Homeಮುಖಪುಟಮಹಾಪಂಚಾಯತ್‌ನಲ್ಲಿ ಎಬಿಪಿ ನ್ಯೂಸ್‌ಗೆ ರಾಜೀನಾಮೆ ನೀಡಿದ ಪತ್ರಕರ್ತನ ಮಾತುಗಳು

ಮಹಾಪಂಚಾಯತ್‌ನಲ್ಲಿ ಎಬಿಪಿ ನ್ಯೂಸ್‌ಗೆ ರಾಜೀನಾಮೆ ನೀಡಿದ ಪತ್ರಕರ್ತನ ಮಾತುಗಳು

ಕಿಸಾನ್ ಮಹಾಪಂಚಾಯತ್‌ನಲ್ಲಿ ವಾಸ್ತವದಲ್ಲಿರುವ ಜನಸಂಖ್ಯೆಗಿಂತ ಕಡಿಮೆ ಜನರಿದ್ದಾರೆ ಎಂದು ಹೇಳಲು ನನಗೆ ಈ ಸುದ್ದಿವಾಹಿನಿ ಆದೇಶಿಸಿದೆ ಎಂದು ಪತ್ರಕರ್ತ ರಕ್ಷಿತ್ ಸಿಂಗ ಆರೋಪಿಸಿದ್ದರು.

- Advertisement -
- Advertisement -

“ನನ್ನ ಹೆತ್ತವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನನ್ನ ಶಿಕ್ಷಣಕ್ಕಾಗಿ ಖರ್ಚು ಮಾಡಿದರು. ನಾನು ಈ (ಪತ್ರಿಕಾ) ವೃತ್ತಿಯನ್ನು ಆರಿಸಿಕೊಂಡೆ. ಯಾಕೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ನಾನು ಸತ್ಯವನ್ನು ಹೇಳಲು ಬಯಸಿದ್ದೆ” ಎಂದು ಮೀರತ್ ಮಹಾಪಂಚಾಯತ್‌ನಲ್ಲಿ ಎಬಿಪಿ ನ್ಯೂಸ್‌ಗೆ ರಾಜೀನಾಮೆ ನೀಡಿದ ರಕ್ಷಿತ್ ಸಿಂಗ್ ಹೇಳಿದ್ದಾರೆ.

ಐತಿಹಾಸಿಕ ರೈತ ಹೋರಾಟವನ್ನು ಬೆಂಬಲಿಸಿ ಫೆಬ್ರವರಿ 27 ರಂದು ಮೀರತ್‌ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ಸುಮಾರು 5,000 ಜನರು ಒಟ್ಟುಗೂಡಿದ್ದರು. ಈ ಸಭೆಯಲ್ಲಿ ಮಾತನಾಡಿದ ರಕ್ಷಿತ್ ಸಿಂಗ್, “ಸುದ್ದಿ ವಾಹಿನಿಗಳು ಸತ್ಯವನ್ನು, ನಿಜವಾದ ಸುದ್ದಿಯನ್ನು ತೋರಿಸುವುದನ್ನು ನಿಲ್ಲಿಸಿವೆ. ಅವು ಕೇವಲ ಸುಳ್ಳು ಹೇಳುತ್ತಿವೆ. ಸತ್ಯವನ್ನು ತೋರಿಸದಿರುವುದು ಸಹ ಸುಳ್ಳಿಗೆ ಸಮ. ನಾನು ಈ ಸುಳ್ಳಿಗೆ ವಿರೋಧಿಯಾಗಿದ್ದೇನೆ, ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಆಕ್ರೋಶಗೊಂಡರು. ನಂತರ ಎಬಿಪಿ ಲಾಂಛನವಿರುವ ಮೈಕ್ ತೆಗೆದು ಎಸೆದು, ಈಗಲೇ ಈ ವಾಹಿನಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದರು.

