೂ ಕೂಡ ಪ್ರಸ್ತುತ ಬೆಳವಣಿಗೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿದೆ ಎಂದು ಭಾರವಾದ ಹೃದಯದಿಂದ ಹೇಳಬೇಕಾಗಿದೆ.

ಇನ್ನೂ ಕಾಲ ಮಿಂಚಿಲ್ಲ. ಡಾ. ಬಾಬಾಸಾಹೇಬರ ಸಂದೇಶದ, ಚಿಂತನೆಯ, ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವ ಚಿಂತಕರು ಅವರ ಮೂಲ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮ ಹಾಕಿಕೊಂಡು ತಪ್ಪುಗಳನ್ನು ಸರಿಪಡಿಸಿಕೊಂಡು ಸಮಸ್ತ ತುಳಿತಕ್ಕೆ ಒಳಗಾದ ಜನ ಒಂದು ಸಂಘಟನೆಯಾಗಿ ಆಳುವವರ್ಗವಾಗುವ ಕಡೆ ಮುನ್ನಡೆಸಲಿ ಎಂದು ಹಾರೈಸುವೆ.

  • ಕೆ.ಎಫ್. ಅಂಕಲಗಿ

ಬಿಜಾಪುರ ಜಿಲ್ಲೆಯಲ್ಲಿ ಸುಮಾರು 45 ವರ್ಷಗಳಿಂದ ವಕೀಲಿ ವೃತ್ತಿ ಮಾಡುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಅಂಕಲಗಿ ಅವರು ಬಿಜಾಪುರ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಕೂಡ. ಹಿಂದುಳಿದ ವರ್ಗಗಳ ಹಿತರಕ್ಷಣೆಗೆ ಹಲವು ಹೋರಾಟಗಳನ್ನು ನಡೆಸಿರುವ ಇವರು ಪ್ರಸ್ತುತ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರು.


ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬದ ಭೇಟಿ: ಭೀಮ್ ಆರ್ಮಿ ಮುಖ್ಯಸ್ಥ ಆಜಾದ್‌ ಮೇಲೆ FIR
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...