Homeಮುಖಪುಟಪೂಜಾ ಸ್ಥಳಗಳ ಕಾಯ್ದೆ ರದ್ದು ಮಾಡುವ ಹುನ್ನಾರ; ಸೆಕ್ಯುಲರಿಸಂನ ಶವಸಂಸ್ಕಾರ

ಪೂಜಾ ಸ್ಥಳಗಳ ಕಾಯ್ದೆ ರದ್ದು ಮಾಡುವ ಹುನ್ನಾರ; ಸೆಕ್ಯುಲರಿಸಂನ ಶವಸಂಸ್ಕಾರ

- Advertisement -
- Advertisement -

ದೇಶದ ಗಡಿಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳು ನಿರ್ಧರಿಸುವುದಕ್ಕೂ ಮೊದಲಿನ ಸಮಯವನ್ನು ಊಹಿಸಿಕೊಳ್ಳಿ. ಆಯಾ ಪ್ರದೇಶಗಳನ್ನಾಳುತ್ತಿದ್ದ ರಾಜ ಅಥವಾ ಆಕ್ರಮಣಕಾರರ ಅಧಿಕಾರದ ಅವಧಿಯಲ್ಲಿ ಒಂದು ಪ್ರಾಂತ್ಯದ ಸ್ವರೂಪವು, ಕಾನೂನು, ಧರ್ಮದ ಮೇಲ್ಮೆ, ರೀತಿರಿವಾಜುಗಳು, ಆಯಾ ರಾಜ ಅಥವಾ ಆಕ್ರಮಣಕಾರರ ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತಿದ್ದುದ್ದು ಐತಿಹಾಸಿಕ ಸತ್ಯ. ಆದರೆ, ನಂತರದ ದಿನಗಳಲ್ಲಿ ಪ್ರಮುಖವಾಗಿ ಎರಡನೇ ಮಹಾಯುದ್ಧದ ನಂತರ ಜಗತ್ತಿನ ಎಲ್ಲ ದೇಶಗಳಲ್ಲಿ ತಾವು ಸಾಚಾ ಅಥವಾ ಹೆಚ್ಚು ಸುಸಂಸ್ಕೃತರು ಎಂದು ತೋರಿಸಿಕೊಳ್ಳುವ ಒಂದು ದೊಡ್ಡ ಸ್ಪಧೆಯೇ ಶುರುವಾಯಿತು.

ಅತ್ಯಂತ ಹೆಚ್ಚು ಉದಾರನೀತಿಗಳು, ಶಾಂತಿಪಾಲನೆಯ ಸಂದೇಶಗಳು, ಯುದ್ಧಗಳ ವಿರೋಧಿ ಪ್ರಚಾರ, ಶೋಷಿತರ ರಕ್ಷಣೆಗೆ ಒತ್ತು ಮುಂತಾದವು ಪ್ರಾರಂಭವಾದವು. ಇದನ್ನೆಲ್ಲಾ ನೋಡುವಾಗ ಮನುಷ್ಯ ಇನ್ನೇನು ತನ್ನ ಉಚ್ಛ್ರಾಯ ಸ್ಥಿತಿ ತಲುಪುವ ದಿನಗಳು ದೂರವಿಲ್ಲ ಎಂದೆನಿಸಲು ಪ್ರಾರಂಭಿಸಿತ್ತು. ಇದೇ ಹಿನ್ನೆಲೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ವೈಚಾರಿಕ ಭಿನ್ನಮತಗಳು ಇದ್ದಾಗ್ಯೂ ಅಂದಿನ ಬಹುತೇಕ ರಾಷ್ಟ್ರೀಯ ನಾಯಕರ ಮಾತು ಅಥವಾ ಕೃತಿಗಳಲ್ಲಿ ದೇಶವನ್ನು ಅತ್ಯಂತ ವಿಶಾಲ, ಉನ್ನತ ಮೌಲ್ಯಗಳ ಮೇಲೆ ಕಟ್ಟುವ ಇರಾದೆ ಇದ್ದು, ಆ ಕೆಲಸ ಯಶಸ್ವಿಯಾಗಿ ಪ್ರಾರಂಭವಾಯಿತು. ಸಂವಿಧಾನದ ರಚನೆ ಈ ಇರಾದೆಯ ಭದ್ರ ಅಡಿಪಾಯವಾಗಿ ಮೂಡಿ ಬಂದಿತು. ಅಂದು ಮೂಡಿಬಂದ ಸೆಕ್ಯುಲರ್ ಎಂಬ ಮೌಲ್ಯ ಈ ದೇಶದ ಉದಾತ್ತತೆ ಮತ್ತು ವೈವಿಧ್ಯತೆಯನ್ನು ರಕ್ಷಿಸುವ ದಾರಿಯಲ್ಲಿ ಹೊಸ ಮೈಲಿಗಲ್ಲಾಯಿತು.

ಯಾವುದೇ ದೊಡ್ಡ ವಿಚಾರವಿರಲಿ ಅದನ್ನು ಕಟ್ಟಲು ತಗಲುವ ಸಮಯಕ್ಕಿಂತ ಕೆಡವಲು ತಗಲುವ ಸಮಯ ಬಹಳ ಕಡಿಮೆ. ಸ್ವಾತಂತ್ರ್ಯ ಸಿಕ್ಕ ಕೇವಲ 45 ವರ್ಷಗಳ ಒಳಗೆ ಅಧಿಕಾರ ಗಳಿಸುವ ಏಕೈಕ ಉದ್ದೇಶದಿಂದ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾತೃ ಸಂಘಟನೆಗಳ ಮುಖಂಡರು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಐತಿಹಾಸಿಕ ಬಾಬ್ರಿ ಮಸೀದಿ ಕೆಡವಲು ಮುಂದಾದಾಗ ದೇಶದ ಸೆಕ್ಯುಲರ್ ಬುನಾದಿಯ ಕಲ್ಲು ಸಡಿಲವಾಯಿತು. ಬಾಬ್ರಿ ಮಸೀದಿಯನ್ನು ಮುಂದೆ ಉರುಳಿಸಿದ್ದೂ ಆಯಿತು. ಮುಂದೆ ಕಾಲಕ್ರಮೇಣ ಧಾರ್ಮಿಕ ದಂಗೆಗಳು, ಗೋದ್ರಾ ಹತ್ಯಾಕಾಂಡ, ಗುಜರಾತ್ ನರಮೇಧ ಒಂದೊಂದಾಗಿ ನಡೆದಂತೆ ಅಭದ್ರತೆ ಕಣ್ಣಿಗೆ ಕಾಣುವ ಮಟ್ಟಕ್ಕೆ ಬೆಳೆಯಿತು. ಆದರೆ ಈ ಎಲ್ಲ ಅಭದ್ರತೆಗೂ ಸರ್ಕಾರಿ ಮುದ್ರೆ ಬಿದ್ದಿದ್ದು ಕಳೆದ 6-7 ವರ್ಷಗಳಲ್ಲಿ.

PC : Outlook India

2019ರಲ್ಲಿ ಹೊರಬಂದ ಬಾಬ್ರಿ ಮಸೀದಿ ತೀರ್ಪಿನಿಂದ ಈ ಎಲ್ಲ ಭಾವನೆಗಳ ಸಮ್ಮಿಳಿತ ರೂಪವಾಗಿ ಜನರ ಅಸುರಕ್ಷತೆಗೆ ಒಂದು ಸಾಂಸ್ಥಿಕ ಮುದ್ರೆ ಒತ್ತಿದಂತಾಯ್ತು. ಇದೇ ಹಿನ್ನೆಲೆಯಲ್ಲಿ ಮೊನ್ನೆ ದೆಹಲಿಯ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಎಂಬುವವರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ (PIL) 1991ರ ‘Place of Worship Act’ನ (ಪೂಜಾ ಸ್ಥಳಗಳ ಕಾಯ್ದೆ) ಔಚಿತ್ಯವನ್ನು ಪ್ರಶ್ನಿಸಿರುವುದು ಹಾಗೂ ಅದನ್ನು ಕೋರ್ಟು ದಾಖಲಿಸಿಕೊಂಡಿದ್ದನ್ನು ನೋಡಿದಾಗ ಇನ್ನೇನು ಸೆಕ್ಯುಲರ್ ಪದದ ಚೈತನ್ಯಕ್ಕೆ ಕೊನೆ ಮೊಳೆ ಹೊಡೆಯುವ ದಿನಗಳು ದೂರವಿಲ್ಲ ಎನಿಸಲು ಪ್ರಾರಂಭಿಸಿದೆ.

ಬಾಬ್ರಿ ಮಸೀದಿಯ ಧ್ವಂಸದ ನಂತರ ಕೇಂದ್ರದ ಕಾಂಗ್ರೆಸ್ ಸರ್ಕಾರ ದೇಶದ ಚೈತನ್ಯವನ್ನು, ಧಾರ್ಮಿಕ ಸಹಬಾಳ್ವೆ, ಸಮನ್ವಯತೆಯನ್ನು ಕಾಪಾಡುವ ಉದ್ದೇಶದಿಂದ “ಪೂಜಾ ಸ್ಥಳಗಳ ಕಾಯ್ದೆ”ಯನ್ನು ತರುವ ಸೂಚನೆ ನೀಡಿದಾಗ ಬಿಜೆಪಿಯನ್ನು ಬಿಟ್ಟು ಉಳಿದೆಲ್ಲ ಪಕ್ಷಗಳು ತಮ್ಮ ಸಹಮತ ಸೂಚಿಸಿದ್ದವು. ಕಾಯ್ದೆಯಲ್ಲಿ ಯಾವ ದಿನದಿಂದ ಇದು ಅನ್ವಯವಾಗಬೇಕು ಎಂಬ ಜಿಜ್ಞಾಸೆ ಬಂದಾಗ ಸಹಜವಾಗಿಯೇ ಭಾರತ ಸ್ವತಂತ್ರ್ಯ ಪ್ರಜಾಪ್ರಭುತ್ವವಾಗಿ ಹೊರಬಂದು ಜಾತ್ಯತೀತ ಮೌಲ್ಯದ ಮೇಲೆ ದೇಶಕಟ್ಟಲು ಪ್ರಾರಂಭಿಸಿದ ದಿನ ಅಂದರೆ ಆಗಸ್ಟ್ 15, 1947ನ್ನು ಮೂಲವಾಗಿ ಇಟ್ಟುಕೊಳ್ಳಲಾಯಿತು.

ಈ ಕಾಯ್ದೆಯ ಸೆಕ್ಷನ್ 3, 4ರ ಪ್ರಕಾರ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪ ಆಗಸ್ಟ್ 18, 1947ರಂದು ಹೇಗೆ ಇತ್ತೋ ಅದೇ ರೀತಿ ಮುಂದುವರಿಯಬೇಕು ಮತ್ತು ಯಾರಾದರೂ ಅದನ್ನು ಬದಲಿಸಿ ಬೇರೆ ಧಾರ್ಮಿಕ ಕೊಡುವ ಪ್ರಯತ್ನ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದೂ ಹೇಳಿತು.

ಸೆಕ್ಷನ್ 4(2)ರ ಅಡಿಯಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ಕೋರ್ಟಿನ ಮುಂದೆ ಇರುವ ಪ್ರಕರಣಗಳು ಮುಕ್ತಾಯವಾಗುತ್ತವೆ ಎಂದು ನಿರ್ಧರಿಸಲಾಯಿತು. ಆದರೆ ಈಗಾಗಲೇ ಏರು ಸ್ಥಿತಿ ಮುಟ್ಟಿದ್ದ ಅಯೋಧ್ಯೆಯ ರಾಮಜನ್ಮಭೂಮಿ ಬಾಬ್ರಿಮಸೀದಿ ವಿವಾದವನ್ನು ಈ ಕಾಯ್ದೆಯ ಪರಿಧಿಯಿಂದ ಹೊರಗೆ ಇಡಲಾಯಿತು. ಹೀಗೆ ಅಯೋಧ್ಯೆಯನ್ನು ಈ ಕಾಯ್ದೆಯಿಂದ ಹೊರಗೆ ಇಟ್ಟದ್ದು ಸರಿಯೇ ತಪ್ಪೇ ಎಂಬುದನ್ನು ಮುಂದಿನ ದಿನಗಳಲ್ಲಿ ಇತಿಹಾಸದ ವಿದ್ಯಾರ್ಥಿಗಳು ನಿರ್ಧರಿಸಬಹುದು. ತಪ್ಪು ಸಾರ್ವಜನಿಕವಾದಾಗ ಸತ್ಯ ಸಜೆ ಅನುಭವಿಸಬೇಕಾಗುತ್ತದೆ.

1994ರಲ್ಲಿ ಎಮ್. ಇಸ್ಮಾಯಿಲ್ ಫಾರೂಕಿ ವರ್ಸಸ್ ಭಾರತ ಒಕ್ಕೂಟ ಕೇಸಿನಲ್ಲಿ ತನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತ ಸುಪ್ರೀಂಕೋರ್ಟ್ “ಬಾಬ್ರಿಮಸೀದಿ ಕೆಡವಿದವರಿಗೆ 1991ರ ಪೂಜಾ ಸ್ಥಳಗಳ ಕಾಯ್ದೆಯ ಬಗ್ಗೆ ಎಳ್ಳೆಷ್ಟೂ ಭಯ ಇರಲಿಲ್ಲ ಎಂದು ಅನಿಸುತ್ತದೆ ಎಂದಿತ್ತು. ಅಲ್ಲದೆ ಅಯೋಧ್ಯೆಯ ಕೆಲವೊಂದು ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾಯ್ದೆ 1993ನ್ನು ಕಿತ್ತು ಹಾಕಿತ್ತು. ಅತ್ಯಂತ ಮಹತ್ವದ್ದೆಂದರೆ ಈ ನಿಟ್ಟಿನಲ್ಲಿ ಅಂದಿನ ರಾಷ್ಟ್ರಪತಿ ಈ ಕೇಸಿನ ಬಗ್ಗೆ ಕೋರ್ಟಿನ ನಿರ್ಧಾರ ಪ್ರಶ್ನಿಸಿದಾಗ ಸುಪ್ರೀಂಕೋರ್ಟ್ ಅದಕ್ಕೆ ಉತ್ತರ ನೀಡದೆ ಇರುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಲ್ಲದೆ, ರಾಷ್ಟ್ರಪತಿಗಳ ಈ ಪ್ರಶ್ನೆ ದೇಶದಲ್ಲಿ ಒಂದು ಸಮುದಾಯದವರಿಗೆ ಅನುಕೂಲವಾಗುವಂತೆ ಇದ್ದು ದೇಶದ ಸಮಗ್ರತೆಯ ದೃಷ್ಟಿಯಿಂದ ನಾವಿದನ್ನು ಉತ್ತರಿಸದೆ ಇರಲು ನಿರ್ಧರಿಸಿದ್ದೇವೆ ಎಂದು ಹೇಳಿತು. ಹಾಗೆ ಹೇಳಿ ಅದು ನಿಜವಾದ ಅರ್ಥದಲ್ಲಿ ಸಂವಿಧಾನದ ಒಂದು ಸ್ತಂಭ ಎಂಬುದನ್ನು ಸಾಬೀತು ಮಾಡಿತ್ತು.

“ಅಯೋಧ್ಯೆ ಎಂಬುದು ಒಂದು ಬಿರುಗಾಳಿ, ಅದು ಬೀಸಿ ಮಾಯವಾಗುತ್ತದೆ, ಆದರೆ ಅದಕ್ಕಾಗಿ ಕೋರ್ಟಿನ ಘನತೆಯನ್ನು ಬಲಿಕೊಡಲು ಆಗದು” ಎಂದಿದ್ದ ಅಂದಿನ ಸುಪ್ರೀಂಕೋರ್ಟ್‌ಗೂ “ಹೌದು ಮಸೀದಿ ಕೆಡವಿದ್ದು ಅಪರಾಧ ಆದರೆ ಜನರ ಭಾವನೆಗಳಿಗೆ ಬೆಲೆಕೊಟ್ಟು ರಾಮಜನ್ಮಭೂಮಿ ಇದೆ” ಎಂದು ನಿರ್ಧಾರ ಮಾಡಿದ ಇಂದಿನ ಸುಪ್ರೀಂ ಕೋರ್ಟಿಗೂ ಇರುವ ವ್ಯತ್ಯಾಸ ಬೇಟೆಯಾಡಿ ತಿನ್ನುವ ಪ್ರಾಣಿಗೂ ಪರಾವಲಂಬಿ ಜೀವಿಗೂ ಇರುವಷ್ಟೇ ನಿಚ್ಚಳ. ರಾಮಜನ್ಮಭೂಮಿ ಪ್ರಕರಣದ ಇನ್ನೊಂದು ಭಾಗವಾದ ಎಂ ಸಿದ್ದಿಕ್ ಕೇಸಿನಲ್ಲಿ ಸುಪ್ರೀಂಕೋರ್ಟ್ 1991ರ ಪೂಜಾಸ್ಥಳದ ಕಾಯ್ದೆ, ಅದರ ಮಹತ್ವ ಸಾಂವಿಧಾನಿಕತೆ ಎಲ್ಲವನ್ನೂ ಎತ್ತಿ ಹಿಡಿಯುತ್ತದೆ. ಆದರೆ ಈ ಕಾಯ್ದೆಯ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಚರ್ಚೆಗಳು ನಡೆದಾಗ ಬಿಜೆಪಿ ತೀವ್ರವಾಗಿ ಅದನ್ನು ವಿರೋಧಿಸಿತ್ತು. ಅದರ ಪ್ರಕಾರ ’ಧಾರ್ಮಿಕ ಯಾತ್ರ್ರಾಸ್ಥಳಗಳು (Pilgrimage) ಮತ್ತು ರುದ್ರಭೂಮಿಗಳು ಸಂವಿಧಾನದಲ್ಲಿ ರಾಜ್ಯಗಳ ವಿಷಯ ಪಟ್ಟಿಯಲ್ಲಿ ಬರುತ್ತವೆ ಹಾಗಿದ್ದಾಗ ಕೇಂದ್ರ ಇದರ ಮೇಲೆ ಕಾನೂನು ರಚಿಸಲು ಸಾಧ್ಯವಿಲ್ಲ ಎಂದಾಗಿತ್ತು. ಆಗ ಕೇಂದ್ರ, ತನ್ನ ಕೇಂದ್ರ ಪಟ್ಟಿಯ 97ನೇ ವಿಷಯದ ಅಡಿ ಬರುವ ಕೇಂದ್ರ ವಿಶೇಷ ಅಧಿಕಾರಗಳ ಅಡಿಯಲ್ಲಿ ಈ ಕಾಯ್ದೆ ರಚಿಸುವುದಾಗಿ ಹೇಳಿತ್ತು. ಕೇಂದ್ರಗಳು ರಾಜ್ಯಗಳ ಪಟ್ಟಿಯಲ್ಲಿ ಆಗಾಗ ಕೈಹಾಕುವುದು ನಡದೇ ಇರುತ್ತಾದರೂ ಅದರ ಉದ್ದೇಶಗಳು ಕೆಲವೊಮ್ಮೆ ಅದರ ಕಾರ್ಯಕ್ಕೆ ಸಮರ್ಥನೆ ಒದಗಿಸುತ್ತದೆ. ಇಂದು ರಾಜ್ಯಗಳಿಗೆ ಸಂಬಂಧಿಸಿದ ಕೃಷಿಯಲ್ಲಿ ಕೇಂದ್ರ ತಂದಿರುವ ಕಾಯ್ದೆಗಳಿಗೆ ಕೇಂದ್ರ ಸರ್ಕಾರದ ಉದ್ದೇಶಗಳ ಹಿನ್ನೆಲೆಯಲ್ಲಿಯೇ ವಿರೋಧ ವ್ಯಕ್ತವಾಗಿರುವುದು.

PC : New Indian Express

ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಬಾಬ್ರಿ ಮಸೀದಿ ಧ್ವಂಸದ ಜೊತೆಗೆ ದೇಶದಾದ್ಯಂತ 3000ಕ್ಕೂ ಹೆಚ್ಚು ಮಸೀದಿಗಳನ್ನು ಮರಳಿ ಪಡೆಯುವ ಘೋಷಣೆ ಮಾಡಿದ್ದಲ್ಲದೆ ಕಾಶಿಯ ಗ್ಯಾನವ್ಯಾಪಿ ಮಸೀದಿ ಹಾಗೂ ಮಥುರಾದ ಶಾಹಿ ಮಸೀದಿಯಿಂದ ಈ ಕಾರ್ಯ ಪ್ರಾರಂಭ ಮಾಡುವುದಾಗಿ ಹೇಳಿದಾಗ ಕೇಂದ್ರ 1991ರ ಕಾಯ್ದೆಯನ್ನು ತಂದಿತ್ತು.

