ಕೇಂದ್ರದ ರೈತ ವಿರೋಧಿ ಕಾನೂನಿನ ವಿರುದ್ದ ರೈತ ಸಂಘಟನೆಗಳು ಹಮ್ಮಿಕೊಂಡಿರುವ ”ದೆಹಲಿ ಚಲೋ’’ಗೆ ತೆರಳುತ್ತಿದ್ದ ಕರ್ನಾಟಕದ ರೈತ ಹೋರಾಟಗಾರನ್ನು ಉತ್ತರ ಪ್ರದೇಶ ಸರ್ಕಾರದ ಪೊಲೀಸರು ರಾಜಸ್ಥಾನದ ಗಡಿಯಲ್ಲಿ ದಿಗ್ಬಂಧನ ವಿಧಿಸಿದ್ದು, ದೆಹಲಿಗೆ ತೆರಳದಂತೆ ತಡೆದು ನಿಲ್ಲಿಸಿದ್ದಾರೆ.
ನಿನ್ನೆ ರಾತ್ರಿ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮೇಧಾ ಪಾಟ್ಕರ್ ನೇತೃತ್ವದ ಜಾಥಾದಲ್ಲಿದ್ದ ಹೋರಾಟಗಾರರನ್ನು ಯುಪಿ ಪೊಲೀಸರು ತಡೆದಿದ್ದರಿಂದ ರಾಜಸ್ಥಾನ-ಯುಪಿ ಗಡಿಯ ರಾಜಸ್ಥಾನದ ಭಾಗದಲ್ಲಿ ಇಂದು ಬೆಳಿಗ್ಗೆ ಎಂಟು ಗಂಟೆಯಿಂದ ರಸ್ತೆಗಳನ್ನು ತಡೆದು ಧರಣಿ ಪ್ರಾರಂಭಿಸಿದ್ದು, ಇದುವರೆಗೂ ಧರಣಿ ಮುಂದುವರೆದಿದೆ. ಧರಣಿಯಲ್ಲಿ ಹೋರಾಟಗಾರ್ತಿಯರಾದ ಮೇಧಾ ಪಾಟ್ಕರ್, ಪ್ರತಿಭಾ ಶಿಂದೆ, ಮಧ್ಯಪ್ರದೇಶ ಅಖಿಲ ಭಾರತ ಕಿಸಾನ್ ಸಭಾದ ಜಶ್ವಂತ್ ಸಿಂಗ್, ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ, ಕರ್ನಾಟಕ ಜನಶಕ್ತಿಯ ಶಿವಕುಮಾರ್ ಸೇರಿದಂತೆ ಹಲವಾರು ಹೋರಾಟಗಾರು ಭಾಗಿಗಳಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ರೈತರನ್ನು ತಡೆದ ಪೊಲೀಸರು; ಬ್ಯಾರಿಕೇಡ್ಗಳನ್ನು ನದಿಗೆಸೆದ ರೈತರು!
“ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಕಾಯ್ದೆಯ ವಿರುದ್ದ ಇರುವುದರಿಂದ ಇಲ್ಲಿಯ ಪೊಲೀಸರು ನಮ್ಮೊಂದಿಗೆ ನಯವಾಗಿ ವರ್ತಿಸುತ್ತಿದ್ದಾರೆ. ಉತ್ತರ ಪ್ರದೇಶದ ಪೊಲೀಸರು ಗಡಿಯಲ್ಲಿ ಕಾಯುತ್ತಿದ್ದು ಗಡಿ ದಾಟುವ ಪ್ರಯತ್ನ ನಡೆಸಿದರೆ ನಮ್ಮ ವಿರುದ್ದ ಕ್ರಮಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದಾರೆ” ಎಂದು ಸ್ಥಳದಲ್ಲೇ ಇರುವ ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ ಅವರು ಹೇಳಿದರು.
ನಿನ್ನೆ ರಾತ್ರಿಯಿಂದ ಊಟವಿಲ್ಲದೆ ಇದುವರೆಗೂ ಧರಣಿ ನಡೆಸುತ್ತಿದ್ದೇವೆ ಎಂದು ಹೋರಾಟಗಾರರು ತಿಳಿಸಿದ್ದು, ಮಧ್ಯಪ್ರದೇಶದ ಗ್ವಾಲಿಯಾರ್, ಮೊರಾನ, ರಾಜಸ್ಥಾನದ ಡೋಲ್ಪುರದಲ್ಲಿ ಸಭೆಗಳನ್ನು ಮುಗಿಸಿ ಯುಪಿ ಮೂಲಕ ದೆಹಲಿಗೆ ತೆರಳ ಬೇಕೆಂದಿದ್ದೆವು ಎಂದು ಹೇಳಿದರು.
ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಬಿಜೆಪಿ ಸರ್ಕಾರ-ಭಾರಿ ವಿರೋಧ
“ನಿನ್ನೆ ರಾತ್ರಿ ಕೆಲವು ಆರೆಸ್ಸೆಸ್ ಪುಂಡರು ಪ್ರಯಾಣಿಕರ ಸೋಗಿನಲ್ಲಿ ಬಂದು ಮಹಿಳಾ ಹೋರಾಟಗಾರರನ್ನು ಅಶ್ಲೀಲವಾಗಿ ನಿಂದನೆ ಮಾಡಿ ಉದ್ರೇಕಗೊಳಿಸಲು ನೋಡಿದರಾದರೂ ಹೋರಾಟಗಾರರು ವಿಚಲಿತರಾಗದೆ ಶಾಂತವಾಗಿ ಇದ್ದುದರಿಂದ ಅವರ ಪ್ರಯತ್ನ ವಿಫಲವಾಯಿತು. ಈ ಪ್ರಯತ್ನವನ್ನು ಬೆಳಿಗ್ಗೆ ಕೂಡಾ ಮುಂದುವರೆಸಿದ್ದರು. ಸಧ್ಯ ರಾಜಸ್ಥಾನ-ಯುಪಿ ಗಡಿಯ ರಾಜಸ್ಥಾನ ಭಾಗದಲ್ಲಿ ಧರಣಿ ಕೂತಿದ್ದೇವೆ” ಎಂದು ಯಶವಂತ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ರೈತರ ಮೇಲೆ ಅಶ್ರುವಾಯು ದಾಳಿ ಮಾಡಿದ ಪೊಲೀಸರು; ಇಲ್ಲಿದೆ ವೀಡಿಯೋ!