ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ಮಾನವ ಹಕ್ಕುಗಳ ವಕೀಲ ಸುರೇಂದ್ರ ಗ್ಯಾಡ್ಲಿಂಗ್ ಮತ್ತು ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧೀರ್ ಧವಾಲೆ ಅವರು ಶುಕ್ರವಾರ ಬಾಂಬೆ ಹೈಕೋರ್ಟ್ನ್ನು ಸಂಪರ್ಕಿಸಿ ತಮ್ಮ ವಿರುದ್ದ ನಡೆಸಲಾಗುತ್ತಿರುವ ತನಿಖೆಯನ್ನು ಪುಣೆ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಿದ್ದನ್ನು ಪ್ರಶ್ನಿಸಿದ್ದಾರೆ.
ಮಾವೋವಾದಿ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಹಲವಾರು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿರುವ ಈ ಪ್ರಕರಣವೂ ಜನವರಿ 24 ರಂದು ಪುಣೆ ಪೊಲೀಸರಿಂದ ಎನ್ಐಎಗೆ ವರ್ಗಾಯಿಸಲಾಗಿತ್ತು.
ಗ್ಯಾಡ್ಲಿಂಗ್ ಮತ್ತು ಧವಾಲೆ ಅವರನ್ನು ಜೂನ್ 2018 ರಲ್ಲಿ ಬಂಧಿಸಲಾಗಿದ್ದು, ಅವರನ್ನು ಮುಂಬೈ ಬಳಿಯ ತಾಲೋಜ ಜೈಲಿನಲ್ಲಿ ಇರಿಸಲಾಗಿದೆ.
ನ್ಯಾಯವಾದಿ ಎಸ್ ಬಿ ತಾಲೇಕರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಕೇಂದ್ರ ಸರ್ಕಾರವು ತನಿಖೆಯನ್ನು ವರ್ಗಾವಣೆ ಮಾಡಿದೆ, ಇದು “ರಾಜಕೀಯ ಪ್ರೇರಿತವಾಗಿದೆ” ಎಂದು ಆರೋಪಿಸಿದೆ.
“ಈ ವರ್ಗಾವಣೆಯ ಆದೇಶವು ಅನಿಯಂತ್ರಿತ, ತಾರತಮ್ಯ, ಅನ್ಯಾಯ ಹಾಗೂ ಆರೋಪಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಹಿಂದೂತ್ವ ಸಂಘಟನೆಗಳೊಂದಿಗೆ ಸೇರಿ ಡಿಸೆಂಬರ್ 2017-ಜನವರಿ 2018 ರಲ್ಲಿ ಪುಣೆಯ ಕೊರೆಗಾಂವ್ ಭೀಮಾದಲ್ಲಿ ನಡೆದ ಹಿಂಸಾಚಾರದ ಘಟನೆಯನ್ನು ಮಾವೋವಾದಿ ಚಳವಳಿಯ ಭಾಗವೆಂದು ಎಲ್ಗರ್ ಪರಿಷತ್ ಸಭೆಯನ್ನು ತೋರಿಸುವ ಮೂಲಕ ಪ್ರಭಾವಿ ದಲಿತ ಚಿಂತಕರನ್ನು ಗುರಿ ಮಾಡಿಕೊಂಡಿದೆ”.
ಈ ಅರ್ಜಿಯನ್ನು ಜೂನ್ 23 ರಂದು ಹೈಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಗ್ಯಾಡ್ಲಿಂಗ್ ಮತ್ತು ಧವಾಲೆ ಅವರಲ್ಲದೆ, ರೋನಾ ವಿಲ್ಸನ್, ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖಾ, ಶೋಮಾ ಸೇನ್, ವೆರ್ನಾನ್ ಗೊನ್ಸಾಲ್ವೆಸ್, ವರವರ ರಾವ್, ಅರುಣ್ ಫೆರೀರಾ ಮತ್ತು ಸುಧಾ ಭಾರದ್ವಾಜ್ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?