ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಜಾತಿವಾರು ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ವರದಿಯನ್ನು (ಜಾತಿ ಗಣತಿ ವರದಿ) ರಾಜ್ಯದ ಜನರ ಎದುರು ಇಟ್ಟು ಚರ್ಚೆಗೆ ಸರ್ಕಾರ ಅವಕಾಶ ಮಾಡಿಕೊಡಲಿ ಎಂದು ಕಾಂಗ್ರೆಸ್ನ ಅಹಿಂದ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬುಧವಾರ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಅಹಿಂದ ನಾಯಕರು ಜಂಟಿಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಹೆಚ್.ಎಂ ರೇವಣ್ಣ ಮಾತನಾಡಿ, “ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದೇಶದಲ್ಲೇ ದೊಡ್ಡ ಸಮೀಕ್ಷೆಯಾಗಿದೆ. ವರದಿ ಜಾರಿಯಿಂದ ರಾಜ್ಯದ ಜನತೆಗೆ ಒಳಿತಾಗಲಿದೆ. ಪ್ರಗತಿಗೂ ಸಹಾಯಕವಾಗಲಿದೆ. ಒಂದು ವರದಿ ಏನು ಪರಿಣಾಮ ಬೀರಬಹುದು ಎಂಬುದನ್ನು ಹಾವನೂರ್ ವರದಿ ತೋರಿಸಿಕೊಟ್ಟಿದೆ. ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು” ಎಂದು ಆಗ್ರಹಿಸಿದರು.
”ಯಾರು ಏನೇ ಹೇಳಿದರೂ ನಾವು ಒಪ್ಪುವುದಿಲ್ಲ. ಸೈದ್ಧಾಂತಿಕವಾಗಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿದೆ. ಇದೇನು ಅಂತಿಮ ಆದೇಶವಲ್ಲ. ಸಣ್ಣ ಪುಟ್ಟ ಲೋಪದೋಷಗಳು ಕಂಡು ಬಂದರೆ ಖಂಡಿತ ತಿದ್ದಿಕೊಳ್ಳಲು ಅವಕಾಶ ಇರುತ್ತದೆ. ಇಡೀ ದೇಶದಲ್ಲಿ 1930ರ ನಂತರ ನಡೆದ ಅತೀ ದೊಡ್ಡ ಸಮೀಕ್ಷೆ ಇದಾಗಿದೆ. 10 ವರ್ಷದಲ್ಲಿ 10-15 ಲಕ್ಷ ಅಂಕಿ ಅಂಶ ವ್ಯತ್ಯಾಸ ಇರಬಹುದು. ಇದೊಂದೇ ಕಾರಣಕ್ಕೆ ಇಡೀ ವರದಿಯೇ ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ” ಎಂದರು.
“ರಾಜಕೀಯ ಕಾರಣಕ್ಕೆ ವಿರೋಧ ಮಾಡುವುದು ಸರಿಯಲ್ಲ. ವರದಿ ಜಾರಿಯಿಂದ ಸಾಮಾಜಿಕ ನ್ಯಾಯ ಸಿಗುತ್ತದೆ. ನಮ್ಮ ಪಕ್ಷದವರು ಆದಿಯಾಗಿ ಬಿಜೆಪಿ ಮತ್ತಿ ಜೆಡಿಎಸ್ನ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ವರದಿಯನ್ನು ವಿರೋಧಿಸಬೇಡಿ ಎಂದು ಈ ಮೂಲಕ ಕೋರಿಕೊಳ್ಳುತ್ತೇವೆ. 55 ಪ್ರಶ್ನೆಗಳಿಗೆ ರಾಜ್ಯದ ಜನತೆ ಉತ್ತರಿಸಿದೆ. ನಮ್ಮ ಮನೆಗೆ ಯಾರೂ ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ನಗರ ಪ್ರದೇಶಗಳಲ್ಲಿ ಸ್ವಲ್ಪ ಹೀಗಾಗಿರಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಶೇ.99ರಷ್ಟು ಜನರು ಸಮೀಕ್ಷೆಗೆ ಮಾಹಿತಿ ನೀಡಿದ್ದಾರೆ” ಎಂದು ತಿಳಿಸಿದರು.
ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅವರು ಪ್ರಾಸ್ತಾವಿಕ ಮಾತನಾಡಿ, “ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗದ ಸ್ಥಿತಿಗತಿಗಳ ಬಗ್ಗೆ 55 ಮಾನದಂಡಗಳ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. 1,35,35,772 ಕುಟುಂಬಗಳು ಸಮೀಕ್ಷೆಗೆ ಒಳಗಾಗಿವೆ. 5,9814,942 ಕೋಟಿ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಮೀಕ್ಷೆ ನಡೆಸಲು 1.66 ಲಕ್ಷ ಸರ್ಕಾರಿ ನೌಕರರ ಸಹಕಾರ ಸಿಕ್ಕಿದೆ. ಇದರಲ್ಲಿ 22 ಸಾವಿರ ಶಿಕ್ಷಕರು ಭಾಗಿಯಾಗಿದ್ದಾರೆ. ಸಮೀಕ್ಷೆಗೆ 165.51 ಕೋಟಿ ರೂ ಖರ್ಚಾಗಿದೆ. ಇಷ್ಟೆಲ್ಲ ಮಾಹಿತಿ ಇರುವಾಗ ವರದಿ ಅವೈಜ್ಞಾನಿಕ ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಪರಿಣಿತರನ್ನು ಕರೆದು ಚರ್ಚಿಸಲಿ. ನಾವು ಯಾವುದೇ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ನೀವು ಸಹ ಆವೇಶದ ಮಾತುಗಳನ್ನು ಆಡಬೇಡಿ” ಎಂದು ಎಚ್ಚರಿಕೆಯ ಧ್ವನಿಯಲ್ಲಿ ಮಾತನಾಡಿದರು.
“ವರದಿ ಕುರಿತ ಅನುಕೂಲ ಮತ್ತು ಅನಾನುಕೂಲ ಸಂಗತಿಗಳ ಬಗ್ಗೆ ಚರ್ಚೆಗೆ ಅವಕಾಶವಿದೆ. ಸಚಿವ ಸಂಪುಟ ಉಪ ಸಮಿತಿ ಕೂಡ ರಚನೆಯಾಗಲಿ. 3-5 ಜನ ಸದಸ್ಯರಿರಲಿ. ಒಂದು ತಿಂಗಳಲ್ಲಿ ಸಮಿತಿ ವರದಿ ನೀಡಲಿ. ಮಾಧ್ಯಮದವರು ಸಹ ಸೂಕ್ಷ್ಮತೆ ಇಟ್ಟುಕೊಂಡು ವರದಿ ಮಾಡಲಿ. ಇದು ರಾಜಕೀಯ ಪ್ರಶ್ನೆಯಲ್ಲ. ಅನ್ಯಾಯಕ್ಕೆ ಒಳಗಾದ ಜನತೆಗೆ ನ್ಯಾಯ ಒದಗಿಸುವ ಪ್ರಶ್ನೆಯಾಗಿದೆ” ಎಂದು ಹೇಳಿದರು.
ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಂ ಮಾತನಾಡಿ, “ನಾಳೆ ಅಧಿಕೃತವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಪೂರ್ವಭಾವಿಯಾಗಿ ಎಲ್ಲವನ್ನು ಹೇಳುವುದು ಸರಿಯಲ್ಲ. ನಮ್ಮ ಉದ್ದೇಶ ಇಷ್ಟೇ: ಯಾರೂ ಸಹ ಸಮಾಜಘಾತುಕ ಕೆಲಸ ಮಾಡುವುದು ಬೇಡ. ಎಲ್ಲ ವರ್ಗದವರಿಗೂ ನ್ಯಾಯ ಸಿಗಲಿ” ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಉಮಾಶ್ರಿ, ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ ಸೇರಿದಂತೆ ಅಹಿಂದ ಸಮುದಾಯ ವಿವಿಧ ಸಂಘಟನೆಗಳ ನಾಯಕರು ಇದ್ದರು.
ಸೌಜನ್ಯ : ಈದಿನ.ಕಾಂ
ಮುಸ್ಲಿಮರು ದೊಡ್ಡ ಜನಸಂಖ್ಯೆ ಎಂಬುದು ಸುಳ್ಳು: ಒಕ್ಕಲಿಗ ಶಾಸಕರ ಸಭೆಯಲ್ಲಿ ಡಿಕೆಶಿ


