ನಾವು ಕಷ್ಟಪಟ್ಟು ಬೆಳೆದ ಪೀಕ ‘ದೇವರ ಕೈ’ ಆಟದಿಂದ ಹಾಳಾಗಿ ಹೋದರ ಸರಕಾರನೋ, ಖಾಸಗಿ ಕಂಪನಿನೋ ನಮ್ಮ ನಷ್ಟ ಭರ್ತಿ ಮಾಡಿಕೊಡೋ ವ್ಯವಸ್ಥೆಗೆ ಬೆಳೆವಿಮೆ ಅಂತ ಹೆಸರು. (ಈ ‘ದೇವರ ಕೈ’ ಅನ್ನೋದು ರಾಷ್ಟ್ರೀಯ ಬೆಳೆವಿಮೆ ಯೋಜನೆಯ ತಾಕೀತುಗಳಲ್ಲಿ ಒಂದು.)
ಹಂಗಾರ ಇತರ ತಾಕೀತುಗಳೇನು? ಈ ಯೋಜನೆಯ ವಿವರಗಳು ಏನು?
ಮೊದಲಿಗೆ ಈ ಯೋಜನೆ ಬಂದಿದ್ದು ಇಂದಿರಾಗಾಂಧಿಯವರ ನಿಧನದ ನಂತರ ಬಂದ ಕಾಂಗ್ರೆಸ್ ಸರಕಾರದ ತಲಿಯೊಳಗ. 1985ರಾಗ ಈ ಯೋಜನೆ ತಂದಾಗ ಬರೇ 7 ಶೇಕಡಾ ರೈತರು ಇದರ ಉಪಯೋಗ ಪಡದರು. ನಂತರ 2000ದೊಳಗ 10 ಶೇಕಡಾ ಹಾಗೂ 2018ರೊಳಗ 26 ಶೇಕಡಾ ರೈತರು ಇದರೊಳಗ ಇದ್ದಾರ. 2016ಕ್ಕೆ ಹೋಲಿಸಿದರ ಶೇಕಡಾ 15 ರೈತರು ಈ ಯೋಜನೆಯಿಂದ ಹಿಂದ ಸರದಾರ. ಭಾರತದ ಶೇಕಡಾ 30ಕ್ಕೂ ಕಮ್ಮಿ ಕೃಷಿಭೂಮಿ ಇಂತಹ ಯೋಜನೆಗಳ ಕೆಳಗ ಅದ.
ನಮಗೆಲ್ಲಾರಿಗೂ ಗೊತ್ತಿರೋ ಎಲ್ಐಸಿ ಹಂಗನ, ಬೆಳೆ ವಿಮೆಗೆ ಏಐಸಿ (ಅಗ್ರಿಕಲ್ಚರ್ ಇನ್ಷುರನ್ಸ ಕಾರ್ಪೊರೇಷನ್ನು ‘ಕೃವಿನಿ’) ಅಂತ ಒಂದು ಅದ. ನರೇಂದ್ರ ಅವತಾರದ ಸರಕಾರ ಬರೋವರೆಗೂ ಇಡೀ ದೇಶದ ಕೃಷಿವಿಮೆ ಜವಾಬುದಾರಿ ಅದಕ್ಕ ಇತ್ತು. ಹಂಗ ಇರಬಾರದು ಖಾಸಗಿ ಕಂಪನಿಗಳಿಗೂ ಸೇವೆಯ ಅವಕಾಶ ಸಿಗಲಿ ಅಂತಹೇಳಿ ಅವರನ್ನು ಇದರೊಳಗ ಬರಮಾಡಲಾಯಿತು. ಸುಮಾರು ಹತ್ತು ಖಾಸಗಿ ಕಂಪನಿಗಳಿಗೆ ದೇಶವನ್ನು ಕೃಷಿ -ಹವಾಮಾನ ಘಟಕಗಳಾಗಿ ಹಂಚಿಕೊಡಲಾಯಿತು. ಅದರೊಳಗ ಐಸಿಐಸಿಐ, ಇಫ್ಕೋ ಟೋಕಿಯೋ, ಎಚ್ಡಿಎಫ್ಸಿ, ಚೋಲಮಂಡಲಂ, ಬಜಾಜು, ರಿಲೈಯನ್ಸ್, ಟಾಟಾ, ಎಸ್ಬಿಐ, ಫ್ಯೂಚರ್, ಯುನಿವರ್ಸಲ್ ಸೊಂಪೋ ಮುಂತಾದ ಸಂಪಾದ ಕಂಪನಿಗಳು ಇದ್ದವು.
ರೈತರು ಕೇವಲ ಶೇಕಡಾ ಎರಡು ವಿಮೆ ಕಂತು ತುಂಬಬೇಕು, ಕೇಂದ್ರ ಹಾಗೂ ರಾಜ್ಯ ತಲಾ ಶೇಕಡಾ 49 ತುಂಬಬೇಕು. ನಷ್ಟದ ಅಂದಾಜನ್ನು ರಾಜ್ಯ ಸರಕಾರ ಮಾಡಬೇಕು. ಪರಿಹಾರಧನವನ್ನು ರೈತರಿಗೆ ವಿಮಾ ಕಂಪನಿಗಳು ನೀಡಬೇಕು ಅಂತ ಯೋಜನೆ ತಯಾರಿಸಿ ಅದನ್ನು ಪ್ರಧಾನಮಂತ್ರಿಗಳ ಬ್ರ್ಯಾಂಡಿನ ಮ್ಯಾಲೆ ಹಾರಿ ಬಿಡಲಾಯಿತು. ರಾಮಾಯಣದಾಗ ಕಲ್ಲಿನ ಮ್ಯಾಲೆ ರಾಮ ಅಂತ ಬರದರ ಅವು ನೀರಾಗ ತೇಲತಿದ್ದವಂತ. ನಾಮ ಬಲ ಅಂದರ ಅಷ್ಟು ದೊಡ್ಡದು. ಹಿಂತಾ ಚಮತ್ಕಾರ ಈ ಕಲಿಯುಗದೊಳಗ ನಡೀಲೀ ಅಂತ ಅದರ ಹೆಸರು ಬದಲಾವಣೆ ಆತು. ಆ ಯೋಜನೆ ತೇಲಿತೋ ಮುಳುಗಿತೋ, ಪ್ರವಾಹದಾಗ ಬೆಳಿ ಕಳಕೊಂಡ ರೈತರ ಹೇಳಬೇಕು.
ಕಂತಿನ ಹಣ ಕೃಷಿ, ನೀರಾವರಿ ಹಾಗೂ ತೋಟಗಾರಿಕೆ ಭೂಮಿಯೊಳಗ ಪರಿಹಾರದ ಶೇಕಡಾ 1.5, 2 ಹಾಗೂ 5 ಅಂತ ನಿಗದಿ ಮಾಡಲಾಯಿತು. ಆದರ ಅದರಾಗ ಕೆಲವು ಸಮಸ್ಯಾ ಇದ್ದವು. ಉದಾಹರಣೆಗೆ ರೈತ ಹಾನಿಯಾದ 48 ಗಂಟೆಯೊಳಗ ವಿಮಾ ಕಂಪನಿಗೆ ಫೋನು ಮಾಡಿ ತಿಳಿಸಬೇಕು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರವಾಹ ಬಂದಾಗ ರೈತರು 28 ಗಂಟೆ ಮಟಾ ಗಿಡದ ಕೊಂಬಿಗೆ ಜೋತಾಡುತ್ತಾ ಇದ್ದರು. ಅವರು ಹೆಂಗ ಫೋನು ಮಾಡ್ಯಾರು? ಆದರೂ ಈ ಮೂರು ವರ್ಷದೊಳಗ ಕಂಪನಿಗಳು ಬಂಗಾರದ ಅದಿರಿನ ಹಿಂದೆ ಬಿದ್ದ ದಾಹಿಗಳಂಗ ನಿರಾಸೆ ವ್ಯಕ್ತ ಪಡಿಸಿದರು.
‘ಇದು ನಮಗ ಲಾಭದಾಯಕ ಅಲ್ಲ, ನಮ್ಮ ಮರು ವಿಮೆ ಹಾಗೂ ಆಡಳಿತ ವೆಚ್ಚಗಳು ಭಾಳ ಆಗತಾವ. ಲಾಭಾಂಶ ಕಮ್ಮಿ. ಇದು ನಮಗ ಬ್ಯಾಡ ಅಂತ ಹೇಳಿದರು. ಸರಕಾರಿ ಸಂಸ್ಥೆಗಳಿಗೆನ ಇದರ ನೊಗ ಹೊರಸರಿ ನಾವು ಒಲ್ಲಿವಿ, ಅಂತ ಆಟ ಗೂಟ ಜೈ’ ಅಂದರು.
ಹಿಂಗಾರ ಅವರಿಗೆ ಆದ ನಷ್ಟ ಏನು ನೋಡುಣು ಬನ್ರಿಪಾ.
ಪ್ರಧಾನ ಮಂತ್ರಿ ಫಸಲು ಬೀಮಾ ಯೋಜನೆ ಆರಂಭವಾದ ಮೂರು ವರ್ಷದಾಗ (ನಂತರದ ವರ್ಷಗಳ ಡೇಟಾ ಸರಕಾರದಿಂದ ಇನ್ನೂ ಲಭ್ಯ ಆಗಿಲ್ಲ)- ಈ ಕಂಪನಿಗಳು ಸುಮಾರು 76 ಸಾವಿರ ಕೋಟಿ ಕಂತು ವಸೂಲು ಮಾಡ್ಯಾವು. ಇದರೊಳಗ ಸುಮಾರು 75 ಸಾವಿರ ಕೋಟಿ ತೆರಿಗೆದಾರರ ದುಡ್ಡು. ಬೆಳೆ ನಾಶ, ಬರ, ಪ್ರವಾಹ ಮುಂತಾದ ವೈಪರೀತ್ಯಗಳಾಗಿದ್ದಕ್ಕ ರೈತರಿಗೆ ಸಿಕ್ಕ ಪರಿಹಾರ ಸುಮಾರು 56 ಸಾವಿರ ಕೋಟಿ. ಅಂದರ ಈ ಕಂಪನಿಗಳು ನಿವ್ವಳ 27 ಶೇಕಡಾ ಲಾಭದಾಗ ಇದ್ದಾವು. ಅವು ಮರು ವಿಮೆ ಮೊತ್ತ ಶೇಕಡಾ 10 ಹಾಗೂ ಆಡಳಿತ ವೆಚ್ಚ ಶೇಕಡಾ 5 ಇದ್ದದ್ದರಿಂದ ಶೇಕಡಾ 12 ಲಾಭ ಗಳಿಸಿದಂಗ. ಆದರ ಇದು ಅವುಗಳ ಶೇರುದಾರರಿಗೆ ಕಮ್ಮಿ ಅನ್ನಿಸಿದ್ದಕ್ಕ ಆ ಮೊದಲಿನ ಹತ್ತು ಕಂಪನಿಗಳಲ್ಲಿ ಕೆಲವು ಈ ಯೋಜನೆಯಿಂದ ಹಿಂದ ಸರದಾವ. ಇನ್ನೂ ಸುಮಾರು ನಾಕು ಸಾವಿರ ಕೋಟಿ ಪರಿಹಾರ ಧನ ಕೊಡೋ ಬಾಕಿ ಉಳದೈತಿ.
ಹಂಗಾರ ಈ ಧಂದೇನ ಹಿಂಗೇನು ಮತ್ತ? ಹಂಗೇನಿಲ್ಲ. ಸರಕಾರಿ ವಿಮಾ ಕಂಪನಿಯ ಲೆಕ್ಕ ಪಟ್ಟಿ ನೋಡಿದರ ಇದು ಗೊತ್ತಾಗತದ. ಏಐಸಿ ಅಥವಾ ‘ಕೃವಿನಿ’ ಕಳೆದ ವರ್ಷ ಸುಮಾರು 7893 ಕೋಟಿ ರೂಪಾಯಿ ಕಂತು ಪಡೆದು 7040 ಕೋಟಿ ರೂಪಾಯಿ ಪರಿಹಾರ ಕೊಟ್ಟದ. ಇದು ಸುಮಾರು ಶೇಕಡಾ 90ರಷ್ಟು. ಇವರಿಗೂ ಮರುವಿಮೆ ಹಾಗೂ ಆಡಳಿತ ವೆಚ್ಚ ಅಂತ ಅದಾವು. ಸರಕಾರಿ ಸಂಸ್ಥೆ ಆದ್ದರಿಂದ ಸಿಬ್ಬಂದಿ ವೆಚ್ಚನೂ ಅದಾನಿ- ಅಂಬಾನಿಗಿಂತ ಹೆಚ್ಚು. ಆದರೂ ಇವರು ಯಾಕ ಹೆಚ್ಚು ಕೊಡಲಿಕ್ಕೆ ಆಯಿತು. ಅವರು ಇಷ್ಟೇ ಮೊತ್ತದ ಪರಿಹಾರ ಕೊಡತಿದ್ದರು ಅಂದರ ಇವರನ್ನ ತಗದು ಖಾಸಗಿ ಕಂಪನಿಗಳನ್ನು ಕರದು ಕರದು ಕೊಟ್ಟಿದ್ದು ಯಾಕೆ? ಮೊದಲ ಮೂರು ವರ್ಷ 76 ಸಾವಿರ ಕೋಟಿ ಹಣ ಹೊಡದುಕೊಂಡು ಆಮ್ಯಾಲೆ ನಾವಲ್ಲ ಅಂದರಲ್ಲಾ, ಅದನ್ನು ಮೊದಲೇ ಯಾಕೆ ಊಹಿಸಲಿಲ್ಲ? ಐದು ವರ್ಷ- ಹತ್ತು ವರ್ಷದ ದೀರ್ಘಕಾಲೀನ ಕರಾರಿನ ಕಂಟ್ರಾಕ್ಟಗಳನ್ನ ಯಾಕೆ ಕರೀಲಿಲ್ಲ? ಸರಕಾರಿ ಸಂಸ್ಥೆಗೆ ಕೇವಲ ಶೇಕಡಾ 10 ರಷ್ಟು ಕೃಷಿಭೂಮಿಯನ್ನ ಮಾತ್ರ ಬಿಟ್ಟು ಕೊಟ್ಟರು?
ಇಲಿಗಳ ರಾಜ್ಯದಲ್ಲಿ ಬೆಕ್ಕಿಗೆ ಗಂಟೀ ಕಟ್ಟೂದಲ್ಲಾ, ಅದಕ್ಕ ಸವಾಲು ಕೇಳೋದೂ ಸಹಿತ ಸಾಧ್ಯವಿಲ್ಲ.
ವಿವರಗಳಿಗೆ:mhttps://pmfby.gov.inwww.aicofindia.com
ಪೀಕ (ಹೆಚ್ಚು ಕಡಿಮೆ ಪೀಕ್ ಎಂದು ಉಚ್ಚರಿಸುವ ಪೀಕ ಅಂದ್ರ ಬೆಳಿ – ಬೆಳೆ)


