Homeಮುಖಪುಟಸಿಜೆಐ ಮೇಲೆ ದಾಳಿ: ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ

ಸಿಜೆಐ ಮೇಲೆ ದಾಳಿ: ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ

- Advertisement -
- Advertisement -

ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಆರಂಭಿಸಲು ಭಾರತದ ಅಟಾರ್ನಿ ಜನರಲ್ (ಎಜಿ) ಆರ್. ವೆಂಕಟರಮಣಿ ಒಪ್ಪಿಗೆ ನೀಡಿದ್ದಾರೆ ಎಂದು ಗುರುವಾರ (ಅ.16) ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ (ಎಸ್‌ಸಿಬಿಎ) ಅಧ್ಯಕ್ಷ, ಹಿರಿಯ ವಕೀಲ ವಿಕಾಸ್ ಸಿಂಗ್ ಮತ್ತು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಜಂಟಿಯಾಗಿ ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದಾರೆ.

ಅಟಾರ್ನಿ ಜನರಲ್ ಅನುಮತಿ ನೀಡಿದ ಬಗ್ಗೆ ವಕೀಲ ವಿಕಾಸ್ ಸಿಂಗ್ ಪೀಠಕ್ಕೆ ಮಾಹಿತಿ ನೀಡಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಸಂಗತಿಯನ್ನು ದೃಢಪಡಿಸಿದ್ದಾರೆ.

“ನಾನು ಅಟಾರ್ನಿ ಜನರಲ್ ಅವರ ಒಪ್ಪಿಗೆ ಪಡೆದುಕೊಂಡಿದ್ದೇನೆ ಮತ್ತು ನಾಳೆ ಈ ವಿಷಯವನ್ನು ಪಟ್ಟಿ ಮಾಡಲು ಕೋರುತ್ತೇನೆ” ಎಂದು ಸಿಂಗ್ ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ತುಷಾರ್ ಮೆಹ್ತಾ ಅವರು, “ಅಟಾರ್ನಿ ಜನರಲ್ ಒಪ್ಪಿಗೆ ನೀಡಿದ್ದಾರೆ. ನಾನು ನನ್ನ ಸ್ನೇಹಿತನೊಂದಿಗೆ ಸೇರಿ ಈ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿಮ್ಮನ್ನು ವಿನಂತಿಸುತ್ತೇನೆ. ಇದು ಪ್ರಶ್ನಾರ್ಹ ಸಾಂವಿಧಾನಿಕ ಸಮಗ್ರತೆಯ ಪ್ರಕರಣ” ಎಂದು ಹೇಳಿದ್ದಾರೆ. 

ಘಟನೆಯನ್ನು ವೈಭವೀಕರಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಿರ್ಬಂಧಿಸಲು “ಜಾನ್-ಡೋ” ಆದೇಶವನ್ನು ಸಹ ಕೋರುತ್ತಿರುವುದಾಗಿ ಸಿಂಗ್ ಪೀಠಕ್ಕೆ ಹೇಳಿದ್ದಾರೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಈ ವಿಷಯವನ್ನು ಮತ್ತಷ್ಟು ಕೆದಕಬೇಕೇ? ಎಂದು ಪ್ರಶ್ನಿಸಿದೆ. ಸಿಜೆಐ ಸ್ವತಃ ಘಟನೆಯನ್ನು ಬಿಟ್ಟುಬಿಟ್ಟಿದ್ದಾರೆ ಎಂದಿದೆ. “ಗೌರವಾನ್ವಿತ ಸಿಜೆಐ ಅತ್ಯಂತ ಉದಾರ ಮನಸಿನವರು. ಇದು ನ್ಯಾಯಾಂಗ ಸಂಸ್ಥೆಯ ಮೇಲೆ ಈ ರೀತಿಯ ಘಟನೆಗಳಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತೋರಿಸುತ್ತದೆ” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಿಂಗ್, “ಘಟನೆಯ ನಂತರದ ಬೆಳವಣಿಗೆಗಳು ಮತ್ತು ಸಾಮಾಜಿಕ ಮಾಧ್ಯಮಗಳು ಅದಕ್ಕೆ ಒತ್ತು ನೀಡುತ್ತಿರುವ ರೀತಿಯಿಂದ ನ್ಯಾಯಾಂಗ ಸಂಸ್ಥೆಗೆ ಸ್ವಲ್ಪ ಹಾನಿಯನ್ನುಂಟುಮಾಡುತ್ತಿದೆ” ಎಂದು ಹೇಳಿದ್ದಾರೆ. “ವಕೀಲರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಿಜೆಐ ಅವರ ‘ಗಾಂಭೀರ್ಯದ ಸೂಚಕ’. ಆದರೆ, ಘಟನೆಯನ್ನು ಸಮರ್ಥಿಸಲು ಕೆಲವರು ಸಾಮಾಜಿಕ ಮಾಧ್ಯಮವನ್ನು ಬಳಸುವ ರೀತಿ ಕಳವಳಕಾರಿಯಾಗಿದೆ. ಇದು ಸಾಂಸ್ಥಿಕ ಸಮಗ್ರತೆಯ ವಿಷಯ” ಎಂದು ತುಷಾರ್ ಮೆಹ್ತಾ ತಿಳಿಸಿದ್ದಾರೆ.

“ಸಿಜೆಐ ಮೇಲಿನ ದಾಳಿಯನ್ನು ವಿಷ್ಣು ತೃಪ್ತನಾಗುತ್ತಾನೆ ಎಂದು ಕೆಲವರು ಹೇಳುತ್ತಿದ್ದಾರೆ. ವಿಷ್ಣು ಎಂದಿಗೂ ಈ ರೀತಿಯ ಹಿಂಸೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ವಿಷ್ಣುವಿಗೂ ಅವಮಾನ ಎಂದು ವಕೀಲ ಸಿಂಗ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್ ಅವರು, “ಪವಿತ್ರ ಗ್ರಂಥಗಳು ಎಂದಿಗೂ ಹಿಂಸೆಯನ್ನು ಕ್ಷಮಿಸುವುದಿಲ್ಲ. ಆದರೆ, ಈ ವಿಷಯವನ್ನು ಕೈಗೆತ್ತಿಕೊಂಡರೆ ಅದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಜೀವಂತವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇವತ್ತು ಏನಾಗುತ್ತಿದೆ ಎಂದರೆ, ಎಲ್ಲವೂ ಆಗುತ್ತಿದೆ” ಎಂದಿದ್ದಾರೆ. 

ಪೀಠದಲ್ಲಿದ್ದ ನ್ಯಾಯಾಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರು ಕೂಡ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮಾತಿಗೆ ಧ್ವನಿಗೂಡಿಸಿದ್ದು, “ಈ ವಿಷಯವನ್ನು ಮತ್ತೆ ಕೆದಕುವುದರಿಂದ ಪ್ರಚಾರ ಬಯಸುವವರಿಗೆ ಮತ್ತಷ್ಟು ಅವಕಾಶ ಸಿಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸಿಜೆಐ ಮೇಲಿನ ದಾಳಿಯನ್ನು ಸಮರ್ಥಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವಂತೆ ವಕೀಲ ಸಿಂಗ್ ಮತ್ತು ಎಸ್‌ಜಿ ತುಷಾರ್ ಮೆಹ್ತಾ ಕೋರಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪೀಠ, “ವಾಕ್ ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕು ಮಿತಿಯಿಲ್ಲದಲ್ಲ. ಅದು ಇತರರ ಸಮಗ್ರತೆ ಮತ್ತು ಘನತೆಯನ್ನು ಬಲಿಕೊಡಲು ಸಾಧ್ಯವಿಲ್ಲ” ಎಂದು ಹೇಳಿದೆ.

ಆದರೆ, ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಲು ಪೀಠ ಒಲವು ತೋರಿಲ್ಲ. ಒಂದು ವಾರ ಬೆಳವಣಿಗೆಗಳ ಬಗ್ಗೆ ಕಾದು ನೋಡೋಣ” ಎಂದಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಅಕ್ಟೋಬರ್ 6ರಂದು, ಸುಪ್ರೀಂ ಕೋರ್ಟ್‌ನಲ್ಲಿ 71 ವರ್ಷದ ವಕೀಲ ರಾಕೇಶ್ ಕಿಶೋರ್ ಎಂಬಾತ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಿದ್ದರು.

ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿ ಬರುವ ಮಧ್ಯಪ್ರದೇಶದ ಐತಿಹಾಸಿಕ ತಾಣ ಖಜುರಾಹೊ ದೇವಾಲಯಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ತಿರಸ್ಕರಿಸುವ ವೇಳೆ ಸಿಜೆಐ ಗವಾಯಿ ಅವರು ನೀಡಿರುವ ಮೌಖಿಕ ಹೇಳಿಕೆಯೇ ವಕೀಲ ರಾಕೇಶ್ ಕಿಶೋರ್ ದಾಳಿ ಅವರ ಮೇಲೆ ದಾಳಿ ಮಾಡಲು ಕಾರಣ ಎಂದು ಹೇಳಲಾಗ್ತಿದೆ.

ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಪಿಐಎಲ್‌ ಸಲ್ಲಿಸಲಾಗಿತ್ತು. ಅದನ್ನು ತಿರಸ್ಕರಿಸಿದ್ದ ಸಿಜೆಐ, “ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಪ್ರಚಾರದ ಹಿತಾಸಕ್ತಿ ಇದ್ದಂತಿದೆ. ಭಗ್ನಗೊಂಡ ವಿಷ್ಣು ವಿಗ್ರಹವನ್ನು ದುರಸ್ಥಿಗೊಳಿಸಲು ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿ ಎಂದಿದ್ದರು.

ಮುಂದುವರಿದು, “ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಹೋಗಿ ನಿಮ್ಮ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ” ಎಂದು ಅರ್ಜಿದಾರರಿಗೆ ಸಿಜೆಐ ಮೌಖಿಕವಾಗಿ ಹೇಳಿದ್ದರು.

ಸಿಜೆಐ ಮೇಲಿನ ದಾಳಿಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ವಿವಿಧ ಸಂಘ- ಸಂಸ್ಥೆಗಳು ಸಾರ್ವಜನಿಕರು ಘಟನೆಯನ್ನು ಖಂಡಿಸಿ ಪ್ರತಿಭಟಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಬಾಲಕಿಯ ಶವ ಪತ್ತೆ: ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Pls mention Dalit CJI and Dalit Lawer why not mentioning here….
    Every where u ppl mention

    Dalit girls raped
    Dalit boy or women beaten
    Dalit ppl not allowed temple
    Dalit not allowed to drink water in well like that

    Why not in this case mentioning Dalit

LEAVE A REPLY

Please enter your comment!
Please enter your name here

- Advertisment -