ಜುಲೈ 26 ರಂದು (ಶನಿವಾರ) ಛತ್ತೀಸ್ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಅಸ್ಸಿಸಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಎಸ್ಎಂಐ) ನ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು, ನಾರಾಯಣಪುರ ಜಿಲ್ಲೆಯ 18 ರಿಂದ 19 ವರ್ಷದೊಳಗಿನ ಮೂವರು ಯುವತಿಯರೊಂದಿಗೆ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಯಿತು.
ಮತಾಂತರ ಮಾಡುತ್ತಿದ್ದಾರೆ ಎಂಬ ಬಜರಂಗದಳದ ಪ್ರತಿಭಟನೆಯ ಬಳಿಕ ಸನ್ಯಾಸಿನಿಯರ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಛತ್ತೀಸ್ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968 ರ ಅಡಿಯಲ್ಲಿ ಮಾನವ ಕಳ್ಳಸಾಗಣೆ ಮತ್ತು ಧಾರ್ಮಿಕ ಮತಾಂತರದ ಆರೋಪ ಹೊರಿಸಲಾಯಿತು.
ನಾರಾಯಣಪುರದ ನಿವಾಸಿ ಸುಖ್ಮಾನ್ ಮಾಂಡವಿ, ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಎಂಬ ಇಬ್ಬರು ಸನ್ಯಾಸಿನಿಯರನ್ನು ಬಂಧಿಸಲಾಯಿತು. ಸನ್ಯಾಸಿನಿಯರು ಮೂಲತಃ ಕೇರಳದವರು.
ರಾಯ್ಪುರ ಆರ್ಚ್ಡಯೋಸಿಸ್ನ ವಿಕಾರ್ ಜನರಲ್ ಫಾದರ್ ಸೆಬಾಸ್ಟಿಯನ್ ಪೂಮಟ್ಟಮ್ ಅವರ ಪ್ರಕಾರ, ಸನ್ಯಾಸಿನಿಯರು ಮಹಿಳೆಯರನ್ನು ಮನೆಕೆಲಸಕ್ಕಾಗಿ ಆಗ್ರಾದ ಕಾನ್ವೆಂಟ್ಗಳಲ್ಲಿ ಇರಿಸಲು ಅವರೊಂದಿಗೆ ಹೋಗುತ್ತಿದ್ದರು. “ಈ ಮಹಿಳೆಯರಿಗೆ ರೂ. 8,000 ರಿಂದ ರೂ. 10,000 ರವರೆಗಿನ ಮಾಸಿಕ ವೇತನದೊಂದಿಗೆ ಅಡುಗೆ ಸಹಾಯಕಿಯರಾಗಿ ಕೆಲಸ ನೀಡಲಾಗುತ್ತಿತ್ತು. ಅವರ ಪೋಷಕರ ಒಪ್ಪಿಗೆ ಪತ್ರಗಳನ್ನು ಅವರು ಹೊಂದಿದ್ದರು. ಎಲ್ಲರೂ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು” ಎಂದು ಅವರು ತಿಳಿಸಿದ್ದಾರೆ ಎಂದು ‘ಟಿಎನ್ಎಂ’ ವರದಿ ಮಾಡಿದೆ.
ರೈಲ್ವೆ ಟಿಕೆಟ್ ಪರೀಕ್ಷಕರು (ಟಿಟಿಇ) ಗುಂಪನ್ನು ಪ್ರಶ್ನಿಸಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. “ಹುಡುಗಿಯರು ಮತ್ತು ಸನ್ಯಾಸಿನಿಯರು ಟ್ರೈನ್ಗಾಗಿ ಕಾಯುತ್ತಿದ್ದ ಫ್ಲಾಟ್ಮಾರ್ಮ್ಗೆ ಪ್ರವೇಶಿಸಿದರು. ಟಿಟಿಇ ಅವರ ಟಿಕೆಟ್ಗಳ ಬಗ್ಗೆ ಕೇಳಿದರು, ಅವರು ಸನ್ಯಾಸಿನಿಯರ ಬಳಿ ಟಿಕೆಟ್ಗಳಿವೆ ಎಂದು ಹೇಳಿದರು. ಶೀಘ್ರದಲ್ಲೇ, ಟಿಟಿಇ ಸ್ಥಳೀಯ ಬಜರಂಗದಳ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಅವರು ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬಂದರು” ಎಂದು ಫಾದರ್ ಪೂಮಟ್ಟಮ್ ಹೇಳಿದರು.
