“ಅತ್ಯಾಚಾರ ಯತ್ನ ನಡೆದು ಏಳು ದಿನವಾದರೂ ಆರೋಪಿಯ ಬಂಧನವಾಗಿಲ್ಲ” ಎಂದು ಸಂತ್ರಸ್ತೆಯು ಟೈಮ್ಸ್ ನೌ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, “ನನಗೆ ಜೀವ ಬೆದರಿಕೆ ಇದೆ” ಎಂದು ಆತಂಕ ವ್ಯಕ್ತಪಡಿಸಿರುವ ವಿಡಿಯೊ ವೈರಲ್ ಆಗಿದೆ.
ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಂಬಂಧ ಮಂಗಳೂರು ಲೋಕಾಯುಕ್ತ ವಿಭಾಗದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಅವರ ವಿರುದ್ಧ ಎರಡು ದೂರು ದಾಖಲಾಗಿದೆ.
ಒಂದು ಪ್ರಕರಣದಲ್ಲಿ ಅತ್ಯಾಚಾರ ಆರೋಪ ಮಾಡಿರುವ ವಿದ್ಯಾರ್ಥಿನಿ ನಗರದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದರಲ್ಲಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದಡಿ ಪವಿತ್ರ ಆಚಾರ್ಯ, ಶಿವಾನಂದ ಹಾಗೂ ಧ್ರುವ (ವಿದ್ಯಾರ್ಥಿನಿಯ ಗೆಳೆಯ) ಎಂಬುವವರ ವಿರುದ್ಧ ದೂರು ನೀಡಲಾಗಿದೆ ಎಂದು ‘ಬಾರ್ ಅಂಡ್ ಬೆಂಚ್’ ಜಾಲತಾಣ ವರದಿ ಮಾಡಿದೆ.
ಕೆ.ಎಸ್.ಎನ್. ರಾಜೇಶ್ ಭಟ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಪ್ರಸಿದ್ಧ ಬ್ಯಾಂಕ್ಗಳು ಸೇರಿ ಹಲವು ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿರಿ: ಪ್ರತ್ಯೇಕ ಪ್ರಕರಣ: ನಾಲ್ಕು ವರ್ಷದ ಮಗು, ಬಾಲಕಿ ಮೇಲೆ ಅತ್ಯಾಚಾರ
ಮಂಗಳೂರಿನ ಕಾನೂನು ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಕಳೆದ ಆಗಸ್ಟ್ನಲ್ಲಿ ವಕೀಲರ ಕರಂಗಲ್ಪಾಡಿ ಕಚೇರಿಯಲ್ಲಿ ತರಬೇತಿಗಾಗಿ (ಇಂಟರ್ನ್ಶಿಪ್) ಸೇರಿದ್ದರು. ಸೆ. 25ರಂದು ತನ್ನನ್ನು ಚೇಂಬರ್ಗೆ ಕರೆಸಿಕೊಂಡ ಭಟ್ ಅಸಭ್ಯವಾಗಿ ವರ್ತಿಸಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಹಾಗೂ ವಿದ್ಯಾರ್ಥಿನಿಯ ನಡುವೆ ನಡೆದಿದೆ ಎನ್ನಲಾದ 11 ನಿಮಿಷ 55 ಸೆಕೆಂಡ್ ಅವಧಿಯ ಫೋನ್ ಸಂಭಾಷಣೆಯೊಂದು ವೈರಲ್ ಆಗಿತ್ತು. ಅದರಲ್ಲಿ ರಾಜೇಶ್ ಅವರು ʼನನ್ನ ಜೀವನದಲ್ಲಿ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನ ತಪ್ಪು ಕ್ಷಮಿಸಿ ಕಚೇರಿಗೆ ಬಾ… ಸಂಜೆ 6 ಗಂಟೆ ಬಳಿಕ ಕೆಲಸ ಮಾಡಬೇಡ ಕಚೇರಿಗೆ ಬಾ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಆಗ ವಿದ್ಯಾರ್ಥಿನಿ, ‘ಕಚೇರಿಗೆ ಬಂದರೆ ಅಲ್ಲಿ ರೆಕಾರ್ಡ್ ಆಗಿರುವ ವೀಡಿಯೊ ತೆಗೆದುಹಾಕುವಿರಾ?ʼ ಎಂದು ಕೇಳಿದ್ದರು. ‘ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ನೀವು ಈ ರೀತಿ ಮಾಡಿದ್ದು ತಪ್ಪು. ನನಗೆ ಇನ್ನು ಮುಂದೆ ಫೋನ್ ಮಾಡಬೇಡಿ” ಎಂದು ಆಕೆ ಹೇಳಿದ್ದರು.
ವಿದ್ಯಾರ್ಥಿನಿ ನೀಡಿರುವ ದೂರನ್ನು ಆಧರಿಸಿ ಭಟ್ ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಎ) 354 (ಬಿ), 354 (ಸಿ) , (ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸೆಕ್ಷನ್ಗಳು) 376 (ಅತ್ಯಾಚಾರ ಯತ್ನ), 511ರ (ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಹ ಕೃತ್ಯ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಲೈಂಗಿಕ ಕಿರುಕುಳ, ಬೆದರಿಕೆ ಗಂಭೀರ ಪ್ರಕರಣವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ವಲಯ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಬಂಡಾರು ಅವರಿಗೆ ತನಿಖೆಯ ಹೊಣೆ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ನೀಡುತ್ತೇವೆ ಎಂದು ಜಾಗೃತ ಮಹಿಳಾ ವೇದಿಕೆಯ ಹೆಸರು ಹೇಳಿಕೊಂಡು ಪವಿತ್ರಾ ಆಚಾರ್ಯ ಎಂಬುವವರು ವಿದ್ಯಾರ್ಥಿನಿ ಹಾಗೂ ಆಕೆಯ ಸಹಪಾಠಿಯನ್ನು ಕರೆದೊಯ್ದಿದ್ದರು. ಬಳಿಕ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಸಹಪಾಠಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿರಿ: ರಾಜಸ್ಥಾನ: ಮಗುವಿನ ಮೇಲೆ ಅತ್ಯಾಚಾರ, ಹತ್ಯೆ; ಅಪರಾಧಿಗೆ 24 ದಿನಗಳಲ್ಲಿ ಮರಣದಂಡನೆ!
ಮುಚ್ಚಳಿಕೆ ಬರೆಸಲು ಪವಿತ್ರ ಸಹಕರಿಸಿದ್ದರು ಎಂದು ದೂರಲಾಗಿದ್ದು ಮುಚ್ಚಳಿಕೆಯಲ್ಲಿ “ರಾಜೇಶ್ ಭಟ್ ಅವರ ಬಳಿ ಕ್ಷಮೆ ಕೇಳಲಾಗಿದೆ. ನೀವು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಿಮ್ಮನ್ನು ಟಾರ್ಗೆಟ್ ಮಾಡಿದ್ದೆ. ಆಡಿಯೊ ಎಡಿಟ್ ಮಾಡಿ ವಾಟ್ಸಾಪ್ ಮತ್ತು ಸಿಡಿ ಮಾಡಿಸಿ ಹರಿಬಿಟ್ಟಿದ್ದೆ. ನಿಮ್ಮ ಕುಟುಂಬ ಮತ್ತು ಸಮಾಜದ ಹೆಸರು ಹಾಳು ಮಾಡಲು ಯತ್ನಿಸಿದ್ದೆ. ವಕೀಲರ ಸಂಘಕ್ಕೂ ನಾನೇ ಸಿಡಿ ಕಳಿಸಿಕೊಟ್ಟಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂಬುದಾಗಿ ಬೇಷರತ್ ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ನಿಮಗೆ ಮುಖ ತೋರಿಸುವುದಿಲ್ಲ” ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪವಿತ್ರ ಅಲ್ಲದೆ ಶಿವಾನಂದ ಹಾಗೂ ಧ್ರುವ ಎನ್ನುವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇಷ್ಟೆಲ್ಲ ಘಟಿಸಿದರೂ ರಾಜೇಶ್ ಭಟ್ನನ್ನು ಬಂಧಿಸಿಲ್ಲ. ಹೀಗಾಗಿ ಯುವತಿಯು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ. ತನಗೆ ಜೀವ ಬೆದರಿಕೆ ಇರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಜೀವ ಬೆದರಿಕೆ: ರಕ್ಷಣೆಗೆ ಯುವತಿ ಮೊರೆ
“ನಾನು ಮಹಾರಾಷ್ಟ್ರದವಳು. ಕಾನೂನು ವಿದ್ಯಾರ್ಥಿಯಾಗಿದ್ದೇನೆ. ನನ್ನೊಂದಿಗೆ ಆರೋಪಿ ರಾಜೇಶ್ ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಕುರಿತು ಹೇಳಲು ಇಚ್ಛಿಸುತ್ತೇನೆ. ಆರೋಪಿ ರಾಜೇಶ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ನನಗೆ ಲೈಂಗಿಕ ಕಿರುಕುಳ ನೀಡಿದ್ದನು. ಹೀಗಾಗಿ ನಾನು ಆತನ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದೆ ಬಂದೆ. ಆದರೆ ಏಳು ದಿನವಾದರೂ ಆರೋಪಿಯನ್ನು ಬಂಧಿಸಿಲ್ಲ” ಎಂದು ಸಂತ್ರಸ್ತೆಯು ಆತಂಕ ವ್ಯಕ್ತಪಡಿಸಿದ್ದಾರೆ.
“ಆರೋಪಿಯು ಎಲ್ಲಿದ್ದಾನೆ ಎಂಬುದು ನಮಗೆ ತಿಳಿದುಬಂದಿಲ್ಲ. ನನ್ನ ಜೀವಕ್ಕೆ ಅಪಾಯವಿದೆ. ಬಾರ್ ಅಸೋಸಿಯೇಷನ್ ನನಗೆ ಸಹಾಯ ನೀಡಬೇಕು. ಎಲ್ಲರೂ ನನ್ನ ಹೋರಾಟಕ್ಕೆ ಸಹಕಾರ ನೀಡಬೇಕು” ಎಂದು ಸಂತ್ರಸ್ತೆ ಕೋರಿಕೊಂಡಿದ್ದಾರೆ.
#Sexualharassment complaint filed a week ago.#Mangalore police yet to arrest the accused. Victim reaches out to media as the accused is a #seniorlawyer #KSNRajesh. Victim says she has received life threats. Cops confide accused is influential and connected to ruling dispensation. pic.twitter.com/w5885c8uBZ
— Imran Khan (@KeypadGuerilla) October 25, 2021
“ಜಗತ್ತಿನ ಯಾವುದೇ ಮೂಲೆಯಲ್ಲಿರುವ ಹೆಣ್ಣು ಮಗಳು ಈ ರೀತಿಯ ಶೋಷಣೆಯನ್ನು ಎದುರಿಸುತ್ತಿದ್ದಾಳೆ. ಆದರೆ ಇದರ ವಿರುದ್ಧ ಧ್ವನಿ ಎತ್ತಿ ಮುಂದೆ ಬರಬೇಕಿದೆ. ಕಾನೂನು ಎಲ್ಲ ಹೆಣ್ಣು ಮಕ್ಕಳಿಗೂ ಒಂದೇ ಆಗಿದೆ. ನಿಮಗೆ ನ್ಯಾಯ ದೊರಕುತ್ತದೆ ಎಂದು ನಾನು ಖಾತ್ರಿಪಡಿಸುವೆ” ಎಂದು ಶೋಷಿತ ಮಹಿಳೆಯರಿಗೆ ಸಂತ್ರಸ್ತೆ ಧೈರ್ಯ ತುಂಬಿದ್ದಾರೆ.
“ನನಗಾಗಿರುವ ಅನ್ಯಾಯದ ವಿರುದ್ಧ ನನಗೆ ಗೆಲುವು ಸಿಗಬೇಕೆಂದು ನಾನು ಬಯಸುತ್ತೇನೆ. ಆತ ತಪ್ಪನ್ನು ಮಾಡಿದ್ದಾನೆ. ಈ ರೀತಿ ಯಾರೊಂದಿಗೆ ನಡೆದುಕೊಳ್ಳಲು ಆತನಿಗೆ ಹಕ್ಕು ಇಲ್ಲ. ಕಾನೂನು ಆತನಿಗೆ ಗೊತ್ತಿದೆ ಎಂದ ಮಾತ್ರಕ್ಕೆ ಅದರೊಂದಿಗೆ ಆಟವಾಡಲು ಸಾಧ್ಯವಿಲ್ಲ. ನನ್ನನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮುಂದೆ ಬರುವ ನಿರ್ಧರಿಸಿದೆ. ಎಲ್ಲರೂ ನನ್ನ ಹೋರಾಟಕ್ಕೆ ಬೆಂಬಲಿಸಬೇಕು” ಎಂದು ಕೋರುತ್ತೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಸಂತ್ರಸ್ತೆಯು ಮಾಧ್ಯಮದೊಂದಿಗೆ ಮಾತನಾಡಿರುವುದನ್ನು ಪತ್ರಕರ್ತ ಇರ್ಮಾನ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ: ಉತ್ತರ ಪ್ರದೇಶ: ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ, ಇಬ್ಬರ ಬಂಧನ