ಮುಸ್ಲಿಂ ಎನ್ನುವ ಒಂದೇ ಕಾರಣಕ್ಕೆ ಝೊಮಾಟೊ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಕೆಲವು ಹಿಂದೂತ್ವವಾದಿ ಗೂಂಡಾಗಳು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ನಾಲ್ವರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮಾರ್ಚ್ 7ರಂದು ನಾಂದೇಡ್ನ ಭಜರಂಗ್ ನಗರದಲ್ಲಿ ಹೋಳಿ ಆಚರಣೆಯ ಸಂದರ್ಭದಲ್ಲಿ ಈ ಘಟನೆ ನಡದಿದೆ. ಕಾನೂನು ವಿದ್ಯಾರ್ಥಿಯಾಗಿರುವ ಅಮ್ರಾನ್ ತಾಂಬೋಲಿ ಎನ್ನುವವರು ಝೊಮಾಟೊದಲ್ಲಿ ಪಾರ್ಟ್ಟೈಮ್ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಫುಡ್ ಡೆಲಿವರಿ ಮಾಡಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು, ಭಾನುವಾರ ಎಫ್ಐಆರ್ ದಾಖಲಿಸಲಾಗಿದೆ.
”ಭಜರಂಗ್ ನಗರ ಪ್ರದೇಶದಲ್ಲಿ ಫುಡ್ ಡೆಲಿವರ್ ಮಾಡಿದ ಬಳಿಕ ನಾಲ್ವರು ಧರ್ಮದ ಕಾರಣದಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ತಾಂಬೋಲಿ ಹೇಳಿಕೊಂಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
”ಅವರು ಇದ್ದಕ್ಕಿದ್ದಂತೆ ಬಂದು ದಾಳಿ ಮಾಡಲು ಪ್ರಾರಂಭಿಸಿದರು. ನನಗೆ ಏನನ್ನೂ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ನಾನು ಮುಸ್ಲಿಂ ಎನ್ನುವ ಕಾರಣಕ್ಕೆ ಮನಬಂದಂತೆ ಹಲ್ಲೆ ಮಾಡಿದರು” ಎಂದು ಅವರು ಹೇಳಿದ್ದಾರೆ. ”ಈ ಘಟನೆಯ ನಂತರ, ನನ್ನ ಜೊಮಾಟೊ ತಂಡದ ನಾಯಕ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು ಮತ್ತು ಅದೇ ಸಂಜೆ, ನಾನು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದೆ” ಎಂದು ಅಮ್ರಾನ್ ತಾಂಬೋಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ: ಮಹಾರಾಷ್ಟ್ರದಲ್ಲಿ ಹಿಂದೂ ಸಂಘಟನೆಗಳಿಂದ ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ಕರೆ
ಈ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದೆ. ಆ ವಿಡಿಯೋದಲ್ಲಿ ತಾಂಬೋಲಿಯ ಗಡ್ಡಕ್ಕೆ ಬಣ್ಣ ಹಚ್ಚಿ ಹಣೆಗೆ ತಿಲಕವನ್ನು ಬಲವಂತವಾಗಿ ಹಾಕುತ್ತಿದ್ದಾರೆ. ಆ ಬಳಿಕೆ ದೊನ್ನೆಯಿಂದ ಹೊಡೆದು ಅವರ ಮೇಲೆ ಚಪ್ಪಲಿಗಳನ್ನು ಎಸೆಯುತ್ತಿರುವುದ್ನು ದೃಶ್ಯಾವಳಿ ತೋರಿಸುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Location: Bajrang Nagar, Nanded, Maharashtra
A Muslim food delivery worker with Zomato was beaten by a group of extremists, who also applied color to his beard and put a tilak on his forehead.
Police have arrested four persons. pic.twitter.com/V4VVR4g9IV
— HindutvaWatch (@HindutvaWatchIn) March 13, 2023
ಸಧ್ಯ ಪೊಲೀಸರು ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 323 ಮತ್ತು 324 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ಯಾವುದೇ ಕೋಮುವಾದಿ ಅಂಶ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
”ನಾಲ್ವರು ಆರೋಪಿಗಳು ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ. ಆ ದುಷ್ಕರ್ಮಿಗಳನ್ನು ಈಗ ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರು ನಮ್ಮ ದಾಖಲೆಗಳಲ್ಲಿ ಈಗಾಗಲೇ ಅಪರಾಧಿಯಾಗಿದ್ದಾರೆ. ಮುಂದೆ ನಾವು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ” ಎಂದು ಪೊಲೀಸ್ ಅಧೀಕ್ಷಕ ಶ್ರೀಕೃಷ್ಣ ಕೊಕಾಟೆ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಅಭಿನಾಶ್ ಕುಮಾರ್ ಪತ್ರಿಕೆಗೆ ಮಾತನಾಡಿದ್ದು, ”ಪೊಲೀಸರು ಇನ್ನೂ ಸಾಕ್ಷಿಗಳಿಂದ ವಿವರವಾದ ಹೇಳಿಕೆಗಳನ್ನು ದಾಖಲಿಸಬೇಕಾಗಿದೆ ಮತ್ತು ಜೊಮಾಟೊ ಉದ್ಯೋಗಿಯ ಪೂರಕ ಹೇಳಿಕೆಗಳನ್ನು ಸಂಗ್ರಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.