Homeಕರ್ನಾಟಕನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಬಾಲಕಿಯ ಶವ ಪತ್ತೆ: ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ

ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಬಾಲಕಿಯ ಶವ ಪತ್ತೆ: ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ

- Advertisement -
- Advertisement -

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಹೊಲವೊಂದರಲ್ಲಿ ದಲಿತ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ರಾಮದ ಪ್ರಬಲ ಜಾತಿಯ ಯುವಕರು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಬಾಲಕಿಯ ಪೋಷಕರು ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 13ರಂದು ಸಂಜೆ 5 ಗಂಟೆಯ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯ ಶವ, ಮರುದಿನ ಅಕ್ಟೋಬರ್ 14ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಗ್ರಾಮದ ನಾಗನಗೌಡ ಎಂಬವರ ಹೊಲದ ಬೃಹತ್ ಗಾತ್ರದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

“ಗ್ರಾಮದ ಪ್ರಬಲ ಜಾತಿಗೆ ಸೇರಿದ (ಕುರುಬ) ಮಾಳಿಂಗರಾಯ ಎಂಬ ಯುವಕ ಕಳೆದ 2-3 ತಿಂಗಳಿನಿಂದ ನಮ್ಮ ಮಗಳ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ವಿಷಯ ತಿಳಿದು ನಾವು ಆಕೆಯನ್ನು ಮನೆಯಲ್ಲೇ ಇರಿಸಿಕೊಂಡಿದ್ದೆವು. ನಮ್ಮ ಸಂಬಂಧಿ ಹುಡುಗನ ಜೊತೆ ಆಕೆಗೆ ಮದುವೆ ಮಾಡುವ ಬಗ್ಗೆ ತೀರ್ಮಾನಿಸಿದ್ದೆವು. ಈ ವಿಚಾರ ಮಾಳಿಂಗರಾಯನಿಗೆ ಗೊತ್ತಾಗಿತ್ತು. ಆ ಬಳಿಕ “ನನ್ನ ಬಿಟ್ಟು ಬೇರೆಯವರ ಜೊತೆ ನೀನು ಹೇಗೆ ಮದುವೆಯಾಗುತ್ತೀಯಾ ನೋಡುತ್ತೇನೆ, ನೀನು ನನ್ನನ್ನೇ ಪ್ರೀತಿಸಬೇಕು” ಎಂದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಮಾಳಿಂಗರಾಯನಿಗೆ ಗ್ರಾಮದ ಶಿವನಗೌಡ ಎಂಬಾತ ಕುಮ್ಮಕ್ಕು ನೀಡುತ್ತಿದ್ದ ಎಂದು” ಬಾಲಕಿಯ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ಅಕ್ಟೋಬರ್ 13ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸಂತೆ ಮಾಡಿಕೊಂಡು ಬರುವ ಸಲುವಾಗಿ ನಾವು ಮುದ್ದೇಬಿಹಾಳಕ್ಕೆ ಹೋಗಿದ್ದೆವು. ಈ ವೇಳೆ ಮಗಳು ಮನೆಯಲ್ಲೇ ಇದ್ದಳು. ಸಂತೆ ಮುಗಿಸಿಕೊಂಡು ಸಂಜೆ 5 ಗಂಟೆಯ ಸುಮಾರಿಗೆ ಮನೆಗೆ ಬಂದಾಗ, ಮಗಳು ಮನೆಯಲ್ಲಿ ಇರಲಿಲ್ಲ. ನಾವು ಸುತ್ತಮುತ್ತಲಿನ ಜನರ ಬಳಿ ಮಗಳ ಬಗ್ಗೆ ವಿಚಾರಿಸಿದೆವು, ಊರಿನ ತುಂಬಾ ಆಕೆಗಾಗಿ ಹುಡುಕಾಡಿದೆವು. ಆದರೆ, ಆಕೆಯ ಸುಳಿವು ಸಿಗಲಿಲ್ಲ” ಎಂದು ತಿಳಿಸಿದ್ದಾರೆ.

“ಮರುದಿನ ಅಕ್ಟೋಬರ್ 14ರಂದು ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ಬಂದ ನಮ್ಮ ಅಳಿಯ ನಾಗರಾಜ, ಗ್ರಾಮದ ನಾಗನಗೌಡ ಅವರ ಹೊಲಕ್ಕೆ 8 ಗಂಟೆಯ ಸುಮಾರಿಗೆ ಮೇವು ತರಲು ಹೋದಾಗ ಮಗಳ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ತಿಳಿಸಿದರು. ನಾವು ಗಾಬರಿಯಿಂದ ಸ್ಥಳಕ್ಕೆ ಹೋಗಿ ನೋಡಿದಾಗ ಮಗಳ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಕೆಳಗಿಳಿಸಿ ಆಂಬ್ಯುಲೆನ್ಸ್‌ನಲ್ಲಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯ ಶವಾಗಾರಕ್ಕೆ ಕಳಿಸಿದರು” ಎಂದು ಬಾಲಕಿಯ ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.

“ನಮ್ಮ ಮಗಳಿಗೆ ಪ್ರೀತಿಸುವಂತೆ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾದ ಮಾಳಿಂಗರಾಯ, ಆತನಿಗೆ ಸಹಕಾರ ನೀಡಿದ ಶಿವನಗೌಡ ಮತ್ತು ಜುಮ್ಮಣ್ಣ ದಳವಾಯಿ” ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಶಂಕೆ

ಬಾಲಕಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆಯಿಂದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಈ ಕುರಿತು ನಾನುಗೌರಿ ಜೊತೆ ಮಾತನಾಡಿರುವ ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್‌) ವಿ ನಾಗರಾಜ್ ಅವರು, ” ನಾವು ಬಾಲಕಿಯ ಮನೆಗೆ ಭೇಟಿ ನೀಡಿದ್ದೇವೆ. ಆಕೆಯ ಶವದ ಮೇಲೆ ಸುಟ್ಟ ಗಾಯಗಳಿತ್ತು. ಅಲ್ಲದೆ, ಕತ್ತಿನಲ್ಲಿ ತಾಳಿಯಿತ್ತು. ಆಕೆಯ ಮೇಲೆ ಮಾಳಿಂಗರಾಯ ಸೇರಿದಂತೆ ಯುವಕರು ಅತ್ಯಾಚಾರವೆಸಗಿ ಕೊಲೆಗೈದು, ಬಳಿಕ ಮರಕ್ಕೆ ನೇತು ಹಾಕಿರುವ ಶಂಕೆಯಿದೆ” ಎಂದಿದ್ದಾರೆ.

“ನಮಗೆ ದೊರೆತ ಮಾಹಿತಿ ಪ್ರಕಾರ ಬಾಲಕಿ ಮತ್ತು ಆರೋಪಿ ಮಾಳಿಂಗರಾಯ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಗೊತ್ತಾಗಿ ಬಾಲಕಿಯ ಪೋಷಕರು ಆಕೆಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಸಂಬಂಧಿ ಯುವಕನ ಜೊತೆ ಮದುವೆ ಮಾಡುವ ನಿರ್ಧಾರ ಮಾಡಿದ್ದರು. ಈ ವಿಚಾರ ಮಾಳಿಂಗರಾಯನಿಗೆ ಗೊತ್ತಾಗಿ ಇಬ್ಬರು ಓಡಿ ಹೋಗುವ ತೀರ್ಮಾನ ಮಾಡಿರಬಹುದು. ಬಾಲಕಿ ಆತನನ್ನು ನಂಬಿ ಮನೆಯಿಂದ ಹೊರ ಹೋಗಿರಬಹುದು. ಆದರೆ, ಬಾಲಕಿ ತನಗೆ ಸಿಗುವುದಿಲ್ಲ ಎಂದು ತಿಳಿದ ಮಾಳಿಂಗರಾಯ, ಆತನ ಸ್ನೇಹಿತರ ಜೊತೆಗೂಡಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು, ಬಳಿಕ ಮರಕ್ಕೆ ನೇತು ಹಾಕಿರಬಹುದು” ಎಂದು ಹೇಳಿದ್ದಾರೆ.

“ದೇವದಾಸಿ ಪದ್ದತಿಯಂತೆ ಯುವಕರು ಅತ್ಯಾಚಾರವೆಸಗುವ ಮುನ್ನ ಮಾಳಿಂಗರಾಯ ಆಕೆಯ ಕತ್ತಿಗೆ ತಾಳಿ ಕಟ್ಟಿರುವ ಶಂಕೆಯಿದೆ. ಬಾಲಕಿ ಪ್ರಿಯತಮ ಮಾಳಿಂಗರಾಯನ ನಂಬಿ ಮನೆಯಿಂದ ಹೋಗಿರಬಹುದು. ಆದರೆ, ಅಲ್ಲಿ ಮಾಳಿಂಗರಾಯ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಶಂಕೆಯಿದೆ” ಎಂದು ನಾಗರಾಜ್ ವಿವರಿಸಿದ್ದಾರೆ.

ಪೊಲೀಸರು ಎಫ್‌ಐಆರ್ ದಾಖಲಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಪ್ರಕರಣವನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದು ಉಗ್ರ ಹೋರಾಟ ಮಾಡಲಾಗುವುದು ಎಂದು ನಾಗರಾಜ್ ಎಚ್ಚರಿಸಿದ್ದಾರೆ.

ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿರುವುದಲ್ಲಿ ತಪ್ಪೇನಿದೆ; ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -