Homeಮುಖಪುಟ‘ಘೋಷಿತ ವಿದೇಶಿ’ಯರನ್ನೆಲ್ಲ ರಾಜ್ಯದ ಅತಿದೊಡ್ಡ ಡಿಟೆನ್ಷನ್‌ ಸೆಂಟರ್‌ಗೆ ವರ್ಗಾಯಿಸಿದ ಅಸ್ಸಾಂ

‘ಘೋಷಿತ ವಿದೇಶಿ’ಯರನ್ನೆಲ್ಲ ರಾಜ್ಯದ ಅತಿದೊಡ್ಡ ಡಿಟೆನ್ಷನ್‌ ಸೆಂಟರ್‌ಗೆ ವರ್ಗಾಯಿಸಿದ ಅಸ್ಸಾಂ

- Advertisement -
- Advertisement -

ಅಸ್ಸಾಂ ರಾಜ್ಯದಲ್ಲಿ ‘ಘೋಷಿತ ವಿದೇಶಿಯರು’ ಎಂದು ಗುರುತಿಸಲ್ಪಟ್ಟ ಎಲ್ಲ ವ್ಯಕ್ತಿಗಳನ್ನು ಗೋಲ್ಪಾರಾ ಜಿಲ್ಲೆಯ ಮಾಟಿಯಾ ‘ಟ್ರಾನ್ಸಿಟ್ ಕ್ಯಾಂಪ್‌’ಗೆ ಸ್ಥಳಾಂತರಿಸಲಾಗಿದೆ. ಇದು ರಾಜ್ಯದಲ್ಲಿನ ಅತಿದೊಡ್ಡ ಡಿಟೆನ್ಷನ್‌ ಸೆಂಟರ್‌ ಎಂದು ಗುರುತಿಸಲ್ಪಟ್ಟಿದೆ.

ವಿದೇಶಿಯರೆಂದು ಗುರುತಿಸಲ್ಪಟ್ಟಿರುವ, ಗಡೀಪಾರು ಅಥವಾ ವಾಪಸ್‌‌ ಹೋಗಲು ನಿರೀಕ್ಷಿಸುತ್ತಿರುವ ವ್ಯಕ್ತಿಗಳನ್ನು; ಪೌರತ್ವದ ಹಕ್ಕುಗಳನ್ನು ಇತ್ಯರ್ಥಗೊಳಿಸಲು ಕಾಯುತ್ತಿರುವವರನ್ನು ಬಂಧಿಸಲು ಮಾಟಿಯಾ ಕೇಂದ್ರವನ್ನು ಬಳಸಲಾಗುತ್ತಿದೆ.

ಡಿಟೆನ್ಷನ್‌ ಸೆಂಟರ್‌ಗಳನ್ನು ಈಗ ‘ಟ್ರಾನ್ಸಿಸ್ಟ್‌ ಕ್ಯಾಂಪ್‌’ ಎಂದು ಕರೆಯಬೇಕೆಂದು ರಾಜ್ಯ ಸರ್ಕಾರದ ಅಧಿಸೂಚನೆ ತಿಳಿಸಿದೆ.

ಸಿಲ್ಚಾರ್ ಡಿಟೆನ್ಷನ್‌ ಸೆಂಟರ್‌ನಲ್ಲಿದ್ದ  87 ಮಂದಿ ಬಂಧಿತರ ಕೊನೆಯ ತಂಡವನ್ನು ಮಾಟಿಯಾ ಟ್ರಾನ್ಸಿಟ್ ಕ್ಯಾಂಪ್‌ಗೆ ಕರೆದೊಯ್ಯಲಾಯಿತು ಎಂದು ಅಸ್ಸಾಂ ಇನ್‌ಸ್ಪೆಕ್ಟರ್ ಜನರಲ್ ಆಫ್ ಪ್ರಿಸನ್ ಆಗಿರುವ ಪುಬಾಲಿ ಗೊಹೈನ್ ಪಿಟಿಐಗೆ ತಿಳಿಸಿದ್ದಾರೆ.

“ಇದರೊಂದಿಗೆ ಎಲ್ಲಾ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಸ್ಸಾಂನಲ್ಲಿ ಆರು ಡಿಟೆನ್ಷನ್‌ ಕೇಂದ್ರಗಳು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ” ಎಂದು ಗೊಹೈನ್ ಮಾಹಿತಿ ನೀಡಿದ್ದಾರೆ.

ಗೋಲ್ಪಾರಾ, ಕೊಕ್ರಜಾರ್, ತೇಜ್ಪುರ್, ಜೋರ್ಹತ್, ದಿಬ್ರುಗಢ್ ಮತ್ತು ಸಿಲ್ಚಾರ್ ಜಿಲ್ಲಾ ಕಾರಾಗೃಹಗಳಲ್ಲಿ ಡಿಟೆನ್ಷನ್‌ ಸೆಂಟರ್‌ಗಳಿವೆ.

ಘೋಷಿತ ವಿದೇಶಿಯರನ್ನು ಸ್ಥಳಾಂತರಿಸುವ ಪ್ರಕ್ರಿಯೆಯು ಜನವರಿ 27ರಂದು ಗೋಲ್ಪಾರಾ ಡಿಟೆನ್ಷನ್‌ ಸೆಂಟರ್‌ನಿಂದ 68 ಬಂಧಿತರನ್ನು ವರ್ಗಾಯಿಸುವುದರೊಂದಿಗೆ ಪ್ರಕ್ರಿಯೆ ಪ್ರಾರಂಭವಾಯಿತು.

ಮಾಟಿಯಾ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ 217 ಘೋಷಿತ ವಿದೇಶಿಯರು ಇದ್ದಾರೆ ಎಂದು ಗೋಲ್‌ಪಾರಾ ಡೆಪ್ಯೂಟಿ ಕಮಿಷನರ್ ಖನೀಂದ್ರ ಚೌಧರಿ ಹೇಳಿದ್ದಾರೆ.

“ಈ ಅಂಕಿ ಅಂಶವು ನ್ಯಾಯಾಲಯದ ತೀರ್ಪುಗಳು ಮತ್ತು ವಿದೇಶಿಯರನ್ನು ಗಡೀಪಾರು ಮಾಡುವುದರೊಂದಿಗೆ ಆಗಾಗ್ಗೆ ಬದಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಕೇವಲ ಮೂರು ದಿನಗಳ ಹಿಂದೆ, ಮೂರು ಬಾಂಗ್ಲಾದೇಶೀಯರನ್ನು ಮಾಟಿಯಾ ಶಿಬಿರದಿಂದ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ” ಎಂದಿದ್ದಾರೆ.

ವಿದೇಶಿಯರ ಬಂಧನಕ್ಕಾಗಿ ಒಂದು ವಿಶೇಷ ಡಿಟೆನ್ಷನ್‌ ಸೆಂಟರ್‌ ಸ್ಥಾಪಿಸುವಂತೆ ಅಸ್ಸಾಂ ಸರ್ಕಾರಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ನಿರ್ದೇಶನ ನೀಡಿತು. ಹೀಗಾಗಿ ವಿದೇಶಿ ಬಂಧಿತರನ್ನು ಜೈಲುಗಳಲ್ಲಿನ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳೊಂದಿಗೆ ಇರಿಸುತ್ತಿಲ್ಲ.

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯಿಂದ ಹೊರಗುಳಿಯುವ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳನ್ನು ಪರಿಗಣಿಸಿ ಅಸ್ಸಾಂ ಸರ್ಕಾರವು ಕನಿಷ್ಠ 10 ಇಂತಹ ಕೇಂದ್ರಗಳನ್ನು ನಿರ್ಮಿಸಲು ಯೋಜಿಸಿತ್ತು. ಪ್ರಸ್ತಾವಿತ 10 ಶಿಬಿರಗಳಲ್ಲಿ ಮಾಟಿಯಾ ಬಂಧನ ಕೇಂದ್ರವು ಮೊದಲನೆಯದು.

ರಾಜ್ಯದಲ್ಲಿ ವಾಸಿಸುವ ದಾಖಲೆರಹಿತ ವಲಸಿಗರಿಂದ ಭಾರತೀಯ ನಾಗರಿಕರನ್ನು ಪ್ರತ್ಯೇಕಿಸುವ ಗುರಿಯೊಂದಿಗೆ ಎನ್‌ಆರ್‌ಸಿ ಕಾರ್ಯಕ್ರಮವನ್ನು ಅಸ್ಸಾಂ ಸರ್ಕಾರ ಆಗಸ್ಟ್ 2019 ರಲ್ಲಿ ಪ್ರಕಟಿಸಿದೆ.

ತಮ್ಮ ಪೂರ್ವಜರು ಮಾರ್ಚ್ 24, 1971ರ ಮಧ್ಯರಾತ್ರಿಗಿಂತ ಮೊದಲು ಅಸ್ಸಾಂಗೆ ಪ್ರವೇಶಿಸಿರುವ ಸಂಬಂಧ ದೃಢೀಕರಿಸಲು ಸಾಧ್ಯವಾಗದವರನ್ನು ನಾಗರಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎನ್‌ಆರ್‌ಸಿ ನಿಬಂಧನೆಗಳು ಹೇಳುತ್ತವೆ.

ಇದನ್ನೂ ಓದಿರಿ: ಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

19 ಲಕ್ಷಕ್ಕೂ ಹೆಚ್ಚು ಜನರು ಅಥವಾ ರಾಜ್ಯದ ಜನಸಂಖ್ಯೆಯ ಸುಮಾರು 6% ಜನರನ್ನು ಅಂತಿಮ ನಾಗರಿಕರ ಪಟ್ಟಿಯಿಂದ ಹೊರಗಿಡಲಾಗಿದೆ.

ರಾಜ್ಯ ಸರ್ಕಾರವು ಎನ್‌ಆರ್‌ಸಿಯ ಅಂತಿಮ ಕರಡನ್ನು ‘ದೋಷಪೂರಿತ’ ಎಂದು ಕರೆದಿದ್ದು, ಇದು ಅಸ್ಸಾಂನ ಹಲವಾರು ಸ್ಥಳೀಯ ಜನರನ್ನೂ ಹೊರಗಿಟ್ಟಿದೆ ಎಂದು ಆರೋಪಿಸಿದೆ. ಹೊರಗಿಡುವಿಕೆಯ ವಿರುದ್ಧದ ಮೇಲ್ಮನವಿಗಳನ್ನು ಆಲಿಸುವ ಕೆಲಸವನ್ನು ವಿದೇಶಿಯರ ನ್ಯಾಯಮಂಡಳಿಗಳಿಗೆ ವಹಿಸಲಾಯಿತು. ಎನ್‌ಆರ್‌ಸಿಯಿಂದ ಬಾಧಿತರಾದವರು ಬಂಧನದಲ್ಲಿ ಇರಬೇಕಾಗುತ್ತದೆ.

ಹೆಚ್ಚಿನ ವ್ಯಕ್ತಿಗಳು ವಿದೇಶಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಶಿಬಿರಗಳಲ್ಲಿ ಇದ್ದಾರೆ. “ಪ್ರಾಥಮಿಕ ಕಾನೂನು ಪ್ರಾತಿನಿಧ್ಯವನ್ನು ಸಹ ಇವರು ಹೊಂದಿಲ್ಲ. ನ್ಯಾಯಮಂಡಳಿಗಳೂ ಆಲಿಸುತ್ತಿಲ್ಲ” ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಾಂದರ್ ಜುಲೈ 2019 ರಲ್ಲಿ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...