Homeಮುಖಪುಟಸುದ್ದಿ ವಾಹಿನಿಗಳಿಗೆ ನಿರ್ಬಂಧ : ಆಂಧ್ರದಲ್ಲಿ ಟಿಡಿಪಿ, ವೈಎಸ್‌ಆರ್‌ಸಿಪಿ ಮತ್ತು ಮಾಧ್ಯಮ ಸಮರ

ಸುದ್ದಿ ವಾಹಿನಿಗಳಿಗೆ ನಿರ್ಬಂಧ : ಆಂಧ್ರದಲ್ಲಿ ಟಿಡಿಪಿ, ವೈಎಸ್‌ಆರ್‌ಸಿಪಿ ಮತ್ತು ಮಾಧ್ಯಮ ಸಮರ

- Advertisement -
- Advertisement -

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಮೂರು ತೆಲುಗು ಸುದ್ದಿ ವಾಹಿನಿಗಳಾದ ‘ಎನ್‌ಟಿವಿ, ಟಿವಿ9 ಮತ್ತು ಸಾಕ್ಷಿ’ಯ ಪ್ರಸಾರ ಸ್ಥಗಿತಗೊಂಡಿತ್ತು. ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ರಾಜ್ಯದ ಪ್ರಮುಖ ಮೂರು ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಿದೆ ಎಂದು ಆರೋಪಿಸಲಾಗಿತ್ತು.

ಆದರೆ, ಟಿಡಿಪಿ ಚಾನೆಲ್ ನಿರ್ಬಂಧಿಸಿದ ಆರೋಪ ನಿರಾಕರಿಸಿತ್ತು. ಈ ಮೂರು ಚಾನೆಲ್‌ಗಳು ವೈಎಸ್‌ಆರ್‌ ಕಾಂಗ್ರೆಸ್ ಪರ ಇವೆ. ಹಾಗಾಗಿ, ಅವುಗಳ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಟೀಕಿಸಿತ್ತು.

‘ಸಾಕ್ಷಿ’ ಚಾನೆಲ್ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಒಡೆತನದಲ್ಲಿದೆ. ಪ್ರಸ್ತುತ ಜಗನ್ ಅವರ ಪತ್ನಿ ವೈಎಸ್ ಭಾರತಿ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಎನ್‌ಟಿವಿ ರಚನಾ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ (ಆರ್‌ಟಿಪಿಎಲ್‌) ಒಡೆತನದಲ್ಲಿದೆ. ಇದು ನರೇಂದ್ರ ಚೌಧರಿ ಅವರಿಗೆ ಸೇರಿದ್ದು. ಆಳಂದ ಮೀಡಿಯಾವು ಟಿವಿ9 ತೆಲುಗಿನಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಮೈ ಹೋಮ್ ಗ್ರೂಪ್‌ನ ಅಧ್ಯಕ್ಷ ಜೂಪಲ್ಲಿ ರಾಮೇಶ್ವರ ರಾವ್ ಅವರ ಒಡೆತನದಲ್ಲಿದೆ. ಈ ಮೂವರೂ ವೈಎಸ್‌ಆರ್‌ ಕಾಂಗ್ರೆಸ್‌ ಪರವಿದ್ದಾರೆ ಎಂಬ ಆರೋಪ ಟಿಡಿಪಿ ವಲಯದಲ್ಲಿದೆ.

ಎನ್‌ಟಿವಿ, ಟಿವಿ9 ತೆಲುಗು, 10ಟಿವಿ ಮತ್ತು ಸಾಕ್ಷಿ ಚಾನೆಲ್‌ಗಳನ್ನು ಜೂನ್ 6 ರಿಂದ ನಿರ್ಬಂಧಿಸಲಾಗಿತ್ತು. ದೆಹಲಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದಾಗಿ ಎಲ್ಲಾ ಚಾನೆಲ್‌ಗಳನ್ನು ಪುನಃ ಸ್ಥಾಪಿಸಲಾಗಿದೆ. ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.

