ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದಲ್ಲಿ ಧಾರ್ಮಿಕ, ಸಾಮಾಜಿಕ ಐಕ್ಯತೆ ಮತ್ತು ಸಾಮರಸ್ಯವನ್ನು ಭಂಗಗೊಳಿಸುತ್ತದೆ ಮತ್ತು ನೋಯಿಸುತ್ತದೆ ಎಂದು ಎನ್ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ, ದೇಶದ ಏಕತೆ ಮತ್ತು ಪ್ರಗತಿಯ ಬಗ್ಗೆ ಯೋಚಿಸುವವರು ಸಿಎಎ ಮತ್ತು ಎನ್ಆರ್ಸಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಿಎಎ ಅಡಿಯಲ್ಲಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬರುವವರಿಗೆ ಮಾತ್ರ ಅವಕಾಶ ಏಕೆ? ಶ್ರೀಲಂಕಾದ ತಮಿಳರಿಗೆ ಅವಕಾಶವೇಕಿಲ್ಲ ಎಂದು ಶರದ್ ಪವಾರ್ ಪ್ರಶ್ನಿಸಿದ್ದಾರೆ.
ಸಿಎಎ, ಎನ್ಆರ್ಸಿ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನಗಳಾಗಿವೆ ಎಂದು ಪುಣೆಯ ಶರದ್ ಪವಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿಯೂ ಕೂಡ ಪೌರತ್ವ ಕಾಯ್ದೆಯ ವಿರುದ್ಧ ದೊಡ್ಡ ಹೋರಾಟಗಳು ಕಂಡುಬಂದ ಹಿನ್ನೆಲೆಯಲ್ಲಿ ಶರದ್ ಪವಾರ್ ಹೇಳಿಕೆ ನೀಡಿದ್ದಾರೆ.
ಈ ನಡುವೆ ಸಿಎಎ-ಎನ್ಆರ್ಸಿ ವಿರುದ್ಧದ ನಾಗರಿಕರ ಹೋರಾಟದಲ್ಲಿ ಕಾಂಗ್ರೆಸ್ ಬೀದಿಗಳಲ್ಲಿಲ್ಲ ಮತ್ತು ಅದರ ಉನ್ನತ ನಾಯಕತ್ವವು ಇಲ್ಲವೇ ಇಲ್ಲವಾಗಿದೆ ಎಂದು ಜೆಡಿಯು ಉಪಾಧ್ಯಕ್ಷ ಮತ್ತು ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
ಇ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ರಾಜ್ಯಗಳಲ್ಲಿ ಎನ್ಆರ್ಸಿಯನ್ನು ಅನುಮತಿಸುವುದಿಲ್ಲ ಎಂದು ಹೇಳಿರುವ ಎಲ್ಲ ಕಾಂಗ್ರೆಸ್ ಮುಖ್ಯಮಂತ್ರಿಗಳು ಸಿಎಎ ವಿರೋಧಿಸುತ್ತಿರುವ ಇತರ ಸಿಎಂಗಳೊಂದಿಗೆ ಸೇರಿ ಹೋರಾಟ ರೂಪಿಸಬೇಕಿದೆ. ಇಲ್ಲದಿದ್ದರೆ ಅವರ ಹೇಳಿಕೆಗಳಿಗೆ ಅರ್ಥವಿರುವುದಿಲ್ಲ ಎಂದು ದೂರಿದ್ದಾರೆ.