ಭಾನುವಾರ ಹಿಂದುತ್ವ ಸಂಘಟನೆಗಳು, ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿ ಮುಂಬೈ ಬಳಿ ರ್ಯಾಲಿ ನಡೆಸಿದವು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಲವಾರು ಹಿಂದುತ್ವ ಸಂಘಟನೆಗಳ ಸಮೂಹವಾದ ಸಕಲ್ ಹಿಂದೂ ಸಮಾಜವು ‘ಹಿಂದೂ ಜನ ಆಕ್ರೋಶ ಮೋರ್ಚಾ’ ರ್ಯಾಲಿಯನ್ನು ಮಹಾರಾಷ್ಟ್ರದ ಮೀರಾ ರಸ್ತೆಯಲ್ಲಿ ಆಯೋಜಿಸಲಾಗಿತ್ತು.
ಈ ವೇಳೆ ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವುದರ ಜೊತೆಗೆ, ರ್ಯಾಲಿಯಲ್ಲಿ ಭಾಗವಹಿಸಿದ ಕೆಲವರು “ಲವ್ ಜಿಹಾದ್” ಮತ್ತು “ಲ್ಯಾಂಡ್ ಜಿಹಾದ್” ವಿಚಾರವಾಗಿ ಮುಸ್ಲಿಮರ ವಿರುದ್ಧ ವಿಷಕಾರಿದ್ದಾರೆ.
ಈ ರ್ಯಾಲಿಯ ಭಾಷಣಕಾರರಲ್ಲಿ ಒಬ್ಬರಾದ ಕಾಜಲ್, ”ಇಸ್ಲಾಮಿಕ್ ಆಕ್ರಮಣಶೀಲತೆಯಲ್ಲಿ ಮೂರು ಪ್ರಮುಖ ಅಂಶಗಳಿವೆ. ಮೊದಲನೆಯದು ಲವ್ ಜಿಹಾದ್, ಎರಡನೆಯದು ಭೂ ಜಿಹಾದ್ ಮತ್ತು ಅಂತಿಮವಾಗಿ, ಮತಾಂತರದ ಸಮಸ್ಯೆ ಇದೆ” ಎಂದು ಆರೋಪ ಮಾಡಿದ್ದಾರೆ ಎಂದು ಹಿಂದೂಸ್ತಾನಿ ಪತ್ರಿಕೆಯ ವರದಿ ಮಾಡಿದೆ.
”ಈ ಮೂರಕ್ಕೂ ರಾಮ್ ನೇತೃತ್ವದ ಪರಿಹಾರವಿದೆ, ಅದೇನೆಂದರೆ ‘ಆರ್ಥಿಕ ಬಹಿಷ್ಕಾರ’. ಇದಕ್ಕೆ ರಾಜಕೀಯ ನಾಯಕರು, ಸುಪ್ರೀಂ ಕೋರ್ಟ್ ಅಥವಾ ಮಾಧ್ಯಮಗಳು ನಿಮ್ಮನ್ನು ತಡೆಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ ತಡೆಯುವಂತಿದ್ದರೆ ಮಾತ್ರ ಹಿಂದುತ್ವ ಕಾರ್ಯಕ್ರಮಕ್ಕೆ ಅನುಮತಿ: ಮಹಾರಾಷ್ಟ್ರಕ್ಕೆ ಸುಪ್ರೀಂ ಸೂಚನೆ
”ಲವ್ ಜಿಹಾದ್” ಎಂಬುದು ಇಸ್ಲಾಂಗೆ ಮತಾಂತರಿಸುವ ಸಲುವಾಗಿ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮೋಹಿಸಲು ಸಂಚು ಹೂಡುತ್ತಾರೆ. ಅಂತೆಯೇ, ”ಲ್ಯಾಂಡ್ ಜಿಹಾದ್” ಪ್ರತಿಪಾದಕರು ಮುಸ್ಲಿಮರು ಸಾರ್ವಜನಿಕ ಭೂಮಿ ಮತ್ತು ಹಿಂದೂಗಳ ಒಡೆತನದ ಆಸ್ತಿಯನ್ನು ಅತಿಕ್ರಮಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಕಾಜಲ್ ಆರೋಪಿಸಿದ್ದಾರೆ.
ರ್ಯಾಲಿಯಲ್ಲಿ ಶಾಸಕ ನಿತೇಶ್ ರಾಣೆ ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಮೀರಾ ಭಯಂದರ್ ಸ್ವತಂತ್ರ ಶಾಸಕಿ ಗೀತಾ ಜೈನ್ ಧ್ವಜಾರೋಹಣ ಮಾಡಿದರು.
ಮಹಾರಾಷ್ಟ್ರದಾದ್ಯಂತ ನವೆಂಬರ್ನಿಂದ ಇಂತಹ ಅನೇಕ ರ್ಯಾಲಿಗಳು ನಡೆಯುತ್ತಿವೆ. ಬಹುತೇಕ ಎಲ್ಲ ರ್ಯಾಲಿಗಳಲ್ಲೂ ಭಾಷಣಕಾರರು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ ಅಥವಾ ಸಮುದಾಯ ವಿರುದ್ಧ ಪಿತೂರಿ ನಡೆಸುವ ವಿಚಾರಗಳನ್ನು ಹರಿಬಿಡುತ್ತಿದ್ದಾರೆ.
ಫೆಬ್ರವರಿಯಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆ ಪ್ರಕಾರ ”ದ್ವೇಷ ಭಾಷಣ ತಡೆಯುವಂತಿದ್ದರೆ ಮಾತ್ರ ಹಿಂದುತ್ವ ಸಂಘಟನೆಗಳ ರ್ಯಾಲಿಗೆ ಅನುಮತಿ ನೀಡಬಹುದು. ಗುಂಪಿನಿಂದ ಒಂದೇ ರ್ಯಾಲಿಗೆ ಅನುಮತಿ ನೀಡಬೇಕು ಮತ್ತು ಈ ವೇಳೆ ಯಾವುದೇ ದ್ವೇಷದ ಭಾಷಣ ಮಾಡಬಾರದು ಎಂದು ಷರತ್ತು ವಿಧಿಸಿತ್ತು.
”ಕಾನೂನನ್ನು ಧಿಕ್ಕರಿಸಿ ಮತ್ತು ಸಾರ್ವಜನಿಕ ಆದೇಶವನ್ನು ಉಲ್ಲಂಘಿಸುವ ಯಾವುದೇ ದ್ವೇಷದ ಭಾಷಣವನ್ನು ಯಾರೂ ಮಾಡಬಾರದು ಎಂಬ ಷರತ್ತಿಗೆ ಒಳಪಟ್ಟು ಅನುಮತಿ ನೀಡಬಹುದು” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿತ್ತು. ಆದರೆ, ಮಹಾರಾಷ್ಟ್ರ ಸರ್ಕಾರ ಮತ್ತು ಹಿಂದೂ ಸಂಘಟನೆಗಳು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಇಂತಹ ದ್ವೇಷ ಬಿತ್ತುವ ರ್ಯಾಲಿಗಳನ್ನು ನಡೆಸುತ್ತಿವೆ.
ಮುಸ್ಲಿಮರ ಆರ್ಥಿಕ ಬಹಿಷ್ಕಾರದ ಕರೆಯನ್ನು ಬೆಂಬಲಿಸುವುದಾಗಿ ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ ಅವರು ತಿಳಿಸಿದ್ದಾರೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಆ ಎಲ್ಲಾ ಹಣವನ್ನು ಅವರು ಹಿಂದೂ ಸಮುದಾಯದ ವಿರುದ್ಧ ಬಳಸುತ್ತಾರೆ. ಆ ಹಣವನ್ನು ಸಮುದಾಯದ ಏಳಿಗೆಗೆ ಬಳಸಿದರೆ ಯಾರಿಗೂ ಸಮಸ್ಯೆಯಾಗುವುದಿಲ್ಲ. ಆದರೆ ಅವರು ಹಿಂದೂಗಳ ವಿರುದ್ಧ ಭಯೋತ್ಪಾದನೆ, ಲವ್ ಜಿಹಾದ್ ಮತ್ತು ಇತರ ಹಲವು ವಿಷಯಗಳ ಹೆಸರಿನಲ್ಲಿ ಹಣವನ್ನು ಬಳಸುತ್ತಾರೆ” ಎಂದು ರಾಣೆ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದಾರೆ.