ಬೆಂಗಳೂರು ನಗರದಲ್ಲಿ ಅಕ್ರಮ ಚಟುವಟಿಕೆ ನಡೆಸಿರುವ ದೆಹಲಿ ಪೊಲೀಸರ ವಿರುದ್ಧ ಸಂಪಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ‘ಈದಿನ.ಕಾಮ್’ ವರದಿ ಮಾಡಿದೆ.
ಮಾನವ ಹಕ್ಕುಗಳ ಹೋರಾಟಗಾರ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ನದೀಮ್ ಖಾನ್ ಅವರನ್ನು ಬಂಧಿಸಲು ಬೆಂಗಳೂರಿಗೆ ಆಗಮಿಸಿರುವ ದೆಹಲಿ ಪೊಲೀಸರು, ಸ್ಥಳೀಯ ಪೊಲೀಸರ ಗಮನಕ್ಕೆ ತರದೆ ಅಕ್ರಮವಾಗಿ ಬಂಧಿಸಲು ಯತ್ನಿಸಿರುವ ಘಟನೆ ನ.30ರ ಸಂಜೆ ನಡೆದಿತ್ತು.
ಈ ಬಗ್ಗೆ ದೆಹಲಿ ಪೊಲೀಸರ ವಿರುದ್ಧ ನದೀಮ್ ಖಾನ್ ಕುಟುಂಬಸ್ಥರು ಕೂಡಲೇ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಮುಂದಿನ ಕ್ರಮ ಕೈಗೊಂಡಿದ್ದಾರೆ.
“ಶನಿವಾರ ಸಂಜೆ 5ರ ಸುಮಾರಿಗೆ ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಎಂದು ಹೇಳಿಕೊಂಡು ಬಂದ ನಾಲ್ವರು ಅಧಿಕಾರಿಗಳು ಅಕ್ರಮವಾಗಿ ಮನೆಗೆ ನುಗ್ಗಿದರು. ವಾರಂಟ್ ಅಥವಾ ಪೂರ್ವ ಸೂಚನೆಯಿಲ್ಲದೆ ಬಂದಿದ್ದಲ್ಲದೇ, ನಮ್ಮನ್ನು ಬೆದರಿಸಿದ್ದಾರೆ. ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನದೀಮ್ ಖಾನ್ ಅವರ ವಿರುದ್ಧ ನಮ್ಮ ಠಾಣೆಯಲ್ಲಿ ಶನಿವಾರ ಮಧ್ಯಾಹ್ನ 12:48 ಕ್ಕೆ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಅವರನ್ನು ಹುಡುಕಿಕೊಂಡು ಬಂದಿದ್ದೇವೆ ಎಂದು ಹೇಳಿದರು. ದಾಖಲೆ ಕೇಳಿದಾಗ ಆನ್ಲೈನ್ ಪ್ರತಿಯನ್ನು ತೋರಿಸಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಸಹೋದರ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
“ದೆಹಲಿ ಪೊಲೀಶರು ಮನೆಗೆ ನುಗ್ಗಿದ ವೇಳೆ ಯಾವುದೇ ಸಮವಸ್ತ್ರದಲ್ಲಿ ಇರಲಿಲ್ಲ. 8 ಗಂಟೆ ಸುಮಾರಿಗೆ, ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ 3 ಪೊಲೀಸ್ ಅಧಿಕಾರಿಗಳು ಕೂಡ ನನ್ನ ನಿವಾಸಕ್ಕೆ ಬಂದರು. ದೆಹಲಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿಲ್ಲ ಎಂಬುದು ನಂತರ ಸ್ಪಷ್ಟವಾಯಿತು. ರಾತ್ರಿ 9 ಗಂಟೆಯವರೆಗೆ ಮನೆಯ ಮೊದಲ ಮಹಡಿಯ ಹಾಲ್ನಲ್ಲಿ ಕುಳಿತು ತನಿಖೆಗೆ ನದೀಮ್ನನ್ನು ತಮ್ಮೊಂದಿಗೆ ದೆಹಲಿಗೆ ಬರುವಂತೆ ಒತ್ತಾಯಿಸಿದ್ದರು. ಯಾವುದೇ ಸಮನ್ಸ್, ನೋಟಿಸ್, ವಾರಂಟ್ ಇಲ್ಲದಿದ್ದರೂ, ಎಸ್ಎಚ್ಒ ಮತ್ತು ಇತರ ಪೊಲೀಸ್ ಅಧಿಕಾರಿಗಳು ಮನೆಯಲ್ಲೇ ಐದು ಗಂಟೆಗಳ ಕಾಲ ನಮ್ಮನ್ನು ಬೆದರಿಸಿದ್ದಾರೆ” ಎಂದು ಅವರು ವಿವರಿಸಿದ್ದಾರೆ.
“ಎಫ್ಐಆರ್ನಲ್ಲಿ ದಾಖಲಿಸಿಕೊಂಡಿರುವ ಎಲ್ಲ ಸೆಕ್ಷನ್ನ ಅಪರಾಧಗಳಿಗೆ ಮೂರು ವರ್ಷಗಳಿಗಿಂತ ಕಡಿಮೆಯಿರುವ ಶಿಕ್ಷೆಗಳಾಗಿದೆ. ಆದ್ದರಿಂದ ಇದಕ್ಕೆಲ್ಲ ನೋಟಿಸ್ ನೀಡಬೇಕಿದೆ. ಅದ್ಯಾವುದನ್ನೂ ದೆಹಲಿ ಪೊಲೀಸರು ಪಾಲಿಸಿಲ್ಲ. ಈ ಎಫ್ಐಆರ್ ದಾಖಲಾಗುವುದಕ್ಕೂ ಮೊದಲು, ನವೆಂಬರ್ 29ರ ತಡರಾತ್ರಿ ದೆಹಲಿಯಲ್ಲಿರುವ ಎಪಿಸಿಆರ್ ಕಚೇರಿಗೆ 20 ಪೊಲೀಸ್ ಅಧಿಕಾರಿಗಳು ನುಗ್ಗಲು ಪ್ರಯತ್ನಿಸಿದ್ದಾರೆ. ನದೀಮ್ ಮತ್ತು ನನಗೆ ಪೊಲೀಸರು ಮಾನಸಿಕ ಹಿಂಸೆ ನೀಡಿ, ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಬೆದರಿಕೆ, ಅತಿಕ್ರಮಣ, ಅಧಿಕಾರದ ದುರುಪಯೋಗ ನಡೆಸಿದ ದೆಹಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜೀವಕ್ಕೆ ಅಪಾಯವಾಗದಂತೆ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗವಾಗದಂತೆ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ದೂರಿನಲ್ಲಿ ನದೀಮ್ ಖಾನ್ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಎಪಿಸಿಆರ್ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಡ್ವೊಕೇಟ್ ನಿಯಾಝ್ ಅಹ್ಮದ್, “ದೆಹಲಿ ಪೊಲೀಸರು ಈಗ ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿ ಆರೋಪಿಗಳ ಬಂಧನಕ್ಕೂ ಮೊದಲು ನೋಟಿಸ್ ನೀಡಬೇಕಿದೆ. ಅಲ್ಲದೇ, ಈ ಬಗ್ಗೆ ಸುಪ್ರೀಂ ಕೋರ್ಟ್ನ ಮಾರ್ಗಸೂಚಿ ಕೂಡ ಇದೆ. ಇದು ಯಾವುದನ್ನೂ ಅನುಸರಿಸದೆ, ಅಕ್ರಮ ಬಂಧನಕ್ಕೆ ಯತ್ನಿಸಿದ್ದಾರೆ. ಮನೆಗೆ ಬಂದವರ ಬಳಿಯಲ್ಲಿ ಐಡಿ ಕಾರ್ಡ್ ಕೂಡ ಇರಲಿಲ್ಲ. ಅಲ್ಲದೇ, ಯಾವುದೇ ಮಾಹಿತಿ ನೀಡದೆ ಮನೆಗೆ ನುಗ್ಗಿದ್ದಾರೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ಅತಿಕ್ರಮಣ ಪ್ರವೇಶ ಮಾಡಿ, ಅಕ್ರಮ ಚಟುವಟಿಕೆ ನಡೆಸಿರುವ ದೆಹಲಿ ಪೊಲೀಸರ ಮೇಲೆ ಎಫ್ಐಆರ್ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ನದೀಮ್ ಖಾನ್ ಕುಟುಂಬಸ್ಥರು ದೂರು ನೀಡಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ” ಎಂದು ತಿಳಿಸಿದರು.
“ನದೀಮ್ ಖಾನ್ ‘ದ್ವೇಷದ ವಿರುದ್ಧ ಒಂದಾದ ನಾವೆಲ್ಲರೂ’ ಎಂಬ ಸಂಘಟನೆಯ ಪದಾಧಿಕಾರಿಯಾಗಿದ್ದು, ಭಾರತ್ ಜೋಡೋ ಅಭಿಯಾನದ ರಾಷ್ಟ್ರೀಯ ಪದಾಧಿಕಾರಿಯೂ ಆಗಿದ್ದಾರೆ. ಅವರನ್ನು ದುರುದ್ದೇಶಪೂರ್ವಕವಾಗಿ ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಿರುವುದು ಸ್ಪಷ್ಟ” ಎಂದು ಜಾಗೃತ ಕರ್ನಾಟಕದ ಡಾ.ವಾಸು ಎಚ್ ವಿ ಅವರು ಹೇಳಿದ್ದಾರೆ ಎಂದು ‘ಈದಿನ.ಕಾಮ್’ ವರದಿ ಮಾಡಿದೆ.
ದೆಹಲಿ ಪೊಲೀಸರು ಇನ್ನಷ್ಟು ಕುಖ್ಯಾತಿ ಪಡೆಯುವ ಮೊದಲು ನ್ಯಾಯಾಲಯಗಳು ಮಧ್ಯೆ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಪೊಲೀಸರು ಕಾನೂನು ಪಾಲಿಸದೇ ಈ ರೀತಿ ಅಕ್ರಮ ಚಟುವಟಿಕೆಗಳನ್ನು ನಡೆಸಿದರೆ, ಕಾನೂನಿನ ಕುರಿತು ಜನರಿಗೆ ವಿಶ್ವಾಸ ಕುಂದುತ್ತದೆ. ನದೀಮ್ ಖಾನ್ ವಿಚಾರದಲ್ಲಿ ದೆಹಲಿ ಪೊಲೀಸರು ನಡೆದುಕೊಂಡಿರುವ ರೀತಿಯೇ ಸರಿ ಇಲ್ಲ. ಅನುಮಾನ ಉಂಟು ಮಾಡುವಂಥದ್ದು. ಈ ಹಿಂದೆ ದಿಶಾ ರವಿಯವರ ಪ್ರಕರಣದಲ್ಲೂ ಇದೇ ರೀತಿ ನಡೆದುಕೊಂಡಿದ್ದರು. ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರಿನ ಪೊಲೀಸರು ಏನೂ ಮಾಡಿರಲಿಲ್ಲ” ಎಂದು ವಕೀಲ, ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ಹೇಳಿದ್ದಾರೆ.
“ನಮ್ಮದು ಒಕ್ಕೂಟ ದೇಶ; ದೆಹಲಿ ಪೊಲೀಸರು ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿದ್ದಾರೆ ಎಂದು ತಿಳಿದುಕೊಂಡು ತಮಗಿಷ್ಟ ಬಂದಂತೆ ನಡೆದುಕೊಳ್ಳಬಾರದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನದೀಮ್ ಹಾಗೂ ಎಪಿಸಿಆರ್ನವರು ದನಿ ಇಲ್ಲದವರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಗುರಿ ಮಾಡಿಕೊಳ್ಳಲಾಗಿದೆ. ಅವರನ್ನು ಬೆನ್ನತ್ತುತ್ತಿರುವುದು ಖಂಡನೀಯ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕೂಡ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು” ಎಂದು ವಿನಯ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಹೋರಾಟಗಳು ಫ್ರೀಡಂ ಪಾರ್ಕಿಗೆ ಮಾತ್ರ ಸೀಮಿತ; ಆದೇಶ ಹಿಂಪಡೆಯುವಂತೆ ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಆಗ್ರಹ


