Homeಅಂಕಣಗಳುಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

- Advertisement -
- Advertisement -

ಇಂದಿಗೆ ಸುಮಾರು 103 ವರ್ಷಗಳ ಹಿಂದೆ ಬ್ರಿಟಿಷ್ ಸರಕಾರ ಚಂಪಾರಣ ಕೃಷಿ ಕಾಯಿದೆ ತಂದಿತು. ಅದರ ಮೂಲ ಉದ್ದೇಶಗಳು ಎರಡು- ವಿವಾದಿತ ತೀನ್ ಕಥಿಯಾ ಉಳುಮೆ ಪದ್ಧತಿ ರದ್ದು ಮಾಡುವುದು ಹಾಗೂ ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು ರೈತರಿಗೆ ಸ್ವತಂತ್ರ ನೀಡುವುದು. ಇದು ಯಾಕ್ ಬಂತಪಾ ಅಂದ್ರ ಅದರ ಹಿಂದ ಎಂಟು ತಿಂಗಳ ರೈತರ ಹೋರಾಟ ಇತ್ತು. ಅದರ ಹಿಂದ ಸುಮಾರು ಒಂದು ಶತಮಾನದ ಶೋಷಣೆ ಇತ್ತು.

ಈಸ್ಟ್ ಇಂಡಿಯಾ ಕಂಪನಿ 1790ರೊಳಗ ಜಮೀನ್ದಾರಿ ಪದ್ಧತಿ ಜಾರಿಗೆ ತಂದಿತ್ತು. ಅದರ ಪ್ರಕಾರ ಊರಾಗಿನ ಎಲ್ಲಾ ಜಮೀನಿನ ಸುಂಕ ಒಂದೇ ಕುಟುಂಬದವರು ಕೊಡಬೇಕಾಗಿತ್ತು. ಈ ಸುಂಕ ಸುಲಿಗೆದಾರರು, ಇತರ ರೈತರಿಂದ ತೆರಿಗೆ ಸಂಗ್ರಹ ಮಾಡಿ, ಅದರಲ್ಲಿ ಸ್ವಲ್ಪ ಕಮಿಷನ್ ಮುರಕೊಂಡು ಬ್ರಿಟಿಷರಿಗೆ ಕೊಡಬೇಕಾಗಿತ್ತು.

ಆ ತೆರಿಗೆ ಕಟ್ಟುವ ಮುನೀಂ-ಮುನ್ಷಿಗಳು ಸಣ್ಣ ಸಣ್ಣ ರೈತರ ಜೊತೆ ಏನು ವ್ಯವಹಾರ ಮಾಡೋದು ಬಿಡು ಅಂತ ಹೇಳಿ ಜಾರಡಿನ ಮತೆಸೊನ, ಈ. ಪಬಾನೆ, ಸಸೂನ, ವಾಡಿಯಾ, ಸ್ವೈರನಂತಾ ದೊಡ್ಡ ದೊಡ್ಡ ಕೆಮಿಕಲ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡರು. ಆ ಕಂಪನಿಗಳು ರೈತರ ಜೊತೆ ಒಪ್ಪಂದ ಮಾಡಿಕೊಂಡರು. ಅದಕ್ಕ ಅನುಕೂಲ ಆಗಲಿ ಅಂತ ಬಿಹಾರ, ಒರಿಸ್ಸಾ ಹಾಗೂ ಬಂಗಾಳ ರಾಜ್ಯಗಳ ಸರಕಾರಗಳು ತೀನ್ ಕಥಿಯ ನಿಯಮಗಳಿಗೆ ಒಪ್ಪಿಗೆ ನೀಡಿದವು. ತೀನ್ ಕಥಿಯ ಅಂದ್ರ ಪ್ರತಿ 10 ಎಕರೆ ಜಮೀನಿನ ಒಳಗ ಮೂರು ಎಕರೆ ಇಂಡಿಗೋ ನೀಲಿ ಬೆಳಿ ಬೆಳಿಯಬೇಕು. ಇದು ಕಡ್ಡಾಯ. ಇದಕ್ಕೆ ತಪ್ಪಿದರೆ ಜಮೀನುದಾರ, ಗುಮಾಸ್ತ ಹಾಗೂ ಕಂಪನೀ ಸರಕಾರ ಅವರಿಗೆ ಶಿಕ್ಷೆ ಕೊಡಬಹುದಾಗಿತ್ತು. ನೀಲಿ ಗಿಡದಿಂದ ನೀಲಿ ಬಣ್ಣ ತಯಾರು ಆಗುತ್ತಿತ್ತು.