ಇದೇ ತಿಂಗಳಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ದೇವತೆಗಳಾದ ಶಿವ, ಮಾ ಶೃಂಗಾರ ಗೌರಿ ಮತ್ತು ಗಣೇಶರ ಹೆಸರಲ್ಲಿ ಸಿವಿಲ್ ದಾವೆ ದಾಖಲಾಗಿದ್ದು ದೇವಾಲಯದ ಎದುರು ಇರುವ ಗ್ಯಾನವ್ಯಾಪಿ ಮಸೀದಿಯನ್ನು ತೆಗೆದುಹಾಕಿ ಮಂದಿರಕ್ಕೆ ಆ ಜಾಗ ನೀಡಬೇಕೆಂದು ಕೋರಲಾಗಿದೆ. ಇಷ್ಟೇ ಆಗಿದ್ದರೆ ಚಿಂತಿಸಬೇಕಾಗಿರಲಿಲ್ಲ, ಆದರೆ ಕೋರ್ಟ್ ಇದನ್ನು ಪುರಸ್ಕರಿಸಿ ನೋಟಿಸನ್ನೂ ಜಾರಿ ಮಾಡಿದೆ. ಆದರೆ ಒಂದೇ ಪ್ರಶ್ನೆ, ಈ ದೇವತೆಗಳೆಲ್ಲಾ ವಕಾಲತ್‌ಗೆ ಹೇಗೆ ಮತ್ತು ಎಲ್ಲಿ ಸಹಿ ಹಾಕಿದರು ಎಂಬುದು; ವಕೀಲರುಗಳನ್ನು ಹೇಗೆ ನೇಮಿಸಿದರು ಅನ್ನುವುದು. ಜಿಲ್ಲಾ ನ್ಯಾಯಾಲಯಕ್ಕಷ್ಟೇ ಈ ವಿಷಯ ಸೀಮಿತವಾಗಿದ್ದರೆ ಕೂಡ ಚಿಂತೆ ಇರಲಿಲ್ಲ. ಈ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಸುಪ್ರೀಂ ಕೋರ್ಟಿನಲ್ಲಿ 1991ರ ಕಾಯ್ದೆಯ ಔಚಿತ್ಯವನ್ನೇ ಪ್ರಶ್ನಿಸಿದಾಗ ಅದು ದಾಖಲಾಗುತ್ತದೆ ಎಂದರೆ ಅದು ತೀವ್ರ ಚಿಂತೆಯ ವಿಚಾರ.

ಇದಕ್ಕೂ ಮೊದಲು ಕೆಲ ಎನ್‌ಜಿಒಗಳು ಇಂಥ ಪ್ರಯತ್ನ ಮಾಡಿದಾಗ ಸುಪ್ರೀಂಕೋರ್ಟ್ “ಇಂದಿನ ದಿನ ಕಾನೂನು ಕೈಗೆತ್ತಿಕೊಂಡು ಐತಿಹಾಸಿಕ ತಪ್ಪುಗಳನ್ನು ಸರಿಮಾಡಲು ಆಗುವುದಿಲ್ಲ ಎಂದು ಹೇಳಿ ತಳ್ಳಿ ಹಾಕಿತ್ತು. ಆದರೆ, ಈಗ ಅಯೋಧ್ಯೆಯ ತೀರ್ಮಾನ ದೇಶದ ಧಾರ್ಮಿಕ ಸಾಮರಸ್ಯದ ಇತಿಹಾಸಕ್ಕೆ ಕೊಡಲಿ ಪೆಟ್ಟು ಕೊಟ್ಟಿರುವುದನ್ನು ಮುಂದಿನ ಜನಾಂಗ ಎಂದೂ ಮರೆಯುವುದಿಲ್ಲ. ಮತ್ತು 1991ರ ಪ್ರಮುಖ ಕಾನೂನನ್ನೇ ಪ್ರಶ್ನಿಸಿದಾಗ ಅದಕ್ಕೆ ಸಮ್ಮತಿ ದೊರಕುತ್ತದೆ ಎಂದರೆ ಅದು ಇನ್ನಷ್ಟು ಒಡಕುಗಳಿಗೆ, ಅದು ಸೃಷ್ಟಿಸುವ ಸಮಸ್ಯೆಗಳಿಗೆ ದೇಶ ತುತ್ತಾಗಬಲ್ಲದು. ಈ ಸೂಚನೆಯನ್ನು ಈಗ ಗಮನಿಸಿ ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡದಿದ್ದರೆ ಮುಂಬರುವ ದಿನಗಳು ಭಯಾನಕವಾಗುವುದರಲ್ಲಿ ಸಂಶಯವಿಲ್ಲ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...