1777 ಎಕರೆ ಬಲವಂತದ ಭೂಸ್ವಾಧೀನ ವಿರೋಧಿಸಿ ಸುಮಾರು 1200 ದಿನಗಳಿಂದ ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ; ಶೇ.73 ರೈತರು ಭೂಮಿ ಕೊಡುವುದಿಲ್ಲ ಎಂದು ಮೂರುವರೆ ವರ್ಷದಿಂದ ಕೆಐಎಡಿಬಿ ವಿರುದ್ಧ ದೃಢವಾಗಿ ನಿಂತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗಿನ ಹಲವು ಸುತ್ತಿನ ಸಭೆಗಳ ಬಳಿಕ ಜು.15ಕ್ಕೆ ಅಂತಿಮ ಮಾತುಕತೆಗೆ ದಿನ ನಿಗದಿಯಾಗಿದೆ. ಆದರೆ, ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಐದು ದಿನ ಮಾತ್ರ ಬಾಕಿ ಇರುವಾಗ, ಇದ್ದಕ್ಕಿದ್ದಂತೆ ಭೂಸ್ವಾಧೀನ ‘ಪರ’ ಗುಂಪೊಂದು ಸುದ್ದಿಗೋಷ್ಠಿ ನಡೆಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ‘ಸರ್ಕಾರ ಹತ್ತು ದಿನ ಸಮಯ ತೆಗೆದುಕೊಂಡಿದ್ದೇ ಹೋರಾಟವನ್ನು ಹಣಿಯುವುದಕ್ಕೆ’ ಎಂದು ರೈತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜೂ.25ರ ‘ದೇವನಹಳ್ಳಿ ಚಲೋ’ ಹೋರಾಟದ ಬಳಿಕ ಜು.4ರಂದು ಮುಖ್ಯಮಂತ್ರಿಗಳೊಂದಿಗೆ ಚನ್ನರಾಯಪಟ್ಟಣ ‘ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ರೈತರು ಮತ್ತು ಸಂಯುಕ್ತ ‘ಹೋರಾಟ-ಕರ್ನಾಟಕ’ ಮುಖಂಡರ ಸಭೆ ನಿಗದಿಯಾಗಿತ್ತು. ಅಂದು, ” ಈಗ ನಿರ್ಧಾರ ಕೈಗೊಳ್ಳುವುದು ಅಸಾಧ್ಯ” ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಡಿನೋಟಿಫೈ ಮಾಡಲು ಕಾನೂನಿನ ತೊಡಕುಗಳ ಬಗ್ಗೆ ಚರ್ಚೆ ಮಾಡಬೇಕು, ಜು.15ರಂದು ರೈತರೊಂದಿಗೆ ಅಂತಿಮ ಸುತ್ತಿನ ಸಭೆ ನಡೆಸಿ ನನ್ನ ನಿರ್ಧಾರ ತಿಳಿಸುತ್ತೇನೆ” ಎಂದಿದ್ದರು.
ಸಭೆಗೆ ಇನ್ನು ನಾಲ್ಕು ದಿನ ಇರುವಾಗ ಇದ್ದಕ್ಕಿದ್ದಂತೆ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಗುಂಪೊಂದು, “ಶೇ.80ರಷ್ಟು ರೈತರು ಭೂಮಿ ಕೊಡುವುದಕ್ಕೆ ಒಪ್ಪಿದ್ದಾರೆ; ನಮ್ಮಲ್ಲಿ ಅಂತರ್ಜಲವಿಲ್ಲ, ಈ ಭೂಮಿ ಕೃಷಿಗೆ ಯೋಗ್ಯವಾಗಿಲ್ಲ. ಸರ್ಕಾರ ಸೂಕ್ತ ಬೆಲೆ ಕೊಟ್ಟು ಭೂಮಿ ಪಡೆದುಕೊಳ್ಳಲಿ” ಎಂದು ಹೇಳಿದ್ದಾರೆ.