ಅಷ್ಟರಾಗ ಜರ್ಮನಿ ವಿಜ್ಞಾನಿಗಳು 1901ಕ್ಕ ಒಂದು ಕೃತಕ ನೀಲಿ ಬಣ್ಣ ಕಂಡುಹಿಡಿದರು. ಆಗ ಇಂಡಿಗೋದ ಬೇಡಿಕೆ ಕಮ್ಮಿ ಆತು. ಬ್ರಿಟಿಷರ ಬೆಂಬಲಿತ ಕೆಮಿಕಲ್ ಕಂಪನಿಗಳು ರೈತರಿಗೆ ಕೊಡೋ ಹಣ ಕಮ್ಮಿ ಮಾಡಿದರು. 1910-1915ರ ನಡುವಿನ ಮೊದಲನೇ ಮಹಾಯುದ್ಧದ ಕಾಲಕ್ಕ ಮತ್ತೊಮ್ಮೆ ಇಂಡಿಗೋಗೆ ಬೆಲೆ ಬಂತು. ಅದರ ದುರಾಸೆಗೆ ಕಂಪನಿಗಳು ರೈತರಿಗೆ ಹೆಚ್ಚು ನೀಲಿ ಬೆಳಿಯಲಿಕ್ಕೆ ಒತ್ತಾಯ ಮಾಡಿದವು. ಒಲ್ಲೆ ಅಂದವರಿಗೆ ಹಿಂಸೆ ಕೊಟ್ಟರು. ಅವರ ಜಮೀನು ಕಸಗೊಂಡರು, ಜೈಲಿಗೆ ಹಾಕಿದರು.

ಮೋಹನ್ ದಾಸ್ ಗಾಂಧಿ ಅವರು ದಕ್ಷಿಣ ಆಫ್ರಿಕಾ ಬಿಟ್ಟು ಭಾರತಕ್ಕ 1915ಕ್ಕ ಬಂದಿದ್ದರು. ಅವರನ್ನ ಕಾಂಗ್ರೆಸ್ ಸಮಾವೇಶದೊಳಗ ಭೇಟಿ ಮಾಡಿದ ಚಂಪಾರಣದ ರಾಜ್‌ಕುಮಾರ್ ಶುಕ್ಲ ಹಾಗೂ ಸಂತ ರಾವುತ ಅನ್ನುವ ಇಬ್ಬರು ಕಾರ್ಯಕರ್ತರು ನಮ್ಮೂರಿಗೆ ಬನ್ನಿ, ಅಲ್ಲಿ ರೈತರು ಸಂಕಷ್ಟದೊಳಗ ಅದಾರು, ಅವರಿಗೆ ಒಂದು ಹೋರಾಟ ರೂಪಿಸಿಕೊಡರಿ ಅಂತ ಕೇಳಿದರು. ಒಂದು ವರ್ಷದ ನಂತರ ಗಾಂಧೀಜಿ ಅಲ್ಲಿಗೆ ಹೋದರು. ಅಲ್ಲಿ ಅಸಹಕಾರ ಚಳವಳಿ ನಡೆಸಿ, ಜೈಲಿಗೆ ಹೋದರು. ಸುಮಾರು ಎಂಟು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿದ್ದಕ್ಕ ಬ್ರಿಟಿಷರ ಮನಸ್ಸು ಕರಗಿತು. ಅವರು ಚಂಪಾರಣ ಕೃಷಿ ಕಾಯಿದೆ ರೂಪಿಸಿದರು. ತೀನ್ ಕಥಿಯಾ ನಿಯಮ ರದ್ದಾಗಿ ರೈತರು ತಮಗೆ ತಿಳಿದ ಬೆಲೆ ಬೆಳಿಯಲಿಕ್ಕೆ ಅವಕಾಶ ಮಾಡಿಕೊಟ್ಟರು.

