Homeಅಂಕಣಗಳುಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ

ಸಾಮಾಜಿಕ ಕಳಕಳಿಯ ಹೆಣ್ಣುಮಕ್ಕಳ ಗುಂಪೊಂದು ಇಂತಹ ಬುಂದೇಲಖಂಡದಲ್ಲಿ ಭಿನ್ನ ಬಗೆಯ ಗ್ರಾಮೀಣ ಪತ್ರಿಕೋದ್ಯಮವನ್ನು ನೆಲೆ ನಿಲ್ಲಿಸಿದೆ. ಎಂಟು ಪುಟಗಳ ಈ ವಾರಪತ್ರಿಕೆ ಹೆಸರು "ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಿದು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು. ವಿದ್ಯಮಾನಗಳನ್ನು ಹೆಣ್ಣುನೋಟದಿಂದ ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಈ ಪತ್ರಿಕೆಯ ವಿಶೇಷ.

- Advertisement -
- Advertisement -

ಮಧ್ಯಪ್ರದೇಶದಲ್ಲಿ ಹುಟ್ಟಿ ರಾಜಸ್ತಾನವನ್ನು ಹಾದು ಉತ್ತರಪ್ರದೇಶದಲ್ಲಿ ಯಮುನೆಯನ್ನು ಸೇರುವ ಚಂಬಲ್ ನದಿಯ ಪ್ರಾಚೀನ ಹೆಸರು ಚರ್ಮಾನ್ವತಿ. ಅರ್ಥಾತ್ ದಂಡೆಗಳ ಮೇಲೆ ಚರ್ಮವನ್ನು ಒಣಗಿಸಲಾಗುತ್ತಿದ್ದ ನದಿ. ಮಹಾಭಾರತದಲ್ಲಿ ಈ ನದಿಯ ಹೆಸರು ಚರ್ಮಾನ್ಯವತಿ. ಆರ್ಯ ಅರಸು ರಂತಿದೇವನು ಅಗ್ನಿಹೋತ್ರದಲ್ಲಿ ಬಲಿ ನೀಡಿದ ಸಹಸ್ರಾರು ಪ್ರಾಣಿಗಳ ರಕ್ತ ಮತ್ತು ರಾಶಿ ಹಾಕಲಾಗಿದ್ದ ಚರ್ಮಗಳಿಂದ ಹರಿದ ದ್ರವಧಾರೆಯಿಂದ ಹುಟ್ಟಿದ ನದಿ. ಪಾಂಚಾಲ ರಾಜ್ಯದ ದಕ್ಷಿಣ ಸರಹದ್ದಾಗಿತ್ತು. ಶಕುನಿಯ ರಾಜ್ಯವಾಗಿದ್ದ ಸೀಮೆ. ಪಗಡೆಯಾಟ- ವಸ್ತ್ರಾಪಹರಣದ ನಂತರ ಕ್ರುದ್ಧ ದ್ರೌಪದಿ ಚರ್ಮಾನ್ವತಿಯನ್ನೂ ಅದರ ನೀರು ಕುಡಿದವರನ್ನೂ ಶಪಿಸುತ್ತಾಳೆ.

ಶಪಿತ ನದಿಯ ನೀರನ್ನು ಯಾರೂ ಮುಟ್ಟುವುದಿಲ್ಲ. ಹೀಗಾಗಿ ಈ ನದಿ ಮಲಿನವಾಗಲಿಲ್ಲ ಎಂಬ ಪ್ರತೀತಿಯಿದೆ. ಚಂಬಲ್ ಇಂದಿಗೂ ದೇಶದ ಅತ್ಯಂತ ಪರಿಶುದ್ಧ ನದಿಗಳಲ್ಲೊಂದು. ಚಂಬಲ್ ನೂರಾರು ವರ್ಷಗಳ ಕಾಲ ಕೊರೆದು ರಚಿಸಿರುವ ದುರ್ಗಮ ಕಣಿವೆಗಳು ಖ್ಯಾತ-ಕುಖ್ಯಾತ. ತಮ್ಮನ್ನು ಬಂಡಾಯಗಾರರು ಎಂದು ಕರೆದುಕೊಂಡ ಡಕಾಯಿತರು 20ನೆಯ ಶತಮಾನದಲ್ಲಿ ಈ ಕಣಿವೆಗಳಿಗೆ ಭೀತಿ- ನಿಗೂಢತೆಯನ್ನು ಲೇಪಿಸಿದರು. ಡಕಾಯಿತರ ಕುರಿತು ತಯಾರಿಸಿದ ಚಲನಚಿತ್ರಗಳು ಚಂಬಲ್ ಕಣಿವೆಯ ದಂತಕತೆಯನ್ನು ದೇಶದ ಮನೆಮನೆಗೆ ಮುಟ್ಟಿಸಿದವು. ಭೂಲಕ್ಷಣಗಳು ಮತ್ತು ಹಿಂಸೆಯ ಕುಖ್ಯಾತಿಯ ಕಾರಣ ಈ ಸೀಮೆಗೆ ಕೈಗಾರಿಕೆಗಳು ಕಾಲಿಡಲಿಲ್ಲ. ಚಂಬಲ್ ನದಿಯ ನೀರು ಇಂದಿಗೂ ಸ್ಫಟಿಕ ಶುದ್ಧವಾಗಿಯೇ ಉಳಿದಿದೆ.

ದಟ್ಟದಾರಿದ್ರ್ಯ, ಹೆಪ್ಪುಗಟ್ಟಿರುವ ಜಾತಿಪದ್ಧತಿಯ ಕ್ರೌರ್ಯ ಉತ್ತರಪ್ರದೇಶ-ಮಧ್ಯಪ್ರದೇಶ-ರಾಜಸ್ತಾನದ ಈ ಸಂಗಮ ಸೀಮೆಯ ಬಹುಜನರಾದ ದಲಿತರು ಹಿಂದುಳಿದವರು ಹಾಗೂ ಬುಡಕಟ್ಟು ಜನರನ್ನು ಇಂದಿಗೂ ತುಳಿದಿಟ್ಟಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಸೀಮೆಗಳು ಸೇರಿ ಬುಂದೇಲಖಂಡ ಎಂದು ಎರಡು ರಾಜ್ಯಗಳ ಈ ಪ್ರದೇಶವನ್ನು ಕತ್ತಲ ಖಂಡ ಎನ್ನುವುದುಂಟು. ಅನಕ್ಷರತೆ, ಬಂಜರು, ಬಡತನ, ಬರಗಾಲ, ಬವಣೆಗಳೇ ಹಿಂಡಿರುವ ಖಂಡವಿದು. ಉಪ್ಪು-ರೊಟ್ಟಿ, ಹುಲ್ಲುಬೀಜಗಳನ್ನು ಬೀಸಿದ ಹಿಟ್ಟಿನ ರೊಟ್ಟಿಯನ್ನು ತಿಂದು ಜೀವ ಹಿಡಿದು ಸುದ್ದಿಯಾದವರು ಇಲ್ಲಿನ ಜನ. ಬೆಂಬಿಡದ ಬರಗಾಲ ಸಾವಿರಾರು ಸಣ್ಣ ಹಿಡುವಳಿದಾರರ ಪ್ರಾಣಬಲಿ ಪಡೆದ ಪ್ರದೇಶ. ಹಸಿದ ಮಕ್ಕಳ ಸಂಕಟ ನೋಡಲಾಗದೆ ರಕ್ತ ಮಾರಿ ಹೊಟ್ಟೆ ಹೊರೆದ ಪ್ರಕರಣಗಳು ಇಲ್ಲಿಂದ ವರದಿಯಾಗಿರುವುದು ಉಂಟು.

ಸಾಮಾಜಿಕ ಕಳಕಳಿಯ ಹೆಣ್ಣುಮಕ್ಕಳ ಗುಂಪೊಂದು ಇಂತಹ ಬುಂದೇಲಖಂಡದಲ್ಲಿ ಭಿನ್ನ ಬಗೆಯ ಗ್ರಾಮೀಣ ಪತ್ರಿಕೋದ್ಯಮವನ್ನು ನೆಲೆ ನಿಲ್ಲಿಸಿದೆ. ಎಂಟು ಪುಟಗಳ ಈ ವಾರಪತ್ರಿಕೆ ಹೆಸರು “ಖಬರ್ ಲೆಹರಿಯಾ” (ಸುದ್ದಿಯ ಅಲೆಗಳು). ನೂರಕ್ಕೆ ನೂರರಷ್ಟು ಹೆಣ್ಣುಮಕ್ಕಳೇ ಹೊರತರುವ ಏಕೈಕ ಗ್ರಾಮೀಣ ಪತ್ರಿಕೆಯಿದು. ಈ ಎಲ್ಲ ಹೆಣ್ಣುಮಕ್ಕಳೂ ತಳಸಮುದಾಯಗಳವರು. ವಿದ್ಯಮಾನಗಳನ್ನು ಹೆಣ್ಣುನೋಟದಿಂದ ಮತ್ತು ಜಾತ್ಯತೀತ ನೆಲೆಯಿಂದ ವರದಿ ಮಾಡುವುದು ಈ ಪತ್ರಿಕೆಯ ವಿಶೇಷ.

ಅವಧಿ, ಬುಂದೇಲಿ, ಭೋಜ್ಪುರಿ ಹಾಗೂ ಬಜ್ಜಿಕಾ ಎಂಬ ನಾಲ್ಕು ಪ್ರಾದೇಶಿಕ ನುಡಿಗಟ್ಟುಗಳಲ್ಲಿ ಹೊರಬರುವ ಈ ವಾರಪತ್ರಿಕೆಯು ದೇಶವಿದೇಶಗಳ ಮಾಧ್ಯಮಗಳ ಗಮನ ಸೆಳೆದಿದೆ. ಪತ್ರಕರ್ತೆಯರಿಗೆಂದು ಮೀಸಲಾದ ಪ್ರತಿಷ್ಠಿತ ಚಮೇಲಿ ದೇವಿ ಜೈನ್ ಪ್ರಶಸ್ತಿ, ಯುನೆಸ್ಕೋದ ಕಿಂಗ್ ಸೆಜೋಂಗ್ ಸಾಕ್ಷರತೆ ಬಹುಮಾನ, ಲಾಡ್ಲಿ ಮೀಡಿಯಾ ಪ್ರಶಸ್ತಿ, ಟೈಮ್ಸ್ ನೌ ಸುದ್ದಿವಾಹಿನಿಯ ಅಮೇಝಿಂಗ್ ಇಂಡಿಯನ್ ಪ್ರಶಸ್ತಿ, ಕೈಫಿ ಅಜ್ಮಿ ಪ್ರಶಸ್ತಿ, ಬೆಂಗಳೂರಿನ ಸ್ಫೂರ್ತಿಧಾಮ ಟ್ರಸ್ಟ್‌ನ ಬೋಧಿವೃಕ್ಷ ಪ್ರಶಸ್ತಿಗಳು ಈ ಸಾಹಸಕ್ಕೆ ಸಂದಿವೆ.

ಒಂದು ಕಾಲಕ್ಕೆ ಕಂಪ್ಯೂಟರನ್ನು ಮುಟ್ಟುವುದಿರಲಿ, ನೋಡುವುದೂ ದುಸ್ಸಾಧ್ಯವಿದ್ದ ಹಿನ್ನೆಲೆಯಿಂದ ಬಂದ ಬಡ ಯುವತಿಯರ ಆತ್ಮವಿಶ್ವಾಸ ಕುದುರಿದೆ. ಸಮಾಜ, ಸರ್ಕಾರ, ಸರೀಕ ಪತ್ರಕರ್ತರು ಗುರುತಿಸಿ ನಡೆಸಿಕೊಳ್ಳುವ ಪರಿ ಹೊಸ ಹುಮ್ಮಸ್ಸು ನೀಡಿದೆ. ಹೆಸರಿಗಂಟಿಕೊಂಡು ಬಂದ ತಳಸಮುದಾಯದ ಅಡ್ಡಹೆಸರುಗಳನ್ನು ಈ ಯುವತಿಯರು ಕಿತ್ತೆಸೆದಿದ್ದಾರೆ.

ದೊಡ್ಡ ಪತ್ರಿಕೆಗಳು ದೊಡ್ಡ ಪೇಟೆ ಪಟ್ಟಣಗಳ ಸುದ್ದಿ ಪ್ರಕಟಿಸುತ್ತವೆ. ಅವುಗಳ ಸಂಪಾದಕೀಯ ಸಿಬ್ಬಂದಿ ವಿಶ್ವವಿದ್ಯಾಲಯ ಶಿಕ್ಷಣ ಉಳ್ಳವರು, ಇಂಗ್ಲಿಷ್ ಬಲ್ಲವರು. ಬುಂದೇಲಖಂಡದ ಈ ಹಳ್ಳಿಗಾಡಿನ ಜನರ ಪಾಲಿಗೆ ಇಂಗ್ಲಿಷ್ ಮಾತ್ರವಲ್ಲ, ಹಿಂದಿ ಕೂಡ ಕುಲೀನ ಭಾಷೆ. ದಲಿತ ಮಹಿಳೆಯರು ದುಪ್ಪಟ್ಟು ಶೋಷಣೆ ಎದುರಿಸಿದವರು. ಬೇರುಮಟ್ಟದ ಸ್ಥಳೀಯ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲವರು ಎಂಬುದು ’ಲೆಹರಿಯಾ’ ಹಿಂದಿನ ಆಲೋಚನೆ.

ಕ್ಷೇತ್ರಕ್ಕೆ ತೆರಳಿ ಸುದ್ದಿ ಸಂಗ್ರಹಿಸುವವರು, ಬರೆಯುವವರು, ಪರಿಷ್ಕರಿಸಿ ತಲೆಬರೆಹ ನೀಡುವವರು, ಪತ್ರಿಕೆಯ ವಿನ್ಯಾಸ ಮಾಡುವವರು, ಮುದ್ರಣ ಮಾಡಿಸಿ ತರುವವರು, ಹಳ್ಳಿಗಳಿಗೆ ಹಂಚುವವರು ಎಲ್ಲರೂ ಹೆಣ್ಣುಮಕ್ಕಳೇ. ಒಂಟಿಯಾಗಿ ಹಳ್ಳಿ ಹಳ್ಳಿ ಸುತ್ತಿ ಸುದ್ದಿ ಹೆಕ್ಕುತ್ತಾರೆ. ನಕಾಶೆಯಲ್ಲೇ ಇಲ್ಲದ, ನೀರು ದೀಪಗಳಿರದ, ಅಂಚೆಯೂ ತಲುಪದ ಕೊಂಪೆಗಳನ್ನೂ ಬಿಟ್ಟಿಲ್ಲ ಇವರು. ದೊಡ್ಡ ಪತ್ರಿಕೆಗಳ ವರದಿಗಾರರು ಅನುಭವಿಸುವ ಸೌಲಭ್ಯಗಳು ಇವರಿಗಿಲ್ಲ. ಹಸಿವಾದರೆ ಮನೆಯಿಂದ ಒಯ್ದ ಬುತ್ತಿಯೇ ಗತಿ. ಬಸ್ಸು, ಸೈಕಲ್ಲು, ಕಿಲೋಮೀಟರುಗಟ್ಟಲೆ ಕಾಲ್ನಡಿಗೆ ಮಾಮೂಲು. ಪುಂಡು ಪೋಕರಿಗಳನ್ನೂ ಪುರುಷಪ್ರಾಧಾನ್ಯ ವ್ಯವಸ್ಥೆಯ ಕಿರುಕುಳಗಳನ್ನೂ ನಿತ್ಯ ನುಂಗಿ ನಡೆಯುತ್ತಾರೆ.

ಬುಂದೇಲ್ ಖಂಡದ ಚಿತ್ರಕೂಟ, ಫೈಝಾಬಾದ್, ಝಾನ್ಸಿ, ಲಲಿತಪುರ್, ಅಂಬೇಡ್ಕರ್ ನಗರ್, ಬಾಂದಾ ಜಿಲ್ಲೆಗಳಲ್ಲಿ ಲೆಹರಿಯಾ ಹೆಜ್ಜೆ ಗುರುತುಗಳು ಪಡಿಮೂಡಿವೆ. ಆರುನೂರು ಕುಗ್ರಾಮಗಳ ಬದುಕಿನ ಹಾಸು ಹೊಕ್ಕಾಗಿದೆ ಖಬರ್ ಲೆಹರಿಯಾ. ಈ ಪೈಕಿ ಬಹುತೇಕ ಹಳ್ಳಿಗಳು ಮುಖ್ಯವಾಹಿನಿಯ ಸುದ್ದಿಪತ್ರಿಕೆಗಳನ್ನು ಕಂಡಿಲ್ಲ. ಹಳ್ಳಿ ಹಳ್ಳಿಗಳ ಕುಡಿವ ನೀರು, ರಸ್ತೆ, ಶಾಲೆ, ಆಸ್ಪತ್ರೆ, ಮನರೇಗ ಯೋಜನೆಯಲ್ಲಿ ಕೂಲಿ ನಿರಾಕರಿಸಿ ಬಡಪಾಯಿಗಳ ವಂಚಿಸುವ ಪಂಚಾಯತಿ ಪ್ರಧಾನ, ರೇಷನ್ ಕಾರ್ಡ್ ಸಮಸ್ಯೆ, ಕಳವು, ಕೊಲೆ, ದಬ್ಬಾಳಿಕೆ, ಅಧಿಕಾರಿಗಳ ನಿರ್ಲಕ್ಷ್ಯದ ವ್ಯಥೆಯ ಕತೆಗಳ ಕುರಿತು ದೊಡ್ಡ ಪತ್ರಿಕೆಗಳಿಗೆ ರುಚಿಯಿಲ್ಲ.

ಡಿಜಿಟಲ್ ದಾರಿ ಹಿಡಿದ ನಂತರ ಪತ್ರಿಕೆಯನ್ನು ಓದುವ ಹೆಣ್ಣುಮಕ್ಕಳ ಪ್ರಮಾಣ ಭಾರೀ ಜಿಗಿತ ಕಂಡಿದೆ. ಸ್ಮಾರ್ಟ್ ಫೋನ್ ಮತ್ತು ಸೆಲ್ಫಿ ಸ್ಟಿಕ್ ಬಳಸಿ ಫೋಟೋ-ವಿಡಿಯೋ ತೆಗೆದು ವರದಿ ಸಂದರ್ಶನಗಳನ್ನು ವಾಟ್ಸಾಪ್‌ನಲ್ಲಿ ಕಚೇರಿಗೆ ರವಾನಿಸುತ್ತಿದ್ದಾರೆ ವರದಿಗಾರ್ತಿಯರು. ಪತ್ರಿಕೆಯಲ್ಲಿ ಅಚ್ಚಾಗುವ ವರದಿಗಳು ದೃಶ್ಯರೂಪದಲ್ಲಿ ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ಲಕ್ಷಾಂತರ ಮಂದಿಯನ್ನು ತಲುಪುತ್ತಿವೆ.

ಪತ್ರಿಕೆಯ ಡಿಜಿಟಲ್ ವ್ಯವಹಾರಗಳನ್ನು ಮುದ್ರಣದಿಂದ ಪ್ರತ್ಯೇಕಿಸಿ ಚಂಬಲ್ ಮೀಡಿಯಾ ಎಂಬ ಹೊಸ ಕಂಪನಿಯ ಕೈಗೆ ಒಪ್ಪಿಸಲಾಗಿದೆ. ಗ್ರಾಮೀಣ ಡಿಜಿಟಲ್ ಮಾಧ್ಯಮದ ಹೂರಣವನ್ನು ರೂಪಿಸಿ ಪ್ರಸ್ತುತಪಡಿಸುವುದು ಈ ಕಂಪನಿಯ ಕಾರ್ಯಸೂಚಿ. ಗ್ರಾಮೀಣ ಪ್ರದೇಶಗಳಲ್ಲೂ ಈಗ ಅಂತರ್ಜಾಲ ಸೌಲಭ್ಯ ಧಾರಾಳ. ಆದರೆ ಆ ಜನರಿಗೆ ಗುಣಮಟ್ಟದ ಸ್ವತಂತ್ರ ಪ್ರಗತಿಪರ ಡಿಜಿಟಲ್ ಮೀಡಿಯಾ ಲಭ್ಯವಿಲ್ಲ. ಅವರ ಸುದ್ದಿಯನ್ನು ಅವರದೇ ಭಾಷೆಯಲ್ಲಿ ಹೇಳುವ ಮತ್ತೊಂದು ಪ್ರಯತ್ನ ಈವರೆಗೆ ಆಗಿಲ್ಲ, ಸನಿಹ ಭವಿಷ್ಯದಲ್ಲಿ ನಡೆಯುವುದೂ ಇಲ್ಲ. ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಹೆಣ್ಣುಮಕ್ಕಳೇ ಚಂಬಲ್ ಮೀಡಿಯಾದಲ್ಲೂ ಸಕ್ರಿಯರಾಗಿರುತ್ತಾರೆ. ಮುಂಬರುವ ಮೂರು ವರ್ಷಗಳಲ್ಲಿ ಹಿಂದೀ ರಾಜ್ಯಗಳ ಎಂಬತ್ತು ಜಿಲ್ಲೆಗಳಲ್ಲಿ ನೆಲೆಯೂರುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.

ಚಂಬಲ್ ಹೆಣ್ಣುಮಕ್ಕಳ ಈ ವಿರಳ ಪ್ರಯೋಗ ದೇಶದ ಇತರೆ ಸೀಮೆಗಳಲ್ಲೂ ಕುಡಿಯೊಡೆದು ಹಬ್ಬಬೇಕಿದೆ.


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....