ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿದ ಲೋಕಪಾಲ್ ಆದೇಶ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಅನಿಲ್ ಕ್ಷೇತ್ರರ್ಪಾಲ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಮೊದಲು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ಅನುಮತಿ ಆದೇಶವನ್ನು ಸಂಪೂರ್ಣವಾಗಿ ಓದುವುದಾಗಿ ಹೇಳಿದ್ದು, ವಿಚಾರಣೆಯನ್ನು ನವೆಂಬರ್ 21ಕ್ಕೆ ಪಟ್ಟಿ ಮಾಡಿದೆ.
ಲೋಕಪಾಲ್ ಕಾಯ್ದೆಯ ಸೆಕ್ಷನ್ 20(7)(ಎ) ಮತ್ತು ಸೆಕ್ಷನ್ 23(1) ರ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದ್ದ ಲೋಕಪಾಲ್, ನವೆಂಬರ್ 12 ರಂದು ಸಿಬಿಐಗೆ ನಾಲ್ಕು ವಾರಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಆರೋಪಪಟ್ಟಿಯ ಪ್ರತಿಯನ್ನು ತನಗೆ ಸಲ್ಲಿಸುವಂತೆ ಆದೇಶಿಸಿತ್ತು.
ಲೋಕಪಾಲ್ ಕಾಯ್ದೆಯ ನಿಬಂಧನೆಗಳನ್ನು ಕಡೆಗಣಿಸಿ ಲೋಕಪಾಲ್ ಆದೇಶ ನೀಡಿದೆ ಮತ್ತು ಸ್ವಾಭಾವಿಕ ನ್ಯಾಯದ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಮಹುವಾ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ವಿವರವಾದ ಲಿಖಿತ ಮತ್ತು ಮೌಖಿಕ ವಾದ ಪರಿಗಣಿಸದೆಯೇ ಅನುಮತಿ ನೀಡಿರುವುದರಿಂದ ಲೋಕಪಾಲ್ ನೀಡಿರುವ ಆದೇಶ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ- 2013ಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್ನಲ್ಲಿ ಪ್ರಶ್ನೆ ಕೇಳಲು ಮಹುವಾ ಅವರು ನಗದು ಹಾಗೂ ಉಡುಗೊರೆಗಳನ್ನು ಪಡೆದಿರುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು.
ಈ ಬಗ್ಗೆ ಸೆಕ್ಷನ್ 20(3)(ಎ) ಅಡಿಯಲ್ಲಿ ಎಲ್ಲಾ ಅಂಶಗಳನ್ನು ತನಿಖೆ ಮಾಡಿ 6 ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ಈ ಹಿಂದೆ ಸಿಬಿಐಗೆ ನಿರ್ದೇಶಿಸಿತ್ತು.
ಲೋಕಪಾಲ್ ಅನುಮತಿ ಆದೇಶದ ಜಾರಿಯನ್ನು ತಕ್ಷಣವೇ ತಡೆಹಿಡಿಯದಿದ್ದರೆ ಸಿಬಿಐ ಆರೋಪಪಟ್ಟಿ ಸಲ್ಲಿಸಲು ಮುಂದಾಗುತ್ತದೆ. ಇದರಿಂದ ತನಗೆ ಸರಿಪಡಿಸಲಾಗದಷ್ಟು ಹಾನಿ ಮತ್ತು ತನ್ನಬಗೆಗೆ ಪೂರ್ವಾಗ್ರಹ ಮೂಡುತ್ತದೆ. ಇದರಿಂದ ತಾನು ಸಲ್ಲಿಸುತ್ತಿರುವ ರಿಟ್ ಅರ್ಜಿ ಬಹುತೇಕ ಅರ್ಹತೆ ಕಳೆದುಕೊಳ್ಳುತ್ತದೆ. ಆದ್ದರಿಂದ ನ್ಯಾಯಾಲಯ ತುರ್ತಾಗಿ ಅರ್ಜಿ ವಿಚಾರಣೆ ನಡೆಸುವಂತೆ ಮಹುವಾ ಮೊಯಿತ್ರಾ ಕೋರಿದ್ದಾರೆ.


