Homeಮುಖಪುಟಛತ್ತೀಸ್‌ಗಢ ಎನ್‌ಕೌಂಟರ್‌: ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಹತ್ಯೆ

ಛತ್ತೀಸ್‌ಗಢ ಎನ್‌ಕೌಂಟರ್‌: ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಹತ್ಯೆ

- Advertisement -
- Advertisement -

ಛತ್ತೀಸ್‌ಗಢದ ನಾರಾಯಣಪುರ ಪ್ರದೇಶದಲ್ಲಿ ಬುಧವಾರ (ಮೇ.21) ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ 27 ಮಂದಿ ಸದಸ್ಯರು ಸಾವಿಗೀಡಾಗಿದ್ದಾರೆ.

ಮೃತರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುಮಾರು 68 ವರ್ಷ ವಯಸ್ಸಿನ ನಂಬಾಲಾ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದ್ದಾರೆ ಎಂದು ವರದಿಯಾಗಿದೆ.

ಕಾರ್ಯಾಚರಣೆಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ಇದೊಂದು ಹೆಗ್ಗುರುತಿನ ಸಾಧನೆ. ಇಂದು, ಛತ್ತೀಸ್‌ಗಢದ ನಾರಾಯಣಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ನಮ್ಮ ಭದ್ರತಾ ಪಡೆಗಳು 27 ಭಯಾನಕ ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಸಿಪಿಐ-ಮಾವೋವಾದಿಯ ಪ್ರಧಾನ ಕಾರ್ಯದರ್ಶಿ, ಅಗ್ರ ನಾಯಕ ಮತ್ತು ನಕ್ಸಲ್ ಚಳುವಳಿಯ ಬೆನ್ನೆಲುಬು ನಂಬಾಲಾ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದ್ದಾರೆ. ನಕ್ಸಲ್‌ವಾದದ ವಿರುದ್ಧ ಭಾರತ ನಡೆಸುತ್ತಿರುವ ಮೂರು ದಶಕಗಳ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ನಾಯಕನನ್ನು ನಮ್ಮ ಪಡೆಗಳು ಹತ್ಯೆಗೈದಿವೆ. ಈ ಮಹತ್ವದ ಸಾಧನೆಗಾಗಿ ನಮ್ಮ ಧೈರ್ಯಶಾಲಿ ಭದ್ರತಾ ಪಡೆಗಳು ಮತ್ತು ಸಂಸ್ಥೆಗಳನ್ನು ನಾನು ಶ್ಲಾಘಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಹತರಾದ ಬಸವರಾಜು ಅವರು, 2010ರಲ್ಲಿ ದಂತೇವಾಡದಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದ ದಾಳಿ ಮತ್ತು 2013ರಲ್ಲಿ ಛತ್ತೀಸ್‌ಗಢ ರಾಜ್ಯ ಕಾಂಗ್ರೆಸ್ ನಾಯಕರೂ ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದ ಜೀರಂ ಘಾಟಿ ಹತ್ಯಾಕಾಂಡ ಸೇರಿದಂತೆ ಪ್ರಮುಖ ಮಾವೋವಾದಿ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ.

ಬಸವರಾಜು ಅವರ ತಲೆಗೆ ಎನ್‌ಐಎ, ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು 1.5 ಕೋಟಿ ರೂಪಾಯಿಯಷ್ಟು ನಗದು ಬಹುಮಾನ ಘೋಷಿಸಿತ್ತು.

ಬಸವರಾಜು ಯಾರು?

ವರದಿಗಳ ಪ್ರಕಾರ, ಸುಮಾರು 68 ವರ್ಷ ವಯಸ್ಸಿನ ಬಸವರಾಜು ಅವರು ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ಅದರ ಪಾಲಿಟ್‌ಬ್ಯೂರೋ, ಕೇಂದ್ರ ಸಮಿತಿ ಮತ್ತು ಕೇಂದ್ರ ಸೇನಾ ಸಮಿತಿ ನಾಯಕರಾಗಿದ್ದರು.

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಯನ್ನಪೇಟೆ ಮೂಲದ ಬಸವರಾರು ಅವರು ಈಗಿನ ತೆಲಂಗಾಣ ರಾಜ್ಯದ ವಾರಂಗಲ್‌ನ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದವರು. ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ (ಆರ್‌ಎಸ್‌ಯು) ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಂತರ ನಕ್ಸಲ್ ಚಳವಳಿಗೆ ಸೇರಿಕೊಂಡರು.

ಕಾಲೇಜು ದಿನಗಳಲ್ಲಿಯೇ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಸವರಾಜು ಅವರು, 1980ರಲ್ಲಿ ‘ಸಿಪಿಐ (ಮಾರ್ಕ್ಸ್‌-ಲೆನಿನ್) ಪೀಪಲ್ಸ್ ವಾರ್‌’ ಪಕ್ಷವನ್ನು ಇತರರ ಜೊತೆ ಸೇರಿಕೊಂಡು ಸ್ಥಾಪಿಸಿದ್ದರು. 1992ರಲ್ಲಿ ಆ ಪಕ್ಷದ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 2004ರಲ್ಲಿ ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ‘ಸಿಪಿಐ (ಮಾರ್ಕ್ಸ್‌-ಲೆನಿನ್) ಪೀಪಲ್ಸ್ ವಾರ್’ ವಿಲೀನವಾಯಿತು.

ಆ ಬಳಿಕ ಬಸವರಾಜು ಅವರು ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಸೇನಾ ಸಮಿತಿಯ ಮುಖ್ಯಸ್ಥರಾದರು. ನಂತರ ಪಾಲಿಟ್ ಬ್ಯೂರೋ ಸದಸ್ಯರಾದರು.

ಕಾಲೇಜು ದಿನಗಳಲ್ಲಿಯೇ ತೀವ್ರ ಎಡಪಂಥೀಯ ರಾಜಕಾರಣಕ್ಕೆ ತೆರೆದುಕೊಂಡಿದ್ದ ಬಸವರಾಜು ಅವರು, 1980ರಲ್ಲಿ ಎಬಿವಿಪಿ ಸದಸ್ಯರೊಂದಿಗೆ ಜಗಳ ಮಾಡಿಕೊಂಡ ಆರೋಪದಲ್ಲಿ ಬಂಧಿತರಾಗಿದ್ದರು. 1970ರಲ್ಲಿ ಹುಟ್ಟೂರು ತೊರೆದು ನಕ್ಸಲ್ ಚಳವಳಿ ಸೇರಿದ ಅವರು, ಛತ್ತೀಸ್‌ಗಢದ ಬಸ್ತಾರ್‌ನಲ್ಲಿ 1987ರಲ್ಲಿ ಎಲ್‌ಟಿಟಿಇ ಹೋರಾಟಗಾರರಿಂದ ಗೆರಿಲ್ಲಾ ಯುದ್ದ ತಂತ್ರ ಮತ್ತು ಸ್ಟೋಟಕಗಳ ಕುರಿತು ತರಬೇತಿ ಪಡೆದುಕೊಂಡಿದ್ದರು ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.

ಗಂಗಣ್ಣ, ಗಗಣ್ಣ, ಪ್ರಕಾಶ್, ಕೃಷ್ಣ, ವಿಜಯ್, ಬಸವರಾಜು, ಬಿಆರ್, ಉಮೇಶ್, ರಾಜು, ದರಪು ಮತ್ತು ನರಸಿಂಹ ಎಂಬ ಹಲವಾರು ಅಡ್ಡ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಕೇಶವ ರಾವ್, 2017-18ರಲ್ಲಿ ಗಣಪತಿ ಅವರಿಂದ ಸಿಪಿಐ (ಮಾವೋವಾದಿ) ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಗಣಪತಿ ಅವರು ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ಪಕ್ಷದ ಕಾರ್ಯಚಟುವಟಿಕೆಗಳಿಂದ ಹಿಂದೆ ಸರಿದರು ಎಂದು ವರದಿಗಳು ಹೇಳಿವೆ.

ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಗಡಿ ಪ್ರದೇಶ ಕರ್ರೆಗುತ್ತಲು ಬೆಟ್ಟಗಳಲ್ಲಿ 21 ದಿನಗಳ ಕಾಲ ನಡೆದ ಅತಿದೊಡ್ಡ ‘ಆಪರೇಷನ್ ಬ್ಲಾಕ್ ಫಾರೆಸ್ಟ್’ ಪೂರ್ಣಗೊಂಡ ಕೆಲ ದಿನಗಳ ನಂತರ, ಅಬುಜ್‌ಮಾದ್ ಪ್ರದೇಶದಲ್ಲಿ ನಾರಾಯಣಪುರ, ದಂತೇವಾಡ, ಕೊಂಡಗಾಂವ್ ಮತ್ತು ಬಿಜಾಪುರ ಜಿಲ್ಲೆಗಳ ಡಿಆರ್‌ಜಿ ಘಟಕಗಳನ್ನು ಒಳಗೊಂಡ ಇತ್ತೀಚಿನ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆದಿದೆ.

ಸಿಆರ್‌ಪಿಎಫ್, ಛತ್ತೀಸ್‌ಗಢ ಪೊಲೀಸರು ಮತ್ತು ಇತರ ಕೇಂದ್ರ ಮತ್ತು ರಾಜ್ಯ ಪಡೆಗಳ ಆಪರೇಷನ್ ಬ್ಲಾಕ್ ಫಾರೆಸ್ಟ್‌ನಲ್ಲಿ 31 ಮಾವೋವಾದಿಗಳನ್ನು ಹತ್ಯೆಗೈಯ್ಯಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಇತರ ನಕ್ಸಲ್ ಸರಬರಾಜುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಮೇ 11ರಂದು 21 ದಿನಗಳ ಆಪರೇಷನ್ ‘ಬ್ಲಾಕ್ ಫಾರೆಸ್ಟ್’ ಅಂತ್ಯಗೊಂಡ ನಂತರ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಾದ್ಯಂತ 54 ನಕ್ಸಲರನ್ನು ಬಂಧಿಸಲಾಗಿದೆ ಮತ್ತು 84 ನಕ್ಸಲರು ಶರಣಾಗಿದ್ದಾರೆ ಎಂದು ಗೃಹ ಸಚಿವರು ಬುಧವಾರ ಮಾಹಿತಿ ನೀಡಿದ್ದಾರೆ.

“ಮಾರ್ಚ್ 31, 2026ರ ಮೊದಲು ದೇಶದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಮೋದಿ ಸರ್ಕಾರ ದೃಢನಿಶ್ಚಯ ಮಾಡಿದೆ” ಎಂದು ಗೃಹ ಸಚಿವರು ಹೇಳಿದ್ದಾರೆ.

ಛತ್ತೀಸ್‌ಗಢ ಪೊಲೀಸರ ಪ್ರಕಾರ, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ನಾರಾಯಣಪುರ ಕಾರ್ಯಾಚರಣೆಯಲ್ಲಿ ಹಲವು ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದೆ ಮತ್ತು ಅವರಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ನಾರಾಯಣಪುರ ವ್ಯಾಪ್ತಿಯ ಬೋಟರ್ ಗ್ರಾಮ ಮತ್ತು ಲೆಕವಾಡಾ ಕಾಡಿನಲ್ಲಿ ಮಾವೋವಾದಿಗಳು ಮತ್ತು ಡಿಆರ್‌ಜಿ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಬಸವರಾಜು ಸೇರಿದಂತೆ 27 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ. ಅವರಿಂದ ದೊಡ್ಡ ಮಟ್ಟದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲರನ್ನು ಎದುರಿಸುವಾಗ ಒಬ್ಬ ಡಿಆರ್‌ಜಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಬಸವರಾಜು ಹೊರತುಪಡಿಸಿ ಎನ್‌ಕೌಂಟರ್‌ನಲ್ಲಿ ಹತರಾದ ಇತರರಲ್ಲಿ ಹಿರಿಯ ನಕ್ಸಲ್ ನಾಯಕರು ಮತ್ತು ವಾಂಟೆಡ್ ಕಾರ್ಯಕರ್ತರು ಸೇರಿದ್ದಾರೆ. ಅವರ ಗುರುತುಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

“ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿ ಮೂರು ದಿನಗಳಿಂದ ಅತ್ಯಂತ ಸವಾಲಿನ ಭೂಪ್ರದೇಶದಲ್ಲಿ ಸಾಟಿಯಿಲ್ಲದ ಸಮರ್ಪಣೆ ಮತ್ತು ಶೌರ್ಯದಿಂದ ದೃಢವಾಗಿ ನಿಂತಿದ್ದಾರೆ. ಈ ಹೋರಾಟವು ನಕ್ಸಲರ ವಿರುದ್ಧ ಮಾತ್ರವಲ್ಲ, ಶಾಂತಿ ಮತ್ತು ಅಭಿವೃದ್ಧಿಯ ಪರವಾಗಿದೆ. ಇಡೀ ರಾಜ್ಯವು ಅವರ ಮನೋಭಾವಕ್ಕೆ ವಂದಿಸುತ್ತದೆ” ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.

ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ವರದಿಯಾಗಿದೆ.

ಮುರ್ಷಿದಾಬಾದ್ ಹಿಂಸಾಚಾರದ ವೇಳೆ ಪೊಲೀಸರು ನಿಷ್ಕ್ರಿಯ: ಹೈಕೋರ್ಟ್ ನೇಮಿಸಿದ ಸಮಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...

ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಯುವಜನರ ನಿರುದ್ಯೋಗ ಪ್ರಮಾಣ

15–29 ವರ್ಷ ವಯಸ್ಸಿನ ಯುವಕರಲ್ಲಿ ನಿರುದ್ಯೋಗ ದರವು ಫೆಬ್ರವರಿಯಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಶೇ. 14.8 ಕ್ಕೆ ಏರಿದೆ. ಇದು ಜನವರಿಯಲ್ಲಿ ಶೇ. 14.7 ರಷ್ಟು ಹೆಚ್ಚಾಗಿ, ಯುವಜನರಲ್ಲಿ ನಿರುದ್ಯೋಗ ಹೆಚ್ಚಳ ಉಂಟಾಗಿದೆ...

ಆರ್‌ಎಸ್‌ಎಸ್‌ ನಿಷೇಧಕ್ಕೆ ಒತ್ತಾಯಿಸಿದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ; ಕಾಂಗ್ರೆಸ್ ಪ್ರತಿಕ್ರಿಯೆ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುನೈಟೆಡ್ ಸ್ಟೇಟ್ಸ್ ಆಯೋಗವು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ, ವಿಶ್ಲೇಷಣಾ...

ಕಾಂಗ್ರೆಸ್ ವಿರುದ್ಧದ ‘ಟರ್ಕಿ ಕಚೇರಿ’ ಹೇಳಿಕೆ: ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಮನ್ಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

ಕಾಂಗ್ರೆಸ್ ವಿರುದ್ಧದ "ಟರ್ಕಿ ಕಚೇರಿ" ಆರೋಪಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಟರ್ಕಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತರರಾಷ್ಟ್ರೀಯ ಕಚೇರಿಯನ್ನು ನಡೆಸುತ್ತಿದೆ...

ಚುನಾವಣಾ ಆಯೋಗ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ವಿಧಾನಸಭಾ ಚುನಾವಣೆಗೂ ಮುನ್ನ, ಭಾರತದ ಚುನಾವಣಾ ಆಯೋಗ (ಇಸಿಐ) ಪ್ರಸ್ತುತ ಡಿಜಿಪಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಮುಖ್ಯ ಮತ್ತು ಗೃಹ ಕಾರ್ಯದರ್ಶಿಗಳನ್ನು ಬದಲಿಸುವ ಮೂಲಕ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಪಶ್ಚಿಮ ಬಂಗಾಳದ ಹೊಸ ಡಿಜಿ...

