ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಅಂತಿಮವಾಗಿ ತಾಂತ್ರಿಕ ಜಯವೂ ಸಿಕ್ಕಿದೆ. ಡಿಸೆಂಬರ್ 4, ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 1777 ಎಕರೆ ಡಿನೋಟಿಫೈಗೆ ಒಪ್ಪಿಗೆ ಸೂಚಿಸಲಾಗಿದೆ.
ಕಾನೂನು ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಖಚಿತಪಡಿಸಿದರು.
2025 ಜುಲೈ 15ರಂದು ರೈತರೊಂದಿಗೆ ನಡೆದ ಸಭೆಯಲ್ಲಿ ಕೆಐಎಡಿಬಿ ಅಂತಿಮ ಅಧಿಸೂಚನೆ ರದ್ದುಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ 1777ಎಕರೆ ಡಿನೋಟಿಫೈಗೆ ಒಪ್ಪಿಗೆ ನೀಡಿದ್ದಾರೆ.
2025ರ ಡಿಸೆಂಬರ್ 2 ರಂದು ನಡೆದ ಸಭೆಯಲ್ಲಿ, “ದೇವನಹಳ್ಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಮತ್ತು ಸಂಘಟನೆಗಳ ತೀವ್ರ ಪ್ರತಿರೋಧದ ನಂತರ ಸರ್ಕಾರವು ಜುಲೈ, 15, 2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಲಾಗುವುದು, ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನವನ್ನು ರದ್ದುಪಡಿಸಬೇಕೆಂದು” ರೈತರು ಸರ್ಕಾರವನ್ನು ಒತ್ತಾಯಿಸಿದರು
ಚನ್ನರಾಯಪಟ್ಟಣದ ಧರಣಿ ಸ್ಥಳದಲ್ಲಿ ನಡೆದ ಸಭೆಯಲ್ಲಿ ನೂರಾರು ರೈತರು ಮತ್ತು ಹೋರಾಟಗಾರರು ಭಾಗವಹಿಸಿದ್ದರು. “ಈ ಬಗ್ಗೆ ಕಳೆದ 1339 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸಭೆ ನಡೆಸಿದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಿಫಾರಾಸ್ಸಿನ ಪತ್ರದ ಬಗ್ಗೆ ಚರ್ಚಿಸಿದ್ದು ಶಾಶ್ವತ ವಿಶೇಷ ಕೃಷಿ ವಲಯ ( permanent special agricultural zone ) ಎಂದು ಘೋಷಿಸುವ ಮತ್ತು ಪಹಣಿಯಲ್ಲಿ ದಾಖಲಿಸುವ, ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ” ಎಂದರು.
ಭೂ ಸ್ವಾಧೀನ ರದ್ದತಿ ಆದೇಶ ಹೊರಡಿಸುವಂತೆ ಚನ್ನರಾಯಪಟ್ಟಣ ರೈತರಿಂದ ಸಿಎಂಗೆ ಆಗ್ರಹ
2025ರ ಅ.19 ರಂದು ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇವನಹಳ್ಳಿಯಲ್ಲಿ ಭೇಟಿಯಾಗಿದ್ದ ರೈತರು, ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನ ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಯಯ್ಯ ಘೋಷಿಸಿ ಮೂರು ತಿಂಗಳು ಕಳೆದರೂ, ಅಧಿಕೃತ ಆದೇಶ ಹೊರಡಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.
ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ಭೇಟಿಯಾಗಿ ಬೇಡಿಕೆ ಮುಂದಿಟ್ಟಿರುವ ರೈತರು, ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಿದ್ದಾರೆ. ಭೂ ಸ್ವಾಧೀನ ಕೈಬಿಟ್ಟಿರುವ ಕುರಿತು ಅಧಿಕೃತ ಆದೇಶಕ್ಕಾಗಿ ಒತ್ತಾಯಿಸಿದ್ದಾರೆ. ಭಾನುವಾರ (ಅ.19) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೇವನಹಳ್ಳಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾದ ರೈತರ ನಿಯೋಗ, ಸರ್ಕಾರದ ಧೋರಣೆಯನ್ನು ಖಂಡಿಸಿದೆ. ಸರ್ಕಾರ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೂಡಲೇ ಭೂ ಸ್ವಾಧೀನ ರದ್ದತಿ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು, ಇಲ್ಲವಾದಲ್ಲಿ ಮತ್ತೊಮ್ಮೆ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಕೈಗಾರಿಕಾ ಸಚಿವರ ಭೇಟಿ; ‘ಡಿನೋಟಿಫಿಕೇಶನ್’ಗೆ ಒತ್ತಡ
2025 ಅ.17 ರಂದು ದೇವಮಹಳ್ಳಿಗೆ ಆಗಮಿಸಿದ್ದ ಕೈಗಾರಿಕಾ ಸಚಿವ ಎಂಬಿ ಪಾಟೀರನ್ನು ಭೇಟಿಯಾಗಿದ್ದ ರೈತರ ನಿಯೋಗ, ಡಿನೋಟಿಫಿಕೇಶನ್ಗೆ ಒತ್ತಾಯಿಸಿದ್ದರು.
ಸರ್ಕಾರದ ಈ ವಿಳಂಬ ನೀತಿಯಿಂದ ರೋಸಿಹೋಗಿದ್ದ ರೈತರು, ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಎಚ್ಚರಿಸಿದ್ದರು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದರು.
ಜುಲೈ 15ರಂದು ಮುಖ್ಯಮಂತ್ರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಮೌಖಿಕವಾಗಿ ಸ್ಪಷ್ಟವಾಗಿ ಘೋಷಿಸಿದ್ದರು. ಆದರೆ, ಈವರೆಗೂ ಮುಖ್ಯಮಂತ್ರಿಗಳ ಮಾತಿಗೆ ಅಧಿಕೃತ ಮುದ್ರೆ ದೊರೆತಿಲ್ಲ. ಈ ನಡುವೆ, ಸರ್ಕಾರದ ಘೋಷಣೆಗೆ ವಿರುದ್ಧವಾಗಿ ಎರಡು ಹಳ್ಳಿಗಳ ಜಮೀನುಗಳಿಗೆ ಬೆಲೆ ನಿಗದಿ ಸಭೆ ನಡೆಸುವ ಹುನ್ನಾರಗಳು ನಡೆದಿದ್ದು, ರೈತರ ಆತಂಕವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ಸರ್ಕಾರದ ಘೋಷಣೆಯಂತೆ ಸಂಪೂರ್ಣ ಭೂಸ್ವಾಧೀನವನ್ನು ಕೈಬಿಡುವ ಅಧಿಕೃತ ಆದೇಶವನ್ನು ತಕ್ಷಣ ಹೊರಡಿಸಬೇಕು ಎಂದು ಒತ್ತಾಯಿಸಲು ರೈತರ ನಿಯೋಗವು ಶುಕ್ರವಾರ (ಅ.17) ಹರಳೂರು ಬಳಿಯ ಏರೋಸ್ಪೇಸ್ ಡಿಫೆನ್ಸ್ ಪಾರ್ಕ್ಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದರು. ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನೂ ನಿಯೋಗವು ಭೇಟಿಯಾಗಿ, ಮುಖ್ಯಮಂತ್ರಿಗಳ ಭೂಸ್ವಾಧೀನ ರದ್ದತಿ ಆದೇಶಕ್ಕೆ ಸಾಕ್ಷಿಯಾಗಿದ್ದ ಅವರೂ ಕೂಡ ರೈತರ ಸಮಸ್ಯೆ ಬಗೆಹರಿಸಲು ತಕ್ಷಣ ಡಿನೋಟಿಫಿಕೇಶನ್ ಆದೇಶ ಹೊರಡಿಸಲು ಕ್ರಮವಹಿಸುವಂತೆ ಒತ್ತಾಯಿಸಿದ್ದರು.
ಚನ್ನರಾಯಪಟ್ಟಣ ರೈತರಿಂದ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿ ಮೂರು ತಿಂಗಳಾದರೂ ಚನ್ನರಾಯಪಟ್ಟಣ ಭೂಸ್ವಾಧೀನ ರದ್ದುಪಡಿಸುವ ಅಧಿಕೃತ ‘ಡಿನೋಟಿಫಿಕೇಶನ್’ ಆದೇಶವನ್ನು ಸರ್ಕಾರ ಹೊರಡಿಸದಿರುವ ಕಾರಣ, ಭೂಸ್ವಾಧೀನ ವಿರೋಧಿ ಹೋರಾಟದ ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅಧಿಕೃತ ಆದೇಶ ಹೊರಡಿಸದಿರುವ ಕಾರಣ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ ಎಂದು ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ದಿನಾಂಕ ಅ.16, 2025ರಂದು ದೇವನಹಳ್ಳಿಯಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಘೋಷಣೆಯಾದರೂ ಮೌಖಿಕ ಆದೇಶಕ್ಕೆ ಸಿಗದ ಅಧಿಕೃತ ಮುದ್ರೆ
ಚನ್ನರಾಯಪಟ್ಟಣದ ರೈತರು, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ನಡೆಸಿದ ತೀವ್ರ ಸಂಘರ್ಷಮಯ ಹೋರಾಟದ ಫಲವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜುಲೈ 15ರಂದು ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಸ್ಪಷ್ಟವಾಗಿ ಘೋಷಿಸಿದ್ದರು. ಸರ್ಕಾರದ ಈ ತೀರ್ಮಾನ ದೇಶವ್ಯಾಪಿ ಸುದ್ದಿಯಾಗಿತ್ತು, ಸರ್ಕಾರವು ಕೂಡಾ ಇದನ್ನು ರೈತಪರ ನಿಲುವು ಎಂದು ವ್ಯಾಪಕವಾಗಿ ಪ್ರಚಾರ ಮಾಡಿತ್ತು. ಆದರೆ, ಘೋಷಣೆ ಹೊರಬಿದ್ದು ಹಲವು ತಿಂಗಳುಗಳೇ ಕಳೆದರೂ, ಸರ್ಕಾರದ ಮೌಖಿಕ ಆದೇಶವು ಡಿನೋಟಿಫಿಕೇಶನ್ ರೂಪದಲ್ಲಿ ಅಧಿಕೃತವಾಗಿ ಹೊರಬಂದಿರಲಿಲ್ಲ.
ಈ ಮಧ್ಯೆ, ಸರ್ಕಾರದ ಘೋಷಣೆಗೆ ವ್ಯತಿರಿಕ್ತವಾಗಿ, ಎರಡು ಹಳ್ಳಿಗಳಿಗೆ ಬೆಲೆ ನಿಗದಿ ಸಭೆ ನಡೆಸುವ ಹುನ್ನಾರಗಳು ನಡೆದಿದ್ದವು. ರೈತರ ತೀವ್ರ ಪ್ರತಿರೋಧದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. “ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಭಯದಲ್ಲೇ ರೈತರು ಬದುಕುವಂತಾಗಿದೆ” ಎಂದು ಹೋರಾಟಗಾರರು ತಮ್ಮ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆತಂಕವನ್ನು ಹೆಚ್ಚಿಸಿತ್ತು.
ಸಿಎಂ ಮಾತಿಗೆ ಬೆಲೆ ಕೊಡದೆ ಕೆಐಎಡಿಬಿ ಅಧಿಕಾರಿಗಳಿಂದ ನೋಟಿಸ್: ರೈತರ ಆಕ್ರೋಶ
ಮುಖ್ಯಮಂತ್ರಿಗಳ ಆದೇಶದ ಹೊರತಾಗಿಯೂ 2025ರ ಸೆ. 1 ರಂದು ಕೆಐಎಡಿಬಿ ಅಧಿಕಾರಿಗಳು ಬೆಲೆ ನಿಗದಿಗೆ ಸಭೆ ಕರೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ಭೂ ಸ್ವಾಧೀನ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ ಬಳಿಕವೂ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ನೋಟಿಸ್ ಕೊಟ್ಟಿರುವುದು ಗೊಂದಲಕ್ಕೆ ಕಾರಣವಾಗಿತ್ತು. ರೈತರು ಮತ್ತು ಹೋರಾಟಗಾರರು ಸೋಮವಾರ (ಸೆ.1) ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮತ್ತು ಅರವಿಂದ ಭವನದಲ್ಲಿರುವ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕೆಐಎಡಿಬಿ ಅಧಿಕಾರಿಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿ, ಸಿಎಂ ಘೋಷಿಸಿದಂತೆ 13 ಹಳ್ಳಿಗಳ ಎಲ್ಲಾ ಭೂಮಿಗಳ ಡಿನೋಟಿಫಿಕೇಶನ್ ಮುಗಿಯುವವರೆಗೆ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸದಂತೆ ಆಗ್ರಹಿಸಿದೆ. ತಮ್ಮ ಒತ್ತಾಯಗಳನ್ನು ಕೂಡಲೇ ಈಡೇರಿಸದಿದ್ದರೆ ಮುಂದಿನ ಎಲ್ಲಾ ಪರಿಣಾಮಗಳಿಗೆ ಕೆಐಎಡಿಬಿ ಕಚೇರಿಯೇ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.
