- Advertisement -
ಮುಂದಿನ ವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಲಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಲ್ಲಿ ವಾಸವಾಗಿರುವ ಟಿಬೆಟಿಯನ್ ಪ್ರಸಿದ್ಧ ಕವಿ ತೆನ್ ಜುನ್ ತ್ಸುಂಡ್ಯೂ ಅವರನ್ನು ಬಂಧಿಸಲಾಗಿದೆ.
ತಮಿಳುನಾಡಿನ ಮಲ್ಲಪುರಂನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಮೋದಿ ನಡುವೆ ಅನೌಪಚಾರಿಕ ಶೃಂಗಸಭೆ ನಡೆಯಲಿದೆ. ಶೃಂಗಸಭೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕಾಗಿ ಟಿಬೆಟ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ತ್ಸುಂಡ್ಯೂ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟ್ರೈಬ್ಯೂನ್ ವೆಬ್ ಸೈಟ್ ವರದಿ ಮಾಡಿದೆ.
ಕವಿ ತೆನ್ ಜುನ್ ತ್ಸುಂಡ್ಯೂ ಜತೆ ಸ್ವತಂತ್ರ ಟಿಬೆಟ್ ಗಾಗಿ ಹೋರಾಡುತ್ತಿರುವ 9 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರನ್ನು ಚೆನ್ನೈನ ಪೂಜಲ್ ಕೇಂದ್ರ ಕಾರಾಗೃಹದಲ್ಲಿ ಇರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 11 ರಿಂದ 13 ರ ನಡುವೆ ಅನೌಪಚಾರಿಕ ಶೃಂಗಸಭೆ ನಡೆಯಲಿದ್ದು, ಅದುವರೆಗೂ ಈ ಹೋರಾಟಗಾರರನ್ನು ಬಂಧನದಲ್ಲಿರಿಸಲು ತೀರ್ಮಾನಿಸಲಾಗಿದೆ ಎಂದು ವರದಿ ತಿಳಿಸಿದೆ.
- Advertisement -