Homeಮುಖಪುಟಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

ಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

- Advertisement -
- Advertisement -

ಚಳಿಗಾಲದ ಮಂಜಿನ ತೆಳು ಹೊದಿಕೆಯನ್ನು ಬೇಧಿಸಿ ಬರುತ್ತಿರುವ ಮುಂಜಾವಿನ ಹೊಂಗಿರಣಗಳು, ಸುತ್ತಲೂ ಹಬ್ಬಿದ ವನರಾಶಿ, ಅದಕ್ಕೆ ಹೊಂದಿಕೊಂಡೇ ಇರುವಂತಹ ಹೊಲಗದ್ದೆಗಳಲ್ಲಿ ಕಟಾವಿಗೆ ಸಿದ್ಧವಾಗಿ ತೊನೆಯುತ್ತಿರುವ ಪೈರು. ಈ ದೃಶ್ಯವು ಪ್ರಕೃತಿ ಆರಾಧಕರಿಗೆ ಸ್ವರ್ಗ ಸದೃಶವಾಗಿ ಕಾಣಿಸಿದರೆ, ಕಾಡಂಚಿನ ಹಳ್ಳಿಗರಿಗೆ ಬೆಳೆದ ಪೈರು ಕಾಡುಪ್ರಾಣಿಗಳಿಗೆ ಸಿಕ್ಕು ಹಾಳಾಗುವುದೋ ಅಥವಾ ಅವರ ಕೈಗೆ ಹತ್ತುವುದೋ ಎಂಬ ಚಿಂತೆ ಮೂಡಿಸುತ್ತದೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಇದು ಆವಾಸದ ಛಿದ್ರೀಕರಣದಂತೆ ತೋರಬಹುದು ಮತ್ತು ಗಣಿಗಾರಿಕೆ ಹಾಗು ಅರಣ್ಯದ ಮೇಲೆ ಅವಲಂಬಿತವಾದ ಮತ್ತಿತರ ಕೈಗಾರಿಕೆಗಳ ವಾರಸುದಾರರಿಗೆ ಇದು ಮುಂದಿನ ಯೋಜನಾ ಪ್ರದೇಶದ ವಿಸ್ತರಣೆಯ ಅವಕಾಶದಂತೆ ಕಾಣಬಹುದು. ಭಾರತದ ಅರಣ್ಯ ಮತ್ತು ವನ್ಯಜೀವಿಗಳು ಇಷ್ಟೆಲ್ಲ ವಿರೋಧಾಭಾಸಗಳ ನಡುವೆ ಸಿಲುಕಿಕೊಂಡು ತಮ್ಮ ಮುಂದಿನ ದಿನಗಳನ್ನು ಎದುರು ನೋಡುತ್ತಿವೆ ಎಂದು ನಾವು ಕಲ್ಪಿಸಿಕೊಂಡರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ. ಇಷ್ಟೆಲ್ಲಾ ವಿಷಯಗಳನ್ನು ಹೇಳಲು ಕಾರಣ ಇತ್ತೀಚಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಶೇರ್‌ನಿ ಎಂಬ ಚಿತ್ರವೇ ಕಾರಣ. ಒಟ್ಟಾರೆಯಾಗಿ ವನ್ಯಜೀವಿ ಸಂರಕ್ಷಣೆಯ ಸವಾಲುಗಳ ಕುರಿತು ಕೊಂಚವಾದರೂ ಬೆಳಕು ಚೆಲ್ಲಲು ಈ ಚಿತ್ರ ಯಶಸ್ವಿಯಾಗಿದೆ ಎಂದರೆ ತಪ್ಪಲ್ಲ.

ಮೊದಲು ಜಾಹೀರಾತಿನಲ್ಲಿ ಈ ಚಿತ್ರದ ಹೆಸರು ಕೇಳಿದಾಗ ಇದು ದುರುಳರನ್ನು ಮಟ್ಟಹಾಕುವ ಚಿತ್ರದ ನಾಯಕಿಗೆ ಅನ್ವರ್ಥಕವಾಗಿ ’ಶೇರ್‌ನಿ’ ಎಂದು ಹೆಸರಿಸಲಾಗಿದೆಯೇ ಎಂಬ ಸಂದೇಹ ಮೂಡಿತ್ತು. ಆದರೆ ಕೆಲ ಸ್ನೇಹಿತರ ಕಿರು ವಿಮರ್ಶೆ ಮತ್ತು ಶಿಫಾರಸ್ಸಿನ ಅನ್ವಯ ಈ ಚಿತ್ರವನ್ನು ನೋಡಿದ ಮೇಲೆ ಇದು ಒಬ್ಬ ಅರಣ್ಯ ಅಧಿಕಾರಿಯ ದೃಷ್ಟಿಕೋನದಲ್ಲಿ ಮಧ್ಯ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾನವ ಮತ್ತು ಹುಲಿ ಸಂಘರ್ಷದ ಕತೆ ಎಂದು ತಿಳಿಯಿತು. ಚಿತ್ರಕಥೆ ಸುಮಾರು ಎರಡು ಮೂರು ವರ್ಷದ ಹಿಂದೆ ಬದುಕಿದ್ದ ಅವನಿ ಎಂಬ ಹೆಣ್ಣು ಹುಲಿಯ ಕಥೆಯ ಮೇಲೆ ಆಧಾರಿತವಾಗಿದೆ. ಅವನಿ ಹುಲಿಯ ಪ್ರಸಂಗವು ಮಾನವ ವನ್ಯಜೀವಿ ಸಂಘರ್ಷವನ್ನು ಆಯಾ ಹಿನ್ನೆಲೆಯ ಜನರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಹೇಗೆ ನೋಡುತ್ತಾರೆ ಎಂಬುದನ್ನು ವಿಶದವಾಗಿ ಬಿಡಿಸಿಟ್ಟಿತ್ತು.

