ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಇನ್ನೂ ಕಗ್ಗಟಾಂಗಿದದ್ದು ಮಿತ್ರ ಪಕ್ಷಗಾಳಗಿದ್ದ ಬಿಜೆಪಿ-ಶಿವಸೇನೆ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಸರ್ಕಾರ ರಚನೆಗೆ ಇನ್ನೊಂದು ದಿನ ಮಾತ್ರ ಗಡುವು ಇದ್ದರೂ ಸಹ ಶಿವಸೇನೆ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಬಿಜೆಪಿಯು ಚುನಾಯಿತರಾದ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
ಹಾಗಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ರೆಸಾರ್ಟ್ ರಾಜಕಾರಣ ಆರಂಭವಾಗಿದೆ. ಬಿಜೆಪಿ ಕುದುರೆ ವ್ಯಾಪಾರ ನಡೆಸಬಹುದೆಂಬ ಭಯದಿಂದ ಶಿವಸೇನೆ ತನ್ನ ಎಲ್ಲಾ 56 ಶಾಸಕರನ್ನು ರೆಸಾರ್ಟ್ಗೆ ರವಾನಿಸಿದೆ.
ಈ ನಡುವೆ ಟ್ವೀಟ್ ಮಾಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್, ನಿಮ್ಮ ಕಾಲುಗಳ ಕೆಳಗೆ ಯಾವುದೇ ಭೂಮಿ ಇಲ್ಲ, ಅದು ನೀವು ಇನ್ನೂ ನಂಬದ ಅದ್ಭುತ – ದುಶ್ಯಂತ್ ಕುಮಾರ್ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದಿಂದ ಮುಖ್ಯಮಂತ್ರಿಗಳಿರಬೇಕೆಂದು ಮಹಾರಾಷ್ಟ್ರದ ಜನರು ಬಯಸುತ್ತಾರೆ. ಆದರೆ ಅದಕ್ಕೆ ಅವಕಾಶ ನೀಡದಿರಲು ಬಿಜೆಪಿಯು ತನ್ನ “ಹಣದ ಶಕ್ತಿಯನ್ನು” ಬಳಸುತ್ತಿದೆ ಎಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.
“ಹಿಂದಿನ ಸರ್ಕಾರವು ಹಣದ ಶಕ್ತಿಯೊಂದಿಗೆ ಹೊಸ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದೆ. ಆದರೆ ರೈತರಿಗೆ ಯಾರೂ ಸಹಾಯ ಮಾಡಿಲ್ಲವಾದ್ದರಿಂದ ರೈತರು ಸೇನಾದಿಂದ ಸಿಎಂ ಬಯಸುತ್ತಾರೆ… ಕೆಲವರು ಹೊಸ ಸೇನಾ ಶಾಸಕರನ್ನು ಹಣದ ಶಕ್ತಿಯಿಂದ ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ದೂರುಗಳು ಹೆಚ್ಚುತ್ತಿವೆ. ಆದರೆ ರಾಜ್ಯದಲ್ಲಿ ಮೌಲ್ಯಗಳಿಲ್ಲದ ರಾಜಕೀಯವನ್ನು ಶಿವಸೇನೆ ಅನುಮತಿಸುವುದಿಲ್ಲ” ಎಂದು ಸಂಪಾದಕೀಯ ಹೇಳಿದೆ.
ಇನ್ನು ಶಿವಸೇನೆಯೊಂದಿಗೆ ಸರ್ಕಾರ ರಚನೆಗೆ ನಮ್ಮ ಬೆಂಬಲವಿಲ್ಲ ಎಂದು ಎನ್ಸಿಪಿ ಮುಖಂಡ ಶರಾದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಜನತೆ ನಮಗೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಆದೇಶ ನೀಡಿದೆ. ಅದನ್ನು ಪಾಲಿಸುತ್ತೇವೆ ಎಂದಿದ್ದಾರೆ.
ನವೆಂಬರ್ 08ರಂದು ಈ ಸರ್ಕಾರದ ಅವಧಿ ಮುಗಿಯಲಿದ್ದು, ಇನ್ನೊಂದು ದಿನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಇಲ್ಲವಾದಲ್ಲಿ ರಾಷ್ಟ್ರಪತ್ರಿ ಆಡಳಿತ ಹೇರುವ ನಿರೀಕ್ಷೆಯಿದೆ. ಅಷ್ಟರಲ್ಲಿ ಬಿಜೆಪಿ ಶಿವಸೇನೆ ಒಂದಾಗುತ್ತಾರ ಇಲ್ಲವಾ ಎಂಬುದು ಇನ್ನೊಂದೆ ದಿನದಲ್ಲಿ ತಿಳಿಯಲಿದೆ.