ಅಪೌಷ್ಟಿಕತೆಯ ಕಾರಣಕ್ಕಾಗಿ ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಅಕ್ಷಯಪಾತ್ರ (ಇಸ್ಕಾನ್) ಸೇರಿದಂತೆ ಯಾವುದೇ ಕೇಂದ್ರೀಕೃತ ಅಡಿಗೆಮನೆಗಳಿಗೆ ಗುತ್ತಿಗೆ ನೀಡಬಾರದು. ಬಲಿಗೆ ಆಯಾ ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಿ ವಿತರಿಸಬೇಕೆಂದು ’ಆಹಾರ ನಮ್ಮ ಹಕ್ಕು – ಕರ್ನಾಟಕ’ ವೇದಿಕೆಯು ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಡಾ. ಆರ್. ಮೋಹನ್ ರಾಯ್ ಮತ್ತು ದಾ. ಸಿಲ್ವಿಯಾ ಕರ್ಪಗಂ, ಕರ್ನಾಟಕದಲ್ಲಿ ಗಂಭೀರ ಕಳವಳಕ್ಕೆ ಕಾರಣವಾಗುವಷ್ಟು ಅಪೌಷ್ಠಿಕತೆ ಇದೆ. 3-4 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 21.5% ಮಕ್ಕಳ ಬೆಳವಣಿಗೆ ಕುಂಠಿತವಾಗಿವೆ. 10-19 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 26.5% ಮಕ್ಕಳು ತೆಳ್ಳಗೆ/ಕೃಶವಾಗಿದ್ದಾರೆ. ಶೇ 9% ಹದಿಹರೆಯದ ಹುಡುಗರು ಮತ್ತು ಶೇ 26% ಹದಿಹರೆಯದ ಹುಡುಗಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಿಪಡಿಸಿದ್ದರೆ.
ಕರ್ನಾಟಕದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 94% ಕ್ಕೂ ಹೆಚ್ಚು ಮಕ್ಕಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದರೆ. ಈ ಮಕ್ಕಳಿಗೆ ಅಪೌಷ್ಠಿಕತೆ ಬರಬಾರದೆಂದೇ ಆರಂಭಿಸಿದ ಮಧ್ಯಾಹ್ನದ ಬಿಸಿಯೂಟ ಯೋಜನೆ (ಅಕ್ಷರದಾಸೋಹ) ತನ್ನ ನಿಗಧಿತ ಗುರಿ ಸಾಧಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ನಗರ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಅಡುಗೆ ತಯಾರಿಸಿದೆ, ಅಕ್ಷಯಪಾತ್ರ (ಇಸ್ಕಾನ್) ಸೇರಿದಂತೆ ಹಲವು ಎನ್ಜಿಓಗಳು ನಡೆಸುವ ಕೇಂದ್ರೀಕೃತ ಅಡಿಗೆಮನೆಗಳಿಗೆ ಗುತ್ತಿಗೆ ನೀಡುತ್ತಿರುವುದೇ ಕಾರಣವಾಗಿದೆ ಎಂದು ವೇದಿಕೆ ಆರೋಪಿಸಿದೆ.
ಸಂಸತ್ತು ಅಂಗೀಕರಿಸಿದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 (ಎನ್ಎಫ್ಎಸ್ಎ) ಅಡಿಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ತಾಜಾ ಬೇಯಿಸಿದ ಪೌಷ್ಟಿಕ ಊಟವನ್ನು ಪ್ರತಿ ಮಗುವಿನ ಹಕ್ಕು ಎಂದು ಕರೆಯಲಾಗಿದೆ. ಕಾಯಿದೆಯ ಸೆಕ್ಷನ್ 5 (2) ರ ಪ್ರಕಾರ ಈ ಊಟವನ್ನು ಶಾಲಾ ಆಧಾರಿತ ಅಡುಗೆ ಮನೆಗಳಲ್ಲಿ ಬೇಯಿಸಬೇಕು.
ಸಾಕಷ್ಟು ಸ್ಥಳಾವಕಾಶವಿಲ್ಲದ ನಗರ ಪ್ರದೇಶಗಳಲ್ಲಿನ ಶಾಲೆಗಳಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಅಂತಹ ಶಾಲೆಗಳಲ್ಲಿ ಎನ್ಜಿಒಗಳು ನಡೆಸುವ ಕೇಂದ್ರೀಕೃತ ಅಡಿಗೆಮನೆಗಳಿಂದ ಆಹಾರವನ್ನು ಪೂರೈಸಬಹುದು. ಆದರೆ ಇದನ್ನೆ ನೆಪಮಾಡಿಕೊಂಡು ಬೆಂಗಳೂರು ಜಿಲ್ಲೆಯಲ್ಲಿ 95% ಶಾಲೆಗಳಲ್ಲಿ ಸ್ಥಳಾವಕಾಶ ಇದ್ದರೂ ಸಹ ಅಡುಗೆ ಮಾಡದೇ ಎನ್ಜಿಒಗಳಿಗೆ ಗುತ್ತಿಗೆ ನೀಡಲಾಗಿದೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಊಟ ಸರಬರಾಜನ್ನು ಸಹ ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಅನೇಕಲ್ನಲ್ಲಿರುವ 50 ಶಾಲೆಗಳನ್ನು ಕೇವಲ ಅಕ್ಷಯ ಪಾತ್ರ ಎನ್ಜಿಓಗೆ ಹಸ್ತಾಂತರಿಸುವ ಪ್ರಸ್ತಾಪವಿದೆ. ಇದು ಎನ್ಎಫ್ಎಸ್ಎ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವೇದಿಕೆಯ ದಾ. ಸಿಲ್ವಿಯಾ ಕರ್ಪಗಂ ಆರೋಪಿಸಿದ್ದಾರೆ.
