25 ವರ್ಷಗಳ ಹಿಂದೆ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡ ಕರ್ನಾಟಕದ 50 ವರ್ಷದ ಮಹಿಳೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ವೃದ್ಧಾಶ್ರಮದಲ್ಲಿದ್ದ ಮಹಿಳೆ ಸಾಕಮ್ಮ ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ. ಅಧಿಕಾರಿಗಳ ನೆರವಿನಿಂದ ಬುಧವಾರ ಅವರು ತನ್ನ ಮನೆಗೆ ಮರಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಡಣನಾಯಕನಕೆರೆ ಗ್ರಾಮದ ಸಾಕಮ್ಮ ಅವರು 25 ವರ್ಷಗಳ ಹಿಂದೆ ಹೊಸಪೇಟೆಯಲ್ಲಿ ಸಂಬಂಧಿಕರ ಮದುವೆಗೆ ಮಕ್ಕಳೊಂದಿಗೆ ಹಾಜರಾಗಿದ್ದರು. ಮಾನಸಿಕ ಅಸ್ವಸ್ತರಾಗಿದ್ದ ಅವರು, ಆಕಸ್ಮಿಕವಾಗಿ ಚಂಡೀಗಢಕ್ಕೆ ರೈಲನ್ನು ಹತ್ತಿದರು. ನಂತರ, ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಕಷ್ಟಕರ ಸಂದರ್ಭಗಳಲ್ಲಿ ವಾಸಿಸುತ್ತಿದ್ದರು.
ಸಾಕಮ್ಮನ ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು; ಇಷ್ಟು ವರ್ಷಗಳಾದರೂ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆಯ ಅಂತ್ಯ ಸಂಸ್ಕಾರವನ್ನೂ ಮಾಡಿದ್ದರು.
ಕರ್ನಾಟಕ ಮೂಲದ ಯುವ ಐಪಿಎಸ್ ಅಧಿಕಾರಿಯೊಬ್ಬರು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಮಹಿಳೆ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಕಂಡು ಆಕೆಯ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ.

ಮಂಡಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನ್ನಡಿಗ ಪೊಲೀಸ್ ಅಧಿಕಾರಿ ರವಿನಂದನ್ ಬಿ ಎಂ, ಸಾಕಮ್ಮ ಅವರೊಂದಿಗೆ ಮಾತನಾಡಿದ ವಿಡಿಯೋ ಪೋಸ್ಟ್ ಮಾಡಿದ್ದರು. ನಂತರ ಈ ವಿಡಿಯೋವನ್ನು ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ವಿಜಯ್ ಕುಮಾರ್ ಗೆ ಕಳುಹಿಸಿದ್ದಾರೆ. ವಿಜಯ್ ಕುಮಾರ್ ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
A women from Dananayakanakere Hospet Karnataka has reached Uttarakhand by unknowingly and trying hard to meet her family,plz help us to reach her family and unite them. Thanks to Ravinandan IPS & Naveen sir for sharing this video #hospet #karnataka #dananayakanakere #missing pic.twitter.com/6R3aKnznli
— Vijay Kumar G (@jnvijay07) December 19, 2024
ಪೋಸ್ಟ್ ನೋಡಿದ ತಕ್ಷಣ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರು ಗುರುವಾರ ಮಂಡಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿನಂದನ್ ಅವರನ್ನು ಸಂಪರ್ಕಿಸಿದರು. ಅಂದಿನಿಂದ ಸಮಾಜ ಕಲ್ಯಾಣ ಇಲಾಖೆಯು ಸಾಕಮ್ಮನನ್ನು ಹಿಂದಿರುಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಮಂಡಿ ನಿರಾಶ್ರಿತರ ಕೇಂದ್ರದಲ್ಲಿರುವ ಸಾಕಮ್ಮ ಅವರನ್ನು ಕರೆತರಲು ಸಮಾಜ ಕಲ್ಯಾಣ ಇಲಾಖೆಯ ತ್ರಿಸದಸ್ಯರ ತಂಡ ತೆರಳಿತ್ತು. “ಚಂಡೀಗಢದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲಿದ್ದಾರೆ. ನಂತರ, ಅವರನ್ನು ಕರೆತರುತ್ತೇವೆ” ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದರು.
ಸದ್ಯ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯಲ್ಲಿ ವಾಸವಾಗಿರುವ ಸಾಕಮ್ಮ ಅವರ ಪುತ್ರ ಯಲ್ಲಪ್ಪ, “ನಮ್ಮ ತಾಯಿ ಚಿಕ್ಕಂದಿನಲ್ಲಿ ನಾಪತ್ತೆಯಾಗಿದ್ದರು, ಈಗ ಪತ್ತೆಯಾಗಿದ್ದಾರೆ, ನಮ್ಮ ತಾಯಿ ಮರಳಿ ಬಂದರೆ ನಮಗೆ ಸಂತೋಷವಾಗುತ್ತದೆ” ಎಂದರು.

ಸಾಕಮ್ಮನ ಸಂಬಂಧಿಯೊಬ್ಬರು ಮಾತನಾಡಿ, “ನಮ್ಮ ಚಿಕ್ಕಮ್ಮ ನಾಪತ್ತೆಯಾಗಿ ಸುಮಾರು 20 ವರ್ಷಗಳಾಗಿವೆ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಆಕೆ ತೀರಿಕೊಂಡಿದ್ದಾಳೆಂದು ತಿಥಿ ನಡೆಸಿದ್ದೆವು. ಅಧಿಕಾರಿ, ಮೂಲತಃ ಹಾಸನ ಜಿಲ್ಲೆಯವರು, ಮಕ್ಕಳಿಗೆ ಈಗ ತಾಯಿ ಇದ್ದಾರೆ ಎಂದು ನಮಗೆ ಸಂತೋಷವಾಗಿದೆ” ಎಂದರು.
ವಿಡಿಯೋದಲ್ಲಿ ಸಾಕಮ್ಮ ತನ್ನ ಹುಟ್ಟೂರು ಹೊಸಪೇಟೆ ಸಮೀಪದ ಡಣಾನಾಯಕನಹಳ್ಳಿ ಎಂದು ಹೇಳಿದ್ದಾಳೆ. ತಾನು ರೈಲಿನಲ್ಲಿ ಮಂಡಿ ಜಿಲ್ಲೆಗೆ ಬಂದು ಕೆಲವು ವರ್ಷಗಳಿಂದ ಇಲ್ಲೇ ಇದ್ದೇನೆ ಎಂದು ಹೇಳಿದ್ದರು. ತನ್ನ ಹಳ್ಳಿಯಲ್ಲಿ ತನಗೆ ಒಬ್ಬ ಅಣ್ಣ ಮತ್ತು ತಂಗಿ ಇದ್ದಾರೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ; ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ, ಆದಿವಾಸಿ, ಎಡಪಕ್ಷಗಳಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ


