ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ (ಎಂಎಸ್ಎಂಇ) ಗಳಿಗೆ ಕೇಂದ್ರ ಘೋಷಿಸಿರುವ 3 ಲಕ್ಷ ಕೋಟಿ ಸಾಲ ಯೋಜನೆಯ ಕೊರೊನಾ ಪ್ಯಾಕೇಜ್ ನೆರವಿನ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಆರ್ಎಸ್ಎಸ್ ಅಂಗಸಂಸ್ಥೆಯಾದ ಕೈಗಾರಿಕಾ ಸಂಸ್ಥೆ ಲಘು ಉದ್ಯೋಗ್ ಭಾರತಿ (ಎಲ್ಯುಬಿ) ಆರೋಪಿಸಿದೆ.
ಕೊರೋನಾ ಲಾಕ್ಡೌನ್ನಿಂದಾಗಿ ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸಾಕಷ್ಟು ನಷ್ಟ ಅನುಭವಿಸಿದ್ದವು. ಹೀಗಾಗಿ ಈ ಉದ್ಯಮಗಳ ಅಭಿವೃದ್ಧಿ ಸಲುವಾಗಿ ಕೇಂದ್ರ ಸರ್ಕಾರ ಎಂಎಸ್ಎಂಇ ಗೆ ಕೇಂದ್ರ ಸರ್ಕಾರ 3 ಲಕ್ಷ ಕೋಟಿಯ ಬೃಹತ್ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಹಣದಲ್ಲಿ ಉದ್ಯಮಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹಣವನ್ನು ಸಾಲವಾಗಿ ನೀಡುವ ಭರವಸೆ ನೀಡಿತ್ತು.
ಎಂಎಸ್ಎಂಇ ವಲಯಕ್ಕೆ 3 ಲಕ್ಷ ಕೋಟಿ ರೂ.ಗಳ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅನುಷ್ಠಾನಗೊಳಿಸುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಚಿವೆ ಸೀತಾರಾಮನ್ ಲಘು ಉದ್ಯೋಗ್ ಭಾರತಿ ಪ್ರಧಾನ ಕಾರ್ಯದರ್ಶಿ ಗೋವಿಂದ್ ಲೆಲೆ ಅವರನ್ನು ಕರೆಸಿದ್ದರು.
ಈ ಭೇಟಿಯ ಬಳಿಕ ಮಾತನಾಡಿರುವ ಗೋವಿಂದ್ ಲೆಲೆ, “ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಈ ಯೋಜನೆಯ ಪ್ರಕಾರ ಸಾಲವನ್ನು ನೀಡಲು ಪ್ರಾರಂಭಿಸಿವೆ. ಆದರೆ, ಶಾಖೆಯ ಮಟ್ಟದಲ್ಲಿ ಯಾವುದೇ ಮೊತ್ತವನ್ನು ಮಂಜೂರು ಮಾಡುವ ಮೊದಲು ಕಳೆದ ಮೂರು ವರ್ಷದ ಉದ್ಯಮದ ಆದಾಯ ಮತ್ತು ಲಾಭದಾಯಕತೆಯ ಕುರಿತ ಪ್ರಕ್ಷೇಪಗಳನ್ನು ಕೋರಲಾಗುತ್ತಿದೆ.
ಇನ್ನೂ ಖಾಸಗಿ ಬ್ಯಾಂಕುಗಳು ಈ ಯೋಜನೆಯನ್ನು ಈವರೆಗೆ ಅನುಷ್ಠಾನಗೊಳಿಸಲು ಪ್ರಯತ್ನಿಸಿಲ್ಲ. ಆದ್ದರಿಂದ, ಯೋಜನೆಯನ್ನು ಕಾರ್ಯಗತಗೊಳಿಸಲು ಅವರಿಗೆ ತಕ್ಷಣವೇ ಸೂಚನೆ ನೀಡಬೇಕಾಗಿದೆ” ಎಂದು ಹಣಕಾಸು ಸಚಿವರಿಗೆ ತಾವು ತಿಳಿಸಿದ್ದಾಗಿ ಹೇಳಿದ್ದಾರೆ.
ಅಲ್ಲದೆ, “ಆರ್ಎಸ್ಎಸ್ ಅಂಗಸಂಸ್ಥೆ ಈ ಯೋಜನೆಯ ಅನುಷ್ಠಾನದ ಕುರಿತು ಸಮೀಕ್ಷೆ ಈಗಾಗಲೇ ಆರಂಭಿಸಿದ್ದು, ಇದನ್ನು ಪೂರ್ಣಗೊಳಿಸಿ ಅಧ್ಯಯನದ ಫಲಿತಾಂಶವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಗೋವಿಂದ್ ಲೆಲೆ ಹೇಳಿದ್ದಾರೆ.
ಓದಿ: ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