ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ಸರ್ಕಾರ ಸೋವಾರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದೆ. ಕೇಂದ್ರ ಸರ್ಕಾರ ನೀಡಿರುವ 3,454 ಕೋಟಿ ರೂಪಾಯಿ ಮೊತ್ತ ತಾನು ಕೇಳಿದ ಪರಿಹಾರಧನಕ್ಕಿಂತಲೂ ಅತ್ಯಂತ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರ ನೇಮಿಸಿದ್ದ ಅಂತರ್ ಸಚಿವಾಲಯದ ತಜ್ಞರ ಸಮಿತಿ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಕೋರಿದ ಹಿನ್ನೆಲೆ, ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜುಲೈಗೆ ಮುಂದೂಡಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು “3,400 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ. ಅಂತರ್ ಸಚಿವಾಲಯದ ತಜ್ಞರ ಸಮಿತಿ ನೀಡಿದ್ದ ವರದಿ ಆಧಾರದಲ್ಲಿ ಪರಿಹಾರ ಘೋಷಿಸಲಾಗಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ “ರಾಜ್ಯ ಸರ್ಕಾರ 18 ಸಾವಿರ ಕೋಟಿ ರೂ. ಪರಿಹಾರ ಕೇಳಿತ್ತು. ಆದರೆ, ಬಿಡುಗಡೆ ಮಾಡಿರುವ ಮೊತ್ತ ತೀರಾ ಕಡಿಮೆಯಾಗಿದೆ. ಬರಕ್ಕೆ ತುತ್ತಾದ ಜನರ ಜೀವನೋಪಾಯಕ್ಕಾಗಿ 12,577 ಕೋಟಿ ರೂ. ಪರಿಹಾರ ಕೋರಲಾಗಿತ್ತು. ಎನ್ಡಿಆರ್ಎಫ್ ಕಾಯ್ದೆಯಡಿ ಜೀವನೋಪಾಯಕ್ಕಾಗಿ ಪರಿಹಾರ ನೀಡಲು ಅವಕಾಶ ಇದ್ದರೂ ಅದನ್ನು ಪರಿಗಣಿಸಿಲ್ಲ” ಎಂದರು.
ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಬರ ನಿರ್ವಹಣೆಯ ಕೈಪಿಡಿ ಪ್ರಕಾರ ಬರ ನಿರ್ವಹಣೆಗೆ ಕೇಂದ್ರವು ಹಣಕಾಸಿನ ನೆರವು ನಿರಾಕರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆ. ವರದಿಯ ಪ್ರಕಾರ, ರಾಜ್ಯ ಸರ್ಕಾರ ಮೂರು ಬರ ಪರಿಹಾರ ಜ್ಞಾಪಕ ಪತ್ರದ ಮೂಲಕ ಎನ್ಡಿಆರ್ಎಫ್ ಅಡಿಯಲ್ಲಿ ರೂ.18,171.44 ಕೋಟಿಗಳನ್ನು ಕೋರಿತ್ತು. ಆದರೆ, ಕೇಂದ್ರ ಸರ್ಕಾರ ಅಷ್ಟು ಪರಿಹಾರ ನೀಡಿಲ್ಲ.
ಇದನ್ನೂ ಓದಿ : ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್