Homeಮುಖಪುಟಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

ಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

- Advertisement -
- Advertisement -

ಚಳಿಗಾಲದ ಮಂಜಿನ ತೆಳು ಹೊದಿಕೆಯನ್ನು ಬೇಧಿಸಿ ಬರುತ್ತಿರುವ ಮುಂಜಾವಿನ ಹೊಂಗಿರಣಗಳು, ಸುತ್ತಲೂ ಹಬ್ಬಿದ ವನರಾಶಿ, ಅದಕ್ಕೆ ಹೊಂದಿಕೊಂಡೇ ಇರುವಂತಹ ಹೊಲಗದ್ದೆಗಳಲ್ಲಿ ಕಟಾವಿಗೆ ಸಿದ್ಧವಾಗಿ ತೊನೆಯುತ್ತಿರುವ ಪೈರು. ಈ ದೃಶ್ಯವು ಪ್ರಕೃತಿ ಆರಾಧಕರಿಗೆ ಸ್ವರ್ಗ ಸದೃಶವಾಗಿ ಕಾಣಿಸಿದರೆ, ಕಾಡಂಚಿನ ಹಳ್ಳಿಗರಿಗೆ ಬೆಳೆದ ಪೈರು ಕಾಡುಪ್ರಾಣಿಗಳಿಗೆ ಸಿಕ್ಕು ಹಾಳಾಗುವುದೋ ಅಥವಾ ಅವರ ಕೈಗೆ ಹತ್ತುವುದೋ ಎಂಬ ಚಿಂತೆ ಮೂಡಿಸುತ್ತದೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಇದು ಆವಾಸದ ಛಿದ್ರೀಕರಣದಂತೆ ತೋರಬಹುದು ಮತ್ತು ಗಣಿಗಾರಿಕೆ ಹಾಗು ಅರಣ್ಯದ ಮೇಲೆ ಅವಲಂಬಿತವಾದ ಮತ್ತಿತರ ಕೈಗಾರಿಕೆಗಳ ವಾರಸುದಾರರಿಗೆ ಇದು ಮುಂದಿನ ಯೋಜನಾ ಪ್ರದೇಶದ ವಿಸ್ತರಣೆಯ ಅವಕಾಶದಂತೆ ಕಾಣಬಹುದು. ಭಾರತದ ಅರಣ್ಯ ಮತ್ತು ವನ್ಯಜೀವಿಗಳು ಇಷ್ಟೆಲ್ಲ ವಿರೋಧಾಭಾಸಗಳ ನಡುವೆ ಸಿಲುಕಿಕೊಂಡು ತಮ್ಮ ಮುಂದಿನ ದಿನಗಳನ್ನು ಎದುರು ನೋಡುತ್ತಿವೆ ಎಂದು ನಾವು ಕಲ್ಪಿಸಿಕೊಂಡರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ. ಇಷ್ಟೆಲ್ಲಾ ವಿಷಯಗಳನ್ನು ಹೇಳಲು ಕಾರಣ ಇತ್ತೀಚಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಶೇರ್‌ನಿ ಎಂಬ ಚಿತ್ರವೇ ಕಾರಣ. ಒಟ್ಟಾರೆಯಾಗಿ ವನ್ಯಜೀವಿ ಸಂರಕ್ಷಣೆಯ ಸವಾಲುಗಳ ಕುರಿತು ಕೊಂಚವಾದರೂ ಬೆಳಕು ಚೆಲ್ಲಲು ಈ ಚಿತ್ರ ಯಶಸ್ವಿಯಾಗಿದೆ ಎಂದರೆ ತಪ್ಪಲ್ಲ.

ಮೊದಲು ಜಾಹೀರಾತಿನಲ್ಲಿ ಈ ಚಿತ್ರದ ಹೆಸರು ಕೇಳಿದಾಗ ಇದು ದುರುಳರನ್ನು ಮಟ್ಟಹಾಕುವ ಚಿತ್ರದ ನಾಯಕಿಗೆ ಅನ್ವರ್ಥಕವಾಗಿ ’ಶೇರ್‌ನಿ’ ಎಂದು ಹೆಸರಿಸಲಾಗಿದೆಯೇ ಎಂಬ ಸಂದೇಹ ಮೂಡಿತ್ತು. ಆದರೆ ಕೆಲ ಸ್ನೇಹಿತರ ಕಿರು ವಿಮರ್ಶೆ ಮತ್ತು ಶಿಫಾರಸ್ಸಿನ ಅನ್ವಯ ಈ ಚಿತ್ರವನ್ನು ನೋಡಿದ ಮೇಲೆ ಇದು ಒಬ್ಬ ಅರಣ್ಯ ಅಧಿಕಾರಿಯ ದೃಷ್ಟಿಕೋನದಲ್ಲಿ ಮಧ್ಯ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾನವ ಮತ್ತು ಹುಲಿ ಸಂಘರ್ಷದ ಕತೆ ಎಂದು ತಿಳಿಯಿತು. ಚಿತ್ರಕಥೆ ಸುಮಾರು ಎರಡು ಮೂರು ವರ್ಷದ ಹಿಂದೆ ಬದುಕಿದ್ದ ಅವನಿ ಎಂಬ ಹೆಣ್ಣು ಹುಲಿಯ ಕಥೆಯ ಮೇಲೆ ಆಧಾರಿತವಾಗಿದೆ. ಅವನಿ ಹುಲಿಯ ಪ್ರಸಂಗವು ಮಾನವ ವನ್ಯಜೀವಿ ಸಂಘರ್ಷವನ್ನು ಆಯಾ ಹಿನ್ನೆಲೆಯ ಜನರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಹೇಗೆ ನೋಡುತ್ತಾರೆ ಎಂಬುದನ್ನು ವಿಶದವಾಗಿ ಬಿಡಿಸಿಟ್ಟಿತ್ತು.

ನಗರದ ಹಿನ್ನೆಲೆಯ ಜನ ಹುಲಿಯ ಹತ್ಯೆಯನ್ನು ತುಂಬಾ ಭಾವನಾತ್ಮಕವಾಗಿ ಪರಿಗಣಿಸಿ ಸರಣಿ ಪ್ರತಿಭಟನೆ, ಪ್ರದರ್ಶನ ಮಾಡಿ ತಮ್ಮ ಸಿಟ್ಟನ್ನು ತೋರ್ಪಡಿಸಿದರು. ಆದರೆ ಹುಲಿಯಿಂದ ತೊಂದರೆಗೆ ಈಡಾಗಿ ಜನ-ಜಾನುವಾರುಗಳನ್ನು ಕಳೆದುಕೊಂಡ ಹಳ್ಳಿಗರು ಸಮಾಧಾನದ ನಿಟ್ಟುಸಿರುಬಿಟ್ಟರು. ಆದರೆ ಒಂದಂತೂ ಸತ್ಯ, ಯಾವುದೇ ಹುಲಿಯು ನರಭಕ್ಷಕನಾಗಿ ಪರಿವರ್ತನೆಯಾದರೆ ಅದರ ಭವಿಷ್ಯ ಅಲ್ಲಿಯೇ ಮುಗಿದಂತೆ. ಒಂದೋ ಅದು ಗುಂಡಿಗೆ ಬಲಿಯಾಗಬೇಕು ಇಲ್ಲವೇ ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿ ಬಂಧಿಯಾಗಬೇಕು. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ವಿಮರ್ಶೆ ಮಾಡುವ ಮೊದಲು, ಕಾಡಂಚಿನ ಜನರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ನಾವು ಪರಿಗಣಿಸಲೇಬೇಕು. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಎಂಬ ತಂತಿಯ ಮೇಲಿನ ನಡಿಗೆಗೆ ಜನರ ಬೆಂಬಲ ಬೇಕೇಬೇಕು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಿಸಿಯನ್ನು ಅನುಭವಿಸುವ ಜನರ ಹಿತಾಸಕ್ತಿಯನ್ನು ಪರಿಗಣಿಸುವುಧು ಅತೀಮುಖ್ಯ.