ಜಗನ್ ಮೋಹನ್ ರೆಡ್ಡಿ ಒಡೆತನ ‘ಸಾಕ್ಷಿ ಚಾನೆಲ್‌’ ನೇರವಾಗಿ ಟಿಡಿಪಿ ವಿರುದ್ಧವಿದ್ದರೆ, ಟಿವಿ9 ತೆಲುಗು ಮತ್ತು ಎನ್‌ಟಿವಿಯಂತಹ ಚಾನೆಲ್‌ಗಳು ಇತರ ಪಕ್ಷಗಳಿಗಿಂತ ವೈಎಸ್‌ಆರ್‌ಸಿಪಿಗೆ ಹೆಚ್ಚಿನ ಪ್ರಚಾರ ನೀಡಿವೆ ಎಂದು ದಿ ನ್ಯೂಸ್‌ ಮಿನಿಟ್ ವರದಿ ಹೇಳಿದೆ.

ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಲಾಗಿದೆ ಎಂಬ ಆರೋಪ ಆಂಧ್ರಕ್ಕೆ ಹೊಸತಲ್ಲ. ತೆಲುಗು ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳು ಪಕ್ಷದ ಆಧಾರದ ಮೇಲೆ ವಿಭಜನೆಗೊಂಡಿವೆ. ಎಬಿಎನ್ ಆಂಧ್ರ ಜ್ಯೋತಿ ಮತ್ತು ಈನಾಡು ಟಿಡಿಪಿ ಪರ ಒಲವು ಹೊಂದಿವೆ. ಜಗನ್ ಮೋಹನ್ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದಾಗ ಟಿವಿ5 ಮತ್ತು ಎಬಿಎನ್ ಆಂಧ್ರ ಜ್ಯೋತಿ ಎಂಬ ಎರಡು ಚಾನೆಲ್‌ಗಳು ಕೇಬಲ್‌ನಲ್ಲಿ ಪ್ರಸಾರವಾಗಿರಲಿಲ್ಲ. ಜಗನ್ ಸರ್ಕಾರ ಕೇಬಲ್ ಆಪರೇಟರ್‌ಗಳ ಮೇಲೆ ಒತ್ತಡ ಹೇರಿ ಚಾನೆಲ್‌ ಪ್ರಸಾರ ಸ್ಥಗಿತಗೊಳಿಸಿದೆ ಎಂದು ಚಾನೆಲ್‌ಗಳು ಆರೋಪಿಸಿತ್ತು. ಆದರೆ, ರಾಜ್ಯ ಸರ್ಕಾರ ಚಾನೆಲ್‌ಗಳು ಕ್ಯಾರಿಯರ್ ಶುಲ್ಕ ಪಾವತಿಸಿಲ್ಲ ಎಂದು ವಾದಿಸಿತ್ತು.

ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸುವುದು ಎರಡು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಚಾನೆಲ್‌ನ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಧಿಕಾರದಲ್ಲಿರುವ ಪಕ್ಷದ ಕುರಿತು ಸುದ್ದಿ ಮಾಡುವುದನ್ನು ತಡೆಯುತ್ತದೆ. ವಿಶೇಷವಾಗಿ ಜೂನ್ 12 ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಚಾನೆಲ್‌ ನಿರ್ಬಂಧಿಸಿರುವುದು ಚಾನೆಲ್‌ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಟಿವಿ9 ತೆಲುಗು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ದೆಹಲಿ ಹೈಕೋರ್ಟ್ ಜೂನ್ 24 ರಂದು ಟಿವಿ9 ತೆಲುಗಿಗೆ ಮಧ್ಯಂತರ ಪರಿಹಾರ ನೀಡಿದೆ. ಚಾನೆಲ್‌ ಪ್ರಸಾರ ಅಡೆತಡೆಯಿಲ್ಲದೆ ಮುಂದುವರಿಯಲಿದೆ ಎಂದು ಆದೇಶಿಸಿದೆ. ನಂತರದ ದಿನಗಳಲ್ಲಿ ಎನ್‌ಟಿವಿ ಮತ್ತು ಸಾಕ್ಷಿ ಕೂಡ ಇದೇ ರೀತಿಯ ಅನುಕೂಲಕರ ಆದೇಶವನ್ನು ಪಡೆದಿವೆ. ಆದರೆ, ಇದು ತಾತ್ಕಾಲಿಕ ಪರಿಹಾರ ಮಾತ್ರ. ಜೂನ್‌ನಲ್ಲಿ ನ್ಯಾಯಮಂಡಳಿಯ ರಜೆ ಮುಗಿದ ನಂತರ ಚಾನೆಲ್‌ಗಳು ಟೆಲಿಕಾಂ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ)ಯ ಮೊರೆ ಹೋಗಬೇಕಿದೆ.

ತಮ್ಮ ಚಾನೆಲ್ ಅನ್ನು ನಿರ್ಬಂಧಿಸುವ ಮೊದಲು ತಮಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಟಿವಿ9 ತೆಲುಗು ದೆಹಲಿ ಹೈಕೋರ್ಟ್‌ನಲ್ಲಿ ಹೇಳಿದೆ. ಇದೇ ವಿಷಯವನ್ನು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ನಿರಂಜನ್ ರೆಡ್ಡಿ ಅವರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಟ್ರಾಯ್‌ನ ನಿಯಮ 17 ರ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರಂಜನ್ ರೆಡ್ಡಿ ಪತ್ರದಲ್ಲಿ ಕೋರಿದ್ದಾರೆ. ಯಾವುದೇ ಸೇವಾ ಪೂರೈಕೆದಾರರು ಕನಿಷ್ಠ ಮೂರು ವಾರಗಳ ಕಾಲ ಸೂಚನೆ ನೀಡದೆ ದೂರದರ್ಶನ ಚಾನೆಲ್‌ಗಳ ಸಿಗ್ನಲ್‌ಗಳ ಸಂಪರ್ಕ ಕಡಿತಗೊಳಿಸಬಾರದು ಎಂದು ನಿಯಮ 17 ಹೇಳುತ್ತದೆ. ಉದ್ದೇಶಿತ ಸಂಪರ್ಕ ಕಡಿತಕ್ಕೆ ಕಾರಣಗಳನ್ನು ನೀಡಬೇಕು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.

“ಜಾಹೀರಾತುಗಳಿಗೆ ಈಗಾಗಲೇ ಹಣ ಪಾವತಿಸಿರುವ ಜಾಹೀರಾತುದಾರರಿಂದ ಭಾರೀ ಒತ್ತಡ ಬರುತ್ತಿದೆ. ಚಾನೆಲ್ ಪ್ರಸಾರವಾಗದಿದ್ದರೆ ಜಾಹೀರಾತುದಾರರು ತಮ್ಮ ಪ್ರಚಾರವನ್ನು ಹಿಂತೆಗೆದುಕೊಳ್ಳಬಹುದು. ಇದು ಚಾನೆಲ್ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು” ಎಂದು ಸಾಕ್ಷಿ ಟಿವಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ಹೇಳಿದೆ.

ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ (ಐಎಫ್‌ಜೆ) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಮೂರು ಚಾನೆಲ್‌ಗಳ ಮೇಲಿನ ನಿರ್ಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಜಗನ್ ಸರ್ಕಾರ ಮತ್ತು ಮಾಧ್ಯಮ ತಿಕ್ಕಾಟ

ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿಯು ರಾಮೋಜಿ ರಾವ್ ಮಾಲೀಕತ್ವದ ಈನಾಡು, ಆಂಧ್ರ ಜ್ಯೋತಿ ಮತ್ತು ಟಿವಿ5 ಮೇಲೆ ಮಾನನಷ್ಟ ಮೊಕದ್ದಮೆಗಳ ಬೆದರಿಕೆಯೊಡ್ಡುವ ಮೂಲಕ ದಾಳಿ ಮಾಡಿದೆ ಎಂದು ಟಿಡಿಪಿ ಈ ಹಿಂದೆ ಆರೋಪಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ 2019 ರ ಬಜೆಟ್ ಅಧಿವೇಶನದ ವೇಳೆ ಈ ಚಾನೆಲ್‌ಗಳು ವಿಧಾನಸಭೆಯಿಂದ ನೇರ ಪ್ರಸಾರ ಮಾಡದಂತೆ ಸರ್ಕಾರ ತಡೆಯೊಡ್ಡಿತ್ತು. ಇದು ಭಾರೀ ತಿಕ್ಕಾಟಕ್ಕೆ ಕಾರಣವಾಗಿತ್ತು. ನಂತರ ಜಗನ್ ಸರ್ಕಾರ ಈನಾಡು ಸಮೂಹದ ಒಡೆತನದ ಮತ್ತೊಂದು ಕಂಪನಿ ಮಾರ್ಗದರ್ಶಿ ಚಿಟ್‌ಫಂಡ್ ಮೇಲಿನ ಕ್ರಿಮಿನಲ್ ಮೊಕದ್ದಮೆಗಳ ತನಿಖೆ ಪ್ರಾರಂಭಿಸಿತ್ತು.

ಆಗಸ್ಟ್ 2023ರಲ್ಲಿ, ಆಂಧ್ರ ಪ್ರದೇಶ ಅಪರಾಧ ತನಿಖಾ ಇಲಾಖೆ (ಸಿಐಡಿ) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ (ಎಂಸಿಎಫ್‌ಪಿಎಲ್‌) ವಿರುದ್ಧ 10 ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಿತ್ತು.

ವಂಚನೆ, ನಂಬಿಕೆ ದ್ರೋಹ ಸೇರಿದಂತೆ ಹಲವು ಆರೋಪಗಳನ್ನು ಮಾರ್ಗದರ್ಶಿ ಚಿಟ್ ಫಂಡ್‌ ವಿರುದ್ದ ಹೊರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ನಿಧನರಾದ ರಾಮೋಜಿ ರಾವ್, ಅವರ ಸೊಸೆ ಮತ್ತು ಎಂಸಿಎಫ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಸಿ ಸೈಲಜಾ ಕಿರಣ್ ಅವರನ್ನು ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿದೆ.
ಕಾನೂನು ಹೋರಾಟಗಳ ಹೊರತಾಗಿ, ಜಗನ್ ಸರ್ಕಾರ ಮತ್ತು ಈನಾಡು ಸಮೂಹದ ನಡುವೆ ರಾಜಕೀಯ ತಿಕ್ಕಾಟವು ಬಹಿರಂಗವಾಗಿ ನಡೆಯುತ್ತಿದೆ. ಹಲವಾರು ರಾಜಕೀಯ ಭಾಷಣಗಳಲ್ಲಿ ಈನಾಡು ಸಮೂಹದ ವಾಹಿನಿಗಳ ವಿರುದ್ದ ವಾಗ್ದಾಳಿ ನಡೆಸಿರುವ ಜಗನ್ ಪಕ್ಷದ ನಾಯಕರು, ಈನಾಡು ಸಮೂಹದ ವಾಹಿನಿಗಳು ಪಕ್ಷಪಾತದಿಂದ ಕೂಡಿವೆ ಎಂದು ಆರೋಪಿಸಿದ್ದರು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರಾಮೋಜಿ ರಾವ್ ಜೊತೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಿದ್ದರು. ಸ್ವತಃ ಜಗನ್ ಮೋಹನ್ ರೆಡ್ಡಿ ಆಗಾಗ ಈನಾಡು ಮತ್ತು ಆಂಧ್ರ ಜ್ಯೋತಿಯನ್ನು “ಹಳದಿ ಮಾಧ್ಯಮ” ಎಂದು ಸಂಬೋಂಧಿಸಿದ್ದಿದೆ.