ಚನ್ನರಾಯಪಟ್ಟಣ ರೈತರಿಗೆ ಐತಿಹಾಸಿಕ ಗೆಲುವು; ಭೂಸ್ವಾಧೀನ ಕೈಬಿಡುವುದಾಗಿ ಘೋಷಣೆ
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ 1198 ದಿನಗಳ ಹೋರಾಟಕ್ಕೆ ಅಂತಿಮವಾಗಿ 2025 ರ ಜುಲೈ 15 ರಂದು ಐತಿಹಾಸಿಕ ಜಯ ಸಿಕ್ಕಿತು. ರೈತರೊಂದಿಗೆ ನಡೆದ ಸಭೆಯಲ್ಲಿ ಕೆಐಎಡಿಬಿ ಅಂತಿಮ ಅಧಿಸೂಚನೆ ರದ್ದುಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಸರ್ಕಾರವನ್ನು ದಾರಿ ತಪ್ಪಿಸುವ ಪ್ರಯತ್ನ ವಿಫಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಸ್ವಾಧೀನ ಆದೇಶ ಕೈಬಿಡುವ ಆದೇಶಕ್ಕೂ ಸ್ವಲ್ಪ ದಿನಗಳ ಮೊದಲು, ರೈತರನ್ನು ಮತ್ತು ಸರ್ಕಾರವನ್ನು ದಾರಿ ತಪ್ಪಿಸುವ ಕೆಲಸವನ್ನೂ ಕೆಲ ರಿಯಲ್ ಎಸ್ಟೇಟ್ ವ್ಯಕ್ತಿಗಳು ಮಾಡಿದರು. 2025ರ ಜುಲೈ 12 ರಂದು ದೇವನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತರು, “ಭೂಮಿ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಭೂಮಿ ಕೊಡುತ್ತೇವೆ ಎಂದು ಪತ್ರ ಕೊಟ್ಟವರಿಗೂ ನಮಗೂ ಯಾವುದೇ ಸಂಬಂಧವಿಲ್ಲ” ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ತಿಳಿಸಿದರು.
ಚನ್ನರಾಯಪಟ್ಟಣಕ್ಕೆ ಜಗಜಿತ್ ಸಿಂಗ್ ದಲ್ಲೆವಾಲ್ ಭೇಟಿ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದ ಭೂ ಸ್ವಾಧೀನ ವಿರೋಧಿ ಹೋರಾಟದ ಸ್ಥಳಕ್ಕೆ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ 2025ರ ಜು.6 ರಂದು ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದ್ದರು. ಸ್ಥಳೀಯ ರೈತ ಮುಖಂಡರು ಮತ್ತು ಹೋರಾಟಗಾರರು ಅವರನ್ನು ಹೂಗುಚ್ಚಿ ನೀಡಿ ಸ್ವಾಗತಿಸಿದ್ದರು. ದಲ್ಲೆವಾಲ್ ಭಾರತೀಯ ಕಿಸಾನ್ ಒಕ್ಕೂಟದ (ಏಕ್ತಾ ಸಿಧುಪುರ) ಅಧ್ಯಕ್ಷರು ಮತ್ತು 2022ರಲ್ಲಿ ಮೂಲ ಸಂಯುಕ್ತ ಕಿಸಾನ್ ಮೋರ್ಚಾದಿಂದ ಹೊರಬಂದ ನಂತರ ರಚಿಸಲಾದ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಪ್ರಮುಖ ವ್ಯಕ್ತಿಯಾಗಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಹಲವು ರೈತ ಹೋರಾಟಗಳನ್ನು ಮುನ್ನಡೆಸಿರುವ ದಲ್ಲೆವಾಲ್ ಅವರು, ಕಳೆದ ನವೆಂಬರ್ 26, 2024ರಿಂದ ಮಾರ್ಚ್ 2025ರವರೆಗೆ ರೈತರ ಬೆಲೆಗೆ ಎಂಎಸ್ಪಿ ನೀಡಲು ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದರು.
ಭೂಸ್ವಾಧೀನ ಕೈಬಿಡುವಂತೆ ಸಿಎಂಗೆ ಪತ್ರ ಬರೆದ ಬಿಹಾರ ಸಂಸದ
ಬಿಹಾರದ ಸಿಪಿಐ(ಎಂಎಲ್) ಪಕ್ಷದ ಲೋಕಸಭಾ ಸದಸ್ಯರಾಗಿರುವ (ಕರಕಟ್ ಕ್ಷೇತ್ರ) ರಾಜ ರಾಮ್ ಸಿಂಗ್ ಅವರು, ಚನ್ನರಾಯಪಟ್ಟಣ ಭೂಸ್ವಾಧೀನವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ದೇವನಹಳ್ಳಿ ರೈತರ ಕೊಡುಗೆಯನ್ನು ಶ್ಲಾಘಿಸಿ ಪತ್ರ ಬರೆದಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯರಿ ಅವರಿಗೆ 2025 ರ ಜು.2 ರಂದು ಪತ್ರ ಬರೆದಿದ್ದರು.
ಚನ್ನರಾಯಪಟ್ಟಣ ರೈತ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲ
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿಸಿ ರೈತರು ದೇವನಹಳ್ಳಿಯಲ್ಲಿ 2025 ರ ಜೂ.25 ರಂದು ನಡೆಸಿದ್ದ ದೇವನಹಳ್ಳಿ ಚಲೋ ಹೋರಾಟವನ್ನು ಪೊಲೀಸ್ ಬಲ ಪ್ರಯೋಗಿಸಿ ಹತ್ತಿಕ್ಕಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸಿ, ನ್ಯಾಯಕ್ಕಾಗಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಅದು ಬೆಂಬಲ ವ್ಯಕ್ತಪಡಿಸಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ದೇಶದಾದ್ಯಂತ ಇರುವ ಪ್ರಮುಖ ರೈತ ಸಂಘಟನೆಗಳ ಒಕ್ಕೂಟವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕರಾಳ ರೈತ ವಿರೋಧಿ ಕಾಯ್ದೆ ವಿರೋಧಿಸಿ ವರ್ಷಗಳ ಕಾಲ ದೆಹಲಿಯ ಸುತ್ತ ನಡೆಸಲಾಗಿದ್ದ ರೈತ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವ ನೀಡಿತ್ತು. ಜೊತೆಗೆ ರೈತ ಸಂಘಟನೆಗಳ ಈ ಹೋರಾಟದ ಕಾರಣಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಮಣಿದು ಕಾಯ್ದೆಯನ್ನು ವಾಪಾಸು ಪಡೆಯಿತು.
ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸಿದ ನೂರಾರು ರೈತರನ್ನು ಅಮಾನುಷವಾಗಿ ಎಳೆದಾಡಿ ಬಂಧಿಸಿ ಪೊಲೀಸರಿಂದ ದೌರ್ಜನ್ಯ ನಡೆಸಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವನ್ನು ಎಸ್ಕೆಎಂ ತೀವ್ರವಾಗಿ ಖಂಡಿಸಿದೆ.
‘ಸಂಯುಕ್ತ ಹೋರಾಟ ಕರ್ನಾಟಕ’ದಿಂದ ಅಹೋರಾತ್ರಿ ಹೋರಾಟ ಘೋಷಣೆ
2025 ರ ಜೂ.25 ರ ಬುಧವಾರದಂದು ದೇವನಹಳ್ಳಿಯಲ್ಲಿ ನಡೆದ ಚನ್ನರಾಯಪಟ್ಟಣ ರೈತರ ಹೋರಾಟಗಾರರ ಮೇಲಿನ ಪೊಲೀಸರ ದೌರ್ಜನ್ಯದ ಹಿಂದೆ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಇದ್ದಾರೆ ಎಂದು ‘ಸಂಯುಕ್ತ ಹೋರಾಟ – ಕರ್ನಾಟಕ’ ಆರೋಪಿಸಿ, ರೈತರ ಭೂಮಿ ವಾಪಾಸು ಆಗುವವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹೇಳಿತ್ತು.
ಅಂತಿಮ ಅಧಿಸೂಚನೆ ಪ್ರತಿ ಸುಟ್ಟು ಆಕ್ರೋಶ

ರೈತರ ಪ್ರತಿರೋಧವನ್ನೂ ಲೆಕ್ಕಿಸದೆ ಬಲವಂತದ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರ, ಚನ್ನರಾಯಪಟ್ಟಣ ಹೋಬಳಿಯ ಎಂಟು ಹಳ್ಳಿಗಳಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದನ್ನು ವಿರೋಧಿಸಿ ರೈತರು 2025 ರ ಏಪ್ರಿಲ್ 27 ರಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನರಾಯಪಟ್ಟಣ ನಾಡ ಕಚೇರಿ ಮುಂಭಾಗದ ಧರಣಿ ಸ್ಥಳದಲ್ಲಿ ಸಭೆ ನಡೆಸಿ, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಸುಡುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು.


