ಕೇಂದ್ರ ಬಜೆಟ್ ಸಂಪೂರ್ಣವಾಗಿ ಜನ ವಿರೋಧಿ ಹಾಗೂ ಕಾರ್ಪೊರೇಟ್ ಪರವಾಗಿದ್ದು, ರಾಜ್ಯದ ಹಕ್ಕುಗಳನ್ನು ಹರಣ ಮಾಡುವಂಥದ್ದಾಗಿದೆ ಎಂದು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಆಕ್ರೋಶ ಗುರುವಾರ ವ್ಯಕ್ತಪಡಿಸಿದರು. ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಿದ್ದ ಜನಚಳವಳಿ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರಬದಲಾಗಿದ್ದರೂ ನೀತಿಗಳು ಬದಲಾಗಿಲ್ಲ. ಹಳೆಯ ನೀತಿಗಳನ್ನು ತಿರಸ್ಕರಿಸದೆಯೇ ಹೊಸ ಹಾದಿಯನ್ನು ತುಳಿಯುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರೆ ಅದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿ ತಂದಿದ್ದ
ಬಿಜೆಪಿ ತಂದಿದ್ದ 8 ಮನೆಹಾಳು ಕಾಯ್ದೆಗಳನ್ನೂ ಮುಂದುವರೆಸುವ ಮೂಲಕ ಕಾಂಗ್ರೆಸ್ ನೀತಿಗೂ ಬಿಜೆಪಿ ನೀತಿಗೂ ಆರ್ಥಿಕ ವಿಚಾರದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಸರಕಾರ ಸ್ಪಷ್ಟವಾಗಿ ತೋರಿಸಿಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕೃಷಿಯನ್ನು ಸಂಪೂರ್ಣವಾಗಿ ಖಾಸಗಿ ಕಾರ್ಪೋರೇಟುಗಳಿಗೆ ಒಪ್ಪಿಸಲು ಹಾತೊರೆಯುತ್ತಿದೆ. ಅಲ್ಲದೆ ಕಾರ್ಮಿಕ ವರ್ಗದ ಎಲ್ಲ ಹಕ್ಕುಗಳನ್ನು ಕಸಿದು ಗುಲಾಮಿ ಕಾರ್ಮಿಕರನ್ನು ಸೃಷ್ಟಿಸಲು ಬಯಸುತ್ತಿದೆ. ಜಿಎಸ್ಟಿ ಎಂಬುದು ಜನಸಾಮಾನ್ಯರನ್ನು ಸುಲಿಯುವ ಹಾಗೂ ರಾಜ್ಯದ ಸಂಪನ್ಮೂಲಗಳನ್ನೆಲ್ಲಾ ಸೂರೆಗೈದು ಅವನ್ನು ದೈನೇಸಿಯಾಗಿಸಿ ಬೇಡುವ ಸ್ಥಿತಿಗೆ ತಳ್ಳುವ ಲೂಟಿಕೋರ ಪದ್ದತಿಯಾಗಿದೆ. ಸೆಸ್ ಹಣವನ್ನೆಲ್ಲಾ ಕೇಂದ್ರವೇ ಕಬಳಿಸಿ ರಾಜ್ಯಗಳಿಗೆ ದ್ರೋಹಬಗೆಯಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ ಮತ್ತು ನೀತಿಗಳು ಖಾಸಗೀಕರಣವನ್ನು ವೇಗಗೊಳಿಸುವ ಮತ್ತು ಕಲ್ಯಾಣ ಕ್ರಮಗಳಿಗೆ ಕತ್ತರಿ ಹಾಕುವ ಗುರಿಯನ್ನು ಹೊಂದಿವೆ. ಇವು ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಇದ್ದ ಎಲ್ಲ ಮಾರ್ಗಗಳನ್ನು ಮುಚ್ಚಿಹಾಕಿ, ಮೀಸಲಾತಿಯನ್ನು ಅಘೋಷಿತವಾಗಿ ರದ್ದುಮಾಡಿ, ಅವರನ್ನು ಮತ್ತೆ ಕತ್ತಲಕೂಪಕ್ಕೆ ತಳ್ಳುವ ಇರಾದೆಯನ್ನು ಹೊಂದಿವೆ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಮರೆತಿದೆ. 5 ಗ್ಯಾರಂಟಿಗಳ ಗುಂಗಿನಲ್ಲೇ ಸರಕಾರ ತೇಲುತ್ತಿದೆ. ಜನ ವರ್ಗಗಗಳಿಗೆ ಕೊಟ್ಟಿದ್ದ ಭರವಸೆಗಳಲ್ಲಿ ಒಂದೇ ಒಂದು ಭರವಸೆಯನ್ನೂ ಈಡೇರಿಸದೆ, ಈಡೇರಿಸುವ ಸೂಚನೆಯನ್ನೂ ನೀಡದೆ ದ್ರೋಹ ಬಗೆದಿದೆ. ಯಾವುದೇ ಸ್ಪಷ್ಟ ನೀತಿ ಮತ್ತು ದಿಕ್ಕು ಇಲ್ಲದ ಬಜೆಟ್ ಇದಾಗಿದೆ. ಜನಪರ ಅಭಿವೃದ್ದಿಯ ರೋಡ್ ಮ್ಯಾಪ್ ಇಲ್ಲದ ಬಜೆಟ್ ಇದಾಗಿದೆ ಎಂದು ನೂರ್ ಶ್ರೀಧರ್ ಅವರು ಹೇಳಿದರು.
ರಾಜ್ಯ ಸರ್ಕಾರದ ಬೆಂಗಳೂರು ಮತ್ತು ಕಾರ್ಪೋರೇಟ್ ಕೇಂದ್ರಿತ ಬಜೆಟ್ ಆಗಿದೆ. ಕೃಷಿ ಬಿಕ್ಕಟ್ಟನ್ನು ಬಗೆಹರಿಸಲಿಕ್ಕಾಗಲೀ, ರೈತರನ್ನು ಋಣಮುಕ್ತರನ್ನಾಗಿಸಲಿಕ್ಕಾಗಲೀ, ರೈತರ ಬೆಳೆಗೆ ನ್ಯಾಯಸಮ್ಮತ ಬೆಲೆ ದಕ್ಕಿಸಿಕೊಡಲಿಕ್ಕಾಗಲೀ, ಕಾರ್ಮಿಕರಿಗೆ ಘನತೆಯ ವೇತನ ಖಾತ್ರಿ ಪಡಿಸಲಿಕ್ಕಾಗಲೀ, ಉದ್ಯೋಗ ಸೃಷ್ಟಿಸಲಿಕ್ಕಾಗಲೀ, ಕನಿಷ್ಟ ವೇತನವನ್ನು ಖಾತ್ರಿಪಡಿಸಲಿಕ್ಕಾಗಲೀ, ತಳ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಾಗಲೀ, ಬಡವರಿಗೆ ಭೂಮಿ ಮತ್ತು ವಸತಿ ಒದಗಿಸಲಿಕ್ಕಾಗಲೀ ಯಾವುದೇ ನಿರ್ಧಿಷ್ಟ ಕ್ರಮಗಳಿಲ್ಲ ಎಂದು ಅವರು ಹೇಳಿದರು.
ಎರಡು ದಿನಗಳ ಕಾಲ ನಡೆದ ಜನಚಳವಳಿಗಳ ಅಧಿವೇಶನದಲ್ಲಿ ಸಂಯುಕ್ತ ಹೋರಾಟದ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಯಶ್ವಂತ ಟಿ., ಕೆ.ವಿ.ಭಟ್, ವರಲಕ್ಷ್ಮೀ, ಚಾಮರಸ ಪಾಟೀಲ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಭಾಲ್ ಅಧಿಕಾರಿಯಿಂದ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ: ಟೀಕಿಸಿದ ಮುಸ್ಲಿಂ ಯುವಕನ ಬಂಧನ
ಸಂಭಾಲ್ ಅಧಿಕಾರಿಯಿಂದ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ: ಟೀಕಿಸಿದ ಮುಸ್ಲಿಂ ಯುವಕನ ಬಂಧನ

