Homeಮುಖಪುಟಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

ಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

- Advertisement -
- Advertisement -

ಚಳಿಗಾಲದ ಮಂಜಿನ ತೆಳು ಹೊದಿಕೆಯನ್ನು ಬೇಧಿಸಿ ಬರುತ್ತಿರುವ ಮುಂಜಾವಿನ ಹೊಂಗಿರಣಗಳು, ಸುತ್ತಲೂ ಹಬ್ಬಿದ ವನರಾಶಿ, ಅದಕ್ಕೆ ಹೊಂದಿಕೊಂಡೇ ಇರುವಂತಹ ಹೊಲಗದ್ದೆಗಳಲ್ಲಿ ಕಟಾವಿಗೆ ಸಿದ್ಧವಾಗಿ ತೊನೆಯುತ್ತಿರುವ ಪೈರು. ಈ ದೃಶ್ಯವು ಪ್ರಕೃತಿ ಆರಾಧಕರಿಗೆ ಸ್ವರ್ಗ ಸದೃಶವಾಗಿ ಕಾಣಿಸಿದರೆ, ಕಾಡಂಚಿನ ಹಳ್ಳಿಗರಿಗೆ ಬೆಳೆದ ಪೈರು ಕಾಡುಪ್ರಾಣಿಗಳಿಗೆ ಸಿಕ್ಕು ಹಾಳಾಗುವುದೋ ಅಥವಾ ಅವರ ಕೈಗೆ ಹತ್ತುವುದೋ ಎಂಬ ಚಿಂತೆ ಮೂಡಿಸುತ್ತದೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಇದು ಆವಾಸದ ಛಿದ್ರೀಕರಣದಂತೆ ತೋರಬಹುದು ಮತ್ತು ಗಣಿಗಾರಿಕೆ ಹಾಗು ಅರಣ್ಯದ ಮೇಲೆ ಅವಲಂಬಿತವಾದ ಮತ್ತಿತರ ಕೈಗಾರಿಕೆಗಳ ವಾರಸುದಾರರಿಗೆ ಇದು ಮುಂದಿನ ಯೋಜನಾ ಪ್ರದೇಶದ ವಿಸ್ತರಣೆಯ ಅವಕಾಶದಂತೆ ಕಾಣಬಹುದು. ಭಾರತದ ಅರಣ್ಯ ಮತ್ತು ವನ್ಯಜೀವಿಗಳು ಇಷ್ಟೆಲ್ಲ ವಿರೋಧಾಭಾಸಗಳ ನಡುವೆ ಸಿಲುಕಿಕೊಂಡು ತಮ್ಮ ಮುಂದಿನ ದಿನಗಳನ್ನು ಎದುರು ನೋಡುತ್ತಿವೆ ಎಂದು ನಾವು ಕಲ್ಪಿಸಿಕೊಂಡರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ. ಇಷ್ಟೆಲ್ಲಾ ವಿಷಯಗಳನ್ನು ಹೇಳಲು ಕಾರಣ ಇತ್ತೀಚಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಶೇರ್‌ನಿ ಎಂಬ ಚಿತ್ರವೇ ಕಾರಣ. ಒಟ್ಟಾರೆಯಾಗಿ ವನ್ಯಜೀವಿ ಸಂರಕ್ಷಣೆಯ ಸವಾಲುಗಳ ಕುರಿತು ಕೊಂಚವಾದರೂ ಬೆಳಕು ಚೆಲ್ಲಲು ಈ ಚಿತ್ರ ಯಶಸ್ವಿಯಾಗಿದೆ ಎಂದರೆ ತಪ್ಪಲ್ಲ.

ಮೊದಲು ಜಾಹೀರಾತಿನಲ್ಲಿ ಈ ಚಿತ್ರದ ಹೆಸರು ಕೇಳಿದಾಗ ಇದು ದುರುಳರನ್ನು ಮಟ್ಟಹಾಕುವ ಚಿತ್ರದ ನಾಯಕಿಗೆ ಅನ್ವರ್ಥಕವಾಗಿ ’ಶೇರ್‌ನಿ’ ಎಂದು ಹೆಸರಿಸಲಾಗಿದೆಯೇ ಎಂಬ ಸಂದೇಹ ಮೂಡಿತ್ತು. ಆದರೆ ಕೆಲ ಸ್ನೇಹಿತರ ಕಿರು ವಿಮರ್ಶೆ ಮತ್ತು ಶಿಫಾರಸ್ಸಿನ ಅನ್ವಯ ಈ ಚಿತ್ರವನ್ನು ನೋಡಿದ ಮೇಲೆ ಇದು ಒಬ್ಬ ಅರಣ್ಯ ಅಧಿಕಾರಿಯ ದೃಷ್ಟಿಕೋನದಲ್ಲಿ ಮಧ್ಯ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾನವ ಮತ್ತು ಹುಲಿ ಸಂಘರ್ಷದ ಕತೆ ಎಂದು ತಿಳಿಯಿತು. ಚಿತ್ರಕಥೆ ಸುಮಾರು ಎರಡು ಮೂರು ವರ್ಷದ ಹಿಂದೆ ಬದುಕಿದ್ದ ಅವನಿ ಎಂಬ ಹೆಣ್ಣು ಹುಲಿಯ ಕಥೆಯ ಮೇಲೆ ಆಧಾರಿತವಾಗಿದೆ. ಅವನಿ ಹುಲಿಯ ಪ್ರಸಂಗವು ಮಾನವ ವನ್ಯಜೀವಿ ಸಂಘರ್ಷವನ್ನು ಆಯಾ ಹಿನ್ನೆಲೆಯ ಜನರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಹೇಗೆ ನೋಡುತ್ತಾರೆ ಎಂಬುದನ್ನು ವಿಶದವಾಗಿ ಬಿಡಿಸಿಟ್ಟಿತ್ತು.

ನಗರದ ಹಿನ್ನೆಲೆಯ ಜನ ಹುಲಿಯ ಹತ್ಯೆಯನ್ನು ತುಂಬಾ ಭಾವನಾತ್ಮಕವಾಗಿ ಪರಿಗಣಿಸಿ ಸರಣಿ ಪ್ರತಿಭಟನೆ, ಪ್ರದರ್ಶನ ಮಾಡಿ ತಮ್ಮ ಸಿಟ್ಟನ್ನು ತೋರ್ಪಡಿಸಿದರು. ಆದರೆ ಹುಲಿಯಿಂದ ತೊಂದರೆಗೆ ಈಡಾಗಿ ಜನ-ಜಾನುವಾರುಗಳನ್ನು ಕಳೆದುಕೊಂಡ ಹಳ್ಳಿಗರು ಸಮಾಧಾನದ ನಿಟ್ಟುಸಿರುಬಿಟ್ಟರು. ಆದರೆ ಒಂದಂತೂ ಸತ್ಯ, ಯಾವುದೇ ಹುಲಿಯು ನರಭಕ್ಷಕನಾಗಿ ಪರಿವರ್ತನೆಯಾದರೆ ಅದರ ಭವಿಷ್ಯ ಅಲ್ಲಿಯೇ ಮುಗಿದಂತೆ. ಒಂದೋ ಅದು ಗುಂಡಿಗೆ ಬಲಿಯಾಗಬೇಕು ಇಲ್ಲವೇ ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿ ಬಂಧಿಯಾಗಬೇಕು. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ವಿಮರ್ಶೆ ಮಾಡುವ ಮೊದಲು, ಕಾಡಂಚಿನ ಜನರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ನಾವು ಪರಿಗಣಿಸಲೇಬೇಕು. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಎಂಬ ತಂತಿಯ ಮೇಲಿನ ನಡಿಗೆಗೆ ಜನರ ಬೆಂಬಲ ಬೇಕೇಬೇಕು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಿಸಿಯನ್ನು ಅನುಭವಿಸುವ ಜನರ ಹಿತಾಸಕ್ತಿಯನ್ನು ಪರಿಗಣಿಸುವುಧು ಅತೀಮುಖ್ಯ.

