Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ ...

ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

- Advertisement -
- Advertisement -

ಕಾಕತಾಳೀಯವೆಂಬಂತೆ 2020ರ ಸಾಲಿನಲ್ಲಿ ಕನ್ನಡದಲ್ಲಿ ಬಂದಿರುವ ಎರಡು ಆತ್ಮಕಥೆಗಳಲ್ಲೂ ಕಾಗೆಯ ಪ್ರಸ್ತಾಪವಿದೆ. ಡಾ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಆತ್ಮಕಥೆಗೆ ’ಕಾಗೆ ಮುಟ್ಟಿದ ನೀರು’ ಎಂದು ಕರೆದಿದ್ದಾರೆ. ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ’ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಆತ್ಮಕಥನದ ಆರಂಭವೇ ಕಾಗೆ ಪ್ರಸ್ತಾಪದೊಂದಿಗೆ. ಮೂಡ್ನಾಕೂಡು ತಾಯಿ, ಅವರ ಅಂಗಳದ ಒಂಟಿ ತೆಂಗಿನ ಮರದ ಗರಿಯ ಮೇಲೆ ಕುಳಿತ ಕಾಗೆಯೊಂದು ’ಕಾಕಾ’ ಎಂದು ಕರೆದಾಗಲೇ ಅವರ ಮನೆಗೆ ಬೆಳಕಾಗುವುದು. ಮೂಡ್ನಾಕೂಡು ತಾಯಿ ಅದನ್ನು ಗತಿಸಿದ ತನ್ನ ತಾಯಿಯೇ ಬಂದು ಎಚ್ಚರಿಸುತ್ತಿದ್ದಾಳೆಂದು ಭಾವಿಸಿ ಕೈ ಮುಗಿಯುತ್ತಿದ್ದರೆಂದು ಅವರು ನೆನಪಿಸಿಕೊಳ್ಳುತ್ತಾರೆ. ಗಮನಾರ್ಹವೆಂದರೆ ಈ ಇಬ್ಬರೂ ತಳ ಸಮುದಾಯದಿಂದ ಬಂದವರು.

ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಶೀರ್ಷಿಕೆ ಒಂದು ಸಾಂಕೇತಿಕ. ನಮ್ಮಲ್ಲಿ ಬಹುಮಂದಿ ಶಿಷ್ಟ ಜನರು ಕಪ್ಪಗಿರುವ ಪ್ರಾಣಿ, ಪಕ್ಷಿ, ವಸ್ತು ಎಲ್ಲವನ್ನೂ ಅಪಶಕುನವೆಂದು ಭಾವಿಸುವರು. ಕಾಗೆ, ಗೂಗೆ, ನರಿ, ಬೆಕ್ಕು ಮುಂತಾಗಿ ಯಾವ ಪಕ್ಷಿ ಪ್ರಾಣಿಯಾಗಲಿ ಶುಭವೂ ಅಲ್ಲ, ಅಶುಭವೂ ಅಲ್ಲದಿದ್ದರೂ, ಅವುಗಳ ತಲೆಗೆ ಇವೆಲ್ಲವನ್ನೂ ಕಟ್ಟಲಾಗಿದೆ. ಕಾಗೆ ಜನಪದ ಕತೆಗಳಲ್ಲಿ ಪರಿವರ್ತನೆಯ ಹಾಗೂ ಬದಲಾವಣೆಯ ರೂಪಕ. ಬೆಳಗಿನ ಹರಿಕಾರ. ಹಲವು ಬುಡಕಟ್ಟು ಜನ ತಮ್ಮ ಮೂಲವನ್ನು ಕಾಗೆ, ಗೂಗೆ, ಬೆಕ್ಕು ಮುಂತಾದ ಪ್ರಾಣಿಪಕ್ಷಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಂದಗುಳ ಕಂಡರೆ ’ಕಾಕಾ’ ಎಂದು ಕರೆವ ಕಾಗೆಯ ಬಂಧುಜನರ ಪ್ರೀತಿ ಅಪಾರ. ತನ್ನ ಮರಿಯಂತೆಯೇ ಕೋಗಿಲೆಯ ಮರಿಗೂ ಗುಟುಕು ಕೊಡುವ ವಾತ್ಸಲ್ಯಮಯಿ. ಹಿರಿಯರಿಗೆ ದಿವಸದ ದಿನ ಹಾಕಿದ ಕೂಳನ್ನು ಮುಟ್ಟಿ ಅವರನ್ನು ಸ್ವರ್ಗಕ್ಕೇರಿಸುವ ನಿಚ್ಚಣಿಕೆ. ಗಡಿಗೆಯ ತಳದ ನೀರು ಎಟಕದಿರುವಾಗ ಅದರಲ್ಲಿ ಕಲ್ಲು ಹಾಕಿ ನೀರು ಕುಡಿವ ಬುದ್ಧಿವಂತ ಪಕ್ಷಿ.


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ಇನ್ನು ತನ್ನ ಸಂತತಿಯ ವಿನಾಶಕ್ಕೆ ಕಾರಣವಾಗುತ್ತಿದ್ದ ಕಾಳಿಂಗ ಸರ್ಪವನ್ನು ರಾಜಭಟರಿಂದ ಕೊಲ್ಲಿಸಿದ ಪಂಚತಂತ್ರದ ಕತೆ ಯಾರಿಗೆ ತಾನೆ ಗೊತ್ತಿಲ್ಲ? ಮುಂದೆ ಸಂಭವಿಸುವ ಅಪಾಯವನ್ನು ಮೊದಲೆ ಗ್ರಹಿಸಿ ಸೂಚನೆ ಕೊಡುವ ’ಇಂಟಲಿಜೆನ್ಸ್’ ದಳ ಕಾಗೆಯ ಬಳಗ. ನಾನು ಕಂಡಂತೆ ನಮ್ಮೂರು ಮೊದಲುಗೊಂಡು ಅಮೆರಿಕದ ನ್ಯೂಯಾರ್ಕಿನ ’ಲಿಬರ್ಟಿ ಸ್ಟ್ಯಾಚು’ ಆವರಣದಲ್ಲೂ, ಅಂದರೆ ಬಹುತೇಕ ಎಲ್ಲ ದೇಶಗಳಲ್ಲೂ ಕಾಗೆಗಳ ಸಂತತಿ ಉಂಟು. ಇದನ್ನು ಅಂತರರಾಷ್ಟ್ರೀಯ ಪಕ್ಷಿ ಎಂದು ಕರೆಯಬಹುದು. ರಾಮಾಯಣದಲ್ಲಿ ಶ್ರೀರಾಮನು ಈ ಕಾಕಾಸುರನ ಒಂದು ಕಣ್ಣನ್ನು ಊನ ಮಾಡಿದನು ಎಂದು ಹೇಳಿರುವುದು ಅಸಂಭವ. ಯಾಕೆಂದರೆ ಒಂದು ಕ್ರೌಂಚ ಪಕ್ಷಿಯ ಸಾವಿಗೆ ಶೋಕಿಸಿ ಅದೇ ಸ್ಥಾಯಿಯಲ್ಲೇ ಶ್ರೀರಾಮಾಯಣದಂತಹ ಮಹಾಗಾನವನ್ನು ಹಾಡಿದ ವಾಲ್ಮೀಕಿ ಋಷಿ ತನ್ನ ಕಾವ್ಯ ನಾಯಕನಿಂದ ಈ ಪಕ್ಷಿಯ ಕಣ್ಣಿಗೆ ಬಾಣ ಬಿಡಿಸಿರಲಾರ. ಇದು ಪ್ರಕ್ಷಿಪ್ತ.

ಇನ್ನು ಜೀವಜಲ ನೀರಿನ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ’ಕಾಗೆ ಮುಟ್ಟಿದ ನೀರು’ ಎಂಬ ಶೀರ್ಷಿಕೆ ಏಕೆಂದರೆ ಕರಿಮಲೆಯ ಕಾಡಿನ ಬುಡಕಟ್ಟೊಂದರ ಬಡ ಕುಟುಂಬದಲ್ಲಿ ಹುಟ್ಟಿದ ಈ ಹುಡುಗನನ್ನು ಅಲ್ಲಿಗೆ 6 ಕಿ.ಮೀ. ದೂರದ ’ಕೂತ್ಕುಂಜ’ ಎಂಬ ಶಾಲೆಗೆ ಸೇರಿಸಲಾಗಿತ್ತು. ಇವರಿದ್ದ ಬಂಟಮಲೆಯ ’ವಾಟೆಕಜೆ’ಯ ಮನೆಗೂ ಸ್ಕೂಲಿಗೂ ನಡುವೆ ಕಿರು ತೊರೆಯೊಂದು ಹರಿಯುತ್ತದೆ. ಅಪ್ಪ ಶೇಷಪ್ಪ ಗೌಡರು ಯಕ್ಷಗಾನದ ಅರ್ಥಧಾರಿಯಾಗಿ ಹೋಗಿದ್ದ ದಿನಗಳಲ್ಲಿ ಅಮ್ಮ ಗೌರಮ್ಮನೇ ಈ ಚೋಟುದ್ದದ ಹುಡುಗನನ್ನು ’ನೆಲದಿಂದ ಕಾಲನ್ನು ಬಿಡಬೇಡ’ ಎಂದು ಹೇಳುತ್ತಾ ಹೊಳೆ ದಾಟಿಸುತ್ತಿದ್ದರು. ಒಂದು ದಿನ 4 ಗಂಟೆಗೆ ಶಾಲೆ ಮುಗಿದ ಮೇಲೆ ಆ ಬಾಲಕ ಕಿರು ಹೊಳೆಯ ಹತ್ತಿರ ಬಂದ. ಆದರೆ ಏನಾಯ್ತೊ? ಅಮ್ಮ ಬಂದಿರಲಿಲ್ಲ. ಎಷ್ಟು ಕಾದರೂ ಅಮ್ಮನ ಸುಳಿವಿಲ್ಲ. ಕತ್ತಲು ಕವಿಯಿತು. ಹಿಂದೆ ಹೋಗಲು ದಾರಿ ಕಾಣದು; ಮುಂದೆ ಹೋಗಲು ಹೊಳೆ ಬಿಡದು. ಹತ್ತಿರದಲ್ಲಿ ಒಂದು ದೈತ್ಯಾಕಾರದ ಮರ. ಅದರ ಬುಡದ ಪೊಟರೆಯಲ್ಲಿ ಅವನು ಭಯ-ಚಳಯಿಂದ ನಡುಗುತ್ತ ಅವಿತು ಕುಳಿತ. ಹೊದ್ದಗೊರಬಿನ ಮೇಲೆ ಬೀಳ್ವ ಮಳೆ ಹನಿ, ಹೊಳೆಯ ಮೊರೆತ ಬಿಟ್ಟರೆ ಬೇರೆ ಸದ್ದಿಲ್ಲ. ಕಾರ್ಗತ್ತಲು. ಮತ್ತೇನೂ ಇರಲಿಲ್ಲ.

’ಮರದ ಬುಡದಲ್ಲಿ ಗೊರಬಿಯೊಳಗೆ ಮುದುರಿಕೊಂಡು ಬಿದ್ದಿದ್ದ ನನ್ನನ್ನು ಯಾರೋ ಅಲ್ಲಾಡಿಸಿದಾಗಲಷ್ಟೇ ಎಚ್ಚರ. ಕಣ್ಣು ಬಿಟ್ಟಾಗ ಬಾಚಿ ತಬ್ಬಿಕೊಂಡಿದ್ದ ಅಮ್ಮ ಕಂಡರು. ರಾತ್ರಿ ಕಾಣೆಯಾಗಿದ್ದ ಬೆಳಕು ಮರದೆಡೆಗಳಿಂದ ನೆಲಕ್ಕಿಳಿದು ಅಮ್ಮನ ಕಣ್ಣೀರನ್ನು ಕಿರುತೊರೆಗೆ ಜೋಡಿಸಿದಂತೆ ಭಾಸವಾಯಿತು. ಅಮ್ಮ ಮೆಲ್ಲನೆ ಕೈ ಹಿಡಿದೆಬ್ಬಿಸಿ, ಹೊಳೆ ದಾಟಿಸಿ ಮನೆ ಕಡೆ ನಡೆದರು. ನಾನು ಕೇಳಿದೆ ’ನಿನ್ನೆ ರಾತ್ರಿ ಹೊಳೆ ದಾಟಿಸಲು ಯಾಕೆ ಬರಲಿಲ್ಲ?’ ಅಮ್ಮ ಹೇಳಿದರು ’ನಿನ್ನೆ ಸಾಯಂಕಾಲ ನನ್ನನ್ನು ಕಾಗೆ ಮುಟ್ಟಿತ್ತು. ಮುಟ್ಟಿನ ರಕ್ತ ಮೈಮೇಲಿರುವಾಗ ಕಾಡಲ್ಲಿ ನಡೆದರೆ, ಕರಿಮಲೆಯ ಕಾಲೆ-ಪಿಶಾಚಿಗಳಲ್ಲಾ ಮೈಗೆ ಸೇರಿಕೊಂಡು, ದೇಹದ ರಕ್ತವನ್ನೆಲ್ಲಾ ಹೀರಿ ಸಾಯಿಸಿ ಬಿಡುತ್ತವೆ. ಹಾಗಾಗಿ ಬಾರದೇ ಹೋದೆ. ನೀನು ಕೂತ್ಕುಂಜ ಅಜ್ಜಿ ಮನೆಗೆ ಹಿಂದಿರುಗಿ ಹೋಗಿರುವಿಯೆಂದು ಭಾವಿಸಿದೆ’ (ಪುಟ.37) ಎಂದರು.

ಕಾಗೆ ಮುಟ್ಟಿದರೆ ದೋಷ ಎಂಬ ಕಾರಣದಿಂದ ಬಿಳಿಮಲೆಯ ಅಮ್ಮ ಅಂದು ಹೊಳೆ ದಾಟಿಸಲು ಬಾರದೆ ಹೋದರು. ಹೀಗೆ ಕಾಗೆ ಮುಟ್ಟಿದರೆ ಕೆಟ್ಟದ್ದು ಎಂಬ ಮೌಢ್ಯ ಜನರಲ್ಲಿ ಬೇರೂರಿಬಿಟ್ಟಿದೆ. ಇದಾಗಿ ಆರು ದಶಕಗಳು ಕಳೆದವು. ಆ ನೆನಪು ಮಾತ್ರ ಬಿಳಿಮಲೆಯವರ ನೆನಪಿನಿಂದ ಅಳಿಯದೆ ಅಚ್ಚೊತ್ತಿದೆ. ಅದನ್ನೇ ಒಂದು ಸವಾಲು ಎಂಬಂತೆ ಬಗೆದು ತಮ್ಮ ಆತ್ಮಕತೆಗೆ ’ಕಾಗೆ ಮುಟ್ಟಿದ ನೀರು’ ಎಂದು ಕರೆದಿರುತ್ತಾರೆ. ಹೊಳೆ ದಾಟುವಾಗ ’ನೆಲದಿಂದ ಕಾಲನ್ನು ಬಿಡಬೇಡ’ ಎಂದು ಅಮ್ಮ ಹೇಳಿದ ಅಂದಿನ ಮಾತನ್ನು ತನ್ನ ಬದುಕಿನುದ್ದಕ್ಕೂ ಎಂದೂ ಮರೆಯದಿರುವ ’ಮಾತೃ ವಾಕ್ಯ ಪರಿಪಾಲಕ ಪುರುಷೋತ್ತಮ’ ಇವರು. ಹೀಗೆ ಬಾಲ್ಯದಲ್ಲಿ ಕಾಡು ಮತ್ತು ಕಿರುಹೊಳೆಯನ್ನು ದಾಟಿದ್ದು ಅವರು ಬದುಕಿನ ಕಷ್ಟಗಳ ಹೊಳೆ ದಾಟಲು ಊರುಗೋಲಾಯಿತು. ಇದೇ ಆತ್ಮಚರಿತ್ರೆಯ ಕೇಂದ್ರ ಬಿಂದು.

