ಹಾದ್ರಿಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಹಾದ್ರಿಪುರ ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲವಾಗಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಸದಸ್ಯರ ನಿರ್ಲಕ್ಷ್ಯದಿಂದ ದಲಿತರು ವಾಸಿಸುವ ಪ್ರದೇಶದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ, ದಲಿತರು ವಾಸಿಸುವ ಪ್ರದೇಶ ಎಂಬ ಕಾರಣಕ್ಕೆ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ದಲಿತ ನಿವಾಸಿಗಳು ಆರೋಪಿಸಿದ್ದಾರೆ. ದಲಿತರು ವಾಸಿಸುವ
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಹಾದ್ರಿಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ‘ವಿ’ ಆಕಾರದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಬಹುತೇಕ ಕಡೆ ಹೂಳು ತುಂಬಿಕೊಂಡಿದೆ. ಇದರಿಂದಾಗಿ, ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಹೆಚ್ಳಳಕ್ಕೆ ಕಾರಣವಾಗಿದೆ. ಕೆಲವೆಡೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ನಿವಾಸಿಗಳು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಂಚಾಯಿತಿ ಅಧಿಕಾರಿಗಳು-ಅಧ್ಯಕ್ಷರ ನಿರ್ಲಕ್ಷ್ಯ; ಡೆಂಗ್ಯೂ-ಮಲೇರಿಯಾಕ್ಕೆ ಆಹ್ವಾನ
‘ಚರಂಡಿ ನಿರ್ಮಿಸಿ ಹಲವು ವರ್ಷಗಳೆ ಕಳೆದಿವೆ, ಹೊಸ ಚರಂಡಿ ನಿರ್ಮಿಸಿ’ ಎಂದು ಜನರು ಹಲವು ಭಾರಿ ಪಂಚಾಯಿತಿಯಲ್ಲಿ ಮನವಿ ಮಾಡಿದ್ದಾರೆ ಎಂದು ಹಾದ್ರಿಪುರ ನಿವಾಸಿ ಮಂಜುಳ ಅವರು ಹೇಳಿದರು. “ಆದರೆ, ಈವರೆಗೆ ಸಂಬಂಧಪಟ್ಟವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೊಸ ಚರಂಡಿ ನಿರ್ಮಿಸುವುದಿರಲಿ, ಹಳೆ ಚರಂಡಿಗಳ ಹೂಳನ್ನೂ ತೆಗೆದಿಲ್ಲ. ಇದರಿಂದಾಗಿ ಕಳೆದ ವರ್ಷ ಹಲವು ಸಣ್ಣ ಮಕ್ಕಳು ಡೆಂಗ್ಯೂ, ಟೈಪಾಯ್ಡ್ನಂತಹ ಜ್ವರಕ್ಕೆ ಒಳಗಾಗಿದ್ದರು. ಈ ಬಗ್ಗೆ ಸಹ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ” ಎಂದು ಅವರು ಹೇಳಿದರು. ದಲಿತರು ವಾಸಿಸುವ
ಈ ಬಗ್ಗೆ ಮಾತನಾಡಿದ ಗ್ರಾಮದ ನಿವಾಸಿ ರವಿಕುಮಾರ್, “ಕಳೆದ ಒಂದು ವರ್ಷದಿಂದ ನಮ್ಮ ಮನೆ ಮುಂದೆ ಚರಂಡಿ ನೀರು ಕಟ್ಟಿಕೊಂಡು ರಸ್ತೆಗೆ ಬರುತ್ತಿದೆ. ಹಲವರು ತಾವು ಮನೆ ನಿರ್ಮಿಸುವ ಸಮಯದಲ್ಲಿ ಚರಂಡಿಯನ್ನು ನೆಲಸಮ ಮಾಡಿದ್ದಾರೆ. ಮಳೆ ಬಂದರೆ ಮೊಳಕಾಲುದ್ದ ನೀರು ನಿಲ್ಲುತ್ತದೆ. ಇದೇ ಪ್ರದೇಶದಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಸಣ್ಣಸಣ್ಣ ಮಕ್ಕಳು ಹಾಗೂ ವೃದ್ಧರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದು, ವಾಟ್ಸಾಪ್ ಮೂಲಕ ಸಮಸ್ಯೆಯ ಫೋಟೋ ಕಳುಹಿಸಿದ್ದೇನೆ. ಇಬ್ಬರೂ ಸಹ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿಯಲ್ಲಿ ‘ಇ’ ಖಾತೆ ಹಾಗೂ ಕಂದಾಯ ಸಂಗ್ರಹ ಬಿಟ್ಟು ಬೇರೆ ಕೆಲಸಗಳೇ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧ್ಯಕ್ಷರು ‘ನಮ್ಮ ಬಳಿ ಚರಂಡಿ ನಿರ್ಮಿಸುವಷ್ಟು ಅನುದಾನ ಇಲ್ಲ’ ಎಂದು ಗದರಿಸಿ ಕಳುಹಿಸುತ್ತಾರೆ” ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.
