Homeಮುಖಪುಟದ್ವೇಷ ಭಾಷಣ ತಡೆಯುವಂತಿದ್ದರೆ ಮಾತ್ರ ಹಿಂದುತ್ವ ಕಾರ್ಯಕ್ರಮಕ್ಕೆ ಅನುಮತಿ: ಮಹಾರಾಷ್ಟ್ರಕ್ಕೆ ಸುಪ್ರೀಂ ಸೂಚನೆ

ದ್ವೇಷ ಭಾಷಣ ತಡೆಯುವಂತಿದ್ದರೆ ಮಾತ್ರ ಹಿಂದುತ್ವ ಕಾರ್ಯಕ್ರಮಕ್ಕೆ ಅನುಮತಿ: ಮಹಾರಾಷ್ಟ್ರಕ್ಕೆ ಸುಪ್ರೀಂ ಸೂಚನೆ

- Advertisement -
- Advertisement -

ದ್ವೇಷ ಭಾಷಣ ತಡೆಯುವಂತಿದ್ದರೆ ಮಾತ್ರ ಫೆಬ್ರವರಿ 5ರಂದು ಮುಂಬೈನಲ್ಲಿ ಹಿಂದುತ್ವ ಸಂಘಟನೆಗಳು ಆಯೋಜಿಸಿರುವ ರ್‍ಯಾಲಿಗೆ ಅನುಮತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

‘ಹಿಂದೂ ಜನಾಕ್ರೋಶ ಸಭೆ’ಯ ವಿಡಿಯೊ ರೆಕಾರ್ಡಿಂಗ್ ಮಾಡಿ ಮತ್ತು ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠವು ಎಚ್ಚರಿಸಿದೆ.

“ಕಾನೂನನ್ನು ಧಿಕ್ಕರಿಸಿ ಮತ್ತು ಸಾರ್ವಜನಿಕ ಆದೇಶವನ್ನು ಉಲ್ಲಂಘಿಸುವ ಯಾವುದೇ ದ್ವೇಷದ ಭಾಷಣವನ್ನು ಯಾರೂ ಮಾಡಬಾರದು ಎಂಬ ಷರತ್ತಿಗೆ ಒಳಪಟ್ಟು ಅನುಮತಿ ನೀಡಬಹುದು” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಹಿಂದುತ್ವ ಸಂಘಟನೆಗಳ ಒಕ್ಕೂಟ ಸಂಸ್ಥೆಯಾದ ‘ಸಕಲ್ ಹಿಂದೂ ಸಮಾಜ’ದ ಈ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಶಹೀನ್ ಅಬ್ದುಲ್ಲಾ ಎಂಬುವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಜನವರಿ 29ರಂದು ಒಕ್ಕೂಟವು ನಡೆಸಿದ ರ್‍ಯಾಲಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲಾಗಿದೆ ಎಂದು ಅಬ್ದುಲ್ಲಾ ವಾದಿಸಿದ್ದಾರೆ.

ಜನವರಿ 29 ರಂದು ನಡೆದ ರ್‍ಯಾಲಿಯಲ್ಲಿ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದರು. ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್, ಮಹಾರಾಷ್ಟ್ರ ಸಂಸದರಾದ ಗೋಪಾಲ್ ಶೆಟ್ಟಿ ಮತ್ತು ಮನೋಜ್ ಕೋಟಕ್, ಮಾಜಿ ಸಂಸದ ಕಿರಿತ್ ಸೋಮಯ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಹಲವಾರು ನಾಯಕರು ಕೂಡ ಕಾರ್ಯಕ್ರಮದಲ್ಲಿ ಇದ್ದರು.