’ವಿದ್ಯೆ ಇಲ್ಲದ ಜಾತಕದ ಮಗು ಹುಟ್ಟಿದ್ದು ಮಾತ್ರವಲ್ಲ ಶಾಲೆಗೆ ಹೋದದ್ದೂ’ ಒಂದು ಪವಾಡವೆ! ಇವರು ಬಂಟಮಲೆಯ ಒಂಟಿ ಕುಗ್ರಾಮದಲ್ಲಿ ಹುಟ್ಟಿ ಕೂತ್ಕುಂಜ, ಪಂಜೆ ಹೈಸ್ಕೂಲು, ಪುತ್ತೂರಿನಲ್ಲಿ ಪದವಿವರೆಗೆ ಕಲಿತು, ಮದ್ರಾಸಿನಲ್ಲಿ ಕನ್ನಡ ಎಂ.ಎ. ಮಾಡಿದ್ದೊಂದು ಹರಸಾಹಸವೇ ಸರಿ. ಇಲ್ಲಿಗೆ ಈ ಪುರುಷೋತ್ತಮನ ಬದುಕಿನ ಬಾಲಕಾಂಡ ಒಂದು ದಡ ಮುಟ್ಟುತ್ತದೆ. 1979ರಲ್ಲಿ ಸೂಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಐದು ವರ್ಷ ಕನ್ನಡ ಮೇಷ್ಟ್ರಾಗಿದ್ದು ಮಂಗಳೂರು ವಿ.ವಿ.ಯಲ್ಲಿ ಡಾಕ್ಟರೇಟ್ ಮಾಡಿ, 1984ರಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಉಪನ್ಯಾಸಕನಾಗಿ ಸೇರಿದರು. ಇದು ಕರ್ನಾಟಕದಲ್ಲಿ ಚಳುವಳಿಗಳ ಬಿರುಸಿನ ಕಾಲ. ರೈತ ಸಂಘ, ದಲಿತ ಸಂಘರ್ಷ ಸಮಿತಿ, ದಲಿತ-ಬಂಡಾಯ ಚಳುವಳಿಗಳು ರಾಜ್ಯಾದ್ಯಂತ ನೆಲಮೂಲಕ್ಕಿಳಿಸಿ ಬೇರು ಚಿಗುರೊಡೆದು ಸುಳಿ ತೆಗೆದು ಬೆಳೆಯುತ್ತಿದ್ದವು.

ಎಲ್ಲಿ ನೋಡಿದರೂ ’ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಸಾಮಾಜಿಕ ನ್ಯಾಯ, ವೈಜ್ಞಾನಿಕ ಬುದ್ಧಿ, ವೈಚಾರಿಕ ಪ್ರಜ್ಞೆ ಪಸರಿಸುತ್ತಿತ್ತು. ಬ್ರಾಹ್ಮಣಿಕೆಯ ವಿರುದ್ಧ ಜಾತಿ ವಿನಾಶದ ಕಿಡಿಗಳು ಹಾರುತ್ತಿದ್ದವು. ’ಜನರ ನೋವಿಗೆ ಮಿಡಿವ ಖಡ್ಗವಾಗಲಿ ಕಾವ್ಯ; ಬಂದೂಕಿನ ನಳಿಗೆಯಲಿ ಗುಬ್ಬಿ ಗೂಡು ಕಟ್ಟಲಿ’ ಎಂಬ ದಲಿತ-ಬಂಡಾಯ ಕಾವ್ಯಕಹಳೆ ಮಾರ್ದನಿಸುತ್ತಿತ್ತು. ಕರಾವಳಿ ಸೀಮೆಯಲ್ಲಿ ಕಡಲ ಮೊರೆತದೊಂದಿಗೆ ಈ ಚಳುವಳಿಗಳ ಮೊರೆತವೂ ಸೇರಿ ಯುವ ಜನರಲ್ಲಿ ವಿಚಾರಕ್ರಾಂತಿಯ ಭೋರ್ಗರೆತ ದಡ ಬಡಿಯುತ್ತಿತ್ತು. ಮಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರೂ ವಿದ್ಯಾರ್ಥಿಗಳೂ ಬೆರಗಾಗಿ ಈ ತುಡಿತಕ್ಕೆ ಬಡಿತಕ್ಕೆ ಒಳಗಾದರು. ನಾಡಿನಾದ್ಯಂತ ಹೊಸ ದಿಗಂತದ ಗಾಳಿ ಬೀಸತೊಡಗಿತು. ಪುರುಷೋತ್ತಮ ಬಿಳಿಮಲೆಯವರೂ ಇವುಗಳ ಸೆಳೆತಕ್ಕೆ ಸಿಕ್ಕಿದರು. ಪತ್ರಿಕೆಗಳಿಗೆ ಬರೆದರು, ಕರೆದ ಕಡೆ ನಿಂತು ಭಾಷಣ ಮಾಡಿದರು. ಒಟ್ಟಾರೆ ಪ್ರಗತಿಪರ ಸಂಘಟನೆಗಳೊಂದಿಗೆ ಒಂದಾಗಿ ದುಡಿದರು. ಕರಾವಳಿಯ ವಿಶೇಷ ತಾಳಮದ್ದಲೆ-ಯಕ್ಷಗಾನ, ಗುತ್ತಿನಾಟ, ಭೂತಾರಾಧನೆ ಮುಂತಾದವುಗಳ ಸಂಶೋಧನೆ ಮಾಡುತ್ತ ಶಿವರಾಮ ಕಾರಂತರ ಪರಂಪರೆಯನ್ನು ಮುಂದೆ ದಾಟಿಸಿದರು. ಮೂಕಜ್ಜಿಯ ಕನಸಿಗೆ ಸಾಕಾರ ಕೊಡುತ್ತ ಭಾಷ್ಯಕಾರರಾದರು.

’ಮಂಗಳೂರು ನಮ್ಮದು, ನಮ್ಮದೀ ಊರು’ ಎಂದು ಕರಾವಳಿಯ ಜಾನಪದ ಕಲೆ ಯಕ್ಷಗಾನವನ್ನು ಮೈದುಂಬಿಸಿಕೊಂಡು ಆಡಿ, ಹಾಡಿ, ಬರೆಯುತ್ತ ಬಿಳಿಮಲೆ ಬೆಳೆಯುತ್ತಿರುವ ಇಂತಪ್ಪ ಕಾಲಕ್ಕೆ, ಅತ್ತ ಹಾಳು ಹಂಪೆಯ ’ಬಂಡೆಗಲ್ಲುಗಳ’ ನಡುವೆ ’ಹಂಪಿ ಕನ್ನಡ ವಿಶ್ವವಿದ್ಯಾಲಯ’ ಆರಂಭವಾಯಿತು. ಸಂಗ್ಯಾ ಬಾಳ್ಯಾ, ಜೈಸಿದನಾಯಕ, ಹೇಳತೇನ ಕೇಳ, ಶಿಖರ ಸೂರ್ಯ ಮುಂತಾದ ಕೃತಿಗಳ ಕರ್ತೃ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರರು ಅದರ ಉಪಕುಲಪತಿಗಳು. ಅವರು ಡಾ. ಬಿಳಿಮಲೆಗೆ ’ನಿಮ್ಮಂಥವರು ಇಲ್ಲಿ ಕೆಲಸ ಮಾಡಲು ಬರಬೇಕು’ ಎಂದು ಆಹ್ವಾನಿಸಿದರು. ನಾಡಿನ ಅನೇಕ ಸೃಜನಶೀಲ ಪ್ರತಿಭೆಗಳು ಅಲ್ಲಿ ನೆರೆಯಲಾರಂಭಿಸಿದರು. ಕಂಬಾರರ ಕರೆಗೆ ಓಗೊಟ್ಟು ಬಿಳಿಮಲೆ 1992ರಲ್ಲಿ ಅಲ್ಲಿಗೆ ಹೋದರು. ಇಲ್ಲಿಂದ ಆರಂಭ ಈ ಪುರುಷೋತ್ತಮನ ಸಾಹಸದ ಕಿಷ್ಕಿಂಧಾಕಾಂಡ.

ಮಂಗಳೂರು ಬಿಡುವಾಗಲೇ ಕೆಲವು ಗೆಳೆಯರು ’ಕಂಬಾರರನ್ನು ನಂಬಬೇಡ’ ಎಂದದ್ದುಂಟು. ಆದರೆ ಅವರೆಂದ ಮಾತು, ಹೋದ 3-4 ವರ್ಷಗಳಲ್ಲೇ ಬಿಳಿಮಲೆಯವರ ಅನುಭವಕ್ಕೆ ಬಂತು. ’ಜೈಸಿದ ನಾಯಕ’ ನಾಟಕದಲ್ಲಿ ಜಡ ವ್ಯವಸ್ಥೆಯನ್ನು ವಿರೋಧಿಸಿ ಕ್ರಾಂತಿ ಮಾಡಿ ಅಧಿಕಾರದ ಗದ್ದುಗೆ ಏರಿದ ನಾಯಕನು ಕೆಲವೇ ದಿನಗಳಲ್ಲಿ ಆ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ತಾನೂ ಅದೇ ವ್ಯವಸ್ಥೆಯ ಭಾಗವಾಗಿ ಕ್ರೌರ್ಯಕ್ಕೆ ಇಳಿಯುವುದು ಅನಿವಾರ್ಯವಾಗಿ ಬಿಡುತ್ತದೆ. ಕುಲಪತಿ ಕಂಬಾರರ ನಿಜ ಜೀವನದಲ್ಲೂ ಈ ಬಗೆಯ ದ್ವಿದಳ ವ್ಯಕ್ತಿತ್ವ ಇಣುಕಿ ಬಿಡುತ್ತದೆ. ಹಿತ್ತಾಳೆ ಕಿವಿಯ ಅವರು ವಂದಿ ಮಾಗಧರ ಮಾತು ಕೇಳಿ ಪ್ರಾಮಾಣಿಕವಾಗಿಯೂ ನಿಷ್ಠೆಯಿಂದಲೂ ಕೆಲಸ ಮಾಡುತ್ತಿದ್ದ ಕೆಲವು ಸಹೋದ್ಯೋಗಿಗಳನ್ನು ಅವಜ್ಞೆಯಿಂದ ಕಾಣಲು ಪ್ರಾರಂಭಿಸುತ್ತಾರೆ. ’ಅನುಮಾನಂ ಪೆದ್ದ ರೋಗಂ’. ಇದನ್ನು ಮನಗಂಡು ಆತ್ಮ ಪ್ರತ್ಯಯವುಳ್ಳ ಕೆಲವು ವಿದ್ವಾಂಸರು ಜಾಗ ಖಾಲಿ ಮಾಡಿ ಬಿಡುತ್ತಾರೆ. ಕತ್ತೆ ದುಡಿಯುವಂತೆ ದುಡಿಯುತ್ತಿದ್ದ ಬಿಳಿಮಲೆಯ ಮೇಲೂ ಭ್ರಷ್ಟಾಚಾರದ ಹುತ್ತಕಟ್ಟಲಾರಂಭಿಸಿತು. ’ಮರ್‍ಯಾದಾಪುರುಷೋತ್ತಮ’ನಾದ ಇವರೂ ಅಲ್ಲಿಂದ ಜಾಗ ಖಾಲಿ ಮಾಡಲು ಹವಣಿಸುತ್ತಾರೆ. ಆದರೆ ಹಿಂದಿನ ವಿ.ವಿ.ಗೆ ರಾಜೀನಾಮೆ ಕೊಟ್ಟು ಬಂದಿದ್ದ ಕಾರಣ, ಮುಂದೇನು ಎಂಬ ಕವಲು ದಾರಿಯಲ್ಲಿ ಇವರು ನಿಲ್ಲುವಂತಾಗುತ್ತದೆ. ಹೀಗಿರುತ್ತ ಒಮ್ಮೆ ಬೆಂಗಳೂರಿನಲ್ಲಿ ನನಗೆ ಸಿಕ್ಕಿದ್ದ ಇವರು ’ಇಲ್ಲಿ ಎಲ್ಲಾದರೂ ಒಂದು ಮೇಷ್ಟ್ರು ಕೆಲಸ ಸಿಕ್ಕಿದರೂ ಬಿಟ್ಟು ಬಂದು ಬಿಡುತ್ತೇನೆ’ ಎಂದದ್ದುಂಟು.

ಬಾಲ್ಯದಲ್ಲಿ ವಾಟೆಕಜೆ ಗೂಡಿನ ಮನೆಯಲ್ಲಿ ಎಳೆಯ ಹುಡುಗನನ್ನು ಅವರ ಅಮ್ಮ ಒಳಗೆ ಬಿಟ್ಟು ಬಾಗಿಲು ಮುಚ್ಚಿ ಕಾಡಿನ ಕೆಲಸಕ್ಕೆ ಹೋಗುತ್ತಿದ್ದರು.

ಒಳಗೆ ಕತ್ತಲಾದ ಕೂಡಲೆ ಸಂದುಗೊಂದಿನಿಂದ ಇಲಿಗಳು ನುಗ್ಗಿ ಮೈಮೇಲೆ ಹಾರುತ್ತಿದ್ದವು. ಅವುಗಳ ಓಡಾಟವನ್ನು ಕಂಡು ದಿಗಿಲಾದರೂ ಹುಡುಗ ಖುಷಿ ಪಡುತ್ತಿದ್ದನಂತೆ; ಹಿಡಿಯಲು ಪ್ರಯತ್ನಿಸುತ್ತಿದ್ದನಂತೆ. ಆದರೆ ಅವು ಎಂದೂ ಇವನನ್ನು ಪರಿಗಣಿಸಲೇ ಇಲ್ಲ (ಪುಟ 25) ಎಂದು ಬರೆಯುತ್ತಾರೆ. ಎಳೆಯಂದಿನ ಇಂಥ ಪ್ರತಿಕೂಲ ಸನ್ನಿವೇಶವೇ ಹಂಪಿಯಲ್ಲೂ ಉದ್ಭವವಾಯಿತು. ಹಾಗೂಹೀಗೂ ಹಂಪಿಯಲ್ಲಿ ಆರು ವರ್ಷ ಕಳೆದರು.