‘ಶಾಂತಿಗೆ ಇದು ಸಮಯವಲ್ಲ’: ‘ಕದನ ವಿರಾಮ’ ಪ್ರಸ್ತಾಪಗಳನ್ನು ತಿರಸ್ಕರಿಸಿದ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ 

ಇರಾನ್‌ನ ನೂತನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಥವಾ ಎರಡು ಮಧ್ಯವರ್ತಿ ರಾಷ್ಟ್ರಗಳು ಟೆಹ್ರಾನ್‌ಗೆ ತಲುಪಿಸಿದ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಕದನ ವಿರಾಮದ ಪ್ರಸ್ತಾಪಗಳನ್ನು ತಿರಸ್ಕರಿಸಿದರು ಎಂದು...

ಲೋಕಸಭೆ | 8 ವಿಪಕ್ಷ ಸಂಸದರ ಅಮಾನತು ರದ್ದು

ಲೋಕಸಭೆಯ ಎಂಟು ವಿಪಕ್ಷ ಸಂಸದರ ಅಮಾನತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸ್ಪೀಕರ್ ಓಂ ಬಿರ್ಲಾ ಮಂಗಳವಾರ (ಮಾ.17) ವಾಪಸ್ ಪಡೆದಿದ್ದಾರೆ. ಅಶಿಸ್ತಿನ ಕಾರಣ ನೀಡಿ ಫೆಬ್ರವರಿ 8ರಂದು ಸಂಸದರನ್ನು ಅಮಾನತು ಮಾಡಲಾಗಿತ್ತು. ಅಮಾನತು...

ಪಿತೃತ್ವ ರಜೆಗೆ ಕಾನೂನು ತನ್ನಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪಿತೃತ್ವ ರಜೆಯನ್ನು (paternity leave) ಸಾಮಾಜಿಕ ಭದ್ರತಾ ಸೌಲಭ್ಯವೆಂದು ಪರಿಗಣಿಸಿ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಮಾ.17) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ರಜೆಯ ಅವಧಿಯು ಪೋಷಕರು ಮತ್ತು ಮಗು ಇಬ್ಬರ...

‘ಕಾಲ ಎಲ್ಲಕ್ಕೂ ಉತ್ತರಿಸುತ್ತದೆ’; ಟಿವಿಕೆ ನಾಯಕನ ‘ಡಿಎಂಕೆ ಬೆದರಿಕೆ’ ಆರೋಪ ‘ಸತ್ಯಕ್ಕೆ ದೂರವಾದ ಮಾತು’ ಎಂದ ರಜನಿಕಾಂತ್

ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯಿಂದ ಬೆದರಿಕೆ ಇತ್ತು ಎಂಬ ಟಿವಿಕೆ ನಾಯಕ ಆಧವ್ ಅರ್ಜುನ ಅವರ ಆರೋಪವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮಂಗಳವಾರ ನಿರಾಕರಿಸಿದ್ದಾರೆ ಮತ್ತು "ಕಾಲವೇ ಉತ್ತರ ನೀಡುತ್ತದೆ" ಎಂದು ಹೇಳಿದ್ದಾರೆ. ತಮ್ಮ ಅಧಿಕೃತ...

ಕಾಂಗ್ರೆಸ್‌ ಮಾನನಷ್ಟ ಪ್ರಕರಣ : ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿಗೆ ದೆಹಲಿ ಹೈಕೋರ್ಟ್ ಸಮನ್ಸ್

ಟರ್ಕಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಅಂತಾರಾಷ್ಟ್ರೀಯ ಕಚೇರಿ ಹೊಂದಿದೆ ಎಂಬ ವರದಿಗೆ ಸಂಬಂಧಿಸಿದಂತೆ, ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ವಿರುದ್ಧ ಕಾಂಗ್ರೆಸ್ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ (ಮಾ.17)...