ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ (ಎನ್ಇಪಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರವನ್ನು ಒದಗಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಈ ನಿರ್ಧಾರವು ವಿಳಂಬವಾಗುತ್ತಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಈ ಕ್ರಮವನ್ನು 2021ರ ಏಪ್ರಿಲ್ ತಿಂಗಳಿನಿಂದ ಪ್ರಾರಂಭಿಸಬೇಕಾಗಿತ್ತು. ಅಂದಾಜಿನ ಪ್ರಕಾರ, ಉಚಿತ ಬೆಳಗಿನ ಉಪಹಾರಕ್ಕಾಗಿ ಹೆಚ್ಚುವರಿ 4,000 ಕೋಟಿ ರೂ. ಮತ್ತು ಪ್ರಸಕ್ತ ಹಣಕಾಸು ವರ್ಷದ ಬಜೆಟ್ನಲ್ಲಿ ಸುಮಾರು 5,000 ಕೋಟಿಯನ್ನು ಶಿಕ್ಷಣ ಇಲಾಖೆಯು ಅಪೇಕ್ಷಿಸಿತ್ತು.
ದೇಶದಾದ್ಯಂತ ಇರುವ 11.8 ಕೋಟಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕಾಗಿ ಖರ್ಚು ಮಾಡುತ್ತಿರುವ ಹಣ 11,000 ಕೊಟಿ ರೂ. ಆಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಆದರೆ ಮುಂಬರುವ ಹಣಕಾಸು ವರ್ಷದಲ್ಲಿ ಶಿಕ್ಷಣ ಇಲಾಖೆಯ ಬಜೆಟ್ ಹಂಚಿಕೆಯನ್ನು 8% ರಷ್ಟು ಕಡಿತಗೊಳಿಸಲಾಗಿದ್ದು, 2020-21ರಲ್ಲಿ 59,845 ಕೋಟಿ ರೂ.ಗಳಿಂದ 2021-22ರಲ್ಲಿ 54,873 ಕೋಟಿ ರೂ.ಗೆ ಇಳಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ, ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸುಮಾರು ಒಂಬತ್ತು ತಿಂಗಳು ಶಾಲೆಗಳನ್ನು ಮುಚ್ಚಲಾಗಿದ್ದರೂ, ಮಾರ್ಪಾಡುಗಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದುವರೆದಿತ್ತು. ಅಂದರೆ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಬಡಿಸುವ ಮಧ್ಯಾಹ್ನದ ಊಟಕ್ಕೆ ಬದಲಾಗಿ ಶುಷ್ಕ ಪಡಿತರ ಅಥವಾ ಹಣವನ್ನು (ನೇರ ಲಾಭ ವರ್ಗಾವಣೆ) ನೀಡಲಾಗಿತ್ತು.
ಇದನ್ನೂ ಓದಿ: 5 ತಿಂಗಳಿಂದ ಬಾರದ ಗೌರವಧನ: ವೇತನ ಕೇಳಿದ ಬಿಸಿಯೂಟ ನೌಕರರ ಬಂಧನ
ಈ ಯೋಜನೆಗೆ ಬಜೆಟ್ನಲ್ಲಿ ನಿಗದಿಪಡಿಸಿದ ಮೊತ್ತ 11,000 ಕೋಟಿ ರೂ.ಗಳು. ಆದರೆ ತಗಲುವ ವೆಚ್ಚ 12,900 ಕೋಟಿ ರೂ.ಗಳು ಎಂದು ಇಲಾಖೆ ಹೇಳಿದೆ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಕೇವಲ 11,500 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.
ಆದರೂ, ಮಾರ್ಚ್ 9 ರಂದು ಲೋಕಸಭೆಯಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಶಿಕ್ಷಣದ ಸಂಸದೀಯ ಸ್ಥಾಯಿ ಸಮಿತಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರವನ್ನು ಒದಗಿಸುವಂತೆ ಶಿಫಾರಸು ಮಾಡಿದ್ದು, ಮಧ್ಯಾಹ್ನದ ಬಿಸಿಯೂಟ ಯೋಜನೆಯ ವ್ಯಾಪ್ತಿಯನ್ನು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂದು ಹೇಳಿದೆ. ಪ್ರಸ್ತುತ ಈ ಯೋಜನೆ 1-8ನೇ ತರಗತಿಯವರೆಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಅದನ್ನು ಪೂರ್ವ ಪ್ರಾಥಮಿಕ ಶಾಲೆಗಳಿಗೂ ವಿಸ್ತರಿಸಬೇಕು ಎಂಬುದನ್ನು ಸಮಿತಿಯು ಉಲ್ಲೇಖಿಸಿದೆ.
ಎನ್ಇಪಿಯ ಶಿಫಾರಸುಗಳಿಗೆ ಅನುಗುಣವಾಗಿ ಮಧ್ಯಾಹ್ನದ ಊಟದ ಜೊತೆಗೆ ಬೆಳಗಿನ ಉಪಾಹಾರವನ್ನೂ ಪೂರಕವಾಗಿ ನೀಡಬೇಕು ಎಂಬ ನಿರ್ಧಾರವನ್ನು ಕೇಂದ್ರ ಕ್ಯಾಬಿನೆಟ್ 2020 ರ ಆಗಸ್ಟ್ನಲ್ಲಿ ಅಂಗೀಕರಿಸಿತ್ತು. ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶಯುತ ಆಹಾರ ನೀಡುವುದರ ಜೊತೆಗೆ ಅವರ ಕಲಿಕೆಯ ಮಟ್ಟವನ್ನು ಹೆಚ್ಚಿಸುವುದೇ ಇದರ ಉದ್ದೇಶವಾಗಿತ್ತು.
ಸಂಶೋಧನೆಯ ಪ್ರಕಾರ, “ಮಧ್ಯಾಹ್ನದ ಊಟಕ್ಕೆ ಮೊದಲು ಸರಳ ಮತ್ತು ಪೌಷ್ಠಿಕಾಂಶಯುತ ಆಹಾರವನ್ನು ನೀಡುವುದರಿಂದ ಬೆಳಿಗ್ಗೆ-ಮಧ್ಯಾಹ್ನದ ನಡುವಿನ ಸಮಯದಲ್ಲಿ ಮಕ್ಕಳು ಹೆಚ್ಚು ಕ್ರಿಯಾತ್ಮಕವಾಗಿರುತ್ತಾರೆ” ಎಂದು ರಾಷ್ಟ್ರೀಯ ಶಿಕ್ಷಣ ನೀತಿಯು ಹೇಳುತ್ತದೆ.
ಸರ್ಕಾರ ಹಣಕಾಸಿನ ಸ್ಥಿತಿ ಸುಧಾರಿಸಿದರೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿರೀಕ್ಷೆಯಿದೆ ಎಂದು ಇಲಾಖೆಯ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ಷಯಪಾತ್ರ (ಇಸ್ಕಾನ್)ಗೆ ಹೊರಗುತ್ತಿಗೆಗೆ ವಿರೋಧ: ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಲು ಆಗ್ರಹ