ಹೀಗಿರುತ್ತ, 1998ರಲ್ಲಿ ದೆಹಲಿಯ ’ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್’ ಎಂಬ ವಿದೇಶಿ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಹಂಪಿಗೆ ವಿದಾಯ ಹೇಳಿ ದೆಹಲಿಗೆ ಹೊರಟರು. ಅದರಲ್ಲಿ 16 ವರ್ಷಗಳ ಕಾಲ ದುಡಿದು ಆ ಸಂಸ್ಥೆಯನ್ನು ಕಟ್ಟಿದರು. ವಿದೇಶಗಳಲ್ಲಿ ಕನ್ನಡ ಜಾನಪದ ಸೊಗಡಿನ ವಕ್ತಾರನಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಓಡಾಡಿದರು. ಹೋದಲ್ಲಿ ಬಂದಲ್ಲಿ ಕರಾವಳಿಯ ಯಕ್ಷಕಲೆ ಯಕ್ಷಗಾನದ ಬಗ್ಗೆ ಪ್ರಾತ್ಯಕ್ಷಿಕೆ, ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿದರು. ಹೀಗೆ ಬಂಟಮಲೆಯ ಈ ಬಂಟ ಮಂಗಳೂರನ್ನು ಹಿಂದಕ್ಕೆ ಬಿಟ್ಟು, ರಾಜ್ಯ, ರಾಷ್ಟ್ರದ ಗಡಿ ದಾಟಿ ಜಾನಪದ ವಿದ್ವಾಂಸನಾಗಿ ಅಮೆರಿಕ, ಜಪಾನ್, ಇಸ್ರೇಲ್ ಮುಂತಾದ ದೇಶ ವಿದೇಶಗಳನ್ನು ದಣಿವರಿಯದೆ, ಆಶೆ ಕನಸನ್ನು ಹೊತ್ತು ಸುತ್ತಿದರು. ದಿನೇಶ್ ಅಮೀನ್ ಮಟ್ಟು ಹೇಳುವಂತೆ ಬಿಳಿಮಲೆ ಪಯಣ ಎಂದರೆ ’ಟೂರಿಸ್ಟ್ ಗೈಡ್ ಇದ್ದಂತೆ. ಇವರೊಂದು ಜಂಗಮ ಜಾನಪದ ವಿಶ್ವವಿದ್ಯಾಲಯ.

ಇವರ ಮುಂಗಾಣ್ಕೆ ಜೆ.ಎನ್.ಯುನಲ್ಲಿ ಕನ್ನಡದ ಪೀಠವನ್ನು ಸುಸ್ಥಿರಗೊಳಿಸಿತು. ಹಾಗೂ ಜಪಾನ್ ಮುಂತಾದ ದೇಶಗಳಲ್ಲಿ ಕನ್ನಡ ಯಕ್ಷಗಾನ ಬಯಲಾಟಕ್ಕೆ ವಿಶೇಷ ಮಾನ್ಯತೆ ತಂದಿತು. ಆದರೂ ಕೆಲವು ಅಸೂಯಾಪರರು ಬಿಳಿಮಲೆಯನ್ನು ’ಅಮೆರಿಕನ್ ಏಜೆಂಟ್’ ಎಂದು ಮರೆಯಲ್ಲಿ ಗೊಣಗಿದ್ದುಂಟು. ಬಾಲ್ಯದಲ್ಲಿ ಕಾಡಿನ ಪ್ರಾಣಿಗಳನ್ನು ಎದುರಿಸಿ ಬೆಳೆದ ಇವರಿಗೆ ಕಾಂಕ್ರೀಟ್ ಕಾಡಿನ ’ವನ್ಯಮೃಗ’ಗಳನ್ನು ಎದುರಿಸುವ ಧೈರ್ಯ ತಾನಾಗಿಯೆ ಬಂದಿರಬೇಕು. ಬಡತನವನ್ನು ಉಂಡು ಮಲಗಿದವರಿಗೆ ಸುಖದ ಸುಪ್ಪತ್ತಿಗೆಯಲ್ಲಿ ಮಲಗಿದರೆ ನಿದ್ದೆ ಹತ್ತದು. ವರನಟ ಡಾ. ರಾಜ್‌ಕುಮಾರ್ ಸದಾ ನೆಲದ ಮೇಲೆ ಒಂದು ಚಾಪೆ ಹಾಸಿ ರಗ್ಗು ಹೊದ್ದು ನಿರಾಳ ನಿದ್ರಿಸುತ್ತಿದ್ದರಂತೆ. ಬಿಳಿಮಲೆಯವರು ಸಹ ವಿದೇಶೀ ಹೈಟೆಕ್ ಹೋಟೆಲ್ ’ಗಿಲ್ಪಗಳ’ ಮೇಲೆ ನಿದ್ದೆಬಾರದೆ ನೆಲಕ್ಕೆ ರಗ್ಗು ಹಾಸಿ ನಿದ್ದೆ ಹೋಗುತ್ತಿದ್ದೆನೆಂದು ಹೇಳಿಕೊಂಡಿದ್ದಾರೆ. ಸರಳಜೀವನ ಉನ್ನತ ಚಿಂತನ ಇರುವವಂಥವರ ನಡೆ ಇದು.

’ದೇವರು ಮತ್ತು ದೇವ ಮಾನವರು’ ಎಂಬ ಭಾಗ ಬಿಳಿಮಲೆಯ ವಿಚಾರಧಾರೆ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ. ಈ ನೆಲೆಯಲ್ಲಿ ಬಿಳಿಮಲೆ ಶಿವರಾಮಕಾರಂತ ಹಾಗೂ ಕುವೆಂಪು ಅವರ ವಾರಸುದಾರರು. ಇವರು ಎಳವೆಯಿಂದಲೂ ಇಲ್ಲಿಯವರೆಗೆ ಈ ಜಾತಿ, ಮತ, ದೇವರು ಧರ್ಮ, ಭೂತ, ಪಿಶಾಚಿ, ಜ್ಯೋತಿಷ್ಯ, ಪಂಚಾಂಗ, ಜಾತಕ, ಮಾಟ, ಮಂತ್ರ, ಬ್ರಹ್ಮ ರಾಕ್ಷಸ, ಪುನರ್ಜನ್ಮ ಮುಂತಾದವುಗಳಲ್ಲಿ ನಂಬಿಕೆ ಇಟ್ಟವರಲ್ಲ. ಇವೆಲ್ಲವೂ ಪರಾವಲಂಬಿ ಪುರೋಹಿತವರ್ಗ ಹುಟ್ಟುಹಾಕಿದ ಮಹಾನ್ ಮೌಢ್ಯಗಳು ಎಂಬುದು ಇವರ ಖಚಿತ ನಿಲುವು. ಉದರ ನಿಮಿತ್ತ ಬಹುಕೃತ ವೇಷ ಧರಿಸುವ ಜರತಾರಿ ಜಗದ್ಗುರುಗಳಲ್ಲಿ ಇವರಿಗೆ ಕಿಂಚಿತ್ತೂ ನಂಬಿಕೆ ಇಲ್ಲ. ಪೆದ್ದುಪೆದ್ದಾಗಿ ಅವರು ಮಾತಾಡುವುದನ್ನು ನೋಡಿ ನನಗೆ ನಗೆ ಬರುತ್ತದೆ ಎನ್ನುತ್ತಾರೆ. ಅದೆಲ್ಲಾ ಅಮಾಯಕ ಜನಕೋಟಿಯನ್ನು ವಂಚಿಸುವ ವಿಧಾನ. ಕುವೆಂಪು ಅವರ ’ಮನುಜ ಮತ ವಿಶ್ವ ಪಥ’ ಇವರ ಆದರ್ಶ.

ಡಾ. ಪುರುಷೋತ್ತಮ ಬಿಳಿಮಲೆಯವರ ಖಾಸಗಿ ಜೀವನದ ಬಗ್ಗೆ ಒಂದಿಷ್ಟು; ಕುವೆಂಪು ’ಕರಿಸಿದ್ದ’ ಎಂಬ ಕಥನ ಕವನದಲ್ಲಿ ನಿರ್ವಚಿಸಿರುವಂತೆ, ’ಒಬ್ಬೊಬ್ಬ ಗಂಡನಲಿ ಶ್ರೀರಾಮನಡಗಿಹನು; ಒಬ್ಬೊಬ್ಬ ಹೆಂಡತಿಯ ಎದೆಯೊಳಿರುವಳು ಸೀತೆ’ ಎಂಬ ಮಾತಿಗೆ ಭಾಷ್ಯ ಬರೆದಂತಿದೆ ಬಿಳಿಮಲೆ ಮತ್ತು ಶೋಭನಾ, ಇವರ ದಾಂಪತ್ಯ. ಯಮಧರ್ಮನಿಂದ ’ಸತ್ಯವಾಹನ’ನನ್ನು ’ಸಾವಿತ್ರಿ’ ಉಳಿಸಿಕೊಂಡಳು ಎಂಬುದು ಪುರಾಣ ಕತೆ. ಆದರೆ ಯೌವ್ವನದಲ್ಲಿ ಬಿಳಿಮಲೆಗೆ ಹೃದಯವನ್ನು ಕೊಟ್ಟ ಶೋಭನಾ, ಬಿಳಿಮಲೆಯವರ ’ಕಿಡ್ನಿ ಫೇಲ್’ ಆದಾಗ ತನ್ನ ಒಂದು ಕಿಡ್ನಿಯನ್ನೇ ಕೊಟ್ಟು ಗಂಡನನ್ನು ಉಳಿಸಿಕೊಂಡಿರುತ್ತಾರೆ. ಆತ್ಮಚರಿತ್ರೆಯ ’ಕಿಡ್ನಿ ಕಸಿ’ ಭಾಗವನ್ನು ಓದಿದ ಯಾರಿಗಾದರೂ ’ಇಂತಪ್ಪವರುಂ ವಳರೇ’ ಎಂದು ಕಣ್ಣು ಒದ್ದೆಯಾಗದೆ ಇರದು. ಜಾಗತಿಕ ಪ್ರೇಮ ಕಥಾ ಸಾಹಿತ್ಯದಲ್ಲಿ ’ಕಾಗೆ ಮುಟ್ಟಿದ ನೀರು’ ಆತ್ಮಕತೆಗೆ ಒಂದು ವಿಶಿಷ್ಟ ಸ್ಥಾನ ಉಂಟು.

ಕೊರೊನಾ ವೈರಸ್ಸಿಗಿಂತಲೂ ಭಯಂಕರವಾದ ಜಾತಿ ವೈರಸ್ಸಿನ ಈ ಕಾಲಘಟ್ಟದಲ್ಲಿ ’ಕಾಗೆ ಮುಟ್ಟಿದ ನೀರು’ ಆತ್ಮಕತೆಯನ್ನು ಬರೆದ ಪುರುಷೋತ್ತಮ ಬಿಳಿಮಲೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂಥ ಒಂದು ಕೃತಿಯನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನದ ಅಕ್ಷತಾ ಅವರಿಗೂ ಸಹ ಸವಿ ನೆನಪುಗಳು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...