ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಕೊರೊನಾದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಕೆಲದಿನಗಳ ಹಿಂದೆ ಬಿ.ನಾರಾಯಣರಾವ್ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನಿನ್ನೆ ಅವರ ಪರಿಸ್ಥಿತಿ ಗಂಭಿರವಾಗಿತ್ತು. ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ಶಾಸಕರ ಆಪ್ತರಾದ ಭೀಮಾಶಂಕರ್ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಸರಳ ವ್ಯಕ್ತಿ ಬಿ.ನಾರಾಯಣ್ ರಾವ್
80ರ ದಶಕದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ ಬೀದರ್ನಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಮಾಡಿದ ಉತ್ಸಾಹಿ ಅವರು. ಬಸವಕಲ್ಯಾಣದ ಹಿಂದುಳಿದ ಜಾತಿಯ ಅವರು ನಿರಂತರವಾಗಿ ರಾಜಕಾರಣದಲ್ಲಿದ್ದರೂ ಅಧಿಕಾರದ ಹತ್ತಿರಕ್ಕೆ ಎಂದೂ ಬಂದಿರಲಿಲ್ಲ. ಆ ನಂತರ ದೇವೇಗೌಡರೊಮ್ಮೆ ತಮ್ಮ ಪಕ್ಷದಿಂದ ‘1989ರಲ್ಲಿ ಎಂಎಲ್ಎ ಟಿಕೆಟ್ ಕೊಟ್ಟಿದ್ದರಾದರೂ ಯಶಸ್ವಿಯಾಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತು, ಕೊನೆಗೂ 2018ರಲ್ಲಿ ಗೆದ್ದು ಶಾಸಕರಾಗಿದ್ದರು.
ಬಸವ ಕಲ್ಯಾಣ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನ ಅತ್ಯಂತ ನೋವಿನ ಸಂಗತಿ.
ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ, ಬೆಂಬಲಿಗರಿಗೆ ನೋವು ಭರಿಸುವ ಶಕ್ತಿ ಲಭಿಸಲಿ. pic.twitter.com/6tNVjTFWyJ
— Karnataka Congress (@INCKarnataka) September 24, 2020
‘ಇಷ್ಟು ಕೋಟಿ ರೊಕ್ಕ ಕೊಟ್ಟರ ಅದನ್ನ ಎಲ್ಲಿಡೋದು ಅಂತ ನಮಗ ಗೊತ್ತಾಗವಲ್ದು ರೀ’ ಎಂದು ಕಳೆದ ವರ್ಷ ವಿಧಾನಸಭೆಯಲ್ಲಿ ಬಿ.ನಾರಾಯಣರಾವ್ ಅವರು ಮಾತನಾಡಿದಾಗ ಕರ್ನಾಟಕದ ಮತದಾರ ಬಂಧುಗಳಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಗೊತ್ತಾಗಲಿಲ್ಲ. ಮಾತಾಡುತ್ತಿದ್ದ ವ್ಯಕ್ತಿ ಪ್ರಾಮಾಣಿಕವಾಗಿದ್ದಂತೆ ಎಲ್ಲರಿಗೂ ಅನ್ನಿಸುತ್ತಿತ್ತಾದರೂ, ಇಂದಿನ ರಾಜಕಾರಣದಲ್ಲಿ ಇಂತಹ ಒಬ್ಬ ಶಾಸಕ ಇರಲು ಸಾಧ್ಯವೇ ಎಂಬ ಗುಮಾನಿಯೂ ಇತ್ತು. ನಾರಾಯಣರಾವ್ರನ್ನು ಬಲ್ಲವರಿಗೆ ಅಂತಹ ಅನುಮಾನವೇನೂ ಇಲ್ಲ. ಸರಳ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರ ಸಾವು ಸಾವಿರಾರು ಅನುಯಾಯಿಗಳಿಗೆ ತುಂಬಲಾರದ ನಷ್ಟವಾಗಿದೆ.
“ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ನಾರಾಯಣ ರಾವ್ ಅವರ ನಿಧನ ತೀವ್ರ ನೋವುಂಟು ಮಾಡಿದೆ. ಜನಪರ ಕಾಳಜಿಯುಳ್ಳ ಜನಪ್ರತಿನಿಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಕೊರೋನಾ ಸೋಂಕಿನಿಂದ ಮೃತರಾದ ನಾರಾಯಣರಾವ್ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ…