Homeಕರ್ನಾಟಕಜು.2ಕ್ಕೆ ನಾಡಕಚೇರಿ ಎದುರು ದೇವನಹಳ್ಳಿ ರೈತರ ಉಪವಾಸ: ಬೆಂಗಳೂರಿನಲ್ಲಿ ಪ್ರಕಾಶ್ ರಾಜ್ ಬೆಂಬಲಿಸಿ ಉಪವಾಸ –...

ಜು.2ಕ್ಕೆ ನಾಡಕಚೇರಿ ಎದುರು ದೇವನಹಳ್ಳಿ ರೈತರ ಉಪವಾಸ: ಬೆಂಗಳೂರಿನಲ್ಲಿ ಪ್ರಕಾಶ್ ರಾಜ್ ಬೆಂಬಲಿಸಿ ಉಪವಾಸ – ವಿಡಿಯೋ

- Advertisement -
- Advertisement -

ಬೆಂಗಳೂರು: ದೇವನಹಳ್ಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ, ಚನ್ನರಾಯಪಟ್ಟಣದ ರೈತರು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತಮ್ಮ ನಿರಂತರ ಹೋರಾಟ ನಿರ್ಣಾಯಕ ಹಂತ ತಲುಪಿದೆ ಎಂದು ಘೋಷಿಸಿವೆ. ಜುಲೈ 4ರಂದು ಸರ್ಕಾರ ರೈತ ಮುಖಂಡರು ಮತ್ತು ಹೋರಾಟಗಾರರೊಂದಿಗೆ ಕರೆದಿರುವ ಸಭೆಯು 1190 ದಿನಗಳ ಹೋರಾಟಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ಸಮಿತಿ ಹೇಳಿದೆ.

ಜುಲೈ 2ರಂದು ದೇವನಹಳ್ಳಿಯಲ್ಲಿ ರೈತರಿಂದ, ಬೆಂಗಳೂರಿನಲ್ಲಿ ಗಣ್ಯರಿಂದ ಉಪವಾಸ ಸತ್ಯಾಗ್ರಹ

ಪ್ರಕಟಣೆಯ ಪ್ರಕಾರ, ಜುಲೈ 2ರಂದು (ಗುರುವಾರ) ಎರಡು ಪ್ರಮುಖ ಪ್ರತಿಭಟನೆಗಳು ನಡೆಯಲಿವೆ. ಚನ್ನರಾಯಪಟ್ಟಣದ 13 ಹಳ್ಳಿಗಳ ಸಂತ್ರಸ್ತ ರೈತರು “ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂಬ ಘೋಷವಾಕ್ಯದೊಂದಿಗೆ ದೇವನಹಳ್ಳಿಯ ನಾಡ ಕಚೇರಿ ಮುಂಭಾಗದಲ್ಲಿರುವ ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ರೈತರ ಈ ಹೋರಾಟಕ್ಕೆ ನೈತಿಕ ಬೆಂಬಲ ತುಂಬಲು ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ಕೂಡ ಉಪವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅದೇ ದಿನ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ದಲ್ಲಿ ಖ್ಯಾತ ನಟ ಪ್ರಕಾಶ್ ರೈ ಆದಿಯಾಗಿ ನಾಡಿನ ಅನೇಕ ಸಂವೇದನಾಶೀಲ ಕಲಾವಿದರು, ರಂಗಕರ್ಮಿಗಳು ಉಪವಾಸ ನಿರತ ರೈತರನ್ನು ಬೆಂಬಲಿಸಿ ‘ಬೆಂಬಲ ಉಪವಾಸ ಸತ್ಯಾಗ್ರಹ’ ಕೂರಲಿದ್ದಾರೆ.

ಸಾಹಿತಿಗಳು, ಕಲಾವಿದರು, ಚಿಂತಕರಿಂದ ಕ್ಯಾಬಿನೆಟ್‌ಗೆ ಆಗ್ರಹ

ದೇವನಹಳ್ಳಿ ರೈತ ಹೋರಾಟದ ಪರವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ ಇಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಡಾ. ಜಿ. ರಾಮಕೃಷ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಇಂದೂಧರ ಹೊನ್ನಾಪುರ, ಆರ್.ಜಿ. ಹಳ್ಳಿ ನಾಗರಾಜ್ ಮೊದಲಾದ ಹಲವು ಸಾಹಿತಿಗಳು, ಚಿಂತಕರು ಮತ್ತು ಬರಹಗಾರರು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್‌ನ ಎಲ್ಲ ಸಚಿವರಿಗೆ ಜಂಟಿಯಾಗಿ ಆಗ್ರಹಿಸಿದ್ದಾರೆ. ಜುಲೈ 2ರಂದು ನಡೆಯುವ ಕ್ಯಾಬಿನೆಟ್ ವಿಶೇಷ ಸಭೆಯಲ್ಲಿ ದೇವನಹಳ್ಳಿಯ ಚನ್ನರಾಯಪಟ್ಟಣದ 13 ಹಳ್ಳಿಗಳ 1777 ಎಕರೆ ಜಮೀನನ್ನು ಭೂಸ್ವಾಧೀನ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿರಿಯ ಭಾಷಾ ಹೋರಾಟಗಾರರೂ, ಪತ್ರಕರ್ತರೂ ಆದ ಜಾಣಗೆರೆ ವೆಂಕಟರಾಮಯ್ಯ ಅವರು ಮಾತನಾಡಿ, “ಜುಲೈ 2ರಂದು ಕ್ಯಾಬಿನೆಟ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕ್ಯಾಬಿನೆಟ್‌ನ ಎಲ್ಲ ಸಚಿವರೂ ರೈತರ ಪರವಾದ ನಿರ್ಣಯಕ್ಕೆ ಬರಲೇಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಂತೆ, ಕ್ಯಾಬಿನೆಟ್‌ನ ಎಲ್ಲ ಸಚಿವರೂ ಚಳವಳಿಗಳ ಮಹತ್ವವೇನು ಎಂಬುದನ್ನು ಅರಿತವರೇ ಆಗಿದ್ದಾರೆ. ಒಂದು ವೇಳೆ ಸರ್ಕಾರದ ನಿರ್ಧಾರ ರೈತರ ವಿರುದ್ಧ ಬಂದರೆ, ಈ ಚಳವಳಿ ಇನ್ನಷ್ಟು ತೀವ್ರವಾಗಿ ಮುಂದುವರೆಯಲಿದೆ. ರೈತರ ಈ ಹೋರಾಟಕ್ಕೆ ಕರ್ನಾಟಕದ ಸಾಹಿತಿಗಳು, ಬರಹಗಾರರು, ಚಿಂತಕರು ಮತ್ತು ಕಲಾವಿದರ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.

ಜುಲೈ 3ರಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಆಗಮನ

ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ಪರವಾಗಿ ಬಡಗಲಪುರ ನಾಗೇಂದ್ರ, ಯಶವಂತ್, ನೂರ್ ಶ್ರೀಧರ್, ವರಲಕ್ಷ್ಮಿ ಮೊದಲಾದವರು ಮಾತನಾಡಿ, “ಜುಲೈ 2 ರಿಂದ ಫ್ರೀಡಂ ಪಾರ್ಕ್ ನಿರಂತರ ಚಟುವಟಿಕೆಯ ತಾಣವಾಗಲಿದೆ. ಜುಲೈ 3ರಂದು ದೆಹಲಿಯ ರೈತ ಆಂದೋಲನವನ್ನು ಯಶಸ್ವಿಯಾಗಿ ಮುನ್ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ರೈತ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಮೊದಲಾದವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ದೇವನಹಳ್ಳಿಗೂ ಭೇಟಿ ನೀಡಿ, ಹಳ್ಳಿಗಳಿಗೆ ತೆರಳಿ ರೈತರಿಗೆ ಭರವಸೆ ತುಂಬಲಿದ್ದಾರೆ” ಎಂದು ಮಾಹಿತಿ ನೀಡಿದರು.

ರೈತರ ಸಭೆ ಬಹಿಷ್ಕರಿಸಿದ ಬಿಜೆಪಿ ಸಂಸದರ ನಡೆಗೆ ಖಂಡನೆ; ಪ್ರಕಾಶ್ ರಾಜ್‌ರಿಂದ ಮಲ್ಲಿಕಾರ್ಜುನ ಖರ್ಗೆ ಭೇಟಿ

ಇದೇ ವೇಳೆ, ದೆಹಲಿಯಲ್ಲಿ ಇಂದು ಭೂಸ್ವಾಧೀನದ ಕುರಿತ ಜಂಟಿ ಸಂಸದೀಯ ಸಭೆಗೆ ಆಹ್ವಾನದ ಮೇರೆಗೆ ರೈತರ ಈ ಭೂಸ್ವಾಧೀನ ವಿಷಯ ಕುರಿತು ಮಾತನಾಡಲು ತೆರಳಿದ್ದ ಮೇಧಾ ಪಾಟ್ಕರ್ ಮತ್ತು ಪ್ರಕಾಶ್ ರೈ ಅವರನ್ನು ಕಂಡ ನಂತರ ಸಭೆಯನ್ನು ಬಹಿಷ್ಕರಿಸಿ ತೆರಳಿದ ಬಿಜೆಪಿ ಸಂಸದರ ವರ್ತನೆಯನ್ನು ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿತು. ಅಲ್ಲದೆ, ಕೋರಂ ಇದ್ದರೂ ಸಭೆ ನಡೆಸದೆ ರೈತರ ವಿರುದ್ಧವಾದ ನಿಲುವು ತಾಳಿದ ಸಂಸದೀಯ ಸಮಿತಿಯ ಸಂಚಾಲಕರ ನಡೆಯನ್ನೂ ಖಂಡಿಸಲಾಯಿತು. ಈ ಘಟನೆಗಳ ನಂತರ, ಪ್ರಕಾಶ್ ರೈ ಅವರು ವಿರೋಧ ಪಕ್ಷದ ನಾಯಕರೂ, ಎಐಸಿಸಿ ಅಧ್ಯಕ್ಷರೂ ಆದ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಅವರಿಗೆ ವಿಚಾರ ತಿಳಿಸಿದ್ದಾರೆ. ಅಲ್ಲದೆ, ರೈತರ ಹೋರಾಟಕ್ಕೆ ಬೆಂಬಲಿಸಿ ರಾಜ್ಯಕ್ಕೆ ಬಂದು ಹೋರಾಟ ನಿರತರನ್ನು ಭೇಟಿಯಾಗುವಂತೆ ಮನವಿ ಮಾಡಿದ್ದಾರೆ ಎಂಬ ಮಾಹಿತಿಯನ್ನೂ ಸಮಿತಿ ನೀಡಿತು.

ಜುಲೈ 4ರಂದು “ನಾಡ ಉಳಿಸಿ ಸಮಾವೇಶ”

ಜುಲೈ 4ರಂದು ಮುಖ್ಯಮಂತ್ರಿಗಳು ರೈತರು ಮತ್ತು ಹೋರಾಟಗಾರರೊಂದಿಗೆ ಕರೆದಿರುವ ಸಭೆಯ ವೇಳೆ, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ “ನಾಡ ಉಳಿಸಿ ಸಮಾವೇಶ” ನಡೆಯಲಿದೆ. ಇದರಲ್ಲಿ ನಾಡಿನ ಎಲ್ಲ ಭಾಗಗಳಿಂದ ಸಂಘಟನೆಗಳ ಕಾರ್ಯಕರ್ತರು, ಪ್ರಜಾಪ್ರಭುತ್ವದ ಪರ ಇರುವ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಮಾಹಿತಿ ನೀಡಿದೆ. “ದೇವನಹಳ್ಳಿ ಹೋರಾಟ ಕೇವಲ ಸ್ಥಳೀಯ ಸಮಸ್ಯೆಯಲ್ಲ, ಇದು ರಾಜ್ಯದ ರೈತರ ಅಸ್ಮಿತೆ ಮತ್ತು ಕೃಷಿ ಸಂಸ್ಕೃತಿಯ ರಕ್ಷಣೆಯ ಹೋರಾಟ” ಎಂದು ಸಮಿತಿ ಮುಖಂಡರು ಪುನರುಚ್ಚರಿಸಿದರು.

ಸಭೆಯಲ್ಲಿ ಡಾ. ಜಿ. ರಾಮಕೃಷ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ್, ಇಂದೂಧರ ಹೊನ್ನಾಪುರ, ಆರ್.ಜಿ. ಹಳ್ಳಿ ನಾಗರಾಜ್, ಗುರುಪ್ರಸಾದ್ ಕೆರಗೋಡು, ವಿ. ನಾಗರಾಜ್, ಜೆ.ಎಂ. ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮೀನಾಕ್ಷಿ ಸುಂದರಂ, ಲಕ್ಷ್ಮಿ, ದೇವಿ, ಶ್ರೀನಿವಾಸ್ ಕಾರಹಳ್ಳಿ, ಡಿ.ಎಚ್. ಪೂಜಾರ್, ಪ್ರಭಾ ಬೆಳವಂಗಲ, ಕೆ.ವಿ. ಭಟ್, ಮಲ್ಲಿಗೆ ಸಿರಿಮನೆ, ನಾಗರಾಜ್ ಪೂಜಾರ್, ಶ್ರೀಮತಿ ವೀರಸಂಗಯ್ಯ ಮೊದಲಾದವರು ಇದ್ದರು.

ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ:  ಜು.2ಕ್ಕೆ ಸಂತ್ರಸ್ತ ರೈತರಿಂದ  ಉಪವಾಸ ಸತ್ಯಾಗ್ರಹ-ವೀಡಿಯೋ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...