“ಎಬಿಪಿ ನ್ಯೂಸ್ ಸತ್ಯವನ್ನು ಹೇಳಲು ಬಯಸುತ್ತಿಲ್ಲ. ಕಿಸಾನ್ ಮಹಾಪಂಚಾಯತ್‌ನಲ್ಲಿ ವಾಸ್ತವದಲ್ಲಿರುವ ಜನಸಂಖ್ಯೆಗಿಂತ ಕಡಿಮೆ ಜನರಿದ್ದಾರೆ ಎಂದು ಹೇಳಲು ನನಗೆ ಈ ಸುದ್ದಿವಾಹಿನಿ ಆದೇಶಿಸಿದೆ” ಎಂದು ಕಿಡಿಕಾರಿದರು. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಶರವೇಗದಲ್ಲಿ ವೈರಲ್ ಆಗಿತ್ತು.

ಮೀರತ್‌ನಲ್ಲಿನ ಕಿಸಾನ್ ಮಹಾಪಂಚಾಯತ್ ಅನ್ನು ರಾಷ್ಟ್ರೀಯ ಲೋಕ ದಳ ಪಕ್ಷದವರು ಆಯೋಜಿಸಿದ್ದರು. ಇದರ ಉಪಾಧ್ಯಕ್ಷ ಜಯಂತ್ ಚೌಧರಿ ರಕ್ಷಿತ್ ರಾಜೀನಾಮೆ ಘೋಷಿಸುವಾಗ ಅಲ್ಲಿಯೇ ಇದ್ದರು.

ಇದನ್ನೂ ಓದಿ: ಗುಜರಾತ್ ಮಾಡೆಲ್: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು & ಕೊಬ್ಬುತ್ತಿರುವ ಉದ್ಯಮಿಗಳು!

ರಕ್ಷಿತ್ 15 ವರ್ಷಗಳಿಂದ ಪತ್ರಕರ್ತರಾಗಿದ್ದು, ಎಬಿಪಿ ನ್ಯೂಸ್‌ಗೆ ಸೇರುವ ಮೊದಲು ದೈನಿಕ್ ಭಾಸ್ಕರ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ನಂತರ ಎಬಿಪಿ ನ್ಯೂಸ್‌ ಸೇರಿ ಪಶ್ಚಿಮ ಉತ್ತರಪ್ರದೇಶದ ಭಾಗದ ವರದಿಗಳನ್ನು ಮಾಡುತ್ತಿದ್ದರು.

ನ್ಯೂಸ್‌ಲಾಂಡ್ರಿಯೊಂದಿಗೆ ಮಾತನಾಡಿದ ರಕ್ಷಿತ್, “ಸುದ್ದಿ ಮಾಧ್ಯಮಗಳ ಒಟ್ಟಾರೆ ಪರಿಸ್ಥಿತಿ ನನ್ನ ಈ ಹತಾಶೆಗೆ ಕಾರಣವಾಗಿದ್ದು, ಇದು ರಾಜೀನಾಮೆ ನೀಡಲು ನನ್ನನ್ನು ಪ್ರೇರೇಪಿಸಿತು. ಈ ಘಟನೆಯ ನಂತರ ನನ್ನನ್ನು ಯಾರೂ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಆದರೆ ಪತ್ರಿಕಾ ವೃತ್ತಿಯನ್ನು ಮುಂದುವರೆಸುತ್ತೇನೆ” ಎಂದು ಹೇಳಿದರು. ಆದರೆ ಈ ವೇದಿಕೆಯನ್ನು ಯಾಕೆ ಆಯ್ಕೆ ಮಾಡಿಕೊಂಡರು ಎಂಬುವುದರ ಬಗ್ಗೆ ರಕ್ಷಿತ್ ಸುಳಿವು ನೀಡಲಿಲ್ಲ.

ರಕ್ಷಿತ್ ಸಿಂಗ್ ರಾಜೀನಾಮೆ ಘೋಷಿಸಿದರು ಸಹ ಇನ್ನೂ ಔಪಚಾರಿಕವಾಗಿ ತನ್ನ ರಾಜೀನಾಮೆಯನ್ನು ನೀಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಎಬಿಪಿ ನ್ಯೂಸ್, “ನಾವು ಉನ್ನತ ಮಟ್ಟದ ನೈತಿಕ ಪತ್ರಿಕೋದ್ಯಮದಲ್ಲಿ ನಂಬಿಕೆ ಇರಿಸಿದ್ದೇವೆ. ಇದರ ಆಧಾರದಲ್ಲಿ ನಮ್ಮ ವರದಿಗಾರರಿಗೆ ನಿಷ್ಪಕ್ಷಪಾತತೆಯಿಂದಿರಲು ಆದೇಶ ನೀಡಿದ್ದೇವೆ. ಸ್ವಾತಂತ್ರ್ಯ, ನ್ಯಾಯ, ನೆಲದ ಕಾನೂನು, ಪತ್ರಿಕೋದ್ಯಮದ ನಿಯಮ ಮತ್ತು ಸಂಪಾದಕೀಯ ತತ್ವಗಳಿಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳುವಂತೆ ಹೇಳಿತ್ತೇವೆ. ಸತ್ಯವನ್ನು ಆಧರಿಸಿದ ವರದಿಗಾರಿಕೆ ಯಾವಾಗಲೂ ನಮ್ಮ ಸಂಸ್ಥೆಯ ಕೇಂದ್ರವಾಗಿದೆ. ನಮ್ಮ ವರದಿಗಾರರೊಬ್ಬರು ನಮ್ಮ ಬ್ರ್ಯಾಂಡ್‌ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಸಂಸ್ಥೆಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂಬುದನ್ನು ಕೇಳಿ ಆಘಾತವಾಗಿದೆ” ಎಂದು ದೂರಿದ್ದಾರೆ.

ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಕುರಿತು ಎಬಿಪಿ-ಸಿ- ಓಟರ್ ಸಮೀಕ್ಷೆ ಹೇಳಿದ್ದೇನು…ಇಲ್ಲಿದೆ ವಿವರ

ರಕ್ಷಿತ್ ಸಿಂಗ್ ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳನ್ನು ಮಾತನಾಡಿಸಿದಾಗ, ಅವರೂ ಕೂಡ ರಕ್ಷಿತ್ ಅವರ ಆರೋಪಗಳನ್ನು ದೃಢಪಡಿಸಿದ್ದಾರೆ. ಆದರೆ ಭಯದಿಂದ ಯಾರೂ ಕೂಡ ಹೆಸರು ಹೇಳಲಿಲ್ಲ ಎಂದು ನ್ಯೂಸ್‌ಲಾಂಡ್ರಿಯು ವರದಿ ಮಾಡಿದೆ.

ರಕ್ಷಿತ್ ಅವರ ರಾಜೀನಾಮೆ ಮತ್ತು ಘಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಹಲವಾರು ರಾಜಕೀಯ ನಾಯಕರು ರಾಜೀನಾಮೆ ನೀಡಿದ್ದಾರೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಮೈತ್ರಿಯಿಂದ ಹೊರಬಂದಿವೆ.

ಕಳೆದ 95 ದಿನಗಳಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಹೋರಾಟ ಮಾಡುತ್ತಿರುವವರು ರೈತರಲ್ಲ; ಖಲೀಸ್ತಾನಿಗಳು, ಭಯೋತ್ಪಾದಕರು, ನಕ್ಸಲರು ಎಂದು ಮುಂತಾಗಿ ಬಿಂಬಿಸಿ ಕೆಲವು ಮಾಧ್ಯಮಗಳಿಂದ ವರದಿ ಮಾಡಿಸಲಾಗುತ್ತಿದೆ. ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ಇದಾವುದಕ್ಕೂ ಮಣಿಯದ ರೈತರು ತಮ್ಮ ಬೇಡಿಕೆಯೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ.


ಇದನ್ನೂ ಓದಿ: ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್‌ ವೇದಿಕೆಯಲ್ಲಿ ABP ಚಾನೆಲ್‌ ವರದಿಗಾರನ ರಾಜೀನಾಮೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...