ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗನ್ನು ಹಿಂತೆಗೆದುಕೊಂಡಿದೆ. ರೈತರ ದೃಷ್ಟಿಯೀಗ ಎಂಎಸ್ಪಿ ಖಾತ್ರಿಗಾಗಿ ಕಾನೂನು ಮಾಡಬೇಕು ಎಂಬುದರ ಮೇಲಿದೆ. ರೈತರ ಬಹು ದಿನದ ಬೇಡಿಕೆಗಳಲ್ಲಿ ಒಂದಾದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕಾನೂನು ಜಾರಿಗೂ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಈ ಸಂಬಂಧ ಸಮಿತಿಯನ್ನು ರಚಿಸಿದೆ. ಆದರೆ, ರೈತ ಸಂಘಗಳ 5 ಜನ ಪ್ರತಿನಿಧಿಗಳನ್ನೂ ಈ ಸಮಿತಿಗೆ ನೇಮಕ ಮಾಡಲು ಬೇಡಿಕೆ ಇಟ್ಟಿದ್ದು, ಇದು ಸಾಧ್ಯವಾದರೆ ರೈತರ ಹೋರಾಟವನ್ನು ಅಂತ್ಯಗೊಳಿಸುವ ಚರ್ಚೆಗಳು ಕೇಳಿಬರುತ್ತಿವೆ.
ಜಮ್ಹುರಿ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ಈ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ್ದು, “ಸಮಿತಿಯಲ್ಲಿ ಸೇರಿಸಬೇಕಾದ ಐದು ಜನರ ಹೆಸರನ್ನು ನಾಮನಿರ್ದೇಶನ ಮಾಡುವ ಬಗ್ಗೆ ನಾವು ಸರ್ಕಾರದಿಂದ ಸಂದೇಶವನ್ನು ಸ್ವೀಕರಿಸಿದ್ದೇವೆ. ರೈತ ಸಂಘದ ಮುಖಂಡರು ಮತ್ತು ತಜ್ಞರನ್ನು ಒಳಗೊಂಡ ಐದು ಜನರ ಹೆಸರನ್ನು ನಿರ್ಧರಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಬುಧವಾರ ಸಭೆ ಸೇರಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದೆ. ಅಲ್ಲದೆ ಎಂಎಸ್ಪಿ ಕುರಿತು ಸಮಿತಿಯನ್ನು ರಚಿಸುವುದು, ಅದರ ವಿಧಾನಗಳನ್ನು ಚರ್ಚಿಸುವುದು ಮತ್ತು ರೈತರ ವಿರುದ್ಧದ ಎಫ್ಐಆರ್ಗಳನ್ನು ಹಿಂಪಡೆಯುವುದು ಸೇರಿದಂತೆ ರೈತರ ಹಲವಾರು ಬೇಡಿಕೆಗಳನ್ನು ಈಡೇರಿಸಿದರೆ, ರೈತರಿಂದ “ಧರಣಿಯನ್ನು ಹಿಂತೆಗೆದುಕೊಳ್ಳಲು ಇದು ಬಲವಾದ ಅಂಶವಾಗಿದೆ” ಎಂದು ಅವರು ತಿಳಿಸಿದ್ದಾರೆ.
ಪಂಜಾಬ್-ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳ ರೈತರು ದೆಹಲಿ ಗಡಿಗಳಾದ ಟಿಕ್ರಿ, ಸಿಂಘು, ಶಹಜಾನ್ಪುರ್, ಘಾಜೀಪುರ್ನಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ಎರಡು ವರ್ಷದವರೆಗೆ ಹೋರಾಟಕ್ಕೆ ಎಲ್ಲಾ ತಯಾರಿಯನ್ನು ನಡೆಸಿದ್ದರು. ಆದರೆ, ಇದೀಗ ರೈತರ ಎದುರು ಸರ್ಕಾರವೇ ಮಣಿದಿರುವ ಪರಿಣಾಮ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಮುಂದಿನ ಕ್ರಮವನ್ನು ಡಿಸೆಂಬರ್ 4 ರಂದು ಪ್ರಕಟಿಸುವ ನಿರೀಕ್ಷೆಯಿದೆ.
ಬಿಕೆಯು ನ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಪಟಿಯಾಲ ಸಹ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಎಂಎಸ್ಪಿ (MSP) ಸಮಿತಿಯ ಭಾಗವಾಗಲು ಐದು ರೈತ ಸಂಘದ ಮುಖಂಡರ ಹೆಸರುಗಳನ್ನು ಕೋರಿ ಸರ್ಕಾರ ಮಂಗಳವಾರ ನಮ್ಮನ್ನು ಸಂಪರ್ಕಿಸಿದೆ. ರೈತರ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಎಲ್ಲಾ ರಾಜ್ಯಗಳಿಗೂ ಪತ್ರ ಕಳುಹಿಸಲಾಗಿದೆ ಎಂದು ಮೌಖಿಕ ಭರವಸೆ ನೀಡಿದೆ. ಆದರೆ ಇನ್ನೂ ಯಾವ ವಿಚಾರವನ್ನೂ ಬರಹದ ರೂಪದಲ್ಲಿ ಲಿಖಿತ ವಿಶ್ವಾಸ ನೀಡಿಲ್ಲ. ಗೃಹ ಸಚಿವಾಲಯ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಹಾಗಾಗಿ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ನಾನು ನಂಬುತ್ತೇನೆ” ಎಂದು ಜಗಮೋಹನ್ ಸಿಂಗ್ ಪಟಿಯಾಲ ತಿಳಿಸಿದ್ದಾರೆ.
“ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಿಲ್ಲ ಎಂದು ತಿಳಿಸಲಾಗಿದೆ ಮತ್ತು ಮಾಲಿನ್ಯ ನಿಯಂತ್ರಣ ಸುಗ್ರೀವಾಜ್ಞೆಯಲ್ಲಿ ರೈತರಿಗೆ ಹುಲ್ಲು ಸುಡುವವರಿಗೆ ದಂಡ ವಿಧಿಸುವ ವಿಭಾಗವನ್ನು ಹಿಂಪಡೆಯಲಾಗಿದೆ. ಆದರೆ ಹೆಚ್ಚಿನ ವಿಷಯಗಳನ್ನು ನಮಗೆ ಮೌಖಿಕವಾಗಿ ತಿಳಿಸಲಾಗಿದೆ, ಲಿಖಿತವಾಗಿ ಅಲ್ಲ” ಎಂದು ಅವರು ಹೇಳಿದರು.
ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕರಾದ ಡಾ.ದರ್ಶನ್ ಪಾಲ್ ಮಾತನಾಡಿ, ‘ಎಂಎಸ್ಪಿ ಸಮಿತಿಗೆ ಐದು ರೈತರ ಪ್ರತಿನಿಧಿಗಳ ಹೆಸರನ್ನು ಸರ್ಕಾರ ಕೇಳಿದೆ ಎಂದು ನನಗೆ ತಿಳಿದಿದೆ. ಆದರೆ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದತಿಗೆ ಒಪ್ಪಿಗೆ ನೀಡಿದ ರಾಷ್ಟ್ರಪತಿ