“ಭೂಸ್ವಾಧೀನದ ಬದಲಿಗೆ 20 ವರ್ಷಗಳ ಕಾಲ ಈ ಪ್ರದೇಶವನ್ನು ‘ಹಸಿರುವ ವಲಯ’ ಎಂದು ಘೋಷಿಸಿ, ಸರ್ಕಾರ ‘ಪರಭಾರೆ ನಿಷೇಧ’ ಜಾರಿ ಮಾಡಲಿದೆ ಎಂಬ ಸುದ್ದಿಯಿಂದ ಹಿಡಿದು, ಮುಖ್ಯಮಂತ್ರಿಗಳು ಮತ್ತು ಸಚಿವರ ದೆಹಲಿ ಭೇಟಿ ಸೇರಿದಂತೆ ಇಂದಿನ ಸುದ್ದಿಗೋಷ್ಠಿಯೂ ಸಹ ರೈತರಿಂದ ಭೂಮಿ ಕಸಿದುಕೊಳ್ಳುವ ಹುನ್ನಾರ” ಎಂದು ಭೂಸ್ವಾಧೀನ ವಿರೋಧಿ ಹೋರಾಟಗಾರರು ಆರೋಪ ಮಾಡಿದ್ದಾರೆ.
ಇದೆಲ್ಲವೂ ಸರ್ಕಾರಿ ಪ್ರಾಯೋಜಿತ
“ಇಂದು ಎಲ್ಲವೂ ಸರ್ಕಾರಿ ಪ್ರಾಯೋಜಿತವಾಗಿಯೇ ನಡೆದಿದೆ. ನಾಲ್ಕು ವರ್ಷದಿಂದ ಸುಮ್ಮನಿದ್ದವರನ್ನು ಸರ್ಕಾರ ಈಗ ಬಳಸಿಕೊಳ್ಳುತ್ತಿದೆ. ನಮ್ಮ ಹೋರಾಟಕ್ಕೆ ರಾಷ್ಟ್ರಮಟ್ಟದಲ್ಲಿ ಬೆಂಬಲ ಸಿಗುತ್ತಿರುವುದನ್ನು ನೋಡಿ ಸರ್ಕಾರ ವಿಚಲಿತವಾಗಿದೆ. ಮುಂದಕ್ಕೆ ಏನೇ ನಡೆದರೂ ‘ಮೇಲಿನವರ’ ಅಣತಿಯಂತೆಯೇ ನಡೆಯುತ್ತದೆ. ಅದಕ್ಕಾಗಿಯೇ ಅವರು 10 ದಿನ ಸಮಯಾವಾಕಾಶ ತೆಗೆದುಕೊಂಡರು. ಇದರಿಂದ ನಾವು ಯಾವುದೇ ಕಾರಣಕ್ಕೂ ಎದೆಗುಂದಲ್ಲ; 13 ಹಳ್ಳಿಗಳ ಶೇ.80ರಷ್ಟು ರೈತರು ನಮ್ಮೊಂದಿಗೆ ದೃಢವಾಗಿ ನಿಂತಿದ್ದಾರೆ. ಅವರ ಯಾವ ಹುನ್ನಾರಗಳೂ ಫಲ ಕೊಡುವುದಿಲ್ಲ” ಎಂದು ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ಸಂಚಾಲಕರಾದ ಕಾರಳ್ಳಿ ಶ್ರೀನಿವಾಸ್ ಹೇಳಿದರು.
ಪೋಲನಹಳ್ಳಿ ಗ್ರಾಮದ ಯುವ ರೈತ ಪ್ರಮೋದ್ ಮಾತನಾಡಿ, “13 ಹಳ್ಳಿಗಳ ಶೇ.80ರಷ್ಟು ಜನ ನಾವು ಭೂಮಿ ಕೊಡುವುದಿಲ್ಲ ಎಂದು ದೃಢವಾಗಿ ನಿಂತಿದ್ದೇವೆ, ಇದಕ್ಕೆ ನಾವು ಬದ್ಧರಾಗಿದ್ದೇವೆ. ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ತನಿಖೆ ಮಾಡಲಿ; ದಿನದಿಂದ ದಿನ್ಕಕೆ ಭೂಮಿ ಕೊಡುವುದಿಲ್ಲ ಎಂಬುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದಿನ ಸುಮ್ಮನಿದ್ದವರು ಈಗ ಸುದ್ದಿಗೋಷ್ಠಿ ನಡೆಸಿದ್ದು ಯಾಕೆ? ಸರ್ಕಾರ ಹತ್ತು ದಿನ ಸಮಯ ತೆಗೆದುಕೊಂಡಾಗಲೇ ಇವರು ಸುದ್ದಿಗೋಷ್ಠಿ ನಡೆಸಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಇಂದು ಅಲ್ಲಿದ್ದವರಲ್ಲಿ ಕೆಲವರು ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಆಪ್ತರಿದ್ದಾರೆ; ಸಚಿವರೇ ಇವರನ್ನು ಮುಂದೆ ಬಿಟ್ಟಿರುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ನಾವು ಇದನ್ನು ಒಪ್ಪುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಗ್ರಾಮದ ರೈತ ಮೋಹನ್ ಮಾತನಾಡಿ, ಭೂಮಿ ಕೊಡುವುದಕ್ಕೆ ಶೇ.80ರಷ್ಟು ರೈತರು ಒಪ್ಪಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಚನ್ನರಾಯಪಟ್ಟಣದಲ್ಲಿ ರೈತರೆಲ್ಲಾ ಭೂಮಿ ಕೊಡುವುದಕ್ಕೆ ಒಪ್ಪಿದ್ದಾರೆ ಎಂದು ಹೇಳುವುದಕ್ಕೆ ಅವರು ಯಾರು? ಇಂದು ಪತ್ರಿಕಾಗೋಷ್ಠಿ ನಡೆಸಿದವರಿಗೆ ಇಲ್ಲಿ ಹೆಚ್ಚಿನ ಭೂಮಿಯೇ ಇಲ್ಲ. ಅವರಲ್ಲಿ ಬಹುತೇಕರು ಭೂ ದಲ್ಲಾಳಿಗಳು; ಹಲವು ಅಮಾಯಕರಿಗೆ ವಂಚಿಸಿದ್ದಾರೆ. ಈ ಹಿಂದೆ ಇದೇ ರೀತಿ ಸುಳ್ಳು ಹೇಳಿದಾಗ ದಲಿತರೆಲ್ಲಾ ಸೇರಿಕೊಂಡು ಊರಿನ ಮಧ್ಯೆ ಅವರಿಗೆ ಛೀಮಾರಿ ಹಾಕಿದ್ದೆವು. ಯಾವುದೇ ಕಾರಣಕ್ಕೂ ನಾವು ಭೂಮಿ ಕೊಡುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ನಮ್ಮ ಪ್ರಾಣ ಹೋದರೂ ಭೂಮಿ ಕೊಡುವುದಿಲ್ಲ. ಏಕೆಂದರೆ, ಭೂಮಿಯೇ ನಮ್ಮ ಅಸ್ತಿತ್ವ. ನನ್ನ ತಾತನ ಕಾಲದಿಂದ ಮಣ್ಣನ್ನೇ ನಂಬಿಕೊಂಡಿರುವ ನಮಗೆ ಭೂಮಿ ಜೊತೆಗೆ ಅವಿನಾಭಾವ ಸಂಬಂಧ ಇದೆ. ನಾನೂ ಸೇರಿದಂತೆ ಚನ್ನರಾಯಪಟ್ಟಣ ಗ್ರಾಮದ ಹಲವಾರು ದಲಿತ ಕುಟುಂಬಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ಕೊರೆಸಿದ್ದೇವೆ. ಪಾಲಿ ಹೌಸ್ ಮಾಡಿ ಆಧುನಿಕ ಕೃಷಿ ಮಾಡುತ್ತಿದ್ದೇವೆ. ಗ್ರಾಮದ ಎಲ್ಲ ದಲಿತರೂ ನೀರಾವರಿ ಕೃಷಿ ಮಾಡುತ್ತಿದ್ದಾರೆ, ನಾವು ಭೂಮಿ ಕೊಡುವುದಿಲ್ಲ ಕೆಐಎಡಿಬಿ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಿದ್ದೇವೆ” ಎಂದು ಸುದ್ದಿಗೋಷ್ಠೀ ನಡೆಸಿದವರ ವಿರುದ್ಧ ಕಿಡಿಕಾರಿದರು.