“ನಮ್ಮದೇ ಪಂಚಾಯಿತಿಯ ಬೇರೆ ಊರಿನ ಸದಸ್ಯರು ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಊರಿನ ಮೂವರು ಸದಸ್ಯರಿಗೆ ಗ್ರಾಮದ ಮೇಲೆ ಕಾಳಜಿ ಇಲ್ಲ. ನಮ್ಮ ಊರಿನ ಸದಸ್ಯರೇ ಈಗ ಅಧ್ಯಕ್ಷರಾಗಿದ್ದರೂ ಪ್ರಯೋಜನವಾಗುತ್ತಿಲ್ಲ. ಮುಖ್ಯವಾಗಿ, ಪ್ರಬಲ ಜಾತಿಗೆ ಸೇರಿದ ಸದಸ್ಯರು ದಲಿತರ ಪ್ರದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಹೇಳಿದರು.
ಈ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಪಿಡಿಒ ಶಿವಾನಂದ್, ”ಅಲ್ಲಿ ಚರಂಡಿ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಈಗಿರುವ ಚರಂಡಿ ಮೇಲೆ ಕೆಲ ನಿವಾಸಿಗಳು ಕಲ್ಲಿನ ಚಪ್ಪಡಿ ಕಲ್ಲು ಹಾಕಿದ್ದಾರೆ. ಅಲ್ಲಿ ಸ್ವಚ್ಛತೆ ಮಾಡಲು ನಮಗೆ ಅವಕಾಶ ಸಿಗುವುದಿಲ್ಲ. ಅವರವರ ಮನೆ ಮುಂದಿನ ಚಪ್ಪಡಿ ತೆರವುಗೊಳಿಸಕೊಟ್ಟರೆ ನಾವು ಕೆಲಸ ಮಾಡಲು ಸಾಧ್ಯ. ಚಪ್ಪಡಿ ಇಲ್ಲದಿರುವ ಕಡೆ ನಾವು ಸ್ವಚ್ಛ ಮಾಡುತ್ತಿದ್ದೇವೆ. ಚಪ್ಪಡಿ ಇರುವ ಕಡೆ ನಿವಾಸಿಗಳೆ ನಮಗೆ ಸಹಾಯ ಮಾಡಬೇಕು” ಎಂದು ಹೇಳಿದರು.
“ಸಮಸ್ಯೆ ನಮಗೆ ಮನವರಿಕೆ ಆಗಿದೆ. ಮುಂದೆ ಅಲ್ಲಿ ಸಿಸಿ ಚರಂಡಿ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಆದರೆ, ರಸ್ರೆಗಳು ಅಲ್ಲಿ ಕಿರಿದಾಗಿದ್ದು ಸಿಸಿ ಚರಂಡಿ ನಿರ್ಮಿಸುವಷ್ಟು ಸ್ಥಳಾವಕಾಶವಿಲ್ಲ. ಸಮಸ್ಯೆ ಇರುವ ಜಾಗದಲ್ಲಿ ಚರಂಡಿ ನಿರ್ಮಿಸಬಹುದು. ಈ ಬಗ್ಗೆ ಸ್ಥಳೀಯ ನಿವಾಸಿಗಳ ಗಮನಕ್ಕೆ ತಂದಿದ್ದೇನೆ. ದಲಿತರ ಪ್ರದೇಶ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿಲ್ಲ” ಎಂದು ನಾನುಗೌರಿ.ಕಾಂಗೆ ಅವರು ಹೇಳಿದರು.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಸ್ ಮಾತನಾಡಿ, “ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿವೆ. ಚರಂಡಿ ಮೇಲೆ ಚಪ್ಪಡಿ ಹಾಕಿರುವುದಕ್ಕೆ ಅದು ಬ್ಲಾಕ್ ಆಗಿದೆ. ನಾವು ಸ್ಕ್ಯಾವೆಜಿಂಗ್ ಮಿಷನ್ ಮೂಲಕ ಅದನ್ನು ಸ್ವಚ್ಛ ಮಾಡಲು ಯೋಜಿಸುತ್ತಾ ಇದ್ದೇವೆ. ಆದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಮ್ಮದು ‘ಸಿ’ ಗ್ರೇಡ್ ಪಂಚಾಯತಿಯಾಗಿದ್ದು, ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಅನುದಾನಗಳು ಬಂದರೆ ಹೊಸದಾಗಿ ಚರಂಡಿ ನಿರ್ಮಿಸಿ ಶಾಸ್ವತ ಪರಿಹಾರ ಮಾಡುತ್ತೇವೆ” ಎಂದು ಹೇಳಿದರು. ದಲಿತರು ವಾಸಿಸುವ ಪ್ರದೇಶ ಎನ್ನುವ ಕಾರಣಕ್ಕೆ ಯಾವುದೆ ನಿರ್ಲಕ್ಷ್ಯ ಮಾಡುತ್ತಿಲ್ಲ, ಅಂತಹ ಆರೋಪಗಳು ಸತ್ಯಕ್ಕೆ ದೂರವಾದ ಮಾತುಗಳಾಗಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: 7 ಶಿಶುಗಳನ್ನು ರಕ್ಷಿಸಿ, ತನ್ನದೇ ಅವಳಿ ಮಕ್ಕಳನ್ನು ಕಳೆದುಕೊಂಡ ಯಾಕೂಬ್ ಮನ್ಸೂರಿ
ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: 7 ಶಿಶುಗಳನ್ನು ರಕ್ಷಿಸಿ, ತನ್ನದೇ ಅವಳಿ ಮಕ್ಕಳನ್ನು ಕಳೆದುಕೊಂಡ ಯಾಕೂಬ್ ಮನ್ಸೂರಿ