ಇನ್ನು ಚಿತ್ರದ ವಿಷಯಕ್ಕೆ ಬರುವುದಾದರೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಬಂದಂತಹ ಚಿತ್ರಗಳಲ್ಲಿ ಈ ಚಿತ್ರ ಸತ್ಯಕ್ಕೆ ಅತ್ಯಂತ ಹತ್ತಿರವಾದದ್ದು. ಚಿತ್ರದ ನಿರ್ದೇಶಕರು ಮೂಲಭೂತ ವಿಷಯಗಳ ಕುರಿತು ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ ಎಂದೆನಿಸುತ್ತದೆ. ಅವರು ಕಥೆ ಹೇಳಲು ಆರಿಸಿಕೊಂಡ ಪ್ರದೇಶ ಅದಕ್ಕೆ ಸಾಕ್ಷಿ. ಮಧ್ಯಭಾರತದ ಹಳ್ಳಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷ ನೈಜವಾಗಿಯೇ ಮೂಡಿಬಂದಿವೆ. ವನ್ಯಜೀವಿ ಸಂಘರ್ಷದ ಕಷ್ಟ ಅನುಭವಿಸುವ ಹಳ್ಳಿಗರು, ಅವರ ತಕ್ಷಣದ ಆಕ್ರೋಶಕ್ಕೆ ತುತ್ತಾಗುವ ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಮತ್ತು ಈ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸ್ಥಳೀಯ ನಾಯಕರು ಇವೆಲ್ಲವುಗಳೂ ವಸ್ತುಸ್ಥಿತಿಗಳೆ ಆಗಿವೆ. ಅಷ್ಟೇ ಅಲ್ಲದೆ ಪ್ರಸ್ತುತ ಅರಣ್ಯಗಳಿಗೆ ಒದಗಿದೆ ತೊಂದರೆಗಳಾದ ಆವಾಸದ ಛಿದ್ರೀಕರಣ, ಅರಣ್ಯದ ನಡುವೆ ಗಣಿಗಾರಿಕೆ ಮತ್ತು ಹೆದ್ದಾರಿಗಳ ಕುರಿತು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಬಹುಶಃ ನಿಜವಾದ ಅರಣ್ಯ ಇಲಾಖೆಯ ನೌಕರರೇ ಇದರಲ್ಲಿ ನಟಿಸಿದ್ದಾರೋ ಏನೋ! ಹೊಸ ಪೀಳಿಗೆಯ ಸುಶಿಕ್ಷಿತ ಸಿಬ್ಬಂದಿಯನ್ನು ನಾವಿಲ್ಲಿ ನೋಡಬಹುದು ಮತ್ತು ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸಿನಿಮಾ ಶಕ್ತವಾಗಿ ಹಿಡಿದಿಟ್ಟಿದೆ. ಅಷ್ಟೇ ಅಲ್ಲದೆ ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಆಸಕ್ತ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಇಲಾಖೆಯ ಮನಸೋ ಇಚ್ಛೆ ಗಿಡ ನೆಡುವ ಯೋಜನೆಗಳು, ಇವೆಲ್ಲ ನಿರ್ದೇಶಕರಿಗೆ ವಿಷಯದ ಕುರಿತು ಇರುವ ಜ್ಞಾನವನ್ನು ತೋರಿಸುತ್ತದೆ.

ಆದರೆ ಇಲ್ಲಿ ಅವನಿ ಹುಲಿಯ ಪ್ರಕರಣದಲ್ಲಿ ಆದಂತೆಯೇ ಚಿತ್ರಕಥೆಯನ್ನೂ ಭಾವನಾತ್ಮಕ ಹಿನ್ನೆಲೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬಹುಶಃ ಅದು ಅವರ ಉದ್ದೇಶವೂ ಆಗಿರಬಹುದು ಇಲ್ಲವೇ ಒಂದು ಚಿತ್ರವನ್ನು ನಿರ್ಮಿಸಲು ಇರಬಹುದಾದ ಸೃಜನಶೀಲತೆಯ ಕಟ್ಟಳೆಗಳೂ ಇರಬಹುದು. ಅಷ್ಟೇ ಡಾಕ್ಯುಮೆಂಟರಿ ರೀತಿಯ ವಿಷಯದ ಒಂದು ಕತೆಯನ್ನು ಹೆಚ್ಚು ಜನರಿಗೆ ತಲುಪಿಸುವ ಬಗೆಯೂ ಅದು ಇರಬಹುದು!

ಒಟ್ಟಾರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಕೋನದಿಂದ ನೋಡಬೇಕಾದರೆ ಒಂದು ಹುಲಿಯ ಉಳಿವಿಗಿಂತ ಒಂದು ಪ್ರದೇಶದಲ್ಲಿ ಹುಲಿಯ ಆವಾಸವನ್ನು ಬಹುಕಾಲದವರೆಗೆ ಹೇಗೆ ಉಳಿಸಬೇಕು ಮತ್ತು ಹುಲಿ ಮತ್ತಿತರ ವನ್ಯಜೀವಿಗಳು ತಮ್ಮ ನೈಸರ್ಗಿಕ ಆವಾಸದಲ್ಲಿ ತಮ್ಮ ಸಂತತಿಯನ್ನು ಮುಂದುವರೆಸಿಕೊಂಡು ಹೋಗಲು ಹೇಗೆ ಅನುವು ಮಾಡಿಕೊಡುತ್ತೇವೆ ಎಂಬ ಚರ್ಚೆ ಹೆಚ್ಚು ಮುಖ್ಯವಾಗುತ್ತದೆ. ಚಿತ್ರದ ಕೊನೆಯಲ್ಲಿ ಹುಲಿ ಮರಿಗಳ ಉಳಿವು ಹೊಸ ಭರವಸೆಯನ್ನು ತಂದುಕೊಟ್ಟಂತೆ ಕಂಡರೂ ಅವು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂದು ಕೇಳಿಕೊಂಡರೆ ಉತ್ತರ ಬಹುತೇಕ ನಿರಾಶಾದಾಯಕವಾಗಿಯೇ ಇರುತ್ತದೆ. ಚಿತ್ರದ ನಾಯಕಿ ಅನುಭವಿಸುವ ಹತಾಶೆ, ಮೇಲಧಿಕಾರಿಗಳ ಅಸಹಕಾರ ಕೆಲಮಟ್ಟಿಗೆ ನಿಜವೇ ಆದರೂ ಮಾನವ ವನ್ಯಜೀವಿ ಸಂಘರ್ಷ, ಅದರ ಸುತ್ತ ಹುಟ್ಟಿಕೊಳ್ಳುವ ರಾಜಕೀಯ ಮತ್ತು ನಿಜವಾದ ಸಂತ್ರಸ್ತರ ಮತ್ತು ಕೆಳ ಹಂತದ ಸಿಬ್ಬಂದಿಯ ಕಷ್ಟ ಕಾರ್ಪಣ್ಯ, ನೋವು ಇವೆಲ್ಲವೂ ಒಂದೇ ದಿನದಲ್ಲಿ ಮುಗಿಯುವ ಸಮಸ್ಯೆಗಳಂತೂ ಅಲ್ಲವೇ ಅಲ್ಲ. ನಾಯಕನಟಿಯ ದೃಷ್ಟಿಯಿಂದ ಒಂದು ಹುಲಿಯ ಉಳಿವನ್ನು ಅತಿಮುಖ್ಯ ವಿಚಾರವೆಂಬಂತೆ ತೋರಿಸಿದ್ದರೂ ಅದರ ಸುತ್ತ ಹರಡಿಕೊಂಡಿರುವ ವಿಚಾರಗಳು ಇನ್ನೂ ಗಹನ ಮತ್ತು ಸಂಕೀರ್ಣ.

ಕೆಲವು ಕುಂದುಕೊರತೆಗಳ ಹೊರತಾಗಿಯೂ ’ಶೇರ್‌ನಿ’ ಉತ್ತಮ ಪ್ರಯತ್ನವೇ ಆಗಿದೆ. ವನ್ಯಜೀವಿಗಳ ಮತ್ತು ಅವುಗಳ ಸಂರಕ್ಷಣೆಯ ಕುರಿತು ಜನಸಾಮಾನ್ಯರಿಗೆ ಇರುವ ತಿಳಿವು ತುಂಬಾ ಸೀಮಿತವಾದದ್ದು. ಕಾಡಂಚಿನ ಜನರ, ಅರಣ್ಯ ಇಲಾಖೆಯ ತಳಮಟ್ಟದ ನೌಕರರ ಸವಾಲುಗಳು ಮತ್ತು ಬವಣೆಗಳು ಸಾಮಾನ್ಯರಿಗೆ ಅಪರಿಚಿತವೇ. ಅದನ್ನು ಸ್ವಲ್ಪವಾದರೂ ಮನದಟ್ಟು ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಜನಸಾಮಾನ್ಯರನ್ನು ಅರಣ್ಯದ ಸಮಸ್ಯೆಗಳ ಬಗ್ಗೆ ಚಿಂತನೆಗೆ ಹಚ್ಚುವಂತಾದರೇ ಈ ಸಿನಿಮಾ ಸಾರ್ಥಕವೇ!

ಹಾಗೇಯೇ ಕುತೂಹಲಕ್ಕಾಗಿ ಈ ಚಿತ್ರದ ಕುರಿತು ಜನರ ಅಭಿಪ್ರಾಯ ಏನು ಎಂದು ತಿಳಿಯಲು ಒಮ್ಮೆ ಜಾಲತಾಣವನ್ನು ಇಣುಕಿದಾಗ ’ಇದೊಂದು ತುಂಬಾ ನಿಧಾನವಾಗಿ ಸಾಗುವ ಚಿತ್ರ, ನೀರಸವಾದದ್ದು, ಡಾಕ್ಯುಮೆಂಟರಿ ಶೈಲಿಯಲ್ಲಿದೆ’ ಎಂಬಿತ್ಯಾದಿ ಕಮೆಂಟುಗಳೇ ಇದ್ದವು. ಆದರೆ ಖ್ಯಾತ ನಿರ್ದೇಶಕ ಗೊದಾರ್ದ್ ಒಂದು ಸಿನಿಮಾ ಅತ್ಯುತ್ತಮವಾಗುವುದು ಅದು ಡಾಕ್ಯುಮೆಂಟರಿಗೆ ಹತ್ತಿರವಾದಾಗ ಎನ್ನುತ್ತಾನೆ! ಆ ನಿಟ್ಟಿನಲ್ಲಿ, ಅರಣ್ಯದ ಕುರಿತು ಸ್ವಲ್ಪವಾದರೂ ಆಸಕ್ತಿಯಿದ್ದರೆ ಈ ಚಿತ್ರ ನಿಮಗೆ ಖಂಡಿತ ನಿರಾಸೆಯನ್ನಂತೂ ಮಾಡುವುದಿಲ್ಲ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...