ಎಐ ಯುಗದಲ್ಲಿ ಉದ್ಯೋಗದ ಭದ್ರತೆ ಇಲ್ಲ
ಎಐ ಯುಗದಲ್ಲಿ ನಮಗೆ ಉದ್ಯೋಗದ ಭದ್ರತೆ ಇಲ್ಲ, ಅದಕ್ಕಾಗಿಯೇ ನಾನು ಕೃಷಿ ಆಯ್ದುಕೊಂಡಿದ್ದೇನೆ ಎಂದು ಮಟ್ಟಬಾರ್ಲು ಗ್ರಾಮದ ಯುವ ರೈತ ನಂದನ್ ಹೇಳಿದರು. ಭೂಮಿ ಕೊಡುತ್ತೇವೆ ಎಂದು ಸುದ್ದಿಗೋಷ್ಠಿ ನಡೆಸಿದವರ ನಡೆಯನ್ನು ಖಂಡಿಸಿದರು.
“ನಾನು ಇಂಜಿನಿಯರಿಂಗ್ ಮುಗಿಸಿ ಕೃಷಿ ಮಾಡುತ್ತಿದ್ದೇನೆ. ಕೃಷಿಯನ್ನೂ ಈಗ ಲಾಭದಾಯಕವಾಗಿಸಬಹುದು. ನಮ್ಮ ಹಿರೀಕರು ಸಹ ಕೃಷಿ ಮಾಡಿಕೊಂಡೇ ಇಲ್ಲೀವರೆಗೆ ಬಂದಿದ್ದಾರೆ. ಈಗಿರುವ ಎಐ ಯುಗದಲ್ಲಿ ನಮಗೆ ಉದ್ಯೋಗದ ಭದ್ರತೆಯೇ ಇಲ್ಲ. ಪ್ರಸಿದ್ಧ ಕಂಪನಿಯೊಂದು 9 ಸಾವಿರ ಜನರನ್ನು ಉದ್ದೋಗದಿಂದ ತೆಗೆದಿದ್ದಾರೆ. ಆದ್ದರಿಂದ, ಕೃಷಿಯೇ ನಮಗೆ ಆಧಾರ. ಕಂಪನಿಗಳು ಕೊಡುವ 20 ಸಾವಿರ ರೂಪಾಯಿ ಸಂಬಳದ ಬದಲಿಗೆ ಕೃಷಿಯನ್ನು ಲಾಭದಾಯಕ ಮಾಡುವ ಬಗ್ಗೆ ಯೋಚಿಸಬೇಕು. ನಾನೀಗ ತರಕಾರಿ, ಹೂ ಮತ್ತು ಹಣ್ಣಿನ ಜೊತೆಗೆ ಹೈನುಗಾರಿಯನ್ನೂ ಮಾಡಿಕೊಂಡಿದ್ದೇನೆ” ಎಂದರು.
ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್ಗಳ ಸ್ಥಾಪನೆಗೆ ಮನವಿ; ರಕ್ಷಣಾ ಸಚಿವರನ್ನು ಭೇಟಿಯಾದ ಸಿದ್ದರಾಮಯ್ಯ