ಈ ಹೋರಾಟದ ನಂತರ ಶುಕ್ಲ ಹಾಗೂ ರಾವುತ ಅವರು ಗಾಂಧಿಗೆ ಬಾಪು ಹಾಗೂ ಮಹಾತ್ಮ ಅಂತ ಕರೆದರು. ‘ಗಾಂಧಿ ಚಂಪಾರಣ—ತಿವನ್ನು ಬದಲು ಮಾಡಲಿಲ್ಲ. ಚಂಪಾರಣ ಗಾಂಧಿಯನ್ನು ಬದಲು ಮಾಡಿತು. ಸತ್ಯ ಹಾಗೂ ಅಹಿಂಸೆಯ ದಾರಿ ಅವರಿಗೆ ಕಾಯಂ ಆಗುವಂತೆ ಮಾಡಿತು’ ಅಂತ ಇತಿಹಾಸಕಾರ ಡೇವಿಡ್ ಅರ್ನಾಲ್ಡ್ ಹೇಳಿದರು.

ಇಷ್ಟು ಹೊತ್ತು ಕೇಳಿದ ಕತಿ ಒಂಥರಾ ಒಪ್ಪಂದ ಕೃಷಿಯ ಕತಿ ಕೇಳಿದ ಹಂಗ ಆತಲ್ಲಾ. ಈಗ ನೋಡ್ರಿ, ಕೇಂದ್ರ ಸರಕಾರದವರು ಮೂರು ಕೃಷಿ ಕಾನೂನು ಪಾಸು ಮಾಡಿದಾರು. ರಾಜ್ಯದವರು ಅವರಿಗೆ ಮುಂದ ಹೋಗಿ ಐದು ಕಾಯಿದೆ ಪಾಸು ಮಾಡಿದಾರು. ಇವು ರೈತರಿಗೆ ಅನುಕೂಲ. ಅವರ ಸ್ವಾತಂತ್ರ್ಯ ಹೆಚ್ಚಿಸಿ ಅವರ ಆದಾಯ ದುಪ್ಪಟ್ಟು ಮಾಡುವ ಕಾಯಿದೆ ಅಂತ ಹೇಳಿದಾರು. ಆದರ ಅವು ಆಳುವ ಪಕ್ಷದ ಗೆಳೆಯರ ಆದಾಯ ದುಪ್ಪಟ್ಟುಗಿಂತಲೂ ಹೆಚ್ಚು ಮಾಡಿದಾವು. ಅವರ ಸ್ವಾತಂತ್ರ್ಯವನ್ನು ಅತಿಯಾಗಿ ಜಾಸ್ತಿ ಮಾಡಿ ಅವರ ಮ್ಯಾಲೆ ಯಾವ ನಿಯಂತ್ರಣ ಇರಲಾರದ ಹಂಗ ಮಾಡಿಬಿಟ್ಟಾವು.