ಈ ನೀತಿಯಿಂದಾಗಿ ಮಕ್ಕಳಿಗೆ ಪೌಷ್ಠಕಾಂಶದ, ರುಚಿಯಾದ ಮತ್ತು ಬಿಸಿಯಾದ ಊಟ ದೊರೆಯುತ್ತಿಲ್ಲ. ಊಟ ಸರಬರಾಜು ಮಾಡುವ ಎನ್ಜಿಓಗಳು ತಮ್ಮ ಟ್ರಿಪ್ಗಳನ್ನು ಕಡಿಮೆ ಮಾಡುವುದಕ್ಕಾಗಿ ಕೆಲವು ಶಾಲೆಗಳಿಗೆ ಊಟದ ಸಮಯಕ್ಕಿಂತ ಮುಂಚೇಯೇ ಅಥವಾ ಊಟದ ಸಮಯದ ನಂತರ ಸರಬರಾಜು ಮಾಡಲಾಗುತ್ತಿದೆ. ಕೆಲವು ಶಾಲೆಗಳಿಗೆ ಬಿಸಿಯೂಟ ಮತ್ತು ಹಾಲು ಎರಡನ್ನು ಒಂದೇ ಸಮಯಕ್ಕೆ ನೀಡಲಾಗುತ್ತಿದೆ. ಆದ್ದರಿಂದ ಅದೇ ಶಾಲೆಯಲ್ಲಿ ಅಡುಗೆ ಮಾಡಿದಾಗ ಮಕ್ಕಳು ಹೆಚ್ಚು ಊಟ ಮಾಡುತ್ತಿದ್ದು ಹೊರಗಡೆಯಿಂದ ಸರಬರಾಜು ಆದಾಗ ಮಕ್ಕಳು ಹೊಟ್ಟೆ ತುಂಬಾ ಊಟ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೇ ಇಸ್ಕಾನ್ ಊಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುತ್ತಿಲ್ಲ. ಮೈಸೂರಿನ ಸಿ.ಎಫ್.ಟಿ.ಆರ್.ಐ ನಡೆಸಿದ ಅಧ್ಯಯನವು ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಳಕೆಯು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಕಬ್ಬಿಣ ಮತ್ತು ಸತುವು (ಜಿಂಕ್) ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಎಂದು ವರದಿ ನೀಡಿದೆ. ಆದರೆ ಕೇವಲ ಧಾರ್ಮಿಕ ಕಾರಣಕ್ಕಾಗಿ ಈರುಳ್ಳಿ ಬೆಳ್ಳುಳ್ಳಿ ಬಳಸಿದಿರುವುದು ಕರ್ನಾಟಕ ಸರ್ಕಾರದೊಡನೆ ಅವರು ಮಾಡಿಕೊಂಡಿರವು ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.
ಅಲ್ಲದೇ ಇದೇ ಸಂಸ್ಥೆಯು ಸರ್ಕಾರದಿಂದ ಇದಕ್ಕಾಗಿ ಹಣ ಪಡೆಯುವುದರ ಜೊತೆಗೆ ದೇಶ ವಿದೇಶಗಳಿಂದಳು ದೇಣಿಗೆ ಪಡೆಯುತ್ತಿದೆ. ಸರ್ಕಾರವೇ ಹಣ ನೀಡುವುದರಿಂದ ಮಕ್ಕಳಿಗೆ ಬಿಸಿಯೂಟದ ನೆಪದಲ್ಲಿ ದೇಣಿಗೆ ಪಡೆಯುವುದು ಸಹ ಕಾನೂನಿನ ಉಲ್ಲಂಘಟನೆ ಎಂದು ಡಾ. ಆರ್. ಮೋಹನ್ ರಾಯ್ ದೂರಿದ್ದಾರೆ.
ಇದನ್ನು ವಿರೋಧಿಸಿ ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಆಹಾರ ನಮ್ಮ ಹಕ್ಕು – ಕರ್ನಾಟಕ’ ವೇದಿಕೆಯು ಸರ್ಕಾರವನ್ನು ಒತ್ತಾಯಿಸಿದೆ.
- ಸಾಧ್ಯವಾದಷ್ಟು ಶಾಲೆಗಳಲ್ಲಿಯೇ ಶುಚಿ ಮತ್ತು ರುಚಿಯಾದ ಗುಣಮಟ್ಟದ ಆಹಾರ ಮಕ್ಕಳಿಗೆ ತಯಾರಿಸಿ ಸಿಗಬೇಕು. ಹೊಸದಾಗಿ ಕೇಂದ್ರೀಕೃತ ಅಡುಗೆಮನೆಗಳಿಗೆ ಗುತ್ತಿಗೆ ನೀಡಬಾರದು.
2. ಮಕ್ಕಳಿಗೆ ಹಾಲು, ಹಣ್ಣು ಮತ್ತು ತರಕಾರಿಗಳ ಜೊತೆಗೆ ಮೊಟ್ಟೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಹಣ್ಣು ನೀಡಬಹುದು.
3. ಹಾಸ್ಟೆಲ್ಗಳಲ್ಲಿ ನಿರ್ಧರಿಸುವಂತೆ ಪ್ರತಿ ಮಗುವಿಗೆ ದಿನಕ್ಕೆ 20ರೂ ಅನುದಾನ ನೀಡಿ ಆ ಮೂಲಕ ಗುಣಮಟ್ಟದ ಆಹಾರ ಒದಗಿಸಬೇಕು. ಅಡುಗೆ ಮಾಡುವವರಿಗೆ ಮತ್ತು ಸಹಾಯಕರಿಗೆ ಕನಿಷ್ಠ ವೇತನ ಮಾನದಂಡಗಳು ಪ್ರಕಾರ ಸಂಭಾವನೆ ನೀಡಬೇಕು.
ಈ ಕುರಿತು ಆನೇಕಲ್ನ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್ ರಾಮಮೂರ್ತಿ ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಅಡುಗೆ ಮಾಡುವವರಿಗೆ ಸರ್ಕಾರ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲ. ಹಾಗಾಗಿ ಅವರು ಕೆಲಸಕ್ಕೆ ಬರುವುದು ಕಷ್ಟ. ಆದ್ದರಿಂದ ನಮ್ಮ ಶಾಲೆಗಳಿಗೆ ಇಸ್ಕಾನ್ನಿಂದ ಊಟ ಸರಬರಾಜು ಮಾಡಬೇಕೆಂದು ಪ್ರಸ್ತಾಪವಿಟ್ಟಿದ್ದೇವೆ ಎಂದು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಅಂದರೆ ಸರ್ಕಾರದ ತಪ್ಪಿಗೆ ಶಾಲಾ ಮಕ್ಕಳು ಶಿಕ್ಷೆ ಅನುಭವಸಬೇಕಾಗಿದೆ.
ರಾಜ್ಯದ 5,507 ಸರ್ಕಾರಿ ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 68 ಎನ್ಜಿಒಗಳು ಮಧ್ಯಾಹ್ನದ ಊಟವನ್ನು ನೀಡುತ್ತಿವೆ. ಇದರಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಒಂದೇ ಬೆಂಗಳೂರಿನ 1,212 ಶಾಲೆಗಳಲ್ಲಿನ 1.83 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದೆ.
ಹೆಚ್ಚುವರಿ ಶಾಲೆಗಳನ್ನು ಎನ್ಜಿಒಗಳಿಗೆ ಹಸ್ತಾಂತರಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ, ಮತ್ತು ಈ ವರ್ಷದ ಅಂತ್ಯದ ವೇಳೆಗೆ ಬಾಕಿ ಇರುವ ಸಂಬಳವನ್ನು ನೀಡಲಾಗುವುದು ಎಂದು ಶಿಕ್ಷಣ ಇಲಾಖೆಯ ಬಿಸಿಯೂಟ ಯೋಜನೆಯ ಉಸ್ತುವಾರಿ ಜಂಟಿ ನಿರ್ದೇಶಕ ಮಂಜುನಾಥ್ ಎಸ್ಸಿ ತಿಳಿಸಿದ್ದಾರೆ.
ಈ ಕುರಿತು ಅಕ್ಷಯಪ್ರಾತ್ರದಿಂದ ಪ್ರತಿಕ್ರಿಯೆ ಪಡೆಯಲು ಯತ್ನಿಸಿದಾಗ ’ಈ ಬಗ್ಗೆ ಪ್ರತಿಕ್ರಿಯಿಸಲು ನಮಗೆ ಹೆಚ್ಚಿನ ಸಮಯ ಬೇಕು’ ಎಂಬ ಪ್ರತಿ ಉತ್ತರ ಬಂದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ತಿಳಿಸಿದೆ.
Please donate to Akshayapatre
An ngo taking care of most of school children meals.
Help them to build healthy India