ಜನವರಿ 2024ರಲ್ಲಿ, ಟಿವಿ9 ತೆಲುಗು ವಾಹಿನಿಯ ಸಹಾಯಕ ಸಂಪಾದಕಿ ಹಸೀನಾ ಶೇಕ್ ಅವರು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಕೊಡಲಿ ನಾನಿ ಅವರ ಸಂದರ್ಶನ ನಡೆಸಿದ್ದರು. ಆ ಬಳಿಕ ಹಸೀನಾ ಅವರು ಟಿಡಿಪಿಯ ಸಾಮಾಜಿಕ ಮಾಧ್ಯಮ ವಿಭಾಗದಿಂದ ಭಾರೀ ಕಿರುಕುಳಕ್ಕೊಳ ಅನುಭವಿಸಿದ್ದರು. “ಟಿವಿ9 ತೆಲುಗು ತಮ್ಮ ಪಕ್ಷಕ್ಕೆ ಸರಿಯಾದ ಅವಕಾಶ ನೀಡುತ್ತಿಲ್ಲ ಎಂಬ ಸಾಮಾನ್ಯ ಭಾವನೆ ಟಿಡಿಪಿ ಬೆಂಬಲಿಗರಲ್ಲಿದೆ. ಈ ಕಾರಣದಿಂದಾಗಿ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಹಸೀನಾ ಶೇಖ್ ಜನವರಿ 18, 2024 ರಂದು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ತಿಳಿಸಿದೆ.

ಎರಡು ಬಾರಿ ಆಂಧ್ರ ಪ್ರದೇಶದ ಸಿಎಂ ಆಗಿದ್ದ ಪ್ರಮುಖ ಕಾಂಗ್ರೆಸ್ ನಾಯಕ ವೈಎಸ್ ರಾಜಶೇಖರ ರೆಡ್ಡಿ ಅವರು ಈನಾಡು ಮತ್ತು ಆಂಧ್ರಜ್ಯೋತಿಯೊಂದಿಗೆ ವಿವಾದಾತ್ಮಕ ಸಂಬಂಧ ಹೊಂದಿದ್ದರು. ಅವುಗಳನ್ನು “ಹಳದಿ ಮಾಧ್ಯಮಗಳು” ಎಂದು ಕರೆದಿದ್ದರು.

2007ರಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರು ವಿಶೇಷ ಮಾಹಿತಿ ಆಯುಕ್ತರಿಗೆ ಸುಳ್ಳು, ಆಧಾರರಹಿತ, ಮಾನಹಾನಿಕರ ಸುದ್ದಿ ಪ್ರಕಟಿಸುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ಮೊಕದ್ದಮೆ ಹೂಡಲು ಅಧಿಕಾರ ನೀಡಿತ್ತು. ಅಕ್ಟೋಬರ್ 2019 ರಲ್ಲಿ, ಜಗನ್, ಸಿಎಂ ಆದಾಗ ಈ ಅಧಿಕಾರವನ್ನು ವಿಸ್ತರಿಸಿದರು. ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿರುವ ಅಧಿಕಾರಿಗೆ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು ನೀಡಿದರು.

ಕೃಪೆ : ದಿ ನ್ಯೂಸ್ ಮಿನಿಟ್ 

ಇದನ್ನೂ ಓದಿ : ಹೊಸ ಕ್ರಿಮಿನಲ್ ಕಾನೂನುಗಳಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪ; ನಿಬಂಧನೆಗಳ ತಿದ್ದುಪಡಿಗೆ ಚಿಂತನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...