ಕೂಡಲೇ ರೈಲ್ವೆ ಪೊಲೀಸರು, ಸನ್ಯಾಸಿನಿಯರು, ಅವರ ಜೊತೆಗಿದ್ದ ಪುರುಷ ಮತ್ತು ಮೂವರು ಯುವತಿಯರನ್ನು ಬಂಧಿಸಿದರು. ಬಜರಂಗದಳ ಸದಸ್ಯರು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ, ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ನಂತರ ಮಹಿಳೆಯರನ್ನು ಸರ್ಕಾರ ನಡೆಸುವ ಆಶ್ರಯ ಗೃಹಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಸನ್ಯಾಸಿನಿಯರು ಮತ್ತು ಪುರುಷನನ್ನು ಆಗಸ್ಟ್ 8 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ದೆಹಲಿಯ ಸನ್ಯಾಸಿನಿ ಸಿಸ್ಟರ್ ಆಶಾ ಪಾಲ್, “ಬಂಧಿತ ಸನ್ಯಾಸಿನಿಗಳನ್ನು ಭೇಟಿ ಮಾಡಲು ಯಾವುದೇ ಚರ್ಚ್ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿಲ್ಲ. ಯುವತಿಯರು ತಮ್ಮ ಹೇಳಿಕೆಗಳನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ ಎಂದು ನಂಬಲು ನಮಗೆ ಕಾರಣವಿದೆ. ಅವರ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ಯಲಾಗುತ್ತಿದೆ ಎಂದು ಹೇಳಿಕೊಳ್ಳಲು ಅವರನ್ನು ಒತ್ತಾಯಿಸಲಾಗಿದೆ ಎಂದು ವರದಿಯಾಗಿದೆ” ಎಂದು ಅವರು ಹೇಳಿದರು.
“ಪೋಷಕರ ಒಪ್ಪಿಗೆ ಪತ್ರ, ಗುರುತಿನ ಚೀಟಿ ಮತ್ತು ಯಾವುದೇ ಬಲವಂತ ಅಥವಾ ಮತಾಂತರ ಒಳಗೊಂಡಿಲ್ಲ ಎಂದು ಸಾಬೀತುಪಡಿಸುವ ದಾಖಲೆಗಳ ಎಲ್ಲ ಪುರಾವೆಗಳು ನಮ್ಮಲ್ಲಿವೆ” ಎಂದು ಸಿಸ್ಟರ್ ಆಶಾ ಪಾಲ್ ಹೇಳಿದರು.
ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ವ್ಯಕ್ತಿಗಳ ಕಳ್ಳಸಾಗಣೆ) ದ ಸೆಕ್ಷನ್ 143 ಮತ್ತು ಛತ್ತೀಸ್ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (1968) ದ ಸೆಕ್ಷನ್ 4 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಿದ್ದಾರೆ.
ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಸನ್ಯಾಸಿನಿಯರ ಈ ಬಂಧನಗಳನ್ನು ಬಲವಾಗಿ ಖಂಡಿಸಿದ್ದಾರೆ. ಇದು ಬಲಪಂಥೀಯ ಗುಂಪುಗಳಿಂದ ಹೆಚ್ಚುತ್ತಿರುವ ಕಿರುಕುಳ ಮತ್ತು ಸುಳ್ಳು ಆರೋಪಗಳ ಪ್ರವೃತ್ತಿಯ ಭಾಗವಾಗಿದೆ ಎಂದು ಕರೆದಿದ್ದಾರೆ. “ಸನ್ಯಾಸಿನಿಯರನ್ನು ಕಪೋಲಕಲ್ಪಿತ ಆರೋಪಗಳ ಮೇಲೆ ಬಂಧಿಸಲಾಗಿದೆ. ಇದು ಮತ್ತೊಂದು ಉದಾಹರಣೆಯಾಗಿದೆ” ಎಂದು ಅನಾಮಧೇಯವಾಗಿ ಮಾತನಾಡಿದ ಪ್ರದೇಶದ ಪಾದ್ರಿಯೊಬ್ಬರು ಹೇಳಿದರು. ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ದ್ವೇಷದ ಮಾದರಿಯನ್ನು ಅವರು ಮತ್ತಷ್ಟು ಆರೋಪಿಸಿದರು. “ಗುಂಪು ಹಿಂಸಾಚಾರ, ಪೊಲೀಸ್ ಪ್ರಕರಣಗಳು ಮತ್ತು ಚರ್ಚ್ ನಡೆಸುವ ಸಂಸ್ಥೆಗಳ ಮೇಲಿನ ದಾಳಿಗಳು ಆತಂಕಕಾರಿಯಾಗಿ ಆಗಾಗ್ಗೆ ಆಗುತ್ತಿವೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳ ಮೌನ ಅಥವಾ ಜವಾಬ್ದಾರಿಯು ಅಂತಹ ಗುಂಪುಗಳನ್ನು ಧೈರ್ಯ ತುಂಬಿದೆ” ಎಂದು ಹೇಳಿದ್ದಾರೆ.
ಬಟಾಣಿ ಕದ್ದ ಆರೋಪ: ನಾಲ್ವರು ಬಾಲಕರನ್ನು ಕಟ್ಟಿ ಹಾಕಿ ಥಳಿಸಿ, ಮೆರವಣಿಗೆ ಮಾಡಿದ ಗ್ರಾಮಸ್ಥರು