ಕಾರ್ಯಕ್ರಮದ ಭಾಷಣಕಾರರಲ್ಲಿ ಒಬ್ಬರಾದ ತೆಲಂಗಾಣ ಶಾಸಕ ಟಿ.ರಾಜಾ ಸಿಂಗ್ ಅವರು, “ಮುಸ್ಲಿಮರು ನಡೆಸುವ ಅಂಗಡಿಗಳಿಂದ ವಸ್ತುಗಳನ್ನು ಹಿಂದೂಗಳು ಕೊಳ್ಳಬಾರದು” ಎಂದು ದ್ವೇಷ ಕಾರಿದರು. ಹಿಂದುತ್ವ ಗುಂಪಿನ ಪಿತೂರಿ ಸಿದ್ಧಾಂತವೆಂದೇ ಬಣ್ಣಿಸಲಾದ ‘ಲವ್ ಜಿಹಾದ್’ ಮತ್ತು ‘ಧಾರ್ಮಿಕ ಮತಾಂತರಗಳ ವಿರುದ್ಧ’ದ ಕಾನೂನುಗಳಿಗೆ ಸಂಬಂಧಿಸಿದಂತೆ ಹಲವರು ಮಾತನಾಡಿದ್ದಾರೆ.

ಕಳೆದ ಮೂರು ತಿಂಗಳಲ್ಲಿ, ಸಕಲ ಹಿಂದೂ ಸಮಾಜವು ಮಹಾರಾಷ್ಟ್ರದ 20 ಜಿಲ್ಲೆಗಳಲ್ಲಿ ಇದೇ ರೀತಿಯ ರ್‍ಯಾಲಿಗಳನ್ನು ನಡೆಸಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ, ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮನವಿಯನ್ನು ವಿರೋಧಿಸಿದರು. ಅರ್ಜಿದಾರರು ಕೆಲವೊಂದು ವಿಷಯಗಳನ್ನಷ್ಟೇ ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು.

ಕೇರಳದ ನಿವಾಸಿಯಾಗಿದ್ದರೂ ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಅರ್ಜಿದಾರರಿಗೆ ಏಕೆ ಕಾಳಜಿ ಇದೆ ಎಂದು ಪ್ರಶ್ನಿಸಿದರು.

“ಈಗ, ವ್ಯಕ್ತಿಗಳು ಆಯ್ದ ಕೆಲವೊಂದು ವಿಷಯಗಳನ್ನು ಇಟ್ಟುಕೊಂಡು ಈ ನ್ಯಾಯಾಲಯಕ್ಕೆ ಬರುತ್ತಿದ್ದಾರೆ” ಎಂದು ಮೆಹ್ತಾ ಹೇಳಿದರು. “ಈ ನ್ಯಾಯಾಲಯವನ್ನು ಈವೆಂಟ್‌ಗಳನ್ನು ನಡೆಸಲು ಅನುಮತಿಗಳನ್ನು ನೀಡುವ ಪ್ರಾಧಿಕಾರವಾಗಿ ಪರಿವರ್ತಿಸಬಹುದೇ?” ಎಂದು ಪ್ರಶ್ನಿಸಿದರು.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಕಪಿಲ್ ಸಿಬಲ್, ಕಾರ್ಯಕ್ರಮಕ್ಕೆ ಅನುಮತಿ ನೀಡುವ ಮೊದಲು ಜನವರಿ 29ರ ರ್‍ಯಾಲಿಯಲ್ಲಿ ಗಂಭೀರ ಹೇಳಿಕೆಗಳನ್ನು ನೀಡಿರುವುದನ್ನು ಪರಿಗಣಿಸಬೇಕಾಗಿದೆ ಎಂದು ವಾದಿಸಿದರು.

ಅಪರಾಧಗಳನ್ನು ತಡೆದು, ವ್ಯಕ್ತಿಗಳನ್ನು ಬಂಧಿಸುವ ಅಧಿಕಾರ ನೀಡುವ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 151 ಅನ್ನು ಅನ್ವಯಿಸಲು ಪೊಲೀಸರಿಗೆ ಆದೇಶಿಸುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.

“ಅನುಮತಿ ನೀಡಿದರೆ, ಸೆಕ್ಷನ್ 151 ರ ಆದೇಶವನ್ನು ಅನ್ವಯಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...