ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪೊಲೀಸರು “ಕಿರುಕುಳ” ಮತ್ತು “ಬೆದರಿಕೆ” ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಮಿತ್ ಶಾ ಅವರ ತಿರುಚಿದ ವಿಡಿಯೋವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ತಂಡದ ರಾಷ್ಟ್ರೀಯ ಸಂಯೋಜಕರನ್ನು ದೆಹಲಿ ಪೊಲೀಸ್ ವಿಶೇಷ ಕೋಶ ಬಂಧಿಸಿದ ಬೆನ್ನಲ್ಲಿ ಕಾಂಗ್ರೆಸ್ “ಕಿರುಕುಳ” ಮತ್ತು “ಬೆದರಿಕೆ” ಆರೋಪವನ್ನು ಮಾಡಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ, ನರೇಂದ್ರ ಮೋದಿ ಮತ್ತು ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲಲಿದೆ. ಬಿಜೆಪಿಯ ಷಡ್ಯಂತ್ರವನ್ನು ಸಾರ್ವಜನಿಕರು ಅರ್ಥಮಾಡಿಕೊಂಡಿರುವುದರಿಂದ, ಬಿಜೆಪಿ ಗೆದ್ದರೆ ಮೀಸಲಾತಿ ಮತ್ತು ಸಂವಿಧಾನವನ್ನು ರದ್ದುಪಡಿಸುತ್ತದೆ ಎಂದು ಜನರು ತಿಳಿದುಕೊಂಡಿದ್ದಾರೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತದಾನಕ್ಕೆ ಮೊದಲೇ ಸೋಲನ್ನು ಮನಗಂಡಿದ್ದಾರೆ. ಹೀಗಾಗಿ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಬಂಧಿಸಲಾಗತ್ತಿದೆ. ಅವರಿಂದ ಉಪಕರಣಗಳನ್ನು ಜಪ್ತಿ ಮಾಡಲಾಗುತ್ತಿದೆ. ಇದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಭಯ ಮತ್ತು ಹೇಡಿತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆದೇಶದ ಮೇರೆಗೆ ಕಾಂಗ್ರೆಸ್ ಐಟಿ ಸೆಲ್ ಸಿಬ್ಬಂದಿಗಳನ್ನು ಬೆದರಿಸಲಾಗುತ್ತಿದೆ. ಇವರು ಗಾಂಧಿ, ನೆಹರು, ಪಟೇಲ್, ಬೋಸ್ ಅವರ ಸಿದ್ಧಾಂತವನ್ನು ಆರಿಸಿಕೊಂಡು ಕಾಂಗ್ರೆಸ್ ಜೊತೆ ನಿಂತವರಾಗಿದ್ದಾರೆ. ಸತ್ಯ ಮತ್ತು ನ್ಯಾಯವನ್ನು ಆಯ್ಕೆ ಮಾಡಿದ ಮತ್ತು ನಿಮ್ಮ ಸುಳ್ಳನ್ನು ತಿರಸ್ಕರಿಸಿದವರನ್ನು ಬಿಜೆಪಿ ಹೆದರಿಸುತ್ತಿದೆ ಎಂದು ಶ್ರೀನಾಟೆ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಿರೀಕ್ಷೆಯಿಂದಾಗಿ ಬಿಜೆಪಿ ನಾಯಕರು ಭೀತಿಯಲ್ಲಿದ್ದಾರೆ. ನಿಮಗೆ ಧೈರ್ಯವಿದ್ದರೆ ರಾಜಕೀಯ ಹೋರಾಟ ನಡೆಸಿ, ವಿಶ್ವದ ಅತಿದೊಡ್ಡ ನಕಲಿ ಸುದ್ದಿ ಕಾರ್ಖಾನೆಯನ್ನು ನಡೆಸುತ್ತಿರುವ ಪ್ರಧಾನಿ ಮತ್ತು ಈ ನಕಲಿ ಸುದ್ದಿ ಕಾರ್ಖಾನೆಯ ಬಗ್ಗೆ ಹೆಮ್ಮೆಪಡುವ ಗೃಹ ಸಚಿವರು ಭಯಭೀತರಾಗಿದ್ದಾರೆ. ನೀವು ತುಂಬಾ ಭಯಗೊಂಡಿದ್ದೀರಿ, ನೀವು ನಮ್ಮ ಯುವಕರನ್ನು ಹಿಂಬಾಲಿಸಲು ಪ್ರಾರಂಭಿಸಿದ್ದೀರಿ, ಆದರೆ ಯುವ ಜನತೆ ಇಂದು ನಿಮ್ಮಿಂದ ಅಧಿಕಾರವನ್ನು ವಾಪಾಸ್ಸು ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.
ಅಮಿತ್ ಶಾ ಅವರ ದೆಹಲಿ ಪೊಲೀಸರು ಬಹಳ ಉತ್ಸಾಹದಿಂದ ವಿಪಕ್ಷಗಳ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ, ಆದರೆ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯು 72 ಗಂಟೆಗಳ ಹಿಂದೆ ದಾಖಲಿಸಿದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಮೋದಿ ಜೀ.. ನಮ್ಮ ಸಹೋದ್ಯೋಗಿಗಳು ನಿಮ್ಮ ಬೆದರಿಕೆಗಳಿಗೆ ಹೆದರುವುದಿಲ್ಲ, ನಾವು ತಕ್ಕ ಉತ್ತರವನ್ನು ನೀಡುತ್ತೇವೆ. ನಿಮ್ಮ ಪ್ರತಿಯೊಂದು ಸುಳ್ಳನ್ನು ನಾವು ಸೋಲಿಸುತ್ತೇವೆ, ಸಂವಿಧಾನ ಮತ್ತು ಮೀಸಲಾತಿಯನ್ನು ನಾಶಪಡಿಸುವ ಷಡ್ಯಂತ್ರವನ್ನು ಸೋಲಿಸುತ್ತೇವೆ. ನಾವು ಮೀಸಲಾತಿಯನ್ನು ಕೊನೆಗೊಳಿಸಲು ಬಿಡುವುದಿಲ್ಲ ಏಕೆಂದರೆ ಈ ಮೀಸಲಾತಿ ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಅವರ ಹಕ್ಕುಗಳನ್ನು ನೀಡಿದೆ. ಜೂನ್ 4ರಂದು ದೇಶದಲ್ಲಿ ಹೊಸ ಪ್ರಧಾನಿ ಅಧಿಕಾರಕ್ಕೇರಲಿದ್ದಾರೆ, ಅವರು ಮತ್ತೊಮ್ಮೆ ದೇಶದಲ್ಲಿ ನ್ಯಾಯ, ಸತ್ಯ ಮತ್ತು ಧೈರ್ಯದ ಅಡಿಪಾಯವನ್ನು ಹಾಕುತ್ತಾರೆ ಎಂದು ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.
ಇದನ್ನು ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