Homeಮುಖಪುಟಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

ಅವನಿ-ಶೇರ್‌ನಿ; ಸಿನಿಮಾ ಮೂಲಕ ವನ್ಯಜೀವಿ-ಮನುಷ್ಯ ಸಂಘರ್ಷದ ಹಲವು ಆಯಾಮಗಳು

- Advertisement -
- Advertisement -

ಚಳಿಗಾಲದ ಮಂಜಿನ ತೆಳು ಹೊದಿಕೆಯನ್ನು ಬೇಧಿಸಿ ಬರುತ್ತಿರುವ ಮುಂಜಾವಿನ ಹೊಂಗಿರಣಗಳು, ಸುತ್ತಲೂ ಹಬ್ಬಿದ ವನರಾಶಿ, ಅದಕ್ಕೆ ಹೊಂದಿಕೊಂಡೇ ಇರುವಂತಹ ಹೊಲಗದ್ದೆಗಳಲ್ಲಿ ಕಟಾವಿಗೆ ಸಿದ್ಧವಾಗಿ ತೊನೆಯುತ್ತಿರುವ ಪೈರು. ಈ ದೃಶ್ಯವು ಪ್ರಕೃತಿ ಆರಾಧಕರಿಗೆ ಸ್ವರ್ಗ ಸದೃಶವಾಗಿ ಕಾಣಿಸಿದರೆ, ಕಾಡಂಚಿನ ಹಳ್ಳಿಗರಿಗೆ ಬೆಳೆದ ಪೈರು ಕಾಡುಪ್ರಾಣಿಗಳಿಗೆ ಸಿಕ್ಕು ಹಾಳಾಗುವುದೋ ಅಥವಾ ಅವರ ಕೈಗೆ ಹತ್ತುವುದೋ ಎಂಬ ಚಿಂತೆ ಮೂಡಿಸುತ್ತದೆ. ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಿಗೆ ಇದು ಆವಾಸದ ಛಿದ್ರೀಕರಣದಂತೆ ತೋರಬಹುದು ಮತ್ತು ಗಣಿಗಾರಿಕೆ ಹಾಗು ಅರಣ್ಯದ ಮೇಲೆ ಅವಲಂಬಿತವಾದ ಮತ್ತಿತರ ಕೈಗಾರಿಕೆಗಳ ವಾರಸುದಾರರಿಗೆ ಇದು ಮುಂದಿನ ಯೋಜನಾ ಪ್ರದೇಶದ ವಿಸ್ತರಣೆಯ ಅವಕಾಶದಂತೆ ಕಾಣಬಹುದು. ಭಾರತದ ಅರಣ್ಯ ಮತ್ತು ವನ್ಯಜೀವಿಗಳು ಇಷ್ಟೆಲ್ಲ ವಿರೋಧಾಭಾಸಗಳ ನಡುವೆ ಸಿಲುಕಿಕೊಂಡು ತಮ್ಮ ಮುಂದಿನ ದಿನಗಳನ್ನು ಎದುರು ನೋಡುತ್ತಿವೆ ಎಂದು ನಾವು ಕಲ್ಪಿಸಿಕೊಂಡರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ. ಇಷ್ಟೆಲ್ಲಾ ವಿಷಯಗಳನ್ನು ಹೇಳಲು ಕಾರಣ ಇತ್ತೀಚಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಶೇರ್‌ನಿ ಎಂಬ ಚಿತ್ರವೇ ಕಾರಣ. ಒಟ್ಟಾರೆಯಾಗಿ ವನ್ಯಜೀವಿ ಸಂರಕ್ಷಣೆಯ ಸವಾಲುಗಳ ಕುರಿತು ಕೊಂಚವಾದರೂ ಬೆಳಕು ಚೆಲ್ಲಲು ಈ ಚಿತ್ರ ಯಶಸ್ವಿಯಾಗಿದೆ ಎಂದರೆ ತಪ್ಪಲ್ಲ.

ಮೊದಲು ಜಾಹೀರಾತಿನಲ್ಲಿ ಈ ಚಿತ್ರದ ಹೆಸರು ಕೇಳಿದಾಗ ಇದು ದುರುಳರನ್ನು ಮಟ್ಟಹಾಕುವ ಚಿತ್ರದ ನಾಯಕಿಗೆ ಅನ್ವರ್ಥಕವಾಗಿ ’ಶೇರ್‌ನಿ’ ಎಂದು ಹೆಸರಿಸಲಾಗಿದೆಯೇ ಎಂಬ ಸಂದೇಹ ಮೂಡಿತ್ತು. ಆದರೆ ಕೆಲ ಸ್ನೇಹಿತರ ಕಿರು ವಿಮರ್ಶೆ ಮತ್ತು ಶಿಫಾರಸ್ಸಿನ ಅನ್ವಯ ಈ ಚಿತ್ರವನ್ನು ನೋಡಿದ ಮೇಲೆ ಇದು ಒಬ್ಬ ಅರಣ್ಯ ಅಧಿಕಾರಿಯ ದೃಷ್ಟಿಕೋನದಲ್ಲಿ ಮಧ್ಯ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮಾನವ ಮತ್ತು ಹುಲಿ ಸಂಘರ್ಷದ ಕತೆ ಎಂದು ತಿಳಿಯಿತು. ಚಿತ್ರಕಥೆ ಸುಮಾರು ಎರಡು ಮೂರು ವರ್ಷದ ಹಿಂದೆ ಬದುಕಿದ್ದ ಅವನಿ ಎಂಬ ಹೆಣ್ಣು ಹುಲಿಯ ಕಥೆಯ ಮೇಲೆ ಆಧಾರಿತವಾಗಿದೆ. ಅವನಿ ಹುಲಿಯ ಪ್ರಸಂಗವು ಮಾನವ ವನ್ಯಜೀವಿ ಸಂಘರ್ಷವನ್ನು ಆಯಾ ಹಿನ್ನೆಲೆಯ ಜನರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಹೇಗೆ ನೋಡುತ್ತಾರೆ ಎಂಬುದನ್ನು ವಿಶದವಾಗಿ ಬಿಡಿಸಿಟ್ಟಿತ್ತು.

ನಗರದ ಹಿನ್ನೆಲೆಯ ಜನ ಹುಲಿಯ ಹತ್ಯೆಯನ್ನು ತುಂಬಾ ಭಾವನಾತ್ಮಕವಾಗಿ ಪರಿಗಣಿಸಿ ಸರಣಿ ಪ್ರತಿಭಟನೆ, ಪ್ರದರ್ಶನ ಮಾಡಿ ತಮ್ಮ ಸಿಟ್ಟನ್ನು ತೋರ್ಪಡಿಸಿದರು. ಆದರೆ ಹುಲಿಯಿಂದ ತೊಂದರೆಗೆ ಈಡಾಗಿ ಜನ-ಜಾನುವಾರುಗಳನ್ನು ಕಳೆದುಕೊಂಡ ಹಳ್ಳಿಗರು ಸಮಾಧಾನದ ನಿಟ್ಟುಸಿರುಬಿಟ್ಟರು. ಆದರೆ ಒಂದಂತೂ ಸತ್ಯ, ಯಾವುದೇ ಹುಲಿಯು ನರಭಕ್ಷಕನಾಗಿ ಪರಿವರ್ತನೆಯಾದರೆ ಅದರ ಭವಿಷ್ಯ ಅಲ್ಲಿಯೇ ಮುಗಿದಂತೆ. ಒಂದೋ ಅದು ಗುಂಡಿಗೆ ಬಲಿಯಾಗಬೇಕು ಇಲ್ಲವೇ ಜೀವನಪರ್ಯಂತ ಪ್ರಾಣಿ ಸಂಗ್ರಹಾಲಯದಲ್ಲಿ ಬಂಧಿಯಾಗಬೇಕು. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ವಿಮರ್ಶೆ ಮಾಡುವ ಮೊದಲು, ಕಾಡಂಚಿನ ಜನರ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ನಾವು ಪರಿಗಣಿಸಲೇಬೇಕು. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಎಂಬ ತಂತಿಯ ಮೇಲಿನ ನಡಿಗೆಗೆ ಜನರ ಬೆಂಬಲ ಬೇಕೇಬೇಕು ಮತ್ತು ಮಾನವ ವನ್ಯಜೀವಿ ಸಂಘರ್ಷದ ಬಿಸಿಯನ್ನು ಅನುಭವಿಸುವ ಜನರ ಹಿತಾಸಕ್ತಿಯನ್ನು ಪರಿಗಣಿಸುವುಧು ಅತೀಮುಖ್ಯ.

ಇನ್ನು ಚಿತ್ರದ ವಿಷಯಕ್ಕೆ ಬರುವುದಾದರೆ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಬಂದಂತಹ ಚಿತ್ರಗಳಲ್ಲಿ ಈ ಚಿತ್ರ ಸತ್ಯಕ್ಕೆ ಅತ್ಯಂತ ಹತ್ತಿರವಾದದ್ದು. ಚಿತ್ರದ ನಿರ್ದೇಶಕರು ಮೂಲಭೂತ ವಿಷಯಗಳ ಕುರಿತು ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ ಎಂದೆನಿಸುತ್ತದೆ. ಅವರು ಕಥೆ ಹೇಳಲು ಆರಿಸಿಕೊಂಡ ಪ್ರದೇಶ ಅದಕ್ಕೆ ಸಾಕ್ಷಿ. ಮಧ್ಯಭಾರತದ ಹಳ್ಳಿಗಳು ಮತ್ತು ಮಾನವ ವನ್ಯಜೀವಿ ಸಂಘರ್ಷ ನೈಜವಾಗಿಯೇ ಮೂಡಿಬಂದಿವೆ. ವನ್ಯಜೀವಿ ಸಂಘರ್ಷದ ಕಷ್ಟ ಅನುಭವಿಸುವ ಹಳ್ಳಿಗರು, ಅವರ ತಕ್ಷಣದ ಆಕ್ರೋಶಕ್ಕೆ ತುತ್ತಾಗುವ ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಮತ್ತು ಈ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸ್ಥಳೀಯ ನಾಯಕರು ಇವೆಲ್ಲವುಗಳೂ ವಸ್ತುಸ್ಥಿತಿಗಳೆ ಆಗಿವೆ. ಅಷ್ಟೇ ಅಲ್ಲದೆ ಪ್ರಸ್ತುತ ಅರಣ್ಯಗಳಿಗೆ ಒದಗಿದೆ ತೊಂದರೆಗಳಾದ ಆವಾಸದ ಛಿದ್ರೀಕರಣ, ಅರಣ್ಯದ ನಡುವೆ ಗಣಿಗಾರಿಕೆ ಮತ್ತು ಹೆದ್ದಾರಿಗಳ ಕುರಿತು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಬಹುಶಃ ನಿಜವಾದ ಅರಣ್ಯ ಇಲಾಖೆಯ ನೌಕರರೇ ಇದರಲ್ಲಿ ನಟಿಸಿದ್ದಾರೋ ಏನೋ! ಹೊಸ ಪೀಳಿಗೆಯ ಸುಶಿಕ್ಷಿತ ಸಿಬ್ಬಂದಿಯನ್ನು ನಾವಿಲ್ಲಿ ನೋಡಬಹುದು ಮತ್ತು ಇತ್ತೀಚಿಗೆ ಅರಣ್ಯ ಇಲಾಖೆಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸಿನಿಮಾ ಶಕ್ತವಾಗಿ ಹಿಡಿದಿಟ್ಟಿದೆ. ಅಷ್ಟೇ ಅಲ್ಲದೆ ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯ ಆಸಕ್ತ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ಇಲಾಖೆಯ ಮನಸೋ ಇಚ್ಛೆ ಗಿಡ ನೆಡುವ ಯೋಜನೆಗಳು, ಇವೆಲ್ಲ ನಿರ್ದೇಶಕರಿಗೆ ವಿಷಯದ ಕುರಿತು ಇರುವ ಜ್ಞಾನವನ್ನು ತೋರಿಸುತ್ತದೆ.

ಆದರೆ ಇಲ್ಲಿ ಅವನಿ ಹುಲಿಯ ಪ್ರಕರಣದಲ್ಲಿ ಆದಂತೆಯೇ ಚಿತ್ರಕಥೆಯನ್ನೂ ಭಾವನಾತ್ಮಕ ಹಿನ್ನೆಲೆಯಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬಹುಶಃ ಅದು ಅವರ ಉದ್ದೇಶವೂ ಆಗಿರಬಹುದು ಇಲ್ಲವೇ ಒಂದು ಚಿತ್ರವನ್ನು ನಿರ್ಮಿಸಲು ಇರಬಹುದಾದ ಸೃಜನಶೀಲತೆಯ ಕಟ್ಟಳೆಗಳೂ ಇರಬಹುದು. ಅಷ್ಟೇ ಡಾಕ್ಯುಮೆಂಟರಿ ರೀತಿಯ ವಿಷಯದ ಒಂದು ಕತೆಯನ್ನು ಹೆಚ್ಚು ಜನರಿಗೆ ತಲುಪಿಸುವ ಬಗೆಯೂ ಅದು ಇರಬಹುದು!

ಒಟ್ಟಾರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಕೋನದಿಂದ ನೋಡಬೇಕಾದರೆ ಒಂದು ಹುಲಿಯ ಉಳಿವಿಗಿಂತ ಒಂದು ಪ್ರದೇಶದಲ್ಲಿ ಹುಲಿಯ ಆವಾಸವನ್ನು ಬಹುಕಾಲದವರೆಗೆ ಹೇಗೆ ಉಳಿಸಬೇಕು ಮತ್ತು ಹುಲಿ ಮತ್ತಿತರ ವನ್ಯಜೀವಿಗಳು ತಮ್ಮ ನೈಸರ್ಗಿಕ ಆವಾಸದಲ್ಲಿ ತಮ್ಮ ಸಂತತಿಯನ್ನು ಮುಂದುವರೆಸಿಕೊಂಡು ಹೋಗಲು ಹೇಗೆ ಅನುವು ಮಾಡಿಕೊಡುತ್ತೇವೆ ಎಂಬ ಚರ್ಚೆ ಹೆಚ್ಚು ಮುಖ್ಯವಾಗುತ್ತದೆ. ಚಿತ್ರದ ಕೊನೆಯಲ್ಲಿ ಹುಲಿ ಮರಿಗಳ ಉಳಿವು ಹೊಸ ಭರವಸೆಯನ್ನು ತಂದುಕೊಟ್ಟಂತೆ ಕಂಡರೂ ಅವು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂದು ಕೇಳಿಕೊಂಡರೆ ಉತ್ತರ ಬಹುತೇಕ ನಿರಾಶಾದಾಯಕವಾಗಿಯೇ ಇರುತ್ತದೆ. ಚಿತ್ರದ ನಾಯಕಿ ಅನುಭವಿಸುವ ಹತಾಶೆ, ಮೇಲಧಿಕಾರಿಗಳ ಅಸಹಕಾರ ಕೆಲಮಟ್ಟಿಗೆ ನಿಜವೇ ಆದರೂ ಮಾನವ ವನ್ಯಜೀವಿ ಸಂಘರ್ಷ, ಅದರ ಸುತ್ತ ಹುಟ್ಟಿಕೊಳ್ಳುವ ರಾಜಕೀಯ ಮತ್ತು ನಿಜವಾದ ಸಂತ್ರಸ್ತರ ಮತ್ತು ಕೆಳ ಹಂತದ ಸಿಬ್ಬಂದಿಯ ಕಷ್ಟ ಕಾರ್ಪಣ್ಯ, ನೋವು ಇವೆಲ್ಲವೂ ಒಂದೇ ದಿನದಲ್ಲಿ ಮುಗಿಯುವ ಸಮಸ್ಯೆಗಳಂತೂ ಅಲ್ಲವೇ ಅಲ್ಲ. ನಾಯಕನಟಿಯ ದೃಷ್ಟಿಯಿಂದ ಒಂದು ಹುಲಿಯ ಉಳಿವನ್ನು ಅತಿಮುಖ್ಯ ವಿಚಾರವೆಂಬಂತೆ ತೋರಿಸಿದ್ದರೂ ಅದರ ಸುತ್ತ ಹರಡಿಕೊಂಡಿರುವ ವಿಚಾರಗಳು ಇನ್ನೂ ಗಹನ ಮತ್ತು ಸಂಕೀರ್ಣ.

ಕೆಲವು ಕುಂದುಕೊರತೆಗಳ ಹೊರತಾಗಿಯೂ ’ಶೇರ್‌ನಿ’ ಉತ್ತಮ ಪ್ರಯತ್ನವೇ ಆಗಿದೆ. ವನ್ಯಜೀವಿಗಳ ಮತ್ತು ಅವುಗಳ ಸಂರಕ್ಷಣೆಯ ಕುರಿತು ಜನಸಾಮಾನ್ಯರಿಗೆ ಇರುವ ತಿಳಿವು ತುಂಬಾ ಸೀಮಿತವಾದದ್ದು. ಕಾಡಂಚಿನ ಜನರ, ಅರಣ್ಯ ಇಲಾಖೆಯ ತಳಮಟ್ಟದ ನೌಕರರ ಸವಾಲುಗಳು ಮತ್ತು ಬವಣೆಗಳು ಸಾಮಾನ್ಯರಿಗೆ ಅಪರಿಚಿತವೇ. ಅದನ್ನು ಸ್ವಲ್ಪವಾದರೂ ಮನದಟ್ಟು ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಜನಸಾಮಾನ್ಯರನ್ನು ಅರಣ್ಯದ ಸಮಸ್ಯೆಗಳ ಬಗ್ಗೆ ಚಿಂತನೆಗೆ ಹಚ್ಚುವಂತಾದರೇ ಈ ಸಿನಿಮಾ ಸಾರ್ಥಕವೇ!

ಹಾಗೇಯೇ ಕುತೂಹಲಕ್ಕಾಗಿ ಈ ಚಿತ್ರದ ಕುರಿತು ಜನರ ಅಭಿಪ್ರಾಯ ಏನು ಎಂದು ತಿಳಿಯಲು ಒಮ್ಮೆ ಜಾಲತಾಣವನ್ನು ಇಣುಕಿದಾಗ ’ಇದೊಂದು ತುಂಬಾ ನಿಧಾನವಾಗಿ ಸಾಗುವ ಚಿತ್ರ, ನೀರಸವಾದದ್ದು, ಡಾಕ್ಯುಮೆಂಟರಿ ಶೈಲಿಯಲ್ಲಿದೆ’ ಎಂಬಿತ್ಯಾದಿ ಕಮೆಂಟುಗಳೇ ಇದ್ದವು. ಆದರೆ ಖ್ಯಾತ ನಿರ್ದೇಶಕ ಗೊದಾರ್ದ್ ಒಂದು ಸಿನಿಮಾ ಅತ್ಯುತ್ತಮವಾಗುವುದು ಅದು ಡಾಕ್ಯುಮೆಂಟರಿಗೆ ಹತ್ತಿರವಾದಾಗ ಎನ್ನುತ್ತಾನೆ! ಆ ನಿಟ್ಟಿನಲ್ಲಿ, ಅರಣ್ಯದ ಕುರಿತು ಸ್ವಲ್ಪವಾದರೂ ಆಸಕ್ತಿಯಿದ್ದರೆ ಈ ಚಿತ್ರ ನಿಮಗೆ ಖಂಡಿತ ನಿರಾಸೆಯನ್ನಂತೂ ಮಾಡುವುದಿಲ್ಲ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....