ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಯಲ್ಲಿ ಮದ್ಯ ಮತ್ತು ಮಾಂಸಾಹಾರದ ಮಳಿಗೆಗಳಿರುವುದನ್ನು ವಿರೋಧಿಸಿ ಬಲಪಂಥೀಯ ಗುಂಪುಗಳಾದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರು ಕಾರ್ಯಕ್ರಮ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ವರದಿಯಾಗಿದೆ.
ಭಜರಂಗದಳ ಮತ್ತು ವಿಎಚ್ಪಿ ಕಾರ್ಯಕರ್ತರು ಸಂಗೀತ ಕಚೇರಿಯ ಸ್ಥಳದಲ್ಲಿ ಮದ್ಯ ಮತ್ತು ಮಾಂಸಾಹಾರಿ ಮಳಿಗೆಗಳನ್ನು ಇಡದಂತೆ ಸಂಘಟಕರಿಗೆ ಎಚ್ಚರಿಕೆ ನೀಡಿದರು. ಇಂತಹ ವ್ಯವಸ್ಥೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಗುಂಪು ಆರೋಪಿಸಿದೆ.
ಸಂಗೀತ ಕಚೇರಿ ನಡೆಯುವ ಸ್ಥಳಕ್ಕೆ ಗುಂಪೊಂದು ತಲುಪಿ ತಮ್ಮ ಆಕ್ಷೇಪಣೆಗಳನ್ನು ಎತ್ತುತ್ತಿರುವ ಘಟನೆಯ ದೃಶ್ಯಾವಳಿಗಳು ಬಿತ್ತರವಾಗುತ್ತಿವೆ. ಮದ್ಯ ಮಾರಾಟದ ಟಿಕೆಟ್ ಕೌಂಟರ್ ಮತ್ತು ಕೆಎಫ್ಸಿ ಮಳಿಗೆಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.
ದೋಸಾಂಜ್ ಅವರ ಸಂಗೀತ ಕಚೇರಿಯನ್ನು ಇಂದು (ಭಾನುವಾರ) ಸಂಜೆ 7 ಗಂಟೆಗೆ ಇಂದೋರ್ನಲ್ಲಿ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಆದಾಗ್ಯೂ, ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಮರೇಂದ್ರ ಸಿಂಗ್ ಅವರು ಕಾರ್ಯಕ್ರಮಕ್ಕೆ ಇನ್ನೂ ಅನುಮತಿ ನೀಡಿಲ್ಲ ಮತ್ತು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
“ನಾವು ಸ್ಥಳವನ್ನು ಪರಿಶೀಲಿಸಿದ್ದೇವೆ. ಕೆಲವರು ಈ ಮಳಿಗೆಗಳನ್ನು ವಿರೋಧಿಸುತ್ತಿದ್ದಾರೆ. ನಾವು ಇನ್ನೂ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲವನ್ನೂ ಅರ್ಥಮಾಡಿಕೊಂಡ ನಂತರವೇ ನಾವು ಅನುಮತಿ ನೀಡುತ್ತೇವೆ. ನಾವು ಸಂಗೀತ ಕಚೇರಿಯ ಪ್ರದರ್ಶನದ ಷರತ್ತುಗಳನ್ನು ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ಡಿಸಿಪಿ ಸಿಂಗ್ ಹೇಳಿದರು.
ಸ್ಥಳದಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ಸಂಘಟಕರ ನಡುವೆ ಮಾತುಕತೆ ನಡೆಯುತ್ತಿದೆ. ದಿಲ್ಜಿತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಕಾರ್ಯಕ್ರಮವು ಮದ್ಯ ಸೇವನೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿ ಮದ್ಯ ಮಾರಾಟದ ವಿರುದ್ಧ ಕೆಲವು ಗುಂಪುಗಳಿಂದ ಆಕ್ಷೇಪಣೆಗಳಿಂದ ವಿವಾದಗಳನ್ನು ಎದುರಿಸುತ್ತಲೇ ಇದೆ.
ಇಂತಹ ವಿರೋಧದ ಪ್ರಥಮ ಘಟನೆಯು ಹೈದರಾಬಾದ್ನಲ್ಲಿ ಸಂಭವಿಸಿತ್ತು. ಅಲ್ಲಿ ಗಾಯಕನಿಗೆ ಮದ್ಯ ಉಲ್ಲೇಖಿಸುವ ಹಾಡುಗಳನ್ನು ಹಾಡದಂತೆ ನೋಟಿಸ್ ನೀಡಲಾಗಿತ್ತು. ಅವರು ತಮ್ಮ ಒಂದು ಹಾಡಿನಲ್ಲಿ “ಮದ್ಯ” ಪದವನ್ನು “ಕೋಕ್” ನೊಂದಿಗೆ ಬದಲಿಸುವ ಮೂಲಕ ಪ್ರತಿಕ್ರಿಯಿಸಿದ್ದರು.
ಪುಣೆಯಲ್ಲಿ, ಮಹಾರಾಷ್ಟ್ರದ ಅಬಕಾರಿ ಇಲಾಖೆಯು ಸ್ಥಳೀಯ ನಾಯಕರ ಆಕ್ಷೇಪದ ನಂತರ ಅವರ ಸಂಗೀತ ಕಚೇರಿಯಲ್ಲಿ ಮದ್ಯ ಪೂರೈಸುವ ಅನುಮತಿಯನ್ನು ರದ್ದುಗೊಳಿಸಿತ್ತು.
ಇದೇ ರೀತಿಯ ವಿರೋಧವು ಅಹಮದಾಬಾದ್ನಲ್ಲಿ ಉದ್ಭವಿಸಿತ್ತು. ಅಲ್ಲಿ ದೋಸಾಂಜ್ ಅವರು ಇಂತಹ ನಿರ್ಬಂಧಗಳ ಬಗ್ಗೆ ವ್ಯಂಗ್ಯವಾಡಿದ್ದರು. “ನಾವು ಶುಷ್ಕ ರಾಷ್ಟ್ರ ಚಳವಳಿಯನ್ನು ಪ್ರಾರಂಭಿಸೋಣ” ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್ ನಲ್ಲಿ ಸಂಗೀತ ಕಚೇರಿಯ ತುಣುಕನ್ನು ಹಂಚಿಕೊಂಡಿದ್ದರು. “ನೀವು ಯುವಕರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಮದ್ಯವನ್ನು ಸಂಪೂರ್ಣ ನಿಷೇಧವಲ್ಲದಿದ್ದರು, ಕೊನೆಪಕ್ಷ ನನ್ನ ಪ್ರದರ್ಶನದ ದಿನದಂದು ನಿಮ್ಮ ರಾಜ್ಯದಲ್ಲಿ ಮದ್ಯ ನಿಷೇಧ ಘೋಷಿಸಿ. ಆಗ ನಾನು ಯಾವುದೇ ಮದ್ಯ-ಸಂಬಂಧಿತ ಹಾಡುಗಳನ್ನು ಹಾಡುವುದನ್ನು ನಿಲ್ಲಿಸುತ್ತೇನೆ ಎಂದು ದೋಸಾಂಜ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ…ವಿಪಕ್ಷಗಳಿಂದ ಇವಿಎಂ ಟ್ಯಾಂಪರಿಂಗ್ ಆರೋಪ; ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಭುಗಿಲೆದ್ದ ಪ್ರತಿಭಟನೆ