ನಗರದ ಹಿನ್ನೆಲೆಯ ಜನ ಹುಲಿಯ ಹತ್ಯೆಯನ್ನು ತುಂಬಾ ಭಾವನಾತ್ಮಕವಾಗಿ ಪರಿಗಣಿಸಿ ಸರಣಿ ಪ್ರತಿಭಟನೆ, ಪ್ರದರ್ಶನ ಮಾಡಿ ತಮ್ಮ ಸಿಟ್ಟನ್ನು ತೋರ್ಪಡಿಸಿದರು. ಆದರೆ ಹುಲಿಯಿಂದ ತೊಂದರೆಗೆ ಈಡಾಗಿ ಜನ-ಜಾನುವಾರುಗಳನ್ನು ಕಳೆದುಕೊಂಡ ಹಳ್ಳಿಗರು ಸಮಾಧಾನದ ನಿಟ್ಟುಸಿರುಬಿಟ್ಟರು. ಆದರೆ ಒಂದಂತೂ ಸತ್ಯ, ಯಾವುದೇ ಹುಲಿಯು ನರಭಕ್ಷಕನಾಗಿ ಪರಿವರ್ತನೆಯಾದರೆ ಅದರ ಭವಿಷ್ಯ ಅಲ್ಲಿಯೇ ಮುಗಿದಂತೆ. ಒಂದೋ ಅದು ಗುಂಡಿಗೆ ಬಲಿಯಾಗಬೇಕು ಇಲ್ಲವೇ ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿ ಬಂಧಿಯಾಗಬೇಕು. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ವಿಮರ್ಶೆ ಮಾಡುವ ಮೊದಲು, ಕಾಡಂಚಿನ ಜನರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ನಾವು ಪರಿಗಣಿಸಲೇಬೇಕು. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಎಂಬ ತಂತಿಯ ಮೇಲಿನ ನಡಿಗೆಗೆ ಜನರ ಬೆಂಬಲ ಬೇಕೇಬೇಕು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಿಸಿಯನ್ನು ಅನುಭವಿಸುವ ಜನರ ಹಿತಾಸಕ್ತಿಯನ್ನು ಪರಿಗಣಿಸುವುಧು ಅತೀಮುಖ್ಯ.

