Homeದಲಿತ್ ಫೈಲ್ಸ್ದರ್ಶನ್ ಸೋಲಂಕಿ ಜಾತಿ ತಿಳಿಯಲು ರ್‍ಯಾಂಕ್‌ ಬಗ್ಗೆ ಕೇಳಿದ್ದ ರೂಮ್‌ಮೇಟ್‌; ಪೋನ್‌ ಕಾಲ್‌ ಬಿಚ್ಚಿಟ್ಟ ಸತ್ಯಗಳಿವು!

ದರ್ಶನ್ ಸೋಲಂಕಿ ಜಾತಿ ತಿಳಿಯಲು ರ್‍ಯಾಂಕ್‌ ಬಗ್ಗೆ ಕೇಳಿದ್ದ ರೂಮ್‌ಮೇಟ್‌; ಪೋನ್‌ ಕಾಲ್‌ ಬಿಚ್ಚಿಟ್ಟ ಸತ್ಯಗಳಿವು!

ಸೋಲಂಕಿಯ ಸಾವಿನಲ್ಲಿ ಜಾತಿ ತಾರತಮ್ಯ ಕಂಡುಬಂದಿಲ್ಲ ಎಂದು ಐಐಟಿ ಬಾಂಬೆಯ ತನಿಖಾ ಸಮಿತಿ ಹೇಳಿಕೊಳ್ಳುತ್ತಿರುವಾಗ ‘ನ್ಯೂಸ್‌ಲಾಂಡ್ರಿ’ ಮಹತ್ವದ ಪೋನ್‌ ಕಾಲ್‌ ಕುರಿತು ವರದಿ ಮಾಡಿದೆ

- Advertisement -
- Advertisement -

ಬಾಂಬೆ ಐಐಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಪೋನ್‌ ಕಾಲ್‌ನಲ್ಲಿ ದಾಖಲಾದ ಸಂಭಾಷಣೆಯ ಕುರಿತು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.

ದರ್ಶನ್‌ ಅವರಲ್ಲಿ ಜೆಇಇ ರ್‍ಯಾಂಕ್‌ ಸಂಬಂಧ ಆತನ ರೂಮ್‌ಮೇಟ್‌ಗಳು ಪ್ರಶ್ನಿಸಿದ ನಂತರ, ರೂಮ್‌ಮೇಟ್‌ ಹೇಗೆ ಮಾತನಾಡುವುದನ್ನು ಕಡಿಮೆ ಮಾಡಿದರು ಎಂಬುದರ ಕುರಿತು ಈ ಪೋನ್‌ಕಾಲ್‌ ಬಿಚ್ಚಿಟ್ಟಿದೆ. ಇಬ್ಬರು ವಿದ್ಯಾರ್ಥಿಗಳು ಸೋಲಂಕಿ ಸಾವಿನ ಕುರಿತು ಪರಸ್ಪರ ಹಂಚಿಕೊಂಡಿರುವ ಮಾಹಿತಿಗಳನ್ನು ‘ನ್ಯೂಸ್‌ಲಾಂಡ್ರಿ’ ತೆರೆದಿಟ್ಟಿದೆ.

ಮೊದಲ ತಲೆಮಾರಿನ ವಿದ್ಯಾವಂತನಾಗಿರುವ ದರ್ಶನ್ (18) ಸೋಲಂಕಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಓದುತ್ತಿದ್ದರು. ಫೆಬ್ರವರಿ 12ರಂದು ಆತ್ಮಹತ್ಯೆ ಮಾಡಿಕೊಂಡರು. ಸೋಲಂಕಿಯ ಸಾವಿನ ಆಂತರಿಕ ತನಿಖೆಗಾಗಿ ಐಐಟಿ ಬಾಂಬೆ ರಚಿಸಿದ 12 ಸದಸ್ಯರ ಸಮಿತಿಯು ಹದಿನೆಂಟು ದಿನಗಳ ನಂತರ ತನ್ನ ವರದಿ ನೀಡಿದೆ. “ಜಾತಿ ತಾರತಮ್ಯವನ್ನು ಸೋಲಂಕಿ ಎದುರಿಸಿದ್ದಾರೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ” ಎಂದು ವರದಿ ಹೇಳಿದೆ.

ಆದರೆ 17 ನಿಮಿಷಗಳ ದೂರವಾಣಿ ಸಂಭಾಷಣೆಯು ಬೇರೆಯೇ ಕತೆಯನ್ನು ಹೇಳುತ್ತಿದೆ. ಪೋನ್‌ ಕಾಲ್‌ನ ವಿವರಗಳನ್ನು ಪ್ರವೇಶಿಸಿರುವ ‘ನ್ಯೂಸ್‌ಲಾಂಡ್ರಿ’ ಜಾಲತಾಣ ಐಐಟಿ ಬಾಂಬೆಯಲ್ಲಿ ಸೋಲಂಕಿ ಹೇಗೆ ಕಷ್ಟಗಳನ್ನು ಅನುಭವಿಸಿದರು ಎಂಬುದನ್ನು ವಿವರಿಸಿದೆ.

ಸೋಲಂಕಿ ಅವರಿಗೆ ಪರಿಚಯವಿದ್ದ ಐಐಟಿ ವಿದ್ಯಾರ್ಥಿ ಉದಯ್ ಸಿಂಗ್ ಮೀನಾ ಮತ್ತು ಸಂಸ್ಥೆಯ ಎಸ್‌ಸಿ/ಎಸ್‌ಟಿ ಸೆಲ್‌ನ ವಿದ್ಯಾರ್ಥಿ ಪ್ರತಿನಿಧಿ ನವೀನ್ ಗುರ್ರಾಪು ನಡುವಿನ ಸಂಭಾಷಣೆ ಇದಾಗಿದೆ. ಕ್ಯಾಂಪಸ್‌ನಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ದರ್ಶನ್ ಹೇಗೆ ತಾರತಮ್ಯವನ್ನು ಎದುರಿಸಿದರು ಎಂಬ ಬಗ್ಗೆ ಉದಯ್ ತನಿಖಾ ಸಮಿತಿಗೆ ಹೇಳಿಕೆಯನ್ನು ನೀಡಿದ್ದರು.

ಅಹಮದಾಬಾದ್‌ನಲ್ಲಿರುವ ದರ್ಶನ್ ಅವರ ಕುಟುಂಬ ಇದೇ ವಿಷಯವನ್ನು ಹಂಚಿಕೊಂಡಿತ್ತು. ದರ್ಶನ್ ತಾನು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಆಗಾಗ್ಗೆ ಹೇಳುತ್ತಿದ್ದನು ಎಂದು ಕುಟುಂಬ ಆರೋಪಿಸಿತ್ತು.

“ತಮ್ಮ ಜಾತಿ ಗುರುತಿನ ಬಗ್ಗೆ ದರ್ಶನ್ ತಾನಾಗಿಯೇ ಸೆನ್ಸಿಟಿವ್ ಆಗಿದ್ದರು. ಶೈಕ್ಷಣಿಕ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವ ಹತಾಶೆಯು ದರ್ಶನ್ ಸೋಲಂಕಿ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು” ಎಂದು ಐಐಟಿ ಬಾಂಬೆಯ ತನಿಖಾ ವರದಿ ಹೇಳಕೊಂಡಿದೆ.

“ಆಡಿಯೊ ಕುರಿತು ಸ್ಪಷ್ಟನೆ ಪಡೆಯಲು ಉದಯ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದಿರುವ ‘ನ್ಯೂಸ್‌ಲಾಂಡ್ರಿ’, ‘ಈ ಸಂಭಾಷಣೆ ನಡೆದಿರುವುದು ನಿಜ’ ಎಂದು ನವೀನ್ ಅವರು ದೃಢೀಕರಿಸಿರುವಾಗಿ ವರದಿ ಮಾಡಿದೆ.

“ಈ ಆಡಿಯೊ ರೆಕಾರ್ಡಿಂಗ್‌ನ ಮೂಲವನ್ನು ನೀವು ನನಗೆ ಹೇಳುವವರೆಗೆ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ” ಎಂದು ನವೀನ್‌ ಕೋರಿದ್ದರು.

ಹಿಂದಿಯಲ್ಲಿ ಮಾತನಾಡಿರುವ ಆಡಿಯೊ ಸಂಬಂಧ ನ್ಯೂಸ್‌ಲಾಂಡ್ರಿ ವಿವರವಾಗಿ ವರದಿ ಮಾಡಿದೆ.

ಸ್ಕಾಲರ್‌ಶಿಪ್ ಅರ್ಜಿ ತುಂಬಲು ಸಹಾಯ ಕೋರಿದ್ದ ದರ್ಶನ್,  ವಾಟ್ಸಾಪ್ ಗ್ರೂಪ್‌ ಮೂಲಕ ನನಗೆ ಪರಿಚಯವಾಗಿದ್ದನು ಎಂದು ಫೋನ್‌ನಲ್ಲಿ ಮಾತನಾಡಿರುವ ಸಮಯದಲ್ಲಿ ಉದಯ್‌ ಉಲ್ಲೇಖಿಸಿದ್ದಾರೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಉದಯ್‌, ತಾವಾಗಿಯೇ ದರ್ಶನ್‌ ಅವರನ್ನು ತಮ್ಮ ಹಾಸ್ಟೆಲ್‌ ಕೊಠಡಿಗೆ ಕರೆದಿದ್ದರು.

“ಕಳೆದ ವರ್ಷದ ನವೆಂಬರ್‌ನಲ್ಲಿ ದರ್ಶನ್‌ ಅವರು ನಮ್ಮ ಕೊಠಡಿಗೆ ಎರಡು ಬಾರಿ ಬಂದಿದ್ದರು. ದರ್ಶನ್ ತಮ್ಮ ಮೊದಲ ಭೇಟಿಯಲ್ಲಿ ತಾರತಮ್ಯದ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ ಎರಡನೇ ಬಾರಿಗೆ ಸುಮಾರು ಎರಡು ಗಂಟೆಗಳ ಕಾಲ ನನ್ನೊಂದಿಗೆ ಇದ್ದಾಗ ತಾರತಮ್ಯದ ಕುರಿತು ಹೇಳಿಕೊಂಡಿದ್ದರು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಬದಲಿಸಿ, ತಮ್ಮ ರೂಮ್‌ಮೇಟ್‌ಗಳಾಗಿ ಬೇರೆಯವರನ್ನು ಹಾಕಿಕೊಳ್ಳಲು ಸಾಧ್ಯವೇ? ಎಂದು ಸೋಲಂಕಿ ಕೇಳಿಕೊಂಡಿದ್ದನು” ಎಂದು ಉದಯ್‌ ತನ್ನ ಗೆಳೆಯನಿಗೆ ಫೋನ್‌ ಕಾಲ್‌ನಲ್ಲಿ ಹೇಳಿದ್ದಾರೆ.

“ರೂಮ್‌ಮೇಟ್‌ಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಾನು ಅವನಿಗೆ ಹೇಳಿದೆ” ಎಂದು ಉದಯ್ ನವೀನ್‌ಗೆ ತಿಳಿಸಿದ್ದಾರೆ. “ರ್‍ಯಾಂಕ್‌ ಮತ್ತು ಎಲ್ಲದರ ಬಗ್ಗೆ ಕೇಳುತ್ತಿರುವುದೇ ಸಮಸ್ಯೆ ಎಂದು ದರ್ಶನ್ ಹೇಳಿದ್ದನು. ನಿನ್ನ ರ್‍ಯಾಂಕ್ ಎಷ್ಟೆಂದು ಅವರು ಕೇಳಿದ್ದರು. ಆತನ ರ್‍ಯಾಂಕ್‌ ಸಾಕಷ್ಟು ಕಡಿಮೆ ಇತ್ತು. ತನ್ನ ರ್‍ಯಾಂಕ್‌ಗೆ ಹೋಲಿಸಿ, ಸೋಲಂಕಿಯ ರ್‍ಯಾಂಕ್‌ ಕಡಿಮೆ ಇದೆ ಎಂದು ಹಂಗಿಸಲಾಗಿತ್ತು. ಆನಂತರ ರೂಮ್‌ಮೇಟ್‌ ಮಾತನಾಡುವುದನ್ನು ಕಡಿಮೆ ಮಾಡಿದ್ದಾಗಿ ಸೋಲಂಕಿ ಹೇಳಿಕೊಂಡಿದ್ದರು.”

ದರ್ಶನ್ ಸೋಲಂಕಿಯವರು ಐಐಟಿ ಬಾಂಬೆಗೆ ಮೀಸಲಾತಿ ಅವಕಾಶ ಪಡೆದು ಪ್ರವೇಶ ಪಡೆದ್ದಾನೆ ಎಂಬುದು ರೂಮ್‌ಮೇಟ್‌ಗೆ ತಿಳಿಯುತ್ತದೆ. ಐಐಟಿ ಬಾಂಬೆಯಲ್ಲಿನ ಎಸ್‌ಸಿ/ಎಸ್‌ಟಿ ಸೆಲ್ ವತಿಯಿಂದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಡಿಸೆಂಬರ್ 2021ರಲ್ಲಿ ನಡೆಸಲಾಗಿತ್ತು. ಮೀಸಲಾತಿ ಪ್ರಾತಿನಿಧ್ಯದ ಮೂಲಕ ಅವಕಾಶ ಪಡೆದ ಶೇ.37ರಷ್ಟು ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್‌ ಕುರಿತು ಕಹಿ ಅನುಭವವನ್ನು ಹಂಚಿಕೊಂಡಿರುವುದಾಗಿ ಸಮೀಕ್ಷೆ ಬಹಿರಂಗಪಡಿಸಿದೆ. ಜೆಇಇ, ಜಿಎಟಿಇ, ಜೆಎಎಂ, ಯು(ಯುಇಇಡಿ)ನಲ್ಲಿ ತೆಗೆದುಕೊಂಡಿರುವ ರ್‍ಯಾಂಕ್‌ ಕುರಿತು ಈ ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಗಿದೆ. ಪ್ರಶ್ನೆ ಕೇಳುವ ವ್ಯಕ್ತಿಗೆ ಈ ವಿದ್ಯಾರ್ಥಿಗಳ ಜಾತಿ ಗುರುತು ತಿಳಿದಿರುತ್ತದೆ ಎಂದಿದೆ ‘ನ್ಯೂಸ್‌ಲಾಂಡ್ರಿ’.

ಐಐಟಿ ಬಾಂಬೆಯಲ್ಲಿನ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಈ ಕುರಿತು ಮತ್ತಷ್ಟು ವಿವರಿಸಿದ್ದಾರೆ. “ಕ್ಯಾಂಪಸ್‌ನಲ್ಲಿರುವ ಜನರು ನೇರವಾಗಿ ಸರ್‌ನೇಮ್‌ (ಉಪನಾಮ) ಬಗ್ಗೆ ಮೊದಲೆಲ್ಲ ಕೇಳುತ್ತಿದ್ದರು. ಆದರೆ ಈಗ, ಕ್ಯಾಂಪಸ್‌ನಲ್ಲಿನ ಜಾತಿವಾದವು ಭಾರತದ ಇತರ ಭಾಗಗಳಿಗಿಂತ ವಿಭಿನ್ನವಾಗಿ ಕಾರ್ಯಪ್ರವೃತ್ತವಾಗಿದೆ” ಎಂದಿದ್ದಾರೆ.

ಕ್ಯಾಂಪಸ್‌ನಲ್ಲಿನ “ಸೂಕ್ಷ್ಮ ವಾತಾವರಣ”ದ ಕಾರಣ ಹೆಸರು ಉಲ್ಲೇಖಿಸದಿರಲು ಕೋರಿರುವ ಅವರು, “ವ್ಯಕ್ತಿಯ ಜಾತಿಯನ್ನು ಪತ್ತೆಹಚ್ಚಲು ಮೇಲ್ವರ್ಗದ ವಿದ್ಯಾರ್ಥಿಗಳು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪರೀಕ್ಷೆಯಲ್ಲಿ ರ್‍ಯಾಂಕ್‌ ಬಗ್ಗೆ ಕೇಳುತ್ತಾರೆ. ಇತರ ಕೆಲವು ಮಾರ್ಗಗಳನ್ನೂ ಅನುಸರಿಸುತ್ತಾರೆ. ಜಿಮೇಲ್‌ ಉಪಯೋಗಿಸಲು ಬರುತ್ತದೆಯೇ? ಕಂಪ್ಯೂಟರ್‌‌ ಬಳಕೆ ತಿಳಿದಿದೆಯೇ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಕಟ್ಟಕಡೆಯ ಸಮುದಾಯಗಳಿಂದ ಬಂದ ಅನೇಕ ವಿದ್ಯಾರ್ಥಿಗಳಿಗೆ ಈ ಕುರಿತು ತಿಳಿದಿರುವುದಿಲ್ಲ. ಈ ಪ್ರಶ್ನೆಗಳನ್ನು ಕೇಳಿ, ಈ ಜನರು ಮೀಸಲು ವರ್ಗದಿಂದ ಬಂದವರು ಎಂದು ಮೇಲ್ಜಾತಿಯವರು ತಿಳಿದುಕೊಳ್ಳುತ್ತಾರೆ. ಐಐಟಿಯಲ್ಲಿ ಮೀಸಲಾತಿ ವಿರುದ್ಧದ ಭಾವನೆ ಪ್ರಬಲವಾಗಿದೆ” ಎಂದಿದ್ದಾರೆ ಪಿಎಚ್‌ಡಿ ವಿದ್ಯಾರ್ಥಿ.

ಉದಯ್ ಮತ್ತು ನವೀನ್‌ ನಡುವಿನ ಫೋನ್‌ ಸಂಭಾಷಣೆ ಹೀಗಿದೆ:

ಉದಯ್: ನನಗೆ ಅವನ ರೂಮ್‌ಮೇಟ್ ಕೂಡ ತಿಳಿದಿಲ್ಲ. ಆತ ಮಾತನಾಡುವುದನ್ನು ಕಡಿಮೆ ಮಾಡಿದೆ. ಆತ ಸೌಹಾರ್ದಯುತವಾಗಿಯೂ ಮಾತನಾಡುತ್ತಿರಲಿಲ್ಲ. ನಿಮ್ಮ ರೂಮ್‌ಮೇಟ್ ನಿಮ್ಮೊಂದಿಗೆ ಮಾತನಾಡಬೇಕು ಎಂಬುದು ಅನಿವಾರ್ಯವಲ್ಲ ಎಂದು ನಾನು ಸೋಲಂಕಿಗೆ ಹೇಳಿದೆ. ವಿಶ್ವವಿದ್ಯಾನಿಲಯದಲ್ಲಿ ತಮ್ಮ ರೂಮ್‌ಮೇಟ್‌ಗಳೊಂದಿಗೆ ಮಾತನಾಡದ ಬಹಳಷ್ಟು ಜನರಿದ್ದಾರೆ. ಆತ ನನಗೆ ಹೆಚ್ಚಿನದ್ದನ್ನು ಹೇಳಲಿಲ್ಲ. ಬೇರೆಯವರನ್ನು ಸ್ನೇಹಿತರನ್ನಾಗಿ ಮಾಡಿಕೋ ಎಂದು ನಾನು ಅವನಿಗೆ ಹೇಳಿದೆ.

ನವೀನ್‌: ಹಾಗಾದರೆ, ಆತ ಎರಡನೇ ಭಾರಿಗೆ ನಿಮ್ಮನ್ನು ಭೇಟಿಯಾದಾಗ ಇದನ್ನೆಲ್ಲ ಹೇಳಿದನೆ?

ಉದಯ್‌: ಹೌದು. ಪರೀಕ್ಷೆಯ ಒತ್ತಡದಿಂದ ದರ್ಶನ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಹೀಗಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಆದರೆ ಅವರು ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ. ಅವರೊಂದಿಗಿನ ನಾನು ಭೇಟಿಯಾಗಿ ನೋಡಿದ ಪ್ರಕಾರ ಹೇಳುವುದಾದರೆ ಅವರು ಹೀಗಿರಲಿಲ್ಲ.

ನವೀನ್‌: ದರ್ಶನ್‌ ಅವರು ನಿಮ್ಮಲ್ಲಿ ಜಾತಿ ತಾರತಮ್ಯದ ಬಗ್ಗೆ ಹೇಳಿದ ಬಳಿಕ ನೀವ್ಯಾಕೆ ಚಿರಾಗ್, ವಿಶಾಲ್ ಅಥವಾ ರಾಜೇಶ್‌ಗೆ ತಿಳಿಸಲಿಲ್ಲ? (“ಚಿರಾಗ್, ವಿಶಾಲ್ ಮತ್ತು ರಾಜೇಶ್ ಅವರು ಐಐಟಿ ಬಾಂಬೆಯಲ್ಲಿ ಎಸ್‌ಸಿ/ಎಸ್‌ಟಿ ಸೆಲ್‌ನ ಸ್ವಯಂಸೇವಕರಾಗಿದ್ದಾರೆ.)

ಉದಯ್: ಈ ಘಟನೆಯಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಕಿರುಕುಳ ಇದ್ದಾಗ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೆವು ಅಥವಾ ಎಫ್ಐಆರ್ ದಾಖಲಿಸುತ್ತಿದ್ದೆವು.

ನವೀನ್: ಹೌದು ಹೌದು, ಸರಿ. ಜಾತಿ ತಾರತಮ್ಯವು ಆತನ ರೂಮ್‌ಮೇಟ್‌ನಿಂದ ಪ್ರಾರಂಭವಾಗಿದೆ. ಇದು ಕೇವಲ ರ್‍ಯಾಂಕ್‌ಗೆ ಸಂಬಂಧಿಸಿದೆಯೇ ಅಥವಾ ದರ್ಶನ್‌ಗೆ ಜಾತಿ ನಿಂದನೆಗಳನ್ನು ಮಾಡಲಾಗಿದೆಯೇ?

ಉದಯ್: ನನಗೆ ಇಷ್ಟು ಮಾತ್ರ ಹೇಳಲಾಗಿದೆ. ಇದರ ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ.

ನವೀನ್: “ನನಗೆ ಒಂದು ಉಪಕಾರ ಮಾಡು. ದರ್ಶನ್ ಅವರೊಂದಿಗಿನ ವಾಟ್ಸಾಪ್ ಮಾತುಕತೆಗಳನ್ನು ಇಮೇಲ್ ಮಾಡು.

ಉದಯ್: Yes.

ನವೀನ್: ಏಕೆಂದರೆ ನಾನು ಚಿರಾಗ್ ಮತ್ತು ವಿಶಾಲ್‌ಗೆ ಇದೇ ವಿಷಯವನ್ನು ಹೇಳಿದ್ದೇನೆ. ಈ ಘಟನೆಯಿಂದ ನಮ್ಮ ಭವಿಷ್ಯ ಹಾಳಾಗಬಾರದು. ಬೈಗುಳಗಳು ಬೈಗುಳವಾಗಿರಲಿ. ನಾವು ಈಗ ಏನನ್ನೂ ಮಾಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಅವರಿಗೆ ಪರಿಹಾರ ಅಥವಾ ನ್ಯಾಯ ಸಿಗುತ್ತದೆ. ಅದು ಒಳ್ಳೆಯದು.

ನವೀನ್: “ನೀವು ಸ್ವಲ್ಪ ಸುರಕ್ಷಿತವಾಗಿರುತ್ತೀರಿ. ಪರಿಸ್ಥಿತಿ ಸ್ವಲ್ಪ ಟ್ರಿಕಿ ಆಗಿದೆ. ನೀವು ಅದನ್ನು ಎದುರಿಸುತ್ತೀರಾ?”

ಉದಯ್‌: ‘ಸರಿ’.

ಹೀಗೆ ಅವರ ಮಾತುಕತೆ ಮುಗಿದಿದೆ.

ಸಮಿತಿಗೆ ಉದಯ್ ಹೇಳಿಕೆ

12 ಸದಸ್ಯರ ಸಮಿತಿಗೆ ಉದಯ್ ಅವರು ಅಧಿಕೃತವಾಗಿ ಹೇಳಿಕೆ ನೀಡುತ್ತಾ, “ದರ್ಶನ್ ತನ್ನ ರೂಮ್‌ಮೇಟ್ ಅನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ?” ಎಂದು ಕೇಳಿಕೊಂಡಿದ್ದನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ರ್‍ಯಾಂಕ್‌ಗಳ ಬಗ್ಗೆ ಪರಸ್ಪರ ತಿಳಿದುಕೊಂಡ ಬಳಿಕ ಆತನ ರೂಮ್‌‌ಮೇಟ್ ಮಾತನಾಡುವುದನ್ನು ನಿಲ್ಲಿಸಿದ್ದನು ಎಂಬುದನ್ನು  ಉದಯ್‌ ಅವರು ಸಮಿತಿಗೆ ತಿಳಿಸಿದ್ದಾರೆ.

ದರ್ಶನ್ ನಿಧನರಾದ ಮೂರು ದಿನಗಳ ನಂತರ ಫೆಬ್ರವರಿ 15 ರಂದು ನ್ಯೂಸ್ ಬೀಕ್‌ಗೆ ಅವರು ಇದೇ ಮಾತನ್ನು ಹೇಳಿದ್ದರು. ಆದರೆ ಕಮಿಟಿಯ ವರದಿಯಲ್ಲಿ ರೂಮ್‌ಮೇಟ್‌ನ ಕುರಿತು ಯಾವುದೇ ಉಲ್ಲೇಖವಿಲ್ಲ.

ಐಐಟಿ ಬಾಂಬೆಯಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿಗೆ ಪ್ರಶ್ನಾವಳಿಗಳನ್ನು ಕಳುಹಿಸಲಾಗಿದೆ. ಪ್ರತಿಕ್ರಿಯೆ ಬಂದಲ್ಲಿ ಈಗಿನ ವರದಿಯನ್ನು ನವೀಕರಿಸಲಾಗುವುದು ಎಂದು ‘ನ್ಯೂಸ್‌ಲಾಂಡ್ರಿ’ ಸ್ಪಷ್ಟಪಡಿಸಿದೆ.

ವರದಿ ಕೃಪೆ: ನ್ಯೂಸ್‌ಲಾಂಡ್ರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...