ಕೇಂದ್ರದವರು ಮಾಡಿದ ಕಾನೂನುಗಳು ಇಡೀ ದೇಶಕ್ಕೆ ದುಷ್ಪರಿಣಾಮ ಬೀರಿದರೂ ಸಹಿತ ಅವು ಕೇವಲ ಪಂಜಾಬಿನ ಸಮಸ್ಯೆ ಅಂತ ಕೆಲವರು ಅದನ್ನ ದುರ್ಲಕ್ಷ್ಯ ಮಾಡಿದಾರ. ಕರ್ನಾಟಕದ ಘನ ಸರಕಾರ ‘ಒಂದು ಜಿಲ್ಲೆಗೆ ಒಂದು ಪ್ರಮುಖ ಬೆಳೆ’ ಅಂತ ಹೇಳಿ ಒಂದು ಪಟ್ಟಿ ಹೊರಡಿಸಿಬಿಟ್ಟೆತಿ. ಕೇಂದ್ರದ ಒಪ್ಪಂದ ಕೃಷಿ ಕಾನೂನಿನಾಗ ಕಂಪನಿಗಳು ರೈತರಿಗೆ ಮೂಲ ಒಪ್ಪಂದದ ಪ್ರಕಾರ ಹಣ ಕೊಡದೆ ಹೋದರೆ ರೈತರು ಕೋರ್ಟಿಗೆ ಹೋಗಲಿಕ್ಕೆ ಬರೋದಿಲ್ಲ ಅಂತ ಒಂದು ಮಾತು ಐತಿ. ಅವರು ಉಪವಿಭಾಗ ಅಧಿಕಾರಿಯ ಮಂಡಳಿಗೆ ಆರ್ಜಿ ಸಲ್ಲಿಸಬೇಕು. ಅವರು ಆದೇಶ ನೀಡಬಹುದು, ಅಥವಾ ಪರ್ಯಾಯ ನ್ಯಾಯ ನಿರ್ಣಯದ ಮೂಲಕ ಅವರಿಗೆ ನಷ್ಟ ತುಂಬಿ ಕೊಡಬೇಕು ಅಂತ ಅದರಾಗ ಶಿಫಾರಸು ಐತಿ. ಭಾರತದ ಯಾವ ಉಪವಿಭಾಗ ಅಧಿಕಾರಿ, ಬಹು ರಾಷ್ಟ್ರೀಯ ಕಂಪನಿ ಅಥವಾ ಮದ್ದಾನಿ ಕಂಪನಿಗಳ ವಿರುದ್ಧ ಆದೇಶ ಪಾಸು ಮಾಡುವ ಧೈರ್ಯ ತೋರಸ್ತಾನ ಅನ್ನುವ ಪ್ರಶ್ನೆಗೆ ಅಲ್ಲಿ ಉತ್ತರ ಇಲ್ಲ.

ಇನ್ನೂ ರಾಜ್ಯ ಕೃಷಿ ಸಚಿವ ಬಸನಗೌಡ ಚನ್ನಬಸನಗೌಡ ಪಾಟೀಲ್ ಅವರು ಒನ್ ಜಿಲ್ಲಾ ಒನ್ ಕ್ರಾಪ್ ಅನ್ನೋದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ, ಅದರಿಂದ ರೈತರಿಗೆ ಒಳ್ಳೆ ಮಾರುಕಟ್ಟೆ ಸಿಗತದ ಅಂತ ಘೋಷಣೆ ಮಾಡಿದಾರು. ಅವರ ಪ್ರಕಾರ ಖರೀದಿ ಮಾಡುವನಿಗೆ ಅನುಕೂಲ ಮಾಡಿಕೊಟ್ಟರ ರೈತರಿಗೆ ಒಳ್ಳೆ ಬೆಲೆ ಕೊಟ್ಟ ಹಂಗ.

ಇದು ಲೆಕ್ಕಾಚಾರ ಏನಾದರೂ ತಪ್ಪಿದರ ಅನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದರಿಂದ ರೈತರಿಗೆ ತಮ್ಮ ಮನಸ್ಸಿನ ಬೆಳೆ ಬೆಳೆಯುವ ಸ್ವಾತಂತ್ರ್ಯ ತಪ್ಪಿ ಹೋಗತದ ಅನ್ನುವ ಸಂದೇಹಕ್ಕ ಅವರು ಪರಿಹಾರ ಸೂಚಿಸಿಲ್ಲ.

ಒಂದು ಜಿಲ್ಲೆಯ ಎಲ್ಲಾ ರೈತರು ಒಂದೇ ಬೆಳೆ ಬೆಳೆದರ ಕೀಟ ಬಾಧೆ ಕಾಡಬಹುದು ಅಂತ ಕೆಲವರು ತಜ್ಞರು ಹೇಳತಾರ. ಆದರ ಸರಕಾರ ಅದಕ್ಕ ಇನ್ನೂ ಉತ್ತರ ಕೊಡಲಿಕ್ಕೆ ಹತ್ತಿಲ್ಲ. ಮುಂದೆ ಒಂದು ದಿವಸ ಮದ್ದಾನೀ ಕಂಪನಿಗಳ ಕೀಟ ನಾಶಕ ಉಪಯೋಗಿಸಿರಿ ಅಂತ ಹೇಳಬಹುದು.

ಎಲ್ಲರೂ ಒಂದೇ ಬೆಳೆ ಬೆಳೆದರೆ ಪೂರೈಕೆ ಹಾಗೂ ಬೇಡಿಕೆಯ ತಕ್ಕಡಿ ಉಲ್ಟಾ ಆಗಿ ರೈತರಿಗೆ ಅನ್ಯಾಯ ಆಗಬಹುದು ಅನ್ನುವುದಕ್ಕೆ ಅವರಲ್ಲಿ ಉತ್ತರ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಬೆಳೆ ಆಯ್ಕೆ ಮಾಡದೆ ಇತರ ಬೆಳೆ ಬೆಳೆದರೆ ಅವರಿಗೆ ಸರಕಾರದಿಂದ ಸಿಗೋ ಅನುಕೂಲಗಳು ಸಿಗೋದಿಲ್ಲ, ಸಾಲ ಸಿಗದೇ ಇರಬಹುದು, ಬೆಳೆ ವಿಮೆ ಸಿಗದೇ ಇರಬಹುದು ಅಂತ ಕೆಲವು ಏಜೆಂಟರು ಪಿಸುಗುಟ್ಟಲಿಕ್ಕೆ ಹತ್ತಿಬಿಟ್ಟಾರು.

ಚಂಪಾರಣ ಅಂದ್ರ ಸಂಪಿಗೆ ಬನ ಅಂತ. ಆ ಬನಕ್ಕೆ ಬೆಂಕಿ ಬಿದ್ದಾಗ ಅದನ್ನು ಆರಿಸಲು ಗಾಂಧಿ ಬಂದರು. ರೈತರು ಒಗ್ಗಟ್ಟು ತೋರಿಸಿ ಹೋರಾಟ ಮಾಡಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ಈಸ್ಟ್ ಇಂಡಿಯಾ ಕಂಪನಿ ಮಂದಿಯ ಕಲ್ಲಿನ ಹೃದಯ ಕರಗಿಹೋತು. ರೈತರ ಬವಣೆ ತಪ್ಪಿಸಲು ಅವರು ಕಾನೂನು ಮಾಡಿದರು. ಈಗ ಗಾಂಧಿ ಇಲ್ಲ. ಸಂಪಿಗೆ ಬನದ ನೊಂದವರ ಹಾಡು ಕೇಳಿ ಕರಗುವ ಹೃದಯ ಇಂದಿನ ಆಳುವವರಿಗೆ ಇಲ್ಲ. ತಮ್ಮ ಗೆಳೆಯರಾಗಿರುವ ವೆಸ್ಟ್ ಇಂಡಿಯಾ ಕಂಪನಿಗಳಿಗೆ ಲುಕ್ಸಾನ ಆಗತದ ಅಂತ ಗೊತ್ತಾದರ ಸರಕಾರಗಳು ಯಾವ ಕಾನೂನನ್ನು ಕೂಡ ಬದಲು ಮಾಡೋ ಹಂಗ ಕಾಣೋದಿಲ್ಲಾ. ಈಗ ಸಂಪಿಗೆ ಬನದ ಹಾಡು ಹೇಳೋರು ಯಾರು? ಹೇಳಿದರೂ ಕೇಳೋರು ಯಾರು?


ಇದನ್ನೂ ಓದಿ: ರೈತ ವಿರೋಧಿ ಕಾಯಿದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...