| ನಾನುಗೌರಿ ಡೆಸ್ಕ್ |
‘ನಾಥುರಾಂ ಗೂಡ್ಸೆಯನ್ನು ಬಿಜೆಪಿ ಬಹಿರಂಗವಾಗಿ ಬೆಂಬಲಿಸಿದೆ’ ಎಂದು ತಮಿಳುನಾಡಿನಲ್ಲಿ ಹಲವು ಸಂಘಟನೆಗಳು ಮತ್ತು ಪಕ್ಷಗಳು ಆಪಾದಿಸಿವೆ. ಇದುವರೆಗೂ ನಾಥುರಾಂ ಗೋಡ್ಸೆ ನಮ್ಮವನಲ್ಲ ಎನ್ನುತ್ತಿದ್ದ ಬಿಜೆಪಿ ಇಂದು ಆತನ ಪರವಾಗಿ ವಕಾಲತ್ತು ವಹಿಸುತ್ತಿರುವುದೇಕೆ ಎಂದು ಪ್ರಶ್ನಿಸಿಲಾಗಿದೆ
ನಡೆದಿದಿಷ್ಟು..
ಕಮಲ್ ಹಾಸನ್ರವರ ಎಂಎನ್ಎಂ – ಮಕ್ಕಳ್ ನೀದಿ ಮಯ್ಯಂ ಪಕ್ಷದ ಪರವಾಗಿ ಉಪಚುನವಾಣೆಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಒಂದು ಹೇಳಿಕೆಯನ್ನು ನೀಡಿದ್ದರು. ಅದರಲ್ಲಿ ನಮ್ಮ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಒಬ್ಬ ಹಿಂದೂವಾಗಿದ್ದ ಆತ ನಾಥುರಾಂ ಗೋಡ್ಸೆ ಅಲ್ಲದೇ ಬೇರೆ ಯಾರು ಅಲ್ಲ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದರು. ಎಲ್ಲಾ ಕಡೆ ಈ ಹೇಳಿಕೆ ಹರಿದಾಡಿತ್ತು.
ಈ ಕುರಿತು ತಮಿಳರಸಿ ಸುಂದರ್ ರಾಜನ್ ಎಂಬ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಮಲ್ ಹಾಸನ್ ರವರು ಧರ್ಮಗಳ ನಡುವೆ ಭೇಧ ಮೂಡಿಸಿ ಪ್ರಚೋದನೆ ಮಾಡುತ್ತಿದ್ದಾರೆಂದು ಅವರು ಆಪಾದಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗವು ಯಾವ ಕ್ರಮ ತೆಗೆದುಕೊಂಡಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಾಥುರಾಂ ಗೋಡ್ಸೆಯನ್ನು ಈ ದೇಶದ ಮೊಟ್ಟಮೊದಲ ಭಯೋತ್ಪಾದಕ ಎಂದು ಉಲ್ಲೇಖಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇದನ್ನು ಹೇಳಿದಾಗ ಬಿಜೆಪಿ ಮತ್ತು ಸಂಘಪರಿವು ನಾಥುರಾಂ ಗೋಡ್ಸೆಯನ್ನು ಪರೋಕ್ಷವಾಗಿ ಸಮರ್ಥಿಸುವ ರೀತಿಯಲ್ಲಿ “ಒಂದೇ ಕೊಲೆಯನ್ನು ಮಾಡಿದವನನ್ನು ಭಯೋತ್ಪಾದಕ ಎಂದು ಕರೆಯಲು ಸಾಧ್ಯವಿಲ್ಲ ಎಂಬ ಸಮರ್ಥನೆ ನೀಡುತ್ತಿದ್ದರು.
ಆದರೆ ಒಬ್ಬ ವ್ಯಕ್ತಿಯನ್ನಾಗಲಿ, ಅಥವಾ ಒಂದು ಗುಂಪಿನನ್ನಾಗಲಿ ಯೋಜಿತವಾದ ರೀತಿಯೊಳಗೆ ಕೊಲೆಯನ್ನು ಎಸಗುವುದು ಭಯೋತ್ಪಾದನೆಯೇ ಸರಿ ಎಂಬುದು ಇತರರ ವಾದವಾಗಿತ್ತು. ಇದೇ ವಾದವನ್ನು ಮುಂದಿಟ್ಟು ಇತರರು ‘ಹಾಗಾದರೆ ಇನ್ನಿತರ ಕೋಮು ಗಲಭೆಗಳಲ್ಲಿ ಆರ್ಎಸ್ಎಸ್ನವರು, ಮತ್ತದರ ಅಂಗಸಂಘಟನೆಗಳು ಭಾಗವಹಿಸಿದ್ದಾಗಲಿ, ಅಥವಾ ಗುಜರಾತ್ನಲ್ಲಿ ನಡೆದ ಸಂಘಟಿತ ಯೋಜಿತ ಮಾರಣಹೋಮವಾಗಲಿ ಇದು ಭಯೋತ್ಪಾದನೆಯಲ್ಲವೇ? ಮಾಲೆಂಗಾವ್, ಮೆಕ್ಕಾ, ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದಂತಹ ಯೋಜಿತ ಕೃತ್ಯಗಳು ಭಯೋತ್ಪಾದನೆಯಲ್ಲವೇ? ಎಂದು ಕೇಳುತ್ತಿವೆ.
ಅದರ ಮುಂದುವರೆದ ಭಾಗವಾಗಿ ಪ್ರಗ್ಯಾ ಠಾಕೂರ್ ಅನ್ನು ಭಯೋತ್ಪಾದನೆಯ ಆರೋಪ ಹೊತ್ತ ವ್ಯಕ್ತಿಯೆಂದು ಹೇಳಲಾಗುತ್ತಿದ್ದು ಮತ್ತು ಆ ಸಂದರ್ಭದಲ್ಲಿಯೂ ಬಿಜೆಪಿ ಮತ್ತು ಆರ್ಎಸ್ಎಸ್ ಆಕೆಯಿಂದ ಅಂತರವನ್ನು ಕಾಯ್ದುಕೊಂಡಿತ್ತು. ವಾಸ್ತವದಲ್ಲಿ ಪ್ರಗ್ಯಾ ಸಿಂಗ್ ಕುರಿತಂತೆ ಮನಮೋಹನ್ ಸಿಂಗ್ ಸರ್ಕಾರಕ್ಕೆ ಪತ್ರ ಬರೆದಿದ್ದ ಆರ್ಎಸ್ಎಸ್ ಪದಾಧಿಕಾರಿ ಆಕೆ ತಮ್ಮ ಸಂಘಟನೆಗೆ ಸೇರಿಲ್ಲವೆಂದು, ವಾಸ್ತವದಲ್ಲಿ ನಮ್ಮ ಸಂಘಟನೆಯವರನ್ನೇ ಕೊಲೆಗೈಯಲು ಯೋಜಿಸಿದ್ದಳೆಂದು ದೂರಿದ್ದರು. ಹಾಗಾಗಿ ಎಲ್ಲಾ ಕೋನದಿಂದಲೂ ಪ್ರಗ್ಯಾ ಠಾಕೂರ್ ಭಯೋತ್ಪಾದಕ ಆರೋಪಿ ಎಂದು ಒಪ್ಪಿಕೊಂಡಿದ್ದರು.
ಆದರೆ ಈಗ ಆಕೆಯನ್ನು ಸಮರ್ಥಿಸಿಕೊಳ್ಳುತ್ತಾ ಆಕೆಗೆ ಎಂಪಿ ಟಿಕೆಟ್ ನೀಡಿರುವ ಬಿಜೆಪಿ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಾಥುರಾಂ ಗೋಡ್ಸೆಯನ್ನು ಸಹ ಸಮರ್ಥಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. “ಒಂದು ವೇಳೆ ನಾಥುರಾಂ ಗೋಡ್ಸೆ ವಿಚಾರದಲ್ಲಿ ಭಯೋತ್ಪಾದಕ, ಹಿಂದೂ ಭಯೋತ್ಪಾದಕ ಎನ್ನುವ ಕಮಲ್ ಹಾಸನ್ರವರ ನಿಲುವು ಒಪ್ಪಿಗೆ ಇಲ್ಲದಿದ್ದರೂ ನಾಥುರಾಂ ಗೋಡ್ಸೆಯ ಕೃತ್ಯವನ್ನು ತಾವು ಖಂಡಿಸುತ್ತೇವೆಂದು ಬಿಜೆಪಿ ಎಂದೂ, ಎಲ್ಲಿಯೂ ಹೇಳಿಲ್ಲವೇಕೆಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿ ಕೆ.ಎಲ್ ಅಶೋಕ್ ಪ್ರಶ್ನಿಸಿದ್ದಾರೆ.
ಗಾಂಧಿ ಹುತಾತ್ಮರಾದ ಜನವರಿ 30ರಂದು ಹಿಂದೂ ಮಹಾಸಭಾದ ನಾಯಕಿಯೊಬ್ಬಳು ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿದ ವಿಡಿಯೋ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗೋಡ್ಸೆ ಪ್ರತಿಮೆ ಮತ್ತು ಮಂದಿರ ನಿರ್ಮಾಣ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದೇನೋ.
ತಮಿಳುನಾಡಿನಲ್ಲಿ ನಡೆದ ಈ ವಿವಾದವು ಮುಂದೆ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.