ಪಾಟ್ನಾದಲ್ಲಿರುವ ಭಾರತೀಯ ಜನತಾ ಪಕ್ಷದ ಬಿಹಾರದ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಸಾವಿರಾರು ಪಂಚಾಯತ್ ವಾರ್ಡ್ ಕಾರ್ಯದರ್ಶಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಜಲ ಪಿರಂಗಿ ಪ್ರಯೋಗಿಸಿದ್ದು, ಗಾಳಿಯಲ್ಲಿ ಗುಂಡುಗಳನ್ನೂ ಹಾರಿಸಲಾಗಿದೆ ಹಾರಿಸಿದ್ದಾರೆ ಎನ್ನಲಾಗಿದೆ.
ವೇತನ ವಿಳಂಬ ಮತ್ತು ಖಾಯಂ ಉದ್ಯೋಗಕ್ಕಾಗಿ ಒತ್ತಾಯಿಸಿ ಕಳೆದ 13 ದಿನಗಳಿಂದ ಧರಣಿ ನಡೆಸುತ್ತಿರುವ ಸುಮಾರು 5,000 ವಾರ್ಡ್ ಕಾರ್ಯದರ್ಶಿಗಳು ನಗರದ ವೀರಚಂದ್ ಪಟೇಲ್ ಮಾರ್ಗದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಮಾವೇಶಗೊಂಡಿದ್ದರು.
ಉದ್ಯೋಗ ಭದ್ರತೆ ನೀಡಿ ಕಾಯಂಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಕಚೇರಿ ಎದುರು ನೆರೆದಿದ್ದ 5,000ಕ್ಕೂ ಹೆಚ್ಚು ಪಂಚಾಯತ್ ವಾರ್ಡ್ ಕಾರ್ಯದರ್ಶಿಗಳಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗಿಯಾಗಿದ್ದರು. ಅವರಲ್ಲಿ ಹಲವು ಮಹಿಳೆಯುರು ತಮ್ಮ ಹಾಲ್ಗೂಸುಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
#WATCH | Bihar: Ruckus between Panchayat ward secretaries & Bihar Police witnessed outside the BJP office in Patna; many Panchayat ward secretaries had come to gherao the BJP office with their demands pic.twitter.com/mJ3DCm98C0
— ANI (@ANI) December 27, 2021
ಬಿಜೆಪಿ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ, ಪಾಟ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ಸ್ಥಳದಿಂದ ತೆರವು ಮಾಡಲು ನಿರಾಕರಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. “ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು, ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದರು, ಗಾಜುಗಳನ್ನು ಒಡೆದರು” ಎಂದು ಆರೋಪಿಸಲಾಗಿದೆ.
“ನಮ್ಮ ಕುಂದುಕೊರತೆಗಳನ್ನು ಪರಿಹರಿಸುವಂತೆ ಕಳೆದ 13 ದಿನಗಳಿಂದ ಒತ್ತಾಯಿಸುತ್ತಿದ್ದರೂ ಸರ್ಕಾರದಿಂದ ಯಾರೂ ನಮ್ಮ ಮಾತನ್ನು ಕೇಳುತ್ತಿಲ್ಲ. ಪಂಚಾಯತ್ ರಾಜ್ ಸಚಿವ ಸಾಮ್ರಾಟ್ ಚೌಧರಿ ಅವರ ಭರವಸೆ ಮೇರೆಗೆ ನಾವು ಸೇರಿದ್ದೆವು. ಆದರೆ ಅವರು ನಮ್ಮನ್ನು ಭೇಟಿ ಮಾಡಲು ನಿರಾಕರಿಸಿದರು. ಪೊಲೀಸರು ಬಲವಂತವಾಗಿ ನಮ್ಮನ್ನು ಇಲ್ಲಿಂದ ಚದುರಿಸಲು ಯತ್ನಿಸಿದರು’’ ಎಂದು ನಳಂದಾದಿಂದ ಬಂದಿದ್ದ ರಾಕೇಶ್ ಕುಮಾರ್ ಎಂಬವರು ಹೇಳಿಕೆ ನೀಡಿದ್ದಾರೆ.
ಘಟನೆಯಿಂದಾಗಿ ಖಾಸಗಿ ಮತ್ತು ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿರಿ: ದೆಹಲಿ: ಪೊಲೀಸರ ಕ್ರಮ ಖಂಡಿಸಿ ಮಧ್ಯರಾತ್ರಿ ವೈದ್ಯರ ಪ್ರತಿಭಟನೆ