ಇನ್ನು ಚಿತ್ರದ ವಿಷಯಕ್ಕೆ ಬರುವುದಾದರೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಬಂದಂತಹ ಚಿತ್ರಗಳಲ್ಲಿ ಈ ಚಿತ್ರ ಸತ್ಯಕ್ಕೆ ಅತ್ಯಂತ ಹತ್ತಿರವಾದದ್ದು. ಚಿತ್ರದ ನಿರ್ದೇಶಕರು ಮೂಲಭೂತ ವಿಷಯಗಳ ಕುರಿತು ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ ಎಂದೆನಿಸುತ್ತದೆ. ಅವರು ಕಥೆ ಹೇಳಲು ಆರಿಸಿಕೊಂಡ ಪ್ರದೇಶ ಅದಕ್ಕೆ ಸಾಕ್ಷಿ. ಮಧ್ಯಭಾರತದ ಹಳ್ಳಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷ ನೈಜವಾಗಿಯೇ ಮೂಡಿಬಂದಿವೆ. ವನ್ಯಜೀವಿ ಸಂಘರ್ಷದ ಕಷ್ಟ ಅನುಭವಿಸುವ ಹಳ್ಳಿಗರು, ಅವರ ತಕ್ಷಣದ ಆಕ್ರೋಶಕ್ಕೆ ತುತ್ತಾಗುವ ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಮತ್ತು ಈ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸ್ಥಳೀಯ ನಾಯಕರು ಇವೆಲ್ಲವುಗಳೂ ವಸ್ತುಸ್ಥಿತಿಗಳೆ ಆಗಿವೆ. ಅಷ್ಟೇ ಅಲ್ಲದೆ ಪ್ರಸ್ತುತ ಅರಣ್ಯಗಳಿಗೆ ಒದಗಿದೆ ತೊಂದರೆಗಳಾದ ಆವಾಸದ ಛಿದ್ರೀಕರಣ, ಅರಣ್ಯದ ನಡುವೆ ಗಣಿಗಾರಿಕೆ ಮತ್ತು ಹೆದ್ದಾರಿಗಳ ಕುರಿತು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಬಹುಶಃ ನಿಜವಾದ ಅರಣ್ಯ ಇಲಾಖೆಯ ನೌಕರರೇ ಇದರಲ್ಲಿ ನಟಿಸಿದ್ದಾರೋ ಏನೋ! ಹೊಸ ಪೀಳಿಗೆಯ ಸುಶಿಕ್ಷಿತ ಸಿಬ್ಬಂದಿಯನ್ನು ನಾವಿಲ್ಲಿ ನೋಡಬಹುದು ಮತ್ತು ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸಿನಿಮಾ ಶಕ್ತವಾಗಿ ಹಿಡಿದಿಟ್ಟಿದೆ. ಅಷ್ಟೇ ಅಲ್ಲದೆ ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಆಸಕ್ತ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಇಲಾಖೆಯ ಮನಸೋ ಇಚ್ಛೆ ಗಿಡ ನೆಡುವ ಯೋಜನೆಗಳು, ಇವೆಲ್ಲ ನಿರ್ದೇಶಕರಿಗೆ ವಿಷಯದ ಕುರಿತು ಇರುವ ಜ್ಞಾನವನ್ನು ತೋರಿಸುತ್ತದೆ.

ಆದರೆ ಇಲ್ಲಿ ಅವನಿ ಹುಲಿಯ ಪ್ರಕರಣದಲ್ಲಿ ಆದಂತೆಯೇ ಚಿತ್ರಕಥೆಯನ್ನೂ ಭಾವನಾತ್ಮಕ ಹಿನ್ನೆಲೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬಹುಶಃ ಅದು ಅವರ ಉದ್ದೇಶವೂ ಆಗಿರಬಹುದು ಇಲ್ಲವೇ ಒಂದು ಚಿತ್ರವನ್ನು ನಿರ್ಮಿಸಲು ಇರಬಹುದಾದ ಸೃಜನಶೀಲತೆಯ ಕಟ್ಟಳೆಗಳೂ ಇರಬಹುದು. ಅಷ್ಟೇ ಡಾಕ್ಯುಮೆಂಟರಿ ರೀತಿಯ ವಿಷಯದ ಒಂದು ಕತೆಯನ್ನು ಹೆಚ್ಚು ಜನರಿಗೆ ತಲುಪಿಸುವ ಬಗೆಯೂ ಅದು ಇರಬಹುದು!

ಒಟ್ಟಾರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಕೋನದಿಂದ ನೋಡಬೇಕಾದರೆ ಒಂದು ಹುಲಿಯ ಉಳಿವಿಗಿಂತ ಒಂದು ಪ್ರದೇಶದಲ್ಲಿ ಹುಲಿಯ ಆವಾಸವನ್ನು ಬಹುಕಾಲದವರೆಗೆ ಹೇಗೆ ಉಳಿಸಬೇಕು ಮತ್ತು ಹುಲಿ ಮತ್ತಿತರ ವನ್ಯಜೀವಿಗಳು ತಮ್ಮ ನೈಸರ್ಗಿಕ ಆವಾಸದಲ್ಲಿ ತಮ್ಮ ಸಂತತಿಯನ್ನು ಮುಂದುವರೆಸಿಕೊಂಡು ಹೋಗಲು ಹೇಗೆ ಅನುವು ಮಾಡಿಕೊಡುತ್ತೇವೆ ಎಂಬ ಚರ್ಚೆ ಹೆಚ್ಚು ಮುಖ್ಯವಾಗುತ್ತದೆ. ಚಿತ್ರದ ಕೊನೆಯಲ್ಲಿ ಹುಲಿ ಮರಿಗಳ ಉಳಿವು ಹೊಸ ಭರವಸೆಯನ್ನು ತಂದುಕೊಟ್ಟಂತೆ ಕಂಡರೂ ಅವು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂದು ಕೇಳಿಕೊಂಡರೆ ಉತ್ತರ ಬಹುತೇಕ ನಿರಾಶಾದಾಯಕವಾಗಿಯೇ ಇರುತ್ತದೆ. ಚಿತ್ರದ ನಾಯಕಿ ಅನುಭವಿಸುವ ಹತಾಶೆ, ಮೇಲಧಿಕಾರಿಗಳ ಅಸಹಕಾರ ಕೆಲಮಟ್ಟಿಗೆ ನಿಜವೇ ಆದರೂ ಮಾನವ ವನ್ಯಜೀವಿ ಸಂಘರ್ಷ, ಅದರ ಸುತ್ತ ಹುಟ್ಟಿಕೊಳ್ಳುವ ರಾಜಕೀಯ ಮತ್ತು ನಿಜವಾದ ಸಂತ್ರಸ್ತರ ಮತ್ತು ಕೆಳ ಹಂತದ ಸಿಬ್ಬಂದಿಯ ಕಷ್ಟ ಕಾರ್ಪಣ್ಯ, ನೋವು ಇವೆಲ್ಲವೂ ಒಂದೇ ದಿನದಲ್ಲಿ ಮುಗಿಯುವ ಸಮಸ್ಯೆಗಳಂತೂ ಅಲ್ಲವೇ ಅಲ್ಲ. ನಾಯಕನಟಿಯ ದೃಷ್ಟಿಯಿಂದ ಒಂದು ಹುಲಿಯ ಉಳಿವನ್ನು ಅತಿಮುಖ್ಯ ವಿಚಾರವೆಂಬಂತೆ ತೋರಿಸಿದ್ದರೂ ಅದರ ಸುತ್ತ ಹರಡಿಕೊಂಡಿರುವ ವಿಚಾರಗಳು ಇನ್ನೂ ಗಹನ ಮತ್ತು ಸಂಕೀರ್ಣ.

ಕೆಲವು ಕುಂದುಕೊರತೆಗಳ ಹೊರತಾಗಿಯೂ ’ಶೇರ್‌ನಿ’ ಉತ್ತಮ ಪ್ರಯತ್ನವೇ ಆಗಿದೆ. ವನ್ಯಜೀವಿಗಳ ಮತ್ತು ಅವುಗಳ ಸಂರಕ್ಷಣೆಯ ಕುರಿತು ಜನಸಾಮಾನ್ಯರಿಗೆ ಇರುವ ತಿಳಿವು ತುಂಬಾ ಸೀಮಿತವಾದದ್ದು. ಕಾಡಂಚಿನ ಜನರ, ಅರಣ್ಯ ಇಲಾಖೆಯ ತಳಮಟ್ಟದ ನೌಕರರ ಸವಾಲುಗಳು ಮತ್ತು ಬವಣೆಗಳು ಸಾಮಾನ್ಯರಿಗೆ ಅಪರಿಚಿತವೇ. ಅದನ್ನು ಸ್ವಲ್ಪವಾದರೂ ಮನದಟ್ಟು ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಜನಸಾಮಾನ್ಯರನ್ನು ಅರಣ್ಯದ ಸಮಸ್ಯೆಗಳ ಬಗ್ಗೆ ಚಿಂತನೆಗೆ ಹಚ್ಚುವಂತಾದರೇ ಈ ಸಿನಿಮಾ ಸಾರ್ಥಕವೇ!

ಹಾಗೇಯೇ ಕುತೂಹಲಕ್ಕಾಗಿ ಈ ಚಿತ್ರದ ಕುರಿತು ಜನರ ಅಭಿಪ್ರಾಯ ಏನು ಎಂದು ತಿಳಿಯಲು ಒಮ್ಮೆ ಜಾಲತಾಣವನ್ನು ಇಣುಕಿದಾಗ ’ಇದೊಂದು ತುಂಬಾ ನಿಧಾನವಾಗಿ ಸಾಗುವ ಚಿತ್ರ, ನೀರಸವಾದದ್ದು, ಡಾಕ್ಯುಮೆಂಟರಿ ಶೈಲಿಯಲ್ಲಿದೆ’ ಎಂಬಿತ್ಯಾದಿ ಕಮೆಂಟುಗಳೇ ಇದ್ದವು. ಆದರೆ ಖ್ಯಾತ ನಿರ್ದೇಶಕ ಗೊದಾರ್ದ್ ಒಂದು ಸಿನಿಮಾ ಅತ್ಯುತ್ತಮವಾಗುವುದು ಅದು ಡಾಕ್ಯುಮೆಂಟರಿಗೆ ಹತ್ತಿರವಾದಾಗ ಎನ್ನುತ್ತಾನೆ! ಆ ನಿಟ್ಟಿನಲ್ಲಿ, ಅರಣ್ಯದ ಕುರಿತು ಸ್ವಲ್ಪವಾದರೂ ಆಸಕ್ತಿಯಿದ್ದರೆ ಈ ಚಿತ್ರ ನಿಮಗೆ ಖಂಡಿತ ನಿರಾಸೆಯನ್ನಂತೂ ಮಾಡುವುದಿಲ್ಲ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...