ಇನ್ನು ಚಿತ್ರದ ವಿಷಯಕ್ಕೆ ಬರುವುದಾದರೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಬಂದಂತಹ ಚಿತ್ರಗಳಲ್ಲಿ ಈ ಚಿತ್ರ ಸತ್ಯಕ್ಕೆ ಅತ್ಯಂತ ಹತ್ತಿರವಾದದ್ದು. ಚಿತ್ರದ ನಿರ್ದೇಶಕರು ಮೂಲಭೂತ ವಿಷಯಗಳ ಕುರಿತು ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ ಎಂದೆನಿಸುತ್ತದೆ. ಅವರು ಕಥೆ ಹೇಳಲು ಆರಿಸಿಕೊಂಡ ಪ್ರದೇಶ ಅದಕ್ಕೆ ಸಾಕ್ಷಿ. ಮಧ್ಯಭಾರತದ ಹಳ್ಳಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷ ನೈಜವಾಗಿಯೇ ಮೂಡಿಬಂದಿವೆ. ವನ್ಯಜೀವಿ ಸಂಘರ್ಷದ ಕಷ್ಟ ಅನುಭವಿಸುವ ಹಳ್ಳಿಗರು, ಅವರ ತಕ್ಷಣದ ಆಕ್ರೋಶಕ್ಕೆ ತುತ್ತಾಗುವ ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಮತ್ತು ಈ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸ್ಥಳೀಯ ನಾಯಕರು ಇವೆಲ್ಲವುಗಳೂ ವಸ್ತುಸ್ಥಿತಿಗಳೆ ಆಗಿವೆ. ಅಷ್ಟೇ ಅಲ್ಲದೆ ಪ್ರಸ್ತುತ ಅರಣ್ಯಗಳಿಗೆ ಒದಗಿದೆ ತೊಂದರೆಗಳಾದ ಆವಾಸದ ಛಿದ್ರೀಕರಣ, ಅರಣ್ಯದ ನಡುವೆ ಗಣಿಗಾರಿಕೆ ಮತ್ತು ಹೆದ್ದಾರಿಗಳ ಕುರಿತು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಬಹುಶಃ ನಿಜವಾದ ಅರಣ್ಯ ಇಲಾಖೆಯ ನೌಕರರೇ ಇದರಲ್ಲಿ ನಟಿಸಿದ್ದಾರೋ ಏನೋ! ಹೊಸ ಪೀಳಿಗೆಯ ಸುಶಿಕ್ಷಿತ ಸಿಬ್ಬಂದಿಯನ್ನು ನಾವಿಲ್ಲಿ ನೋಡಬಹುದು ಮತ್ತು ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸಿನಿಮಾ ಶಕ್ತವಾಗಿ ಹಿಡಿದಿಟ್ಟಿದೆ. ಅಷ್ಟೇ ಅಲ್ಲದೆ ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಆಸಕ್ತ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಇಲಾಖೆಯ ಮನಸೋ ಇಚ್ಛೆ ಗಿಡ ನೆಡುವ ಯೋಜನೆಗಳು, ಇವೆಲ್ಲ ನಿರ್ದೇಶಕರಿಗೆ ವಿಷಯದ ಕುರಿತು ಇರುವ ಜ್ಞಾನವನ್ನು ತೋರಿಸುತ್ತದೆ.

ಆದರೆ ಇಲ್ಲಿ ಅವನಿ ಹುಲಿಯ ಪ್ರಕರಣದಲ್ಲಿ ಆದಂತೆಯೇ ಚಿತ್ರಕಥೆಯನ್ನೂ ಭಾವನಾತ್ಮಕ ಹಿನ್ನೆಲೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬಹುಶಃ ಅದು ಅವರ ಉದ್ದೇಶವೂ ಆಗಿರಬಹುದು ಇಲ್ಲವೇ ಒಂದು ಚಿತ್ರವನ್ನು ನಿರ್ಮಿಸಲು ಇರಬಹುದಾದ ಸೃಜನಶೀಲತೆಯ ಕಟ್ಟಳೆಗಳೂ ಇರಬಹುದು. ಅಷ್ಟೇ ಡಾಕ್ಯುಮೆಂಟರಿ ರೀತಿಯ ವಿಷಯದ ಒಂದು ಕತೆಯನ್ನು ಹೆಚ್ಚು ಜನರಿಗೆ ತಲುಪಿಸುವ ಬಗೆಯೂ ಅದು ಇರಬಹುದು!

ಒಟ್ಟಾರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಕೋನದಿಂದ ನೋಡಬೇಕಾದರೆ ಒಂದು ಹುಲಿಯ ಉಳಿವಿಗಿಂತ ಒಂದು ಪ್ರದೇಶದಲ್ಲಿ ಹುಲಿಯ ಆವಾಸವನ್ನು ಬಹುಕಾಲದವರೆಗೆ ಹೇಗೆ ಉಳಿಸಬೇಕು ಮತ್ತು ಹುಲಿ ಮತ್ತಿತರ ವನ್ಯಜೀವಿಗಳು ತಮ್ಮ ನೈಸರ್ಗಿಕ ಆವಾಸದಲ್ಲಿ ತಮ್ಮ ಸಂತತಿಯನ್ನು ಮುಂದುವರೆಸಿಕೊಂಡು ಹೋಗಲು ಹೇಗೆ ಅನುವು ಮಾಡಿಕೊಡುತ್ತೇವೆ ಎಂಬ ಚರ್ಚೆ ಹೆಚ್ಚು ಮುಖ್ಯವಾಗುತ್ತದೆ. ಚಿತ್ರದ ಕೊನೆಯಲ್ಲಿ ಹುಲಿ ಮರಿಗಳ ಉಳಿವು ಹೊಸ ಭರವಸೆಯನ್ನು ತಂದುಕೊಟ್ಟಂತೆ ಕಂಡರೂ ಅವು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂದು ಕೇಳಿಕೊಂಡರೆ ಉತ್ತರ ಬಹುತೇಕ ನಿರಾಶಾದಾಯಕವಾಗಿಯೇ ಇರುತ್ತದೆ. ಚಿತ್ರದ ನಾಯಕಿ ಅನುಭವಿಸುವ ಹತಾಶೆ, ಮೇಲಧಿಕಾರಿಗಳ ಅಸಹಕಾರ ಕೆಲಮಟ್ಟಿಗೆ ನಿಜವೇ ಆದರೂ ಮಾನವ ವನ್ಯಜೀವಿ ಸಂಘರ್ಷ, ಅದರ ಸುತ್ತ ಹುಟ್ಟಿಕೊಳ್ಳುವ ರಾಜಕೀಯ ಮತ್ತು ನಿಜವಾದ ಸಂತ್ರಸ್ತರ ಮತ್ತು ಕೆಳ ಹಂತದ ಸಿಬ್ಬಂದಿಯ ಕಷ್ಟ ಕಾರ್ಪಣ್ಯ, ನೋವು ಇವೆಲ್ಲವೂ ಒಂದೇ ದಿನದಲ್ಲಿ ಮುಗಿಯುವ ಸಮಸ್ಯೆಗಳಂತೂ ಅಲ್ಲವೇ ಅಲ್ಲ. ನಾಯಕನಟಿಯ ದೃಷ್ಟಿಯಿಂದ ಒಂದು ಹುಲಿಯ ಉಳಿವನ್ನು ಅತಿಮುಖ್ಯ ವಿಚಾರವೆಂಬಂತೆ ತೋರಿಸಿದ್ದರೂ ಅದರ ಸುತ್ತ ಹರಡಿಕೊಂಡಿರುವ ವಿಚಾರಗಳು ಇನ್ನೂ ಗಹನ ಮತ್ತು ಸಂಕೀರ್ಣ.

ಕೆಲವು ಕುಂದುಕೊರತೆಗಳ ಹೊರತಾಗಿಯೂ ’ಶೇರ್‌ನಿ’ ಉತ್ತಮ ಪ್ರಯತ್ನವೇ ಆಗಿದೆ. ವನ್ಯಜೀವಿಗಳ ಮತ್ತು ಅವುಗಳ ಸಂರಕ್ಷಣೆಯ ಕುರಿತು ಜನಸಾಮಾನ್ಯರಿಗೆ ಇರುವ ತಿಳಿವು ತುಂಬಾ ಸೀಮಿತವಾದದ್ದು. ಕಾಡಂಚಿನ ಜನರ, ಅರಣ್ಯ ಇಲಾಖೆಯ ತಳಮಟ್ಟದ ನೌಕರರ ಸವಾಲುಗಳು ಮತ್ತು ಬವಣೆಗಳು ಸಾಮಾನ್ಯರಿಗೆ ಅಪರಿಚಿತವೇ. ಅದನ್ನು ಸ್ವಲ್ಪವಾದರೂ ಮನದಟ್ಟು ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಜನಸಾಮಾನ್ಯರನ್ನು ಅರಣ್ಯದ ಸಮಸ್ಯೆಗಳ ಬಗ್ಗೆ ಚಿಂತನೆಗೆ ಹಚ್ಚುವಂತಾದರೇ ಈ ಸಿನಿಮಾ ಸಾರ್ಥಕವೇ!

ಹಾಗೇಯೇ ಕುತೂಹಲಕ್ಕಾಗಿ ಈ ಚಿತ್ರದ ಕುರಿತು ಜನರ ಅಭಿಪ್ರಾಯ ಏನು ಎಂದು ತಿಳಿಯಲು ಒಮ್ಮೆ ಜಾಲತಾಣವನ್ನು ಇಣುಕಿದಾಗ ’ಇದೊಂದು ತುಂಬಾ ನಿಧಾನವಾಗಿ ಸಾಗುವ ಚಿತ್ರ, ನೀರಸವಾದದ್ದು, ಡಾಕ್ಯುಮೆಂಟರಿ ಶೈಲಿಯಲ್ಲಿದೆ’ ಎಂಬಿತ್ಯಾದಿ ಕಮೆಂಟುಗಳೇ ಇದ್ದವು. ಆದರೆ ಖ್ಯಾತ ನಿರ್ದೇಶಕ ಗೊದಾರ್ದ್ ಒಂದು ಸಿನಿಮಾ ಅತ್ಯುತ್ತಮವಾಗುವುದು ಅದು ಡಾಕ್ಯುಮೆಂಟರಿಗೆ ಹತ್ತಿರವಾದಾಗ ಎನ್ನುತ್ತಾನೆ! ಆ ನಿಟ್ಟಿನಲ್ಲಿ, ಅರಣ್ಯದ ಕುರಿತು ಸ್ವಲ್ಪವಾದರೂ ಆಸಕ್ತಿಯಿದ್ದರೆ ಈ ಚಿತ್ರ ನಿಮಗೆ ಖಂಡಿತ ನಿರಾಸೆಯನ್ನಂತೂ ಮಾಡುವುದಿಲ